ಅಂಕಣ – ರಾಷ್ಟ್ರಹಿತ
- ಡಾ. ನಂದ ಕಿಶೋರ್ ಎಂ.ಎಸ್., ಸಹ ಪ್ರಾಧ್ಯಾಪಕ, ಪುದುಚೆರಿ ವಿಶ್ವವಿದ್ಯಾಲಯ
2026ರ ಜೂನ್ 10ರಂದು ನರೇಂದ್ರ ಮೋದಿಯವರು ಭಾರತದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಸತತವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿದೇಶಾಂಗ ಸಚಿವಾಲಯವು ಈ ಸಂದರ್ಭವನ್ನು ಭಾರತದ ಜಾಗತಿಕ ವರ್ಚಸ್ಸಿನಲ್ಲಿ ಆದ ಅಭೂತಪೂರ್ವ ರೂಪಾಂತರದ ದ್ಯೋತಕವೆಂದು ಬಣ್ಣಿಸಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮೂಲಕ ಹವಾಮಾನ ಬಿಕ್ಕಟ್ಟಿನ ನಾಯಕತ್ವ, ಯುಪಿಐನಂತಹ ಡಿಜಿಟಲ್ ವ್ಯವಸ್ಥೆಗಳ ವಿಸ್ತರಣೆ, ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್) ಧ್ವನಿಯಾಗಿ ಮತ್ತು ಬಿಕ್ಕಟ್ಟುಗಳ ಸಂದರ್ಭದಲ್ಲಿ ಮೊದಲಿಗನಾಗಿ ಸ್ಪಂದಿಸುವ ಭಾರತದ ಪಾತ್ರವನ್ನು ಅದು ಮುಂದಿಟ್ಟಿದೆ. ಈ ಪ್ರಚಾರದ ಭರವು ಆತ್ಮವಿಶ್ವಾಸದಿಂದ ಕೂಡಿದೆ. ಆದರೆ ಇಲ್ಲಿ ನಿಜಕ್ಕೂ ಮುಖ್ಯವಾದ ಮತ್ತು ಕಠಿಣವಾದ ಪ್ರಶ್ನೆಯೆಂದರೆ, ಹನ್ನೆರಡು ವರ್ಷಗಳ ಈ ತೀವ್ರ ರಾಜತಾಂತ್ರಿಕ ಚಟುವಟಿಕೆಗಳು ನಿಜಕ್ಕೂ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ವಿಸ್ತರಿಸಿವೆಯೇ ಅಥವಾ ಕೇವಲ ದೃಶ್ಯಗೋಚರತೆಯನ್ನು ಪ್ರಭಾವವೆಂದು ತಪ್ಪಾಗಿ ಭಾವಿಸಲಾಗಿದೆಯೇ ಎಂಬುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇವೆರಡೂ ಸತ್ಯವೇ ಆಗಿವೆ. ಮೋದಿಯುಗವು ವಿಶ್ವದ ಮುಂದೆ ಭಾರತವನ್ನು ನಿಲ್ಲಿಸುವ ರೀತಿಯಲ್ಲಿ ನೈಜ ಮತ್ತು ಶಾಶ್ವತವಾದ ಬದಲಾವಣೆಯನ್ನು ತಂದಿದೆ. ಅದೇ ಹೊತ್ತಿಗೆ, ಸಂಭ್ರಮಾಚರಣೆಯ ಭರದಲ್ಲಿ ಮರೆಮಾಚಲ್ಪಡುವ ಕೆಲವು ವೈಫಲ್ಯಗಳು ಮತ್ತು ದೌರ್ಬಲ್ಯಗಳನ್ನೂ ಇದು ಬಿಟ್ಟುಹೋಗಿದೆ. ಒಂದು ಗಂಭೀರವಾದ ವಿಮರ್ಶೆ ಈ ಎರಡೂ ಮುಖಗಳನ್ನು ಸಮಚಿತ್ತದಿಂದ ನೋಡಬೇಕಾಗುತ್ತದೆ.
ಮೊದಲು ನಿರ್ವಿವಾದವಾಗಿ ಬದಲಾದದ್ದೇನು ಎಂಬುದರಿಂದ ಆರಂಭಿಸೋಣ. 2014ಕ್ಕೂ ಹಿಂದಿನ ಭಾರತದ ವಿದೇಶಾಂಗ ನೀತಿಯು ಅತಿ ಎಚ್ಚರಿಕೆಯಿಂದ ಕೂಡಿದ್ದು, ಪ್ರತಿಕ್ರಿಯಾತ್ಮಕವಾಗಿತ್ತು. ಯಾವುದೇ ಗುಂಪಿಗೆ ಸೇರದೆ ದೂರವೇ ಉಳಿಯುವ ಹಳೆಯ ಪ್ರವೃತ್ತಿಯೇ ಅದರ ಜೀವಾಳವಾಗಿತ್ತು. ಆದರೆ ಕಳೆದ ಹನ್ನೆರಡು ವರ್ಷಗಳ ನಿರ್ಣಾಯಕ ನಡೆಯೆಂದರೆ, ಏಕಕಾಲದಲ್ಲಿ ಅನೇಕ ಶಕ್ತಿಕೇಂದ್ರಗಳೊಂದಿಗೆ ಉದ್ದೇಶಪೂರ್ವಕವಾಗಿ ಸಂಬಂಧ ಬೆಳೆಸಿದ್ದು. ಅಧಿಕಾರಿಗಳು ಇದನ್ನು ಪ್ರಾಯೋಗಿಕ ತಂತ್ರಗಾರಿಕೆಯ ಸ್ವಾಯತ್ತತೆ ಎಂದು ಕರೆದರೆ, ವಿದ್ವಾಂಸರು ಬಹು-ಮೈತ್ರಿ ವ್ಯವಸ್ಥೆ ಎಂದು ಬಣ್ಣಿಸುತ್ತಾರೆ. ಭಾರತವು ಅಮೆರಿಕದೊಡನೆ ರಕ್ಷಣೆ ಮತ್ತು ತಂತ್ರಜ್ಞಾನದ ಪಾಲುದಾರಿಕೆಯನ್ನು ಗಾಢವಾಗಿಸಿಕೊಂಡಿತು, ರಷ್ಯಾದೊಂದಿಗಿನ ತನ್ನ ಹಳೆಯ ಇಂಧನ ಮತ್ತು ಶಸ್ತ್ರಾಸ್ತ್ರ ಸಂಬಂಧವನ್ನು ಉಳಿಸಿಕೊಂಡಿತು, ಗಲ್ಫ್ ಮತ್ತು ಪಶ್ಚಿಮ ಏಷ್ಯಾದಲ್ಲಿ ತನ್ನ ವ್ಯಾಪ್ತಿಯನ್ನು ತೀವ್ರವಾಗಿ ವಿಸ್ತರಿಸಿತು. ಯಾವುದೇ ಒಂದು ಬಣಕ್ಕೆ ಕಟ್ಟುಬೀಳಲು ನಿರಾಕರಿಸುತ್ತಲೇ ಯುರೋಪ್ ಮತ್ತು ಪೂರ್ವ ಏಷ್ಯಾದಾದ್ಯಂತ ಕಾರ್ಯಸಾಧುವಾದ ಸಂಬಂಧಗಳನ್ನು ಕಟ್ಟಿತು. ಕ್ವಾಡ್ ಒಕ್ಕೂಟದ ಪುನರುಜ್ಜೀವನ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿನ ನಿರಂತರ ಹೂಡಿಕೆಯು ಈ ನಿಲುವಿಗೆ ಒಂದು ರಣತಾಂತ್ರಿಕ ಬೆನ್ನೆಲುಬನ್ನು ಒದಗಿಸಿತು. ಇದು ಕೇವಲ ಬಾಯಿಮಾತಿನ ಬಡಾಯಿಯಾಗಿರಲಿಲ್ಲ. ತಟಸ್ಥವಾಗಿ ಉಳಿಯುತ್ತಿದ್ದ ರಾಷ್ಟ್ರವೊಂದು ತನ್ನದೇ ಆದ ಸಂಬಂಧಗಳ ಜಾಲವನ್ನು ಸಕ್ರಿಯವಾಗಿ ರೂಪಿಸುವ ರಾಷ್ಟ್ರವಾಗಿ ಪರಿವರ್ತನೆಗೊಂಡ ನೈಜ ಬದಲಾವಣೆಯಾಗಿತ್ತು.
ಈ ಅವಧಿಯಲ್ಲಿ ನಿರ್ಮಾಣವಾದ ಆಸ್ತಿಗಳು ಕಣ್ಣಿಗೆ ರಾಚುವಂತಿವೆ. ಆರ್ಥಿಕ ರಾಜತಾಂತ್ರಿಕತೆಯು ಆಡಳಿತದ ಅಂಚಿನಿಂದ ಕೇಂದ್ರ ಬಿಂದುವಿಗೆ ಬಂದು ನಿಂತಿತು. ಯುನೈಟೆಡ್ ಕಿಂಗ್ಡಮ್ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಮುಕ್ತಾಯಗೊಳಿಸಿತು ಅಥವಾ ಮುನ್ನಡೆಸಿತು. ವ್ಯಾಪಾರವನ್ನು ಕೇವಲ ಕಚೇರಿ ಕೆಲಸವಾಗಿ ನೋಡದೆ ಪ್ರಭಾವ ಬೀರಬಲ್ಲ ಅಸ್ತ್ರವನ್ನಾಗಿ ಪರಿವರ್ತಿಸಿತು. ತನ್ನ ದೇಶೀಯ ಡಿಜಿಟಲ್ ವ್ಯವಸ್ಥೆಗಳನ್ನು ಸಾಂಸ್ಕೃತಿಕ ಪ್ರಭಾವದ ಸಾಧನಗಳನ್ನಾಗಿ ಪರಿವರ್ತಿಸಿ, ಸಣ್ಣ ರಾಷ್ಟ್ರಗಳು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಅಗ್ಗದ ಸಾರ್ವಜನಿಕ ಸೇವೆಗಳಾಗಿ ಪಾವತಿ ಮತ್ತು ಗುರುತಿನ ಮೂಲಸೌಕರ್ಯಗಳನ್ನು ರಫ್ತು ಮಾಡಿತು. 2023ರಲ್ಲಿ ಜಿ-20 ಅಧ್ಯಕ್ಷತೆ ವಹಿಸಿದ್ದು ಮತ್ತು ಭಾರತದ ಮುಂದಾಳತ್ವದಲ್ಲಿ ಆಫ್ರಿಕನ್ ಒಕ್ಕೂಟವನ್ನು ಆ ಗುಂಪಿಗೆ ಸೇರಿಸಿದ್ದು ನವದೆಹಲಿಗೆ ಅಭಿವೃದ್ಧಿಶೀಲ ಪ್ರಪಂಚದ ಪರವಾಗಿ ಮಾತನಾಡುವ ವಿಶ್ವಾಸಾರ್ಹ ಹಕ್ಕನ್ನು ಒದಗಿಸಿತು. ಸಂಘರ್ಷ ಪೀಡಿತ ಪ್ರದೇಶಗಳಿಂದ ಭಾರತೀಯ ನಾಗರಿಕರನ್ನು ಪದೇ ಪದೇ ಸ್ಥಳಾಂತರಿಸಿದ್ದು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಲಸಿಕೆ ಪೂರೈಸಿದ್ದು ಈ ಹಕ್ಕಿಗೆ ಕೇವಲ ಘೋಷಣೆಯಾಗಿ ಉಳಿಯದ ನೈಜ ತೂಕವನ್ನು ತಂದುಕೊಟ್ಟಿತು. ಇವುಗಳಲ್ಲಿ ಯಾವುದೂ ಕೇವಲ ತೋರಿಕೆಯಲ್ಲ. ಇವೆಲ್ಲವೂ ಜಗತ್ತನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಸ್ವಾತಂತ್ರ್ಯಾನಂತರದ ಯಾವುದೇ ಘಟ್ಟಕ್ಕಿಂತ ಈಗ ಭಾರತವು ಆ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ.
ಆದರೂ ಜಾಗತಿಕ ದಕ್ಷಿಣದ ನಾಯಕತ್ವದ ಬಗೆಗಿನ ಪ್ರತಿಪಾದನೆಯನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವ ಬದಲು ಕೊಂಚ ವಿಮರ್ಶಾತ್ಮಕವಾಗಿ ನೋಡುವುದು ಒಳಿತು. ಅಭಿವೃದ್ಧಿಶೀಲ ಪ್ರಪಂಚದ ನೈಸರ್ಗಿಕ ವಕ್ತಾರನಾಗಿ ಭಾರತವು ತನ್ನನ್ನು ತಾನು ಬಿಂಬಿಸಿಕೊಂಡಿದೆ ಮತ್ತು ನೈಜ ಮನ್ನಣೆಯನ್ನೂ ಗಳಿಸಿದೆ. ಆದರೆ ಆ ಒಕ್ಕೂಟದ ನಾಯಕತ್ವವು ಸ್ಪರ್ಧಾತ್ಮಕವೇ ಹೊರತು ದತ್ತವಾಗಿ ಬಂದದ್ದಲ್ಲ. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಚೀನಾ ಈಗಲೂ ಅತಿದೊಡ್ಡ ಹಣಕಾಸು ಪೂರೈಕೆದಾರನಾಗಿ ಉಳಿದಿದೆ. ಭಾರತವು ಸರಿದೂಗಿಸಲಾಗದಷ್ಟು ಬೃಹತ್ ಮೊತ್ತವನ್ನು ನೀಡಿ ತನ್ನ ರಾಜತಾಂತ್ರಿಕತೆಯನ್ನು ಬೆಂಬಲಿಸುವ ಶಕ್ತಿ ಚೀನಾಕ್ಕಿದೆ. ಜೊತೆಗೆ, ಬೆಳೆಯುತ್ತಿರುವ ಶಕ್ತಿಯಾಗಿ ಭಾರತದ ತನ್ನದೇ ಆದ ಮಹತ್ವಾಕಾಂಕ್ಷೆಗಳು ಮತ್ತು ಅದು ಪ್ರತಿನಿಧಿಸುತ್ತೇನೆಂದು ಹೇಳಿಕೊಳ್ಳುವ ಬಡ ರಾಷ್ಟ್ರಗಳ ಅಸಮಾಧಾನಗಳ ನಡುವೆ ಒಂದು ಗುಪ್ತ ಘರ್ಷಣೆಯಿದೆ. ವ್ಯಾಪಾರ, ಸಾಲ ಮತ್ತು ಹವಾಮಾನ ಹಣಕಾಸಿನ ವಿಚಾರದಲ್ಲಿ ಆ ರಾಷ್ಟ್ರಗಳ ಹಿತಾಸಕ್ತಿಗಳು ಯಾವಾಗಲೂ ನವದೆಹಲಿಯ ನಿಲುವಿನೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಜಾಗತಿಕ ದಕ್ಷಿಣದ ಪರವಾಗಿ ಮಾತನಾಡುವುದು ಮೌಲ್ಯಯುತವಾದರೂ, ಈ ಪಾತ್ರವು ನಿರೀಕ್ಷೆಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ತರುತ್ತದೆ. ಸಂಪನ್ಮೂಲಗಳ ಬೆಂಬಲವಿಲ್ಲದ ನಾಯಕತ್ವದ ಹಕ್ಕು ಕಾಲಕ್ರಮೇಣ ಅಸಮಾಧಾನವಾಗಿ ಮಾರ್ಪಡಬಹುದು. ಭಾರತವು ವೇದಿಕೆಯನ್ನು ಗೆದ್ದುಕೊಂಡಿದೆ. ಆದರೆ ಆ ಪಾತ್ರದ ಬೆಲೆಯನ್ನು ತೆರಲು ಅದಕ್ಕೆ ಸಾಧ್ಯವೇ ಎಂಬುದು ಬೇರೆಯದೇ ಪ್ರಶ್ನೆ.
ಈ ಯುಗದ ಕಾರ್ಯಶೈಲಿಯೂ ಪ್ರಾಮಾಣಿಕ ಪರಿಶೀಲನೆಗೆ ಅರ್ಹವಾಗಿದೆ. ಮೋದಿಯವರ ನೇತೃತ್ವದಲ್ಲಿ ವಿದೇಶಾಂಗ ನೀತಿಯು ಹೆಚ್ಚು ವ್ಯಕ್ತಿ-ಕೇಂದ್ರಿತವಾಗಿದೆ ಮತ್ತು ಶೃಂಗಸಭೆಗಳಿಂದ ಪ್ರೇರಿತವಾಗಿದೆ. ನಾಯಕರ ನಡುವಿನ ಬಾಂಧವ್ಯ ಮತ್ತು ವಿದೇಶಗಳಲ್ಲಿ ಅನಿವಾಸಿ ಭಾರತೀಯರ ಬೃಹತ್ ಸಮಾವೇಶಗಳ ವೈಭವದ ಸುತ್ತ ಇದು ರೂಪುಗೊಂಡಿದೆ. ಇದು ನಿಜವಾದ ಮೌಲ್ಯವನ್ನು ಹೊಂದಿದೆ. ಸಂಸ್ಥೆಗಳು ಅಡ್ಡಿಪಡಿಸುವ ಒಪ್ಪಂದಗಳನ್ನು ನಾಯಕರ ನಡುವಿನ ವೈಯಕ್ತಿಕ ಒಡನಾಟವು ಸುಲಭವಾಗಿ ಬಗೆಹರಿಸಬಲ್ಲದು. ಜೊತೆಗೆ ಅನಿವಾಸಿ ಭಾರತೀಯ ಸಮುದಾಯವು ಭಾರತದ ಇಮೇಜ್ ಮತ್ತು ಆರ್ಥಿಕತೆಗೆ ನಿಜವಾದ ಆಸ್ತಿಯಾಗಿದೆ. ಆದರೆ ವ್ಯಕ್ತಿಕೇಂದ್ರಿತ ವ್ಯವಸ್ಥೆಯು ತನ್ನದೇ ಆದ ಬೆಲೆಯನ್ನು ತೆರಬೇಕಾಗುತ್ತದೆ. ಇದು ಫಲಿತಾಂಶಗಳನ್ನು ವಿದೇಶಿ ನಾಯಕರ ವೈಯಕ್ತಿಕ ಸದ್ಭಾವನೆಯ ಮೇಲೆ ಅವಲಂಬಿತವಾಗುವಂತೆ ಮಾಡುತ್ತದೆ. ದೇಶೀಯ ರಾಜಕೀಯದ ನಾಟಕೀಯತೆಯನ್ನು ಗಂಭೀರವಾದ ಆಡಳಿತ ಯಂತ್ರದೊಂದಿಗೆ ಬೆರೆಸುತ್ತದೆ. ವಿದೇಶಾಂಗ ಸೇವೆ ಮತ್ತು ಆಯಕಟ್ಟಿನ ವ್ಯವಸ್ಥೆಗಳಲ್ಲಿ ಸಂಸ್ಥಾಗತ ಆಳವನ್ನು ನಿರ್ಮಿಸುವ ನಿಧಾನಗತಿಯ ಕೆಲಸದ ಬದಲು ಕೇವಲ ಪ್ರಚಾರವನ್ನು ಮುಂದಿಡಬಹುದು. ಒಬ್ಬ ನಾಯಕನ ಸಂಬಂಧಗಳ ಮೇಲೆ ಒಲವು ತೋರುವ ವಿದೇಶಾಂಗ ನೀತಿಯು ಆ ಸಂಬಂಧಗಳು ಗಟ್ಟಿಯಾಗಿರುವವರೆಗೆ ಬಲವಾಗಿರುತ್ತದೆ ಮತ್ತು ಅವು ಬದಲಾದಾಗ ದುರ್ಬಲವಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ವಿದೇಶಿ ರಾಜಧಾನಿಗಳಲ್ಲಿ ಸಿಗುವ ಚಪ್ಪಾಳೆಯಿಂದಾಗಲೀ, ನಾಯಕರೊಬ್ಬರು ಸಂಗ್ರಹಿಸುವ ಗೌರವಗಳ ಸಂಖ್ಯೆಯಿಂದಾಗಲೀ ಅಥವಾ ಉದ್ದೇಶಿಸಿ ಮಾತನಾಡುವ ಸಂಸತ್ತುಗಳ ಎಣಿಕೆಯಿಂದಾಗಲೀ ಅಳೆಯಲಾಗುವುದಿಲ್ಲ. ಗಡಿಗಳು ಸುರಕ್ಷಿತವಾಗಿವೆಯೇ, ಎದುರಾಳಿಗಳನ್ನು ಸರಿಯಾಗಿ ನಿಭಾಯಿಸಲಾಗಿದೆಯೇ, ನೆರೆಹೊರೆ ಸ್ಥಿರವಾಗಿದೆಯೇ ಮತ್ತು ಸಂಕಷ್ಟದ ಸಮಯದಲ್ಲಿ ದೇಶವು ತನ್ನದೇ ಆದ ಷರತ್ತುಗಳ ಮೇಲೆ ಕಾರ್ಯನಿರ್ವಹಿಸಬಲ್ಲದೇ ಎಂಬುದರ ಆಧಾರದ ಮೇಲೆ ಅದನ್ನು ಅಳೆಯಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಇದುವರೆಗಿನ ದಾಖಲೆಯು ಮಿಶ್ರ ಫಲಿತಾಂಶವನ್ನು ಹೊಂದಿದೆ ಮತ್ತು ಒಂದು ವಿಶ್ವಾಸಾರ್ಹ ವಿಮರ್ಶೆಯಾಗಿ ಇದನ್ನು ಸ್ಪಷ್ಟವಾಗಿ ಹೇಳಲೇಬೇಕು.
ತಕ್ಷಣದ ನೆರೆಹೊರೆಯಲ್ಲಿನ ಪರಿಸ್ಥಿತಿಯೇ ಇದರ ಅತ್ಯಂತ ಸ್ಪಷ್ಟವಾದ ದೌರ್ಬಲ್ಯವಾಗಿದೆ. ನೆರೆಹೊರೆಗೆ ಮೊದಲ ಆದ್ಯತೆ ಎಂಬುದು ಸರಿಯಾದ ಯೋಚನೆಯೇ ಆಗಿದ್ದರೂ ಅದರ ಫಲಿತಾಂಶಗಳು ಕ್ಷೀಣಿಸಿವೆ. 2024ರಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನವು ಭಾರತದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರರನ್ನು ಅಸ್ಥಿರಗೊಳಿಸಿತು ಮತ್ತು ನವದೆಹಲಿಗೆ ಪ್ರತಿಕೂಲವಾದ ಶಕ್ತಿಗಳಿಗೆ ಜಾಗವನ್ನು ತೆರೆದುಕೊಟ್ಟಿತು. ಅಲ್ಲಿ ಸಾರ್ವಜನಿಕವಾಗಿ ಭಾರತ ವಿರೋಧಿ ಭಾವನೆಗಳು ಹೆಚ್ಚಾಗುತ್ತಿವೆ ಮತ್ತು ಚೀನಾದ ಹೂಡಿಕೆಯು ಒಳನುಗ್ಗುತ್ತಿದೆ. ಮಾಲ್ಡೀವ್ಸ್ ಸಂಪೂರ್ಣವಾಗಿ ಭಾರತದ ವಿರುದ್ಧ ತಿರುಗಿಬಿದ್ದು, ದ್ವೀಪಗಳಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂಪಡೆಯುವಂತೆ ಮಾಡಿದ ನಂತರವಷ್ಟೇ ಕೊಂಚ ತಣ್ಣಗಾಗಿದೆ. ನೇಪಾಳವು ನಿಧಾನವಾಗಿ ದೂರ ಸರಿಯುತ್ತಲೇ ಇದ್ದು, ಬೀಜಿಂಗ್ ಅಲ್ಲಿ ತನ್ನ ಹೆಜ್ಜೆಗುರುತನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ದಕ್ಷಿಣ ಏಷ್ಯಾದಾದ್ಯಂತದ ಮೂಲಭೂತ ಸಮಸ್ಯೆಯು ಇಂದಿಗೂ ಬಗೆಹರಿಯದೆ ಉಳಿದಿದೆ. ಸಣ್ಣ ನೆರೆ ರಾಷ್ಟ್ರಗಳು ಈಗಲೂ ಭಾರತವನ್ನು ಒಂದು ದೊಡ್ಡ ಮತ್ತು ಕೆಲವೊಮ್ಮೆ ದಬ್ಬಾಳಿಕೆಯ ಅಸ್ತಿತ್ವವಾಗಿ ನೋಡುತ್ತವೆ. ಭಾರತವನ್ನು ಹತೋಟಿಯಲ್ಲಿಡಲು ಮತ್ತು ಉತ್ತಮ ಸವಲತ್ತುಗಳನ್ನು ಪಡೆಯಲು ಅವರು ಚೀನಾದ ಅಸ್ತ್ರವನ್ನು ಬಳಸುತ್ತಾರೆ. ಭಾರತವು ನಿರ್ವಿವಾದವಾಗಿ ಈ ವಲಯದ ಅಗ್ರಮಾನ್ಯ ಶಕ್ತಿಯಾಗಿದೆ. ಆದರೆ ಆ ಬಲವು ವಿಶ್ವಾಸಾರ್ಹವಾಗಿ ಪ್ರಭಾವವಾಗಿ ಪರಿವರ್ತನೆಗೊಂಡಿಲ್ಲ.
ಭಾರತದ ಭವಿಷ್ಯಕ್ಕೆ ಅತ್ಯಂತ ಪರಿಣಾಮಕಾರಿಯಾದ ಏಕೈಕ ಪ್ರಶ್ನೆಯಾಗಿರುವ ಚೀನಾದ ಸವಾಲು ಸಹ ಇನ್ನೂ ತೆರೆದುಕೊಂಡೇ ಇದೆ. 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ, ನೈಜ ಗಡಿ ನಿಯಂತ್ರಣ ರೇಖೆಯು ಹೆಚ್ಚು ಮಿಲಿಟರೀಕರಣಗೊಂಡಿದೆ. ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ಭಾಗಶಃ ಮತ್ತು ಅಸಮಾಧಾನದಿಂದ ಕೂಡಿದೆ. ಇತ್ತೀಚಿನ ವರ್ಷಗಳಲ್ಲಿ ಸಂಬಂಧವು ಸ್ವಲ್ಪಮಟ್ಟಿಗೆ ಸ್ಥಿರಗೊಂಡಿದ್ದರೂ, ಸ್ಥಿರತೆಯೇ ಪರಿಹಾರವಲ್ಲ. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಮಿಲಿಟರಿ ಬಲದ ಅಂತರವು ವಿಸ್ತಾರವಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಹಿಮಾಲಯದ ಉದ್ದಕ್ಕೂ ಎರಡು ಸೈನ್ಯಗಳು ಪರಸ್ಪರ ಕಣ್ಣಿಟ್ಟು ಕುಳಿತಿದ್ದರೂ ಪ್ರಮುಖ ಕೈಗಾರಿಕೆಗಳಲ್ಲಿ ಚೀನಾದ ಬಿಡಿಭಾಗಗಳು ಮತ್ತು ಕಚ್ಚಾವಸ್ತುಗಳ ಮೇಲಿನ ಭಾರತದ ಅವಲಂಬನೆಯು ಇಂದಿಗೂ ಮುಂದುವರಿದಿದೆ. ಚೀನಾವನ್ನು ನಿರ್ವಹಿಸುವುದು ಮುಂದಿನ ದಶಕಗಳ ಅತ್ಯಂತ ಪ್ರಮುಖವಾದ ತಂತ್ರಗಾರಿಕೆಯ ಸವಾಲಾಗಿದೆ. ಹನ್ನೆರಡು ವರ್ಷಗಳ ನಂತರವೂ, ಭಾರತವು ತನ್ನ ಅಂತರ್ಗತ ಶಕ್ತಿಯ ಸಮತೋಲನವನ್ನು ಬದಲಾಯಿಸದೆ ತಕ್ಷಣದ ಬಿಕ್ಕಟ್ಟನ್ನು ಮಾತ್ರ ಶಮನಗೊಳಿಸಿದೆ.
ಈ ಯುಗದ ಅತ್ಯಂತ ನಾಟಕೀಯ ಘಟನೆಯು ಪಾಕಿಸ್ತಾನದ ಮೂಲಕ ನಡೆಯಿತು. 2025ರ ಏಪ್ರಿಲ್ನಲ್ಲಿ ಪೆಹಲ್ಗಾಮ್ನಲ್ಲಿ ಶಸ್ತ್ರಸಜ್ಜಿತ ಉಗ್ರರು ಇಪ್ಪತ್ತಾರು ಭಾರತೀಯ ನಾಗರಿಕರನ್ನು ಕೊಂದ ನಂತರ, ಭಾರತವು ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಆರಂಭಿಸಿತು. ಪಾಕಿಸ್ತಾನದ ಒಳಗಿನ ಗುರಿಗಳ ಮೇಲೆ ದಾಳಿ ನಡೆಸಿತು. ಈ ಕಾರ್ಯಾಚರಣೆಯು ರಾಜಕೀಯ ಇಚ್ಛಾಶಕ್ತಿ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ಸಹನೆಯು ಕಡಿಮೆಯಾಗಿದೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ರವಾನಿಸಿತು. ಆದರೂ ಫಲಿತಾಂಶವು ವಿವಾದಾತ್ಮಕವಾಗಿತ್ತು. ಎರಡೂ ಕಡೆಯವರು ಯಶಸ್ಸನ್ನು ಸಾಧಿಸಿದ್ದಾಗಿ ಹೇಳಿಕೊಂಡರು. ವಿಮಾನಗಳ ನಷ್ಟವೂ ಸೇರಿದಂತೆ ನೈಜ ಹಾನಿಯ ಬಗ್ಗೆ ಸ್ವತಂತ್ರ ವರದಿಗಳು ಇಂದಿಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತವೆ. ಹೆಚ್ಚು ಮುಖ್ಯವಾಗಿ, ಈ ಬಿಕ್ಕಟ್ಟು ಅಪಾಯವನ್ನು ಕಡಿಮೆ ಮಾಡುವ ಬದಲು ದೀರ್ಘಾವಧಿಯ ಅಪಾಯವನ್ನು ಹೆಚ್ಚಿಸಿತು. ಉಭಯ ರಾಷ್ಟ್ರಗಳು ಸೀಮಿತ ಸಂಘರ್ಷಕ್ಕೆ ಹೆಚ್ಚು ಒಗ್ಗಿಕೊಂಡಿವೆ ಮತ್ತು ಅಣ್ವಸ್ತ್ರ ಹೊಂದಿರುವ ಎರಡು ನೆರೆಹೊರೆಯವರ ನಡುವೆ ತಪ್ಪು ಲೆಕ್ಕಾಚಾರದ ಸಾಧ್ಯತೆಗಳು ವಿಸ್ತರಿಸಿವೆ ಎಂದು ಪ್ರಾದೇಶಿಕ ವಿಶ್ಲೇಷಕರು ಎಚ್ಚರಿಸುತ್ತಾರೆ. ಇಲ್ಲಿ ದೃಢಸಂಕಲ್ಪವನ್ನು ತೋರಿಸಲಾಯಿತು. ಆದರೆ ಸ್ಥಿರತೆಯನ್ನು ಪಡೆಯಲಾಗಲಿಲ್ಲ ಮತ್ತು ಯಾವುದೇ ರಾಜಕೀಯ ಪರಿಹಾರವೂ ಸಿಗಲಿಲ್ಲ.
ಆದರೆ ಸ್ವಾಯತ್ತತೆಯ ಸಿದ್ಧಾಂತಕ್ಕೆ ಅತ್ಯಂತ ಕಠಿಣವಾದ ಪರೀಕ್ಷೆ ಎದುರಾಗಿದ್ದು ಶತ್ರುವಿನಿಂದಲ್ಲ, ಬದಲಾಗಿ ಒಬ್ಬ ಮಿತ್ರನಿಂದ. ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿಸುವುದನ್ನು ಮುಂದುವರಿಸಿದ ಕಾರಣಕ್ಕಾಗಿ, 2025ರ ಉದ್ದಕ್ಕೂ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇಕಡಾ ಐವತ್ತರಷ್ಟು ಕಡಿದಾದ ಸುಂಕವನ್ನು ವಿಧಿಸಿತು. ಇದು ಯಾವುದೇ ಪ್ರಮುಖ ವ್ಯಾಪಾರ ಪಾಲುದಾರನ ಮೇಲೆ ವಿಧಿಸಿದ ಅತ್ಯಧಿಕ ದರವಾಗಿತ್ತು. ತಿಂಗಳುಗಳ ಕಾಲ ನವದೆಹಲಿಯು ಆ ಖರೀದಿಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕೈಗೊಂಡ ಸಾರ್ವಭೌಮ ನಿರ್ಧಾರವೆಂದು ಸಮರ್ಥಿಸಿಕೊಂಡಿತು. ಅಮೆರಿಕದ ಒತ್ತಡಕ್ಕೆ ತಲೆಬಾಗದಿರುವುದು ಭಾರತೀಯ ರೈತರು ಮತ್ತು ಸಣ್ಣ ಉತ್ಪಾದಕರ ರಕ್ಷಣೆ ಎಂದು ಪ್ರಧಾನಿಯವರು ಪ್ರತಿಪಾದಿಸಿದರು. ನಂತರ 2026ರ ಆರಂಭದಲ್ಲಿ, ಭಾರತವು ತನ್ನ ರಷ್ಯಾದ ತೈಲ ಆಮದನ್ನು ಕಡಿತಗೊಳಿಸಲು ಮತ್ತು ಅಮೆರಿಕದ ಇಂಧನ ಹಾಗೂ ಸರಕುಗಳ ಬೃಹತ್ ಖರೀದಿಗೆ ಬದ್ಧವಾಗುವ ಷರತ್ತಿನ ಮೇಲೆ ಸುಂಕವನ್ನು ಹದಿನೆಂಟು ಶೇಕಡಾಕ್ಕೆ ಇಳಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದವು.
ಈ ಘಟನೆಯನ್ನು ಎರಡು ರೀತಿಯಲ್ಲಿ ಓದಬಹುದು ಮತ್ತು ಪ್ರಾಮಾಣಿಕ ಬರೆಹಗಾರನೊಬ್ಬ ಈ ಎರಡನ್ನೂ ಒಪ್ಪಿಕೊಳ್ಳಬೇಕು. ಪ್ರಾಯೋಗಿಕ ಓದೆಂದರೆ, ಭಾರತವು ಒತ್ತಡವನ್ನು ಮೆಟ್ಟಿನಿಂತು ತನ್ನ ಪ್ರಮುಖ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಂಡಿತು ಮತ್ತು ಹಾನಿಕಾರಕ ಮುಖಾಮುಖಿಯನ್ನು ಕಾರ್ಯಸಾಧುವಾದ ಒಪ್ಪಂದವನ್ನಾಗಿ ಪರಿವರ್ತಿಸಿತು. ಪ್ರಬುದ್ಧ ರಾಜತಾಂತ್ರಿಕತೆಯು ಮಾಡಬೇಕಾದ್ದು ಇದನ್ನೇ. ಅಷ್ಟೇನೂ ಆಶಾದಾಯಕವಲ್ಲದ ಮತ್ತೊಂದು ಓದೆಂದರೆ, ಬಹು-ಪ್ರಚಾರಿತ ರಣತಾಂತ್ರಿಕ ಸ್ವಾಯತ್ತತೆಯು ಏಕೈಕ ಶಕ್ತಿಶಾಲಿ ಪಾಲುದಾರನ ನಿರಂತರ ಒತ್ತಡಕ್ಕೆ ಮಣಿಯಿತು. ಭಾರತವು ಕಾರ್ಯನಿರ್ವಹಿಸಲು ಇದ್ದ ನೈಜ ಅವಕಾಶವು ಪ್ರಚಾರ ಮಾಡಿದ್ದಕ್ಕಿಂತ ಕಿರಿದಾಗಿತ್ತು ಎಂಬುದು. ಎರಡು ವಾಚನಗಳೂ ಸತ್ಯವನ್ನು ಒಳಗೊಂಡಿವೆ. ಇಲ್ಲಿ ಕಲಿಯಬೇಕಾದ ಪಾಠವೆಂದರೆ ಸರ್ಕಾರವು ವಿಫಲವಾಗಿದೆ ಎಂಬುದಲ್ಲ, ಬದಲಾಗಿ ಸ್ವಾಯತ್ತತೆ ಎಂಬುದು ಕೇವಲ ಘೋಷಿಸುವ ನಿಲುವಲ್ಲ. ಅದು ಆರ್ಥಿಕ ಆಳ, ಇಂಧನ ವೈವಿಧ್ಯತೆ ಮತ್ತು ತಾಂತ್ರಿಕ ಸ್ವಾವಲಂಬನೆಯ ಮೂಲಕ ಪಡೆದುಕೊಳ್ಳಬೇಕಾದ ಸಾಮರ್ಥ್ಯವಾಗಿದೆ. ಭಾರತವು ಆ ಸಾಮರ್ಥ್ಯವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವ ಬದಲು ಅದನ್ನು ಕಟ್ಟುವ ಹಂತದಲ್ಲೇ ಇನ್ನೂ ಇದೆ.
ಹಾಗಾದರೆ ಹನ್ನೆರಡು ವರ್ಷಗಳ ಮೌಲ್ಯಮಾಪನವೇನು? ಅತ್ಯಂತ ನ್ಯಾಯಸಮ್ಮತವಾದ ವಿಮರ್ಶೆಯೆಂದರೆ, ಮೋದಿ ಯುಗವು ಅತ್ಯಂತ ಕಠಿಣವಾದ ಸಮಸ್ಯೆಗಳನ್ನು ಬಗೆಹರಿಸದೆ ಉಳಿಸಿಕೊಂಡಿದ್ದರೂ, ಭಾರತದ ಜಾಗತಿಕ ಸ್ಥಾನಮಾನವನ್ನು ಗಣನೀಯವಾಗಿ ಹೆಚ್ಚಿಸಿದೆ ಮತ್ತು ಪ್ರಭಾವ ಬೀರಬಲ್ಲ ನೈಜ ಅಸ್ತ್ರಗಳನ್ನು ನಿರ್ಮಿಸಿದೆ. ಭಾರತವು ಹಿಂದಿಗಿಂತ ಹೆಚ್ಚು ಗೋಚರಿಸುತ್ತಿದೆ, ಹೆಚ್ಚು ಆಕರ್ಷಿತವಾಗಿದೆ ಮತ್ತು ಹೆಚ್ಚು ವಿಶ್ವಾಸ ಹೊಂದಿದೆ. ಅದು ಜಗತ್ತನ್ನು ಒಗ್ಗೂಡಿಸುತ್ತದೆ, ಅದರ ಮಾತುಗಳಿಗೆ ಬೆಲೆಯಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇದು ನಿಜಕ್ಕೂ ಒಂದು ರಾಷ್ಟ್ರೀಯ ಲಾಭ ಮತ್ತು ಇದನ್ನು ಯಾವುದೇ ಅಸಮಾಧಾನವಿಲ್ಲದೆ ಒಪ್ಪಿಕೊಳ್ಳಬೇಕು. ಆದರೆ ಕೇವಲ ಕಾಣಿಸಿಕೊಳ್ಳುವುದು ಸುಲಭದ ಕೆಲಸ. ಕಷ್ಟದ ಕೆಲಸವೆಂದರೆ ಪರಿವರ್ತನೆ. ಒತ್ತಡದ ನಡುವೆಯೂ ತನ್ನ ಸ್ಥಾನಮಾನವನ್ನು ದೃಢವಾದ ಫಲಿತಾಂಶಗಳಾಗಿ ಪರಿವರ್ತಿಸುವುದು. ಸ್ಥಿರ ಮತ್ತು ಸ್ನೇಹಪರ ನೆರೆಹೊರೆ, ಸಮರ್ಪಕವಾಗಿ ನಿರ್ವಹಿಸಲ್ಪಟ್ಟ ಮತ್ತು ಸಮತೋಲಿತ ಚೀನಾ, ಚಂಚಲ ಪಾಲುದಾರರು ಮತ್ತು ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆಯ ಕಡಿತ ಹಾಗೂ ಬೇಡಿಕೆಯೊಂದನ್ನು ನಿರಾಕರಿಸಿ ಆ ನಿರಾಕರಣೆಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಅವಕಾಶ ನೀಡುವ ಉತ್ಪಾದನಾ ಮತ್ತು ತಾಂತ್ರಿಕ ಶಕ್ತಿ. ಇವೇ ನಿಜವಾದ ಮಾನದಂಡಗಳು ಮತ್ತು ಪ್ರತಿಯೊಂದರಲ್ಲೂ ಕೆಲಸವು ಇನ್ನೂ ಅಪೂರ್ಣವಾಗಿದೆ.
ಕಳೆದ ಹನ್ನೆರಡು ವರ್ಷಗಳ ಮಹತ್ವಾಕಾಂಕ್ಷೆ ಮತ್ತು ಚೈತನ್ಯದಿಂದ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಒಳಿತಾಗಿದೆ. ದೇಶಕ್ಕೆ ವಿದೇಶಿ ರಾಜಧಾನಿಗಳ ಮನ್ನಣೆಯ ಅಗತ್ಯವಿಲ್ಲದಿದ್ದಾಗ ಮತ್ತು ಸ್ವಾಯತ್ತತೆಯನ್ನು ಕೇವಲ ಹಕ್ಕು ಸಾಧಿಸುವ ಬದಲು ಅದನ್ನೊಂದು ವಾಸ್ತವವನ್ನಾಗಿಸುವ ಆರ್ಥಿಕ, ಮಿಲಿಟರಿ ಮತ್ತು ತಾಂತ್ರಿಕ ಬಲವನ್ನು ಹೊಂದಿದಾಗ ಮಾತ್ರವೇ ಆ ಹಿತಾಸಕ್ತಿಯು ನಿಜಕ್ಕೂ ಭದ್ರವಾಗುತ್ತದೆ. ಮೊದಲ ಹನ್ನೆರಡು ವರ್ಷಗಳು ಅದಕ್ಕೊಂದು ವೇದಿಕೆ ಮತ್ತು ಸ್ವರೂಪವನ್ನು ನಿರ್ಮಿಸಿವೆ. ಗೌರವಾನ್ವಿತ ಅಸ್ತಿತ್ವವನ್ನು ಬಾಳಿಕೆ ಬರುವ ನೈಜ ಶಕ್ತಿಯನ್ನಾಗಿ ಪರಿವರ್ತಿಸುವ ಮುಂದಿನ ಕಠಿಣ ಪರೀಕ್ಷೆಯು ಮುಂಬರುವ ವರ್ಷಗಳಿಗೆ ಸೇರಿದ್ದಾಗಿದೆ.
ವಿಕ್ರಮಕ್ಕಾಗಿ ಬರೆದ ಇಂಗ್ಲಿಷ್ ಲೇಖನದ ಕನ್ನಡಾನುವಾದ – ತೇಜಸ್ ಹೆಚ್. ಬಾಡಾಲ
