- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ಅನುವಾದದ ಜಗತ್ತೇ ಹಾಗಿದೆ. ದುರದೃಷ್ಟವಶಾತ್, ಮೂಲ ಲೇಖಕರ ಆಶಯ – ಕಳಕಳಿಗಳು ಸರಿಯಾಗಿ ಅಭಿವ್ಯಕ್ತಿಯಾಗಬೇಕು ಎನ್ನುವುದನ್ನೇ ಕಡೆಗಣಿಸಲಾಗಿದೆ. ಅನುವಾದಕ್ಕೆ ಕುಳಿತ ಅನೇಕ ‘ಮುಗ್ಧರು’ ಬ್ರೆಡ್ ಎಂದರೆ ರೊಟ್ಟಿ ಎಂಬ ರೀತಿಯಲ್ಲಿ ಬಾಲಿಶವಾಗಿ ಅನುವಾದಿಸಿಬಿಡುತ್ತಾರೆ. ಇನ್ನು ರಿಲಿಜನ್ ಎಂದರೆ ಅವರಿಗೆ ಧರ್ಮ ಎಂದೇ ಅನ್ನಿಸುತ್ತದೆ. ಎರಡೂ ಬೇರೆಬೇರೆಯೇ ಪರಿಕಲ್ಪನೆಗಳು ಎಂಬುದು ಅಂತಹವರಿಗೆ ಹೊಳೆಯುವುದೇ ಇಲ್ಲ. ಹಾಗೆಂದೇ, ಎಲ್ಲ ಪ್ರಕಾರಗಳ ಅನುವಾದಗಳು ಬಹುಪಾಲು ದುರ್ಬಲವಾಗಿಬಿಟ್ಟಿವೆ. ಸಾಹಿತ್ಯದ ಮಾತಿರಲಿ, ಕಾನೂನು ಮತ್ತು ನ್ಯಾಯಾಲಯಗಳ ಲೋಕದಲ್ಲಿ ಸ್ವಲ್ಪ ತಪ್ಪಾದರೂ ಪರಿಣಾಮವು ಅಪಾಯಕಾರಿಯಾಗಿರುತ್ತದೆ. ನೋಡಿ, ಸಂವಿಧಾನದಲ್ಲಿ ‘directive principles’ ಎಂಬ ಪರಿಕಲ್ಪನೆಯಿದೆ. ಅದನ್ನು ನಮ್ಮ ಅಧಿಕೃತ ಸರ್ಕಾರೀ ಕಾನೂನು ಪದಕೋಶದಲ್ಲಿಯೇ ‘ನಿರ್ದೇಶಕ ತತ್ತ್ವಗಳು’ ಎಂದು ತಪ್ಪಾಗಿ ಅನುವಾದಿಸಲಾಗಿದೆ. ಸಂವಿಧಾನದ (Constitution: Part IV, Article 36 – 5D) ಮೂಲ ಆಶಯದಂತೆ, ಅದು ‘ಮಾರ್ಗದರ್ಶಕ ಸೂತ್ರಗಳು’ (ಕಾನೂನು ರೂಪಿಸುವಾಗ ಈ ಸೂತ್ರಗಳನ್ನು ಅನುಸರಿಸಬೇಕು. ಆದರೆ, ಕಾನೂನು ರೂಪಿಸುವ ಮೊದಲು, ಇವುಗಳನ್ನು ಜಾರಿ ಮಾಡಲು ಬರುವುದಿಲ್ಲ) ಎಂಬುದಾಗಿ, ಸೂಕ್ತ ವಿವರಣೆಯೊಂದಿಗೆ ಕನ್ನಡದಲ್ಲಿ ಬರಬೇಕಿತ್ತು. ‘ನಿರ್ದೇಶಕ ತತ್ತ್ವಗಳು’ ಎಂದು ಹೇಳಿದರೆ ಏನೂ ಅರ್ಥವಾಗುವುದಿಲ್ಲ, ಅದು ಸರಿಯಾದ ಅನುವಾದವೂ ಅಲ್ಲ.
ಇನ್ನು ಭಾರತೀಯ ಮೂಲದ ಮಹಾಕಾವ್ಯಗಳನ್ನು, ಶಾಸ್ತ್ರಗ್ರಂಥಗಳನ್ನು, ಭಗವದ್ಗೀತೆಯನ್ನು ಇಂಗ್ಲಿಷಿಗಾಗಲೀ – ಬೇರೊಂದು ವಿದೇಶೀ ಭಾಷೆಗಾಗಲೀ ಭಾಷಾಂತರಿಸುವಾಗ ತುಂಬ ತುಂಬ ಎಚ್ಚರಿಕೆ ಅಗತ್ಯ. ಭಾಷಾಂತರಕಾರರು ಕೆಲವು ಪರಿಕಲ್ಪನೆಗಳನ್ನು ಸನಾತನ ಧರ್ಮ ಮತ್ತು ಭಾರತೀಯ ಪರಿಪ್ರೇಕ್ಷ್ಯದಲ್ಲಿಯೇ, ಅನುವಾದಿಸುವ ಮೊದಲೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇಸ್ಲಾಮೀ ದಾಳಿಕೋರ ಜಿಹಾದಿಗಳು ನಮ್ಮ ದೇವಾಲಯಗಳನ್ನು ಧ್ವಂಸ ಮಾಡಿದರು, ನಮ್ಮ ಗ್ರಂಥಾಲಯಗಳನ್ನು ಸುಟ್ಟು ಬೂದಿ ಮಾಡಿದರು. ಇನ್ನು ಅವರು ಮಾಡಿದ ನರಹತ್ಯಾಕಾಂಡ – ಅತ್ಯಾಚಾರ – ಗುಲಾಮರ ಮಾರುಕಟ್ಟೆಯಲ್ಲಿ ನಮ್ಮನ್ನು ಮಾರುವುದು ಎಲ್ಲವೂ ಎಲ್ಲವೂ ಭಯಾನಕವೇ. ಅದಕ್ಕಿಂತ ಹೆಚ್ಚು ಅಪಾಯಕಾರಿ ಹೊಡೆತ ಬಿದ್ದುದು ನಮಗೆ ಬ್ರಿಟಿಷರಿಂದ. ಅವರು ನಮ್ಮ ಗುರುಕುಲಗಳನ್ನು, ಉದ್ಯಮಗಳನ್ನು, ಕೃಷಿಯನ್ನು ಮೂಲೋತ್ಪಾಟನೆ ಮಾಡಿಬಿಟ್ಟರು. ವಿಚಿತ್ರ ನೋಡಿ, ಅವರ ಆ ಇಂಗ್ಲಿಷ್ ಭಾಷೆಯ ಮಾರಣಾಂತಿಕ ಹೊಡೆತ ಭಾರತದಲ್ಲಿ ದಿನದಿನಕ್ಕೆ ಇಂದಿಗೂ ಹೆಚ್ಚುತ್ತಿರುವುದು ನಮ್ಮ ದುರ್ದೈವ. ಇಂಗ್ಲಿಷ್ ಶಿಕ್ಷಣ, ಅವರೇ ಸಿದ್ಧಪಡಿಸಿದ ಪಠ್ಯಕ್ರಮ ನಮ್ಮ ಮಾನಸಿಕತೆಯ ಮೇಲೆ ಎಂತಹ ದುಷ್ಪರಿಣಾಮ ಬೀರಿದೆ ಎಂದರೆ ‘ಮೊದಲ ಶಾಲೆ, ಮೊದಲ ವಿಶ್ವವಿದ್ಯಾನಿಲಯ, ಮೊದಲ ಡಾಕ್ಟರ್ ಹೀಗೆ ಪ್ರತಿಯೊಂದೂ ನಮ್ಮಲ್ಲಿ ಪ್ರಾರಂಭವಾದುದು ಬ್ರಿಟಿಷರಿಂದಲೇ’ ಎಂಬ ಪ್ರಥೆಯನ್ನು ನಾವು ನಂಬಿಕೊಂಡುಬಿಟ್ಟಿದ್ದೇವೆ.
ಆರ್ಯ ದ್ರಾವಿಡ ಸಿದ್ಧಾಂತ ಮತ್ತು ಆರ್ಯರ ಆಕ್ರಮಣಗಳ ವಾದಗಳು ವೈಜ್ಞಾನಿಕವಾಗಿ ಅಸತ್ಯವೆಂದು ರುಜುವಾತಾಗಿ ದಶಕಗಳೇ ಕಳೆದರೂ, ನಮ್ಮ ಶಾಲಾ ಕಾಲೇಜುಗಳಲ್ಲಿ ಅದನ್ನೇ ಒದರಲಾಗುತ್ತಿದೆ. ಕಳೆದ ಎರಡು – ಮೂರು ಶತಮಾನಗಳಲ್ಲಿ, ಐರೋಪ್ಯರೇ ನಮ್ಮ ಗ್ರಂಥಗಳನ್ನು ಕಾವ್ಯಗಳನ್ನು ಅನುವಾದ ಮಾಡಿದರೆಂಬುದನ್ನು ನಾವು ಹೆಮ್ಮೆಯಿಂದ ಉಲ್ಲೇಖಿಸುತ್ತೇವೆ. ಆದರೆ ಆ ಅನುವಾದಗಳು ಸಮರ್ಪಕವಾಗಿವೆಯೇ ಎಂಬುದನ್ನು ನಾವು ಪರಿಶೀಲಿಸಲು ಹೋಗಿಯೇ ಇಲ್ಲ. ಕೆಲ ವರ್ಷಗಳ ಹಿಂದೆ, ವೈಚಾರಿಕ ಚಿಂತನೆಯ ಮಹಾಮೇರು ಪ್ರೊ|| ಎಸ್.ಎನ್. ಬಾಲಗಂಗಾಧರ ಅವರು ಭಗವದ್ಗೀತೆಯ ಅನುವಾದದ ಆಯಾಮದ ಎಡವಟ್ಟುಗಳನ್ನು ಕುರಿತು ಮಾತನಾಡಿದಾಗ ನಮಗೆಲ್ಲಾ ಆಘಾತವೇ ಕಾದಿತ್ತು.
ಸಾಮಾನ್ಯ ಯುಗದ (Common Era) 1785ರಲ್ಲಿ ಚಾರ್ಲ್ಸ್ ವಿಲ್ಕಿನ್ಸ್ ಎಂಬಾತ ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದ. ಅವನೇನೂ ವಿದ್ವಾಂಸನಲ್ಲ. ಜೊತೆಗೆ ಅವನಿಗೆ ಯೂರೋಪ್ ಮೂಲದ ಮತ್ತು ಕ್ರೈಸ್ತಮತದ ಎಲ್ಲ ಪೂರ್ವಗ್ರಹಗಳೂ ಇದ್ದವು, ಎಲ್ಲ ಮೂರ್ಖತನವೂ ಇತ್ತು. ಆ ಕಾಲಘಟ್ಟದ ಯೂರೋಪಿನಲ್ಲಿ ಹೆಣ್ಣು ಮಕ್ಕಳ ಬಗೆಗೆ ಗೌರವ ಇರಲಿಲ್ಲ. ಅವರು ಮಾಟಗಾತಿಯರು, ವಿಶ್ವಾಸಕ್ಕೆ ಅನರ್ಹರು ಎಂಬಂತಹ ದುರ್ಭಾವನೆಗಳೇ ಇದ್ದವು. ಈ ಅಯೋಗ್ಯ ವಿಲ್ಕಿನ್ಸ್ ಗೂ ಇಂತಹ ಎಲ್ಲ ದುರಭಿಪ್ರಾಯಗಳೂ ಇದ್ದವು.
ಭಗವದ್ಗೀತೆಯ ಮೊದಲ ಅಧ್ಯಾಯ ‘ಅರ್ಜುನ ವಿಷಾದ ಯೋಗ’ದ 41ನೆಯ ಶ್ಲೋಕದ ಒಂದು ಸಾಲು ಹೀಗಿದೆ:
“ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ”
ಆತ ‘ದುಷ್ಟರು’ ಎಂಬ ಪದವನ್ನು ಇಂಗ್ಲಿಷಿನಲ್ಲಿ ‘ಹಾದರ ಮಾಡುವವರು’ ಎಂದು ಅನುವಾದಿಸಿಬಿಟ್ಟ. ವರ್ಣಸಂಕರ ಎನ್ನುವುದನ್ನು ಬೇರೆ ಬೇರೆ ಜಾತಿಗಳ ನಡುವಿನ ವ್ಯಭಿಚಾರ ಎಂಬುದಾಗಿ ಪರಿಭಾವಿಸಿ ಬರೆದುಬಿಟ್ಟ. ವಿಲ್ಕಿನ್ಸ್ ‘ವರ್ಣ’ ಎಂಬುದನ್ನು ‘tribe’ ಎಂದುಕೊಂಡುಬಿಟ್ಟ. ವರ್ಣಸಂಕರದಿಂದ ಸ್ತ್ರೀಯರು ಹಾದರ ಮಾಡುತ್ತಾರೆ ಮತ್ತು ಅದರಿಂದ ವ್ಯಭಿಚಾರದ ಸಂತಾನ ಹುಟ್ಟುತ್ತದೆ ಎಂಬ ಅರ್ಥ ಬರುವಂತೆ ಬರೆದುಬಿಟ್ಟ. ನಮ್ಮ ಗುರುಕುಲಗಳು – ಜ್ಞಾನ ಪರಂಪರೆ ಅಳಿದುಹೋಗಿ, ಇಂಗ್ಲಿಷ್ ಶಾಲೆಗಳು ವಕ್ಕರಿಸಿದ ಮೇಲೆ ಮೂಲಾರ್ಥವನ್ನು ಮತ್ತು ಸಂದರ್ಭವನ್ನು ಮರೆತ ನಾವು, ಯಾರೋ ಮಾಡಿದ ಅಧ್ವಾನದ ಇಂತಹ ಇಂಗ್ಲಿಷ್ ಅನುವಾದವನ್ನೇ ನಂಬಿಕೊಂಡುಬಿಟ್ಟರೆ ಹೇಗೆ? ಜಾತಿ, tribe ಎನ್ನುವಂತಹುದು ಹುಟ್ಟಿನಿಂದ ಬರುತ್ತದೆ ಮತ್ತು ‘ವರ್ಣ’ ಬದಲಾಯಿಸಿಕೊಳ್ಳಬಹುದಾದುದು ಎನ್ನುವುದನ್ನು ನಾವೇ ಮರೆತರೆ ಹೇಗೆ? ನಮ್ಮಲ್ಲಿನ ಅನೇಕ ದೊಡ್ಡ ದೊಡ್ಡ ವಿದ್ವಾಂಸರೂ ಸಂಸ್ಕೃತ ಭಾಷೆಯ ಮೂಲ ಪಠ್ಯವನ್ನು ಮರೆತು ಇಂಗ್ಲಿಷ್ ಅನುವಾದವನ್ನೇ ಮುಂದಿಟ್ಟುಕೊಂಡು ಬೇರೆಬೇರೆ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿಬಿಟ್ಟರು. ಅಧ್ವಾನವಾಗಿಹೋಯಿತು. ವರ್ಣ ಮತ್ತು ಜಾತಿಗಳ ನಡುವಿನ ವ್ಯತ್ಯಾಸವನ್ನು ನಮ್ಮ ವಿದ್ವಾಂಸರೇ ಮರೆತುಬಿಟ್ಟರು.
ಪ್ರೊ|| ಎಸ್.ಎನ್. ಬಾಲಗಂಗಾಧರ ಅವರು “ದುಷ್ಟನಿಗೆ – ವ್ಯಭಿಚಾರಿಗೆ ವ್ಯತ್ಯಾಸ ಇಲ್ಲವೇ? ವರ್ಣಸಂಕರಕ್ಕೂ – ಹಾದರದ ಸಂತಾನಕ್ಕೂ ಏನು ಸಂಬಂಧ?” ಎಂದೆಲ್ಲಾ ಪ್ರಶ್ನಿಸಿದಾಗ ನಾವೆಲ್ಲಾ ಅಕ್ಷರಶಃ ಅವಾಕ್ಕಾದೆವು. ನಾವು ಸಂಸ್ಕೃತ ಭಾಷೆಯ ಮೂಲ ಪಠ್ಯವನ್ನು ಮರೆತು ಇಂಗ್ಲಿಷ್ ಅನುವಾದವನ್ನೇ ಅವಲಂಬಿಸಿದ ಮೂರ್ಖತನದ ಕಥೆಯಿದು. ಬಾಲಗಂಗಾಧರರ ಅಂದಿನ ಆ ಉಪನ್ಯಾಸ ನಮ್ಮಂತಹವರನ್ನು ಅಲ್ಲಾಡಿಸಿಬಿಟ್ಟಿತು. ಮನೆಗೆ ಹೋಗಿ ನಾನು ಬೇರೆಬೇರೆ ವಿದ್ವಾಂಸರು ಮಾಡಿರುವ ಅನುವಾದಗಳ ಪರಾಮರ್ಶೆ ಮಾಡಿದೆ. (ತಮಿಳುನಾಡು ಮೂಲದ) ಸ್ವಾಮಿ ದಯಾನಂದ ಸರಸ್ವತಿಯವರನ್ನು ಹೊರತುಪಡಿಸಿದರೆ, ಉಳಿದವರು ಎಡವಿರುವುದು, ತಪ್ಪಾಗಿ ವ್ಯಾಖ್ಯಾನ ಮಾಡಿರುವುದು ಗಮನಿಸಿ ಆಶ್ಚರ್ಯಪಟ್ಟೆ, ವಿಷಾದವೂ ಆಯಿತು. ಅಂದು ಆ ಅರ್ಜುನನಿಗಾದ ವಿಷಾದ ನನ್ನಲ್ಲೂ ಉಂಟಾಯಿತು, ಆದರೆ, ಬೇರೆ ಕಾರಣಕ್ಕೆ!.
ನಾವು ಹೆಚ್ಚಿನ ಗಮನ, ಆದ್ಯತೆ, ಮಹತ್ತ್ವ ನೀಡದ ಕ್ಷೇತ್ರವೆಂದರೆ ಈ ಅನುವಾದ – ಭಾಷಾಂತರಗಳ ಕ್ಷೇತ್ರ. ತಪ್ಪು ಅನುವಾದಗಳಿಂದ ಕಾನೂನಿನ ಲೋಕದಲ್ಲಿ ಮಾತ್ರವಲ್ಲ, ಅಧ್ಯಾತ್ಮ – ಸಾಹಿತ್ಯ – ಸಮಾಜಶಾಸ್ತ್ರಗಳ ಲೋಕದಲ್ಲೂ ದುರಂತಗಳು ಸಂಭವಿಸಿಬಿಟ್ಟಿವೆ, ಅನಾಹುತಗಳೇ ಆಗಿಬಿಟ್ಟಿವೆ. “ಭಾಷಾಂತರವೇ… ಒಂದು ನಿಘಂಟು ಇದ್ದರಾಯಿತು” ಎಂದು ಮೂಗು ಮುರಿಯುವ ಮತ್ತು ಅನುವಾದದ ಆಯಾಮವನ್ನೇ ಲಘುವಾಗಿ ಪರಿಗಣಿಸುವ ‘ಪಂಡಿತೋತ್ತಮರು’ ನಮ್ಮಲ್ಲಿದ್ದಾರೆ. ಅಂತಹವರಿಂದಲೇ ಇಂತಹ ಅವಘಡಗಳಾಗಿವೆ. ಸೂಕ್ತ ಅನುವಾದ, ಸರಿಯಾದ ವ್ಯಾಖ್ಯಾನಗಳು ಬೆಳಕು ಚೆಲ್ಲಲಿ.
