- ಪ್ರಫುಲ್ಲ ಕೇತ್ಕರ್
ಸಂವಿಧಾನ ಮತ್ತು ಅರಾಜಕತೆಯ ವ್ಯಾಕರಣ: ಅಂಬೇಡ್ಕರ್ ನೀಡಿದ ಎಚ್ಚರಿಕೆ
“ನಾವು ಪ್ರಜಾಪ್ರಭುತ್ವವನ್ನು ಕೇವಲ ಮೇಲ್ನೋಟದ ಆಡಂಬರವಾಗುಳಿಯದೆ ನಿಜವಾದ ಅರ್ಥದಲ್ಲಿ ಸಾರ್ಥಕವಾಗಬೇಕಿದ್ದರೆ, ನಾವು ಮೊದಲು ಮಾಡಬೇಕಾದದ್ದೇನು? ನನ್ನ ಪ್ರಕಾರ, ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಧೇಯಗಳನ್ನು ಈಡೇರಿಸಿಕೊಳ್ಳಲು ನಾವು ಸಂವಿಧಾನಬದ್ಧ ಮಾರ್ಗಗಳಿಗೇ ನಿಷ್ಠರಾಗಿರಬೇಕು. ಇದರರ್ಥ, ರಕ್ತಸಿಕ್ತ ಕ್ರಾಂತಿಯ ಹಾದಿಯನ್ನು ನಾವು ಸಂಪೂರ್ಣವಾಗಿ ತೊರೆಯಬೇಕು. ನಾಗರಿಕ ಅಸಹಕಾರ, ಅಸಹಕಾರ ಚಳವಳಿ ಹಾಗೂ ಸತ್ಯಾಗ್ರಹದಂತಹ ವಿಧಾನಗಳಿಗೆ ವಿದಾಯ ಹೇಳಬೇಕು. ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆಯಲು ಸಂವಿಧಾನಾತ್ಮಕ ದಾರಿಗಳೇ ಇಲ್ಲದಿದ್ದ ಕಾಲದಲ್ಲಿ, ಅಸಂವಿಧಾನಿಕ ಮಾರ್ಗಗಳನ್ನು ಹಿಡಿಯುವುದಕ್ಕೊಂದು ಸಮರ್ಥನೆ ಇತ್ತು. ಆದರೆ ಸಾಂವಿಧಾನಿಕ ಹಾದಿಗಳು ಮುಕ್ತವಾಗಿರುವಾಗ, ಇಂತಹ ಅಸಂವಿಧಾನಿಕ ಚಳವಳಿಗಳಿಗೆ ಯಾವುದೇ ಅರ್ಥವಿಲ್ಲ. ಇವು ಕೇವಲ ‘ಅರಾಜಕತೆಯ ವ್ಯಾಕರಣ’ (Grammar of Anarchy) ಇದ್ದಂತೆ; ಇವುಗಳನ್ನು ನಾವು ಎಷ್ಟು ಬೇಗ ತೊರೆದರೆ, ನಮ್ಮ ದೇಶಕ್ಕೆ ಅಷ್ಟು ಒಳಿತು.”
– ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ (ಸಂವಿಧಾನ ರಚನಾ ಸಭೆಯ ಭಾಷಣ, ನವೆಂಬರ್ 25, 1949)
ಯಾರು ಈ ‘ದಿಮಾಗಿ ನಕ್ಸಲರು’?
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ದಿಮಾಗಿ ನಕ್ಸಲರು’ (ವೈಚಾರಿಕ/ಬೌದ್ಧಿಕ ನಕ್ಸಲರು) ಎಂಬ ಮಾತು ಬಳಸುತ್ತಿದ್ದಂತೆಯೇ, ಕೆಲವರು ವಿಲವಿಲನೆ ಒದ್ದಾಡುತ್ತಾ ಅದನ್ನು ‘ಬೌದ್ಧಿಕ ವಿರೋಧಿ’ ಶಬ್ದವೆಂದು ಹುಯಿಲೆಬ್ಬಿಸಲು ಶುರುಮಾಡಿದರು. ಇನ್ನು ಕೆಲವರಂತೂ ‘ದಿಮಾಗಿ ನಕ್ಸಲ್ ಪಾರ್ಟಿ’ ಎಂಬ ಹೆಸರಿನಲ್ಲಿ ಪ್ರತಿರೋಧದ ಹೊಸ ನಾಟಕವಾಡುತ್ತಾ, ಅದನ್ನೇ ತಮಗೊಲಿದ ಗೌರವದ ಪದಕವೆಂಬಂತೆ ಪ್ರದರ್ಶಿಸಿಕೊಳ್ಳಲಾರಂಭಿಸಿದರು. ಈ ಅರಾಜಕತಾವಾದಿಗಳ ಬೂಟಾಟಿಕೆಗೆ ಮರುಳಾಗುವ ಬದಲು, ನಮ್ಮ ಪ್ರಜಾಪ್ರಭುತ್ವವನ್ನು ಈ ಅಪಾಯಕಾರಿ ಸಿದ್ಧಾಂತದಿಂದ ಪಾರುಮಾಡಲು ‘ದಿಮಾಗಿ ನಕ್ಸಲರು’ ಎಂದರೆ ಯಾರು, ಅವರ ನೈಜ ಲಕ್ಷಣಗಳೇನು ಮತ್ತು ಅವರನ್ನು ಹೇಗೆ ಎದುರಿಸಬೇಕು ಎಂಬುದನ್ನು ನಾವು ಆಳವಾಗಿ ಗ್ರಹಿಸಬೇಕಾಗಿದೆ.
ಬಂದೂಕಿನಿಂದ ಬೌದ್ಧಿಕ ಸಮರದತ್ತ: ಬದಲಾದ ನಕ್ಸಲ್ ಕಾರ್ಯತಂತ್ರ
ನಿಜ ಹೇಳಬೇಕೆಂದರೆ, ನಕ್ಸಲಿಸಂ ಅಥವಾ ಮಾವೋವಾದ ಎಂಬ ಈ ಹಿಂಸಾತ್ಮಕ, ವಿನಾಶಕಾರಿ ಸಿದ್ಧಾಂತವನ್ನು ಪೂಜಿಸುವವರಿಗೆ ‘ದಿಮಾಗಿ ನಕ್ಸಲ್’ ಎಂಬ ಮಾತು ಹೊಸದೇನೂ ಅಲ್ಲ, ಅಪಮಾನಕರವೂ ಅಲ್ಲ. ಅದು ಅವರ ದೃಷ್ಟಿಯಲ್ಲಿ ನಿಜಕ್ಕೂ ಹೆಮ್ಮೆಯ ಹೆಗ್ಗುರುತು. ತಮ್ಮ ಕ್ರಾಂತಿಯ ಸಿದ್ಧಾಂತ ಮತ್ತು ಯುದ್ಧತಂತ್ರಗಳೇನು ಎಂಬುದನ್ನು ಅವರೇ ತಮ್ಮ ಅಧಿಕೃತ ದಾಖಲೆಗಳಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ. “ಸಶಸ್ತ್ರ ಸಂಗ್ರಾಮದ ಮೂಲಕ ಭಾರತದ ರಾಜಕೀಯ ಸತ್ತೆಯನ್ನು ಕಸಿದುಕೊಳ್ಳುವುದು ಮತ್ತು ರಕ್ತಸಿಕ್ತ ಯುದ್ಧದ ಮೂಲಕವೇ ಈ ಆಡಳಿತವನ್ನು ಉರುಳಿಸುವುದು” ಅವರ ಬಹಿರಂಗ ಘೋಷಣೆಯಾಗಿದೆ. ಭಾರತೀಯ ಸೈನ್ಯ, ಪೊಲೀಸ್ ವ್ಯವಸ್ಥೆ ಮತ್ತು ಇಡೀ ಆಡಳಿತ ಯಂತ್ರವನ್ನು ಯುದ್ಧದ ಮೂಲಕವೇ ಧ್ವಂಸಗೊಳಿಸುವುದು ಮಾವೋವಾದಿ ಸಂಘಟನೆಯ ಮೂಲ ಗುರಿ. ಭಾರತದ ವಿರುದ್ಧ ವೈಚಾರಿಕ ಸಮರ ಸಾರಿರುವ ಇವರು, ನಮ್ಮ ಸಂವಿಧಾನ ಜಾರಿಯಾದ ದಿನದಿಂದಲೂ ಅದನ್ನು ಒಪ್ಪಿಕೊಂಡವರೇ ಅಲ್ಲ. ಇಡೀ ಸಾಂವಿಧಾನಿಕ ಚೌಕಟ್ಟನ್ನೇ ಭಸ್ಮ ಮಾಡಿ, ಭಾರತದಲ್ಲಿ ಹಿಂಸಾತ್ಮಕ ಸರ್ವಾಧಿಕಾರವನ್ನು ಮೆರೆಸುವುದೇ ಇವರ ಅಂತಿಮ ಕನಸು. ಹೀಗಿರುವಾಗ, ಇವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಹೆಸರು ಜಪಿಸುವುದು ಕಮ್ಯುನಿಸ್ಟ್ ಶೈಲಿಯ ‘ಅಲ್-ತಕಿಯಾ’ (ತಂತ್ರಕ್ಕಾಗಿ ಆಡುವ ಹಸಿಕಳ್ಳತನ) ಹೊರತು ಬೇರೇನೂ ಅಲ್ಲ.
ವೈಚಾರಿಕ ತೂರಿಕೊಳ್ಳುವಿಕೆ ಮತ್ತು ‘ನಾಗರಿಕ ಸಮಾಜ’ದ ಮುಖವಾಡ
ಕಾಡಿನಲ್ಲಿದ್ದುಕೊಂಡು ನಡೆಸುತ್ತಿದ್ದ ಸಶಸ್ತ್ರ ದಂಗೆಯು ಧೂಳಿಪಟವಾಗುತ್ತಿದ್ದಂತೆಯೇ, ಈಗ ಈ ‘ದಿಮಾಗಿ’ (ವೈಚಾರಿಕ) ರೂಪವು ಮುನ್ನೆಲೆಗೆ ಬಂದು ಕುಳಿತಿದೆ. ಮಾವೋವಾದಿ ದಾಖಲೆಗಳೇ ಹೇಳುವಂತೆ, ಇವರು ನಗರಗಳಲ್ಲಿ ರಹಸ್ಯವಾಗಿ ಮನೆಮಾಡಿಕೊಂಡು, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ರೈತರು, ಶೋಷಿತ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರ ಹಿತರಕ್ಷಣೆಯ ನೆಪದಲ್ಲಿ ಸಾಲು ಸಾಲು ಮುಖವಾಡದ ಸಂಘಟನೆಗಳನ್ನು (Frontal Organisations) ಕಟ್ಟುತ್ತಾರೆ. ತಮ್ಮ ಸ್ವಂತ ಬ್ಯಾನರ್ಗಳ ಅಡಿಯಲ್ಲಿ ಕೆಲಸ ಮಾಡಲು ಜಾಗವಿಲ್ಲದಿದ್ದಾಗ, ಇತರೆ ಸಂಘಟನೆಗಳ ಒಳಗೆ ಕದ್ದುಮುಚ್ಚಿ ನುಸುಳಿ, ಅತ್ಯಂತ ತಂತ್ರಗಾರಿಕೆಯಿಂದ ತಮ್ಮ ವಿನಾಶಕಾರಿ ಕಾರ್ಯಸೂಚಿಯನ್ನು ತುರುಕುತ್ತಾರೆ.
ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿದ್ದ ‘ರಾಷ್ಟ್ರೀಯ ಸಲಹಾ ಮಂಡಳಿ’ (NAC) ಇಂತಹ ದಿಮಾಗಿ ನಕ್ಸಲರು ಸರ್ಕಾರದ ಆಡಳಿತ ಯಂತ್ರವನ್ನೇ ತಮ್ಮ ವಶಕ್ಕೆ ಪಡೆದುಕೊಂಡಿದ್ದಕ್ಕೆ ಜ್ವಲಂತ ಸಾಕ್ಷಿ. ಸರ್ಕಾರಿ ಅಧಿಕಾರಿಗಳು, ನೀತಿ ನಿರೂಪಕರು, ನ್ಯಾಯಾಂಗ ವ್ಯವಸ್ಥೆ, ಶಿಕ್ಷಣ ಕ್ಷೇತ್ರ, ಮಾಧ್ಯಮ ಮತ್ತು ಎನ್ಜಿಒಗಳೊಳಗೆ ವಿಷಬೀಜ ಬಿತ್ತುವುದು ಇವರ ‘ಕ್ರಾಂತಿಕಾರಿ ತಂತ್ರದ’ ಪ್ರಮುಖ ಭಾಗ. ಇವರ ಕೈಯಲ್ಲಿ ಬಂದೂಕುಗಳಿರುವುದಿಲ್ಲ; ಬದಲಿಗೆ ಪ್ರಖ್ಯಾತ ಇತಿಹಾಸಕಾರರು, ಪ್ರಶಸ್ತಿ ವಿಜೇತ ಸಾಹಿತಿಗಳು, ಕಾನೂನು ಪಂಡಿತರು, ಮಾನವ ಹಕ್ಕುಗಳ ಹರಿಕಾರರು, ಸ್ವತಂತ್ರ ಪತ್ರಕರ್ತರು, ಚಿತ್ರರಂಗದ ತಾರೆಯರು ಹಾಗೂ ಪರಿಸರ ಪ್ರೇಮಿಗಳೆಂಬ ಹೊಳೆಯುವ ಮುಖವಾಡಗಳಿರುತ್ತವೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಬೇರುಗಳನ್ನೇ ಅಲ್ಲಾಡಿಸಲು ‘ನಾಗರಿಕ ಸಮಾಜ’ (Civil Society) ಎಂಬ ಹೆಸರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಯೋಗೇಂದ್ರ ಯಾದವ್ರಂತಹವರು, “ದೇಶದ ತೀರ್ಮಾನಗಳು ಸಂಸತ್ತಿನಲ್ಲಿ ಆಗುವುದಿಲ್ಲ, ಬೀದಿಗಳಲ್ಲಿ ತೀರ್ಮಾನವಾಗುತ್ತವೆ; ದೇಶದ ನೀತಿಗಳು ಚುನಾವಣೆಯಿಂದಲ್ಲ, ಪ್ರತಿರೋಧದ ಹೋರಾಟದಿಂದ ನಿರ್ಧಾರವಾಗುತ್ತವೆ” ಎಂದು ಬಹಿರಂಗವಾಗಿ ಸಾರುತ್ತಾರೆ. ಪ್ರಜಾಪ್ರಭುತ್ವ ನೀಡಿದ ಹಕ್ಕುಗಳನ್ನೇ ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಸುಟ್ಟುಹಾಕುವುದು ಇವರ ಕುತಂತ್ರ.
ಬಿಗ್-ಟೆಕ್, ಸೋಷಿಯಲ್ ಮೀಡಿಯಾ ಮತ್ತು ‘ಶವ ರಾಜಕೀಯ’
ದಿಮಾಗಿ ನಕ್ಸಲರು ವಿದ್ಯಾವಂತರೇನೋ ಹೌದು, ಆದರೆ ತಮ್ಮ ಬುದ್ಧಿಶಕ್ತಿಯನ್ನು ದೇಶದ ವಿನಾಶಕ್ಕಾಗಿ ಸರಿದಾರಿತಪ್ಪಿಸಿ ಬಳಸುತ್ತಾರೆ. ನಿರ್ದಿಷ್ಟ ಕಾರ್ಯಸೂಚಿಯನ್ನಿಟ್ಟುಕೊಂಡ ವ್ಯಕ್ತಿಗಳು ಹಾಗೂ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಕುತಂತ್ರದ ವಿಚಾರಗಳನ್ನು ಬಿತ್ತಿ, ಜನರ ಮನಸ್ಸನ್ನು ಕಲುಷಿತಗೊಳಿಸಿ ದೇಶದ ವಿರುದ್ಧವೇ ಎತ್ತಿಕಟ್ಟುತ್ತವೆ. ಬೃಹತ್ ತಂತ್ರಜ್ಞಾನ (Big-Tech) ಕಂಪನಿಗಳಲ್ಲಿ ಕುಳಿತಿರುವ ಇವರ ಪೋಷಕರು ಮತ್ತು ಹಣಕಾಸು ಒದಗಿಸುವವರು ರೂಪಿಸುವ ಆಲ್ಗರಿದಮ್ಗಳು ಇವರ ಪರವಾಗಿಯೇ ಕೆಲಸ ಮಾಡುತ್ತಾ, ಕೋಟ್ಯಂತರ ಜನರನ್ನು ದಿಕ್ಕುತಪ್ಪಿಸಲು ನೆರವಾಗುತ್ತವೆ. ಇವರು ಎತ್ತುವ ವಿಷಯ ಅಥವಾ ಸಮಸ್ಯೆಗಳು ತೀರಾ ಸುಳ್ಳು ಎಂದೇನಲ್ಲ. ಶಿಕ್ಷಣದಿಂದ ಹಿಡಿದು ಹವಾಮಾನ ಬದಲಾವಣೆಯವರೆಗೆ, ವ್ಯವಸ್ಥೆಯ ಯಾವುದಾದರೊಂದು ಲೋಪವನ್ನು ಹಿಡಿದುಕೊಂಡು ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕುತ್ತಾರೆ. ಆದರೆ ರೋಗವನ್ನು ತೋರಿಸುವ ಇವರು ಎಂದಿಗೂ ನಂಬಲರ್ಹ ಔಷಧಿಯನ್ನಾಗಲಿ, ಪರ್ಯಾಯವನ್ನಾಗಲಿ ನೀಡುವುದಿಲ್ಲ. ಇವರ ಪರ್ಯಾಯವೇನಿದ್ದರೂ ಅಧಿಕಾರವನ್ನು ಕಸಿದುಕೊಂಡು ತಮಗಿಷ್ಟ ಬಂದಂತೆ ಸರ್ವಾಧಿಕಾರ ಮೆರೆಯುವುದು– ಅದಕ್ಕಿಟ್ಟ ಸುಂದರ ಹೆಸರು ‘ಜನರ ಪ್ರಜಾಪ್ರಭುತ್ವ’!
ಇಲ್ಲಿ ಇವರಿಗೆ ಜೀನ್ ಶಾರ್ಪ್ (Gene Sharp) ಎಂಬಾತನ ‘198 ಅಹಿಂಸಾತ್ಮಕ ಹೋರಾಟದ ಮಾರ್ಗಗಳು’ ದಾರಿದೀಪವಾಗುತ್ತವೆ. ಆದರೆ ನೆನಪಿರಲಿ, ಇಲ್ಲಿ ಇವರು ಜಪಿಸುವ ಅಹಿಂಸೆ ಎಂಬುದು ಇವರ ಹಿಂಸಾತ್ಮಕ ಕೃತ್ಯಗಳನ್ನು ಮುಚ್ಚಿಡಲು ಧರಿಸುವ ಬೂಟಾಟಿಕೆಯ ಮುಖವಾಡವಷ್ಟೇ. ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ಪರಿಕಲ್ಪನೆಗಳನ್ನು ತಮ್ಮ ಕಮ್ಯುನಿಸ್ಟ್ ದುರುದ್ದೇಶದೊಂದಿಗೆ ಅತ್ಯಂತ ಚಾಣಾಕ್ಷತನದಿಂದ ಬೆರೆಸಿ ಈ ಕುತಂತ್ರ ಹೆಣೆಯಲಾಗಿದೆ. ದಿಮಾಗಿ ನಕ್ಸಲರಿಗೆ ಶವಗಳೆಂದರೆ ಅಚ್ಚುಮೆಚ್ಚು; ಏಕೆಂದರೆ ಹೆಣಗಳನ್ನು ಇಟ್ಟುಕೊಂಡೇ ಇವರು ಜನರ ಭಾವುಕತೆಯನ್ನು ಕೆರಳಿಸುವುದು! ರಾಜಕೀಯ ಶೋಕಾಚರಣೆಗಳು, ನಕಲಿ ಶವಯಾತ್ರೆಗಳು, ಪ್ರದರ್ಶನಕಾರಿ ಅಂತ್ಯಕ್ರಿಯೆಗಳು ಹಾಗೂ ಸ್ಮಶಾನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಜನರನ್ನು ಎತ್ತಿಕಟ್ಟುವುದು ಇವರ ಪ್ರಮುಖ ತಂತ್ರ.
ತಮ್ಮ ಮೇಲಣ ಯಾವುದೇ ಆರೋಪವನ್ನು ಗೌರವದ ಪದಕದಂತೆ ಸ್ವೀಕರಿಸಿ, ಅದನ್ನೇ ತಿರುಗಿ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಬೋಸ್ಟನ್ ಮೂಲದ ಬೌದ್ಧಿಕ ಸೂತ್ರಧಾರ ಜೀನ್ ಶಾರ್ಪ್ ನೀಡಿದ ಮಾರ್ಗದರ್ಶನ. ಆತ ಇದನ್ನು ‘ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ’ ಎಂದು ಬಣ್ಣಿಸುತ್ತಾನಾದರೂ, ಅಲ್ಲಿನ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವಗಳೆರಡನ್ನೂ ಸಾಂವಿಧಾನಿಕ ಚೌಕಟ್ಟಿನ ಬದಲಾಗಿ ವಾಕ್ಚಾತುರ್ಯದ ಭಾಷಣಕಾರರೇ ನಿರ್ಧರಿಸುತ್ತಾರೆ. ಚುನಾವಣೆಗಳ ಮೇಲೆ ಜನಕ್ಕಿರುವ ನಂಬಿಕೆ ಕೆಡಿಸುವುದು, ಸರ್ಕಾರದ ಪ್ರತಿಯೊಂದು ನೀತಿ ಹಾಗೂ ಶಾಸನ ಪ್ರಕ್ರಿಯೆಗಳನ್ನು ಸಂಶಯದಿಂದ ನೋಡುವುದು, ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವುದು, ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಕ್ರಮ ಹಾಗೂ ಕಂಟಕ ಎಂದು ಬಿಂಬಿಸುವುದು, ಅಂತಿಮವಾಗಿ ಪ್ರಜಾಸತ್ತಾತ್ಮಕ ಚುನಾವಣಾ ರಾಜಕೀಯದ ಗಂಭೀರತೆಯನ್ನೇ ಧೂಳೀಪಟ ಮಾಡುವುದು ಈ ಯೋಜನೆಯ ಹಂತಗಳು. ಅಂದಿನ ‘ಅವಾರ್ಡ್ ವಾಪಸಿ’ (ಪ್ರಶಸ್ತಿ ವಾಪಸಾತಿ) ನಾಟಕದಿಂದ ಹಿಡಿದು ಇಂದಿನ ‘ದಿಮಾಗಿ ನಕ್ಸಲ್ ಪಾರ್ಟಿ’ವರೆಗಿನ ಕೊಂಡಿಗಳನ್ನು ಸಾಲಾಗಿ ಜೋಡಿಸಿ ನೋಡಿದರೆ, ಈ ಮಹಾಸಂಚಿನ ನೈಜ ರೂಪ ಕಣ್ಣಿಗೆ ಕಟ್ಟುವುದು.
‘ಕ್ವಾಡ್ರಿಗಾ’ ಒಕ್ಕೂಟ ಮತ್ತು ರಾಷ್ಟ್ರೀಯ ಅಸ್ಮಿತೆಯ ಮೇಲಿನ ದಾಳಿ
ಭಾರತದಂತಹ ವಿಶಾಲ ದೇಶದಲ್ಲಿ ವ್ಯವಸ್ಥೆಯ ಕುಂದುಕೊರತೆಗಳು ಇರುವುದು ಸಹಜ. ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿಯ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಬೇಕಿರುವುದು ದಿಟ. ಆದರೆ, ಈ ಸಮಸ್ಯೆಗಳೇನೂ ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ, ಅಥವಾ ಕೇವಲ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿದ್ದೂ ಅಲ್ಲ. ಇವರ ನಿಜವಾದ ಆಟವೆಂದರೆ ಹಿಂದುತ್ವವನ್ನು ದಬ್ಬಾಳಿಕೆಯ ಸಂಕೇತವೆಂದು ಬಿಂಬಿಸುವುದು ಮತ್ತು ಭಾರತದ ಪ್ರತಿಯೊಂದು ಸಣ್ಣಪುಟ್ಟ ಅಸ್ಮಿತೆಯನ್ನು ‘ಹಿಂದೂ ವಿರೋಧಿ’ ಎಂದು ಬೇರ್ಪಡಿಸುವುದು.
ಇದಕ್ಕಾಗಿ ಇವರು ‘ಕ್ವಾಡ್ರಿಗಾ’ (ನಾಲ್ಕು ಕುದುರೆಗಳು ಎಳೆಯುವ ರಥ) ಮಾದರಿಯ ಒಕ್ಕೂಟವನ್ನು ರಚಿಸಿಕೊಂಡಿದ್ದಾರೆ. ಅತಿರೇಕದ ಇಸ್ಲಾಮಿಸ್ಟ್ಗಳು, ಮಾವೋವಾದಿಗಳು, ಮತಾಂತರ ನಿರತ ಮಿಷನರಿಗಳು ಹಾಗೂ ಇವರೊಂದಿಗೆ ಕೈಜೋಡಿಸುವ ಬುದ್ಧಿಜೀವಿಗಳು, ಕಾನೂನು ಪಂಡಿತರು, ಎನ್ಜಿಒಗಳು, ಬಾಲಿವುಡ್ ನಟ-ನಟಿಯರು ಮತ್ತು ಮಾಧ್ಯಮ ವೇದಿಕೆಗಳ ಈ ಜಂಟಿ ಕಸರತ್ತು ದೇಶದಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಕಾಕತಾಳೀಯವಲ್ಲ, ಪಕ್ಕಾ ಯೋಜನೆ! ಅದಕ್ಕಾಗಿಯೇ, ರೈತರ ಚಳವಳಿಯಿಂದ ಹಿಡಿದು ವಿದ್ಯಾರ್ಥಿ ಪ್ರತಿಭಟನೆಯವರೆಗೆ ಪ್ರತಿಯೊಂದೂ ಅಂತಿಮವಾಗಿ ಭಾರತೀಯ ಸಂಸ್ಕೃತಿಯ ವಿರುದ್ಧ ತಿರುಗುತ್ತವೆ; ಜಮ್ಮು-ಕಾಶ್ಮೀರ ಭಾರತದೊಂದಿಗೆ ಒಂದಾಗುವುದನ್ನು ವಿರೋಧಿಸುತ್ತವೆ; ಭಾರತವನ್ನು ತುಂಡು ತುಂಡು ಮಾಡುವ ಕನಸು ಕಂಡ ಶಾರ್ಜಿಲ್ ಇಮಾಮ್ ಹಾಗೂ ಉಮರ್ ಖಾಲಿದ್ರಂತಹವರ ಬೆಂಬಲಕ್ಕೆ ನಿಲ್ಲುತ್ತವೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ರಾಷ್ಟ್ರೀಯ ಮಂತ್ರವಾಗಿದ್ದ ‘ವಂದೇ ಮಾತರಂ’ ಅನ್ನು ಗಟ್ಟಿಯಾಗಿ ವಿರೋಧಿಸುತ್ತವೆ.
ನಾಗರಿಕರ ಕರ್ತವ್ಯ: ದಿಮಾಗಿ ನಕ್ಸಲರ ಗುರುತಿಸುವುದು ಮತ್ತು ಸಂಚು ಬಯಲು ಮಾಡುವುದು
ಹಾಗೆಂದು, ಸುಧಾರಣೆ ಬಯಸಿ ಪ್ರತಿಭಟಿಸುವ ಪ್ರತಿಯೊಬ್ಬರೂ ದಿಮಾಗಿ ನಕ್ಸಲರಲ್ಲ. ಅಂತಹವರನ್ನು ಈ ಚಕ್ರವ್ಯೂಹದ ಹೊರಬದಿಯಲ್ಲಿಟ್ಟು, ‘ಕೋರ್’ (ಕೇಂದ್ರ) ಭಾಗದಲ್ಲಿರುವ ದಿಮಾಗಿಗಳು ವೈಚಾರಿಕ ಯುದ್ಧದ ಕಣದಲ್ಲಿ ಅಭಿಮನ್ಯುಗಳಂತೆ ಬಳಸಿಕೊಳ್ಳುತ್ತಾರೆ. ರಾಷ್ಟ್ರೀಯ ಭದ್ರತೆ ಎಂಬುದು ಕೇವಲ ಗಡಿ ಕಾಯುವ ಮಿಲಿಟರಿ ತಂತ್ರಗಳಿಗೆ ಸೀಮಿತವಾಗದೆ, ಸಮಾಜದ ಮನಸ್ಸಿನೊಂದಿಗೆ ಆಡುವ ಬೌದ್ಧಿಕ ಆಟವಾಗಿಯೂ ರೂಪಾಂತರಗೊಂಡಿರುವ ಈ ಕಾಲಘಟ್ಟದಲ್ಲಿ, ನಾಗರಿಕರು ಅತ್ಯಂತ ಎಚ್ಚರದಿಂದಿರಬೇಕು. ಮಾರ್ಕ್ಸ್ ಮತ್ತು ಮಾವೋವಾದಿ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧೀಜಿಯವರನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ನಗರ ಮಾವೋವಾದಿಗಳ ವಿರುದ್ಧದ ಈ ಹೋರಾಟವನ್ನು, ನಾವು ಭದ್ರತಾ ಪಡೆಗಳ ಜೊತೆಗೂಡಿ ಗೆಲ್ಲಲೇಬೇಕಿದೆ. ಸಾಲು ಸಾಲು ಹೋರಾಟಗಳ ಮೂಲಕ ಇಡೀ ಆಡಳಿತ ಯಂತ್ರವನ್ನು ಅಸಮರ್ಥಗೊಳಿಸಿ, ಅರಾಜಕತೆಯ ಬೆಂಕಿಯಲ್ಲಿ ಕ್ರಾಂತಿಯ ಬೇಳೆ ಬೇಯಿಸಿಕೊಳ್ಳುವುದೇ ಈ ದಿಮಾಗಿ ನಕ್ಸಲರ ಕಾಯಂ ತಂತ್ರ.
ಈ ವೈಚಾರಿಕ ನಕ್ಸಲರು ತಂದೊಡ್ಡಿರುವ ಮಹಾಅಪಾಯವನ್ನು ಗ್ರಹಿಸುವುದು ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಇವರ ಬಣ್ಣ ಬಯಲು ಮಾಡುವುದು ಪ್ರತಿಯೊಬ್ಬ ಭಾರತೀಯನ ರಾಷ್ಟ್ರಧರ್ಮ. ಸಾಮಾಜಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಈ ವಿಷಯವನ್ನು ಆಳವಾಗಿ ಅಭ್ಯಾಸ ಮಾಡಿ, ದೇಶದ ಜನರಿಗೆ ಈ ಕಂಟಕದ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಸಶಸ್ತ್ರ ನಕ್ಸಲಿಸಂ ಅಂತಿಮ ಹಂತಕ್ಕೆ ತಲುಪಿರುವ ಈ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೇಶದ ಜನರಿಗೆ ನೆನಪಿಸಿದ್ದು ಇದೇ ಕರ್ತವ್ಯವನ್ನು. ಜನರ ನಿಷ್ಕಪಟ ಭಾವನೆಗಳನ್ನು ಮತ್ತು ನೈಜ ಕಾಳಜಿಗಳನ್ನು ಬಂಡವಾಳ ಮಾಡಿಕೊಂಡು ದೇಶವನ್ನು ಮೂರ್ಖರನ್ನಾಗಿಸಲು ಹೊರಟಿರುವ ‘ದಿಮಾಗಿ ನಕ್ಸಲರ’ ಮುಖವಾಡವನ್ನು ಬಿಚ್ಚಿಡಿ; ಇವರು ಎಂದಿಗೂ ದೇಶದ ಒಳಿತನ್ನು ಬಯಸುವವರಲ್ಲ. ಬದಲಿಗೆ, ಪ್ರಜಾಪ್ರಭುತ್ವದ ಯಾವುದೇ ಭಾಗವಹಿಸುವಿಕೆಯಿಲ್ಲದೆ, ರಸ್ತೆಗಳ ಮೇಲೆಯೇ, ಅರಾಜಕತೆಯ ಪ್ರತಿರೋಧದ ಮೂಲಕವೇ ತೀರ್ಮಾನಗಳನ್ನು ಹೇರಬಯಸುವ ಹಿಂಸಾತ್ಮಕ ಸರ್ವಾಧಿಕಾರದ ಅಪಾಯಕಾರಿ ಕಾವಲುಗಾರರು. ಮಹಾತ್ಮ ಡಾ. ಅಂಬೇಡ್ಕರ್ ಅವರು ಅಂದೇ ನಾಡಿಗೆ ಎಚ್ಚರಿಸಿದ ‘ಅರಾಜಕತೆಯ ನಿಯಮಗಳನ್ನು ಬರೆಯುವ ವ್ಯಾಕರಣಕಾರರು’ (Grammarians of Anarchy) ಎಂದರೆ ಇವರೇ ನೋಡಿ!
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
