ಸಂಯಮ, ತಾಳ್ಮೆ ಇರಲಿ | ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಸಿ ಬಳಿಯಲು ಯತ್ನ | ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಗಳನ್ನು ವಿಫಲಗೊಳಿಸೋಣ
ನವದೆಹಲಿ: ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ಮಂದಿರ, ತಲೆಮಾರುಗಳ ಹೋರಾಟ ಹಾಗೂ ಕೋಟ್ಯಂತರ ರಾಮಭಕ್ತರ ಸಮರ್ಪಣೆ, ತ್ಯಾಗ ಮತ್ತು ಬಲಿದಾನದ ಫಲವಾಗಿ ಇಡೀ ಹಿಂದೂ ಸಮಾಜದ ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಅಯೋಧ್ಯೆಯ ಶ್ರೀ ರಾಮಲಲಾ ಮಂದಿರದಲ್ಲಿ ಇರಿಸಲಾಗಿದ್ದ ಹುಂಡಿಗಳಿಂದ ದೇಣಿಗೆ ಕಳ್ಳತನ ಮಾಡಿರುವ ದುರದೃಷ್ಟಕರ ಘಟನೆ ಇಡೀ ಸಮಾಜ ಮತ್ತು ರಾಮ ಭಕ್ತರ ಭಾವನೆಗಳು ಹಾಗೂ ನಂಬಿಕೆಯನ್ನು ತೀವ್ರವಾಗಿ ಘಾಸಿಗೊಳಿಸಿದೆ. ಈ ಘಟನೆಯಿಂದ ನಾವೆಲ್ಲರೂ ತೀವ್ರ ನೋವು ಮತ್ತು ಆಕ್ರೋಶಕ್ಕೆ ಒಳಗಾಗಿದ್ದೇವೆ ಎಂದು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಕಳಕಳಿಯ ವಿನಂತಿಯ ಮೇರೆಗೆ, ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ ಮತ್ತು ಅದರ ಶಿಫಾರಸುಗಳ ಆಧಾರದ ಮೇಲೆ ಕಾನೂನು ಪ್ರಕ್ರಿಯೆ ಪ್ರಾರಂಭಿಸಿದೆ. ತನಿಖೆಯ ನಂತರ ತಪ್ಪಿತಸ್ಥರೆಂದು ಕಂಡುಬರುವ ಯಾವುದೇ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಇಡೀ ಹಿಂದೂ ಸಮಾಜ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಖಂಡನೀಯ ಘಟನೆಯನ್ನು ಅಸಾಧಾರಣ ವಿಷಯವೆಂದು ಪರಿಗಣಿಸುತ್ತದೆ. ಮಂದಿರದ ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿನ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವುದು ಸಹಜ. ಅಯೋಧ್ಯೆ ಮಂದಿರದ ಮೇಲಿನ ಕೋಟ್ಯಂತರ ರಾಮ ಭಕ್ತರ ನಂಬಿಕೆ ಮತ್ತು ಶ್ರದ್ಧೆ ಮುರಿಯದೆ ಮತ್ತು ದೃಢವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ. ಪ್ರಸ್ತುತ ಇರುವ ಗೊಂದಲ ಮತ್ತು ಅನಿಶ್ಚಿತತೆಯ ಸ್ಥಿತಿ ಕೊನೆಗೊಳ್ಳಬೇಕು. ಈ ನಿಟ್ಟಿನಲ್ಲಿ, ಮಂದಿರದ ಆಡಳಿತ ಮಂಡಳಿ ಮತ್ತು ಸರ್ಕಾರ ನೇಮಿಸಿರುವ ಎಸ್ಐಟಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.
ಸರಿಯಾದ ಆರ್ಥಿಕ ನಿರ್ವಹಣೆ, ದೋಷರಹಿತ ಮತ್ತು ಪಾರದರ್ಶಕ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು ಶುದ್ಧತೆ, ಪಾವಿತ್ರ್ಯತೆ ಹಾಗೂ ನೈಜ ಧಾರ್ಮಿಕತೆಯಿಂದ ತುಂಬಿದ ವಾತಾವರಣದ ಮೂಲಕ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಿಂದೂ ಸಮಾಜದ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಈ ಕಷ್ಟದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸುವಂತೆ ಮತ್ತು ಈ ದುರದೃಷ್ಟಕರ ಘಟನೆಯನ್ನು ಬಳಸಿಕೊಂಡು ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಗಳನ್ನು ವಿಫಲಗೊಳಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಡೀ ಹಿಂದೂ ಸಮಾಜಕ್ಕೆ ಕರೆ ನೀಡುತ್ತದೆ ಎಂದು ತಿಳಿಸಿದರು.
