ನವದೆಹಲಿ: ಬಿಜೆಪಿ ಜೇಷ್ಠ ನಾಯಕ ಅರುಣ್ ಜೇಟ್ಲಿ ಅವರ ಪುಣ್ಯಸ್ಮರಣೆಯಂದು, ಭಾರತವು ದೇಶದ ಅತ್ಯಂತ ಪರಿಣಾಮಕಾರಿ ಆರ್ಥಿಕ ಸುಧಾರಣೆಗಳನ್ನು ತಂದ ಮುತ್ಸದ್ದಿ, ವಕೀಲ ಹಾಗೂ ಮಾಜಿ ಹಣಕಾಸು ಸಚಿವರನ್ನು ಸ್ಮರಿಸುತ್ತಿದೆ.
ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕರಾಗಿದ್ದ ಅರುಣ್ ಜೇಟ್ಲಿ ಅವರು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ಚಿಕಿತ್ಸೆ ಪಡೆದ ನಂತರ ಆಗಸ್ಟ್ 24, 2019 ರಂದು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪುಣ್ಯತಿಥಿಯಂದು, ಅವರ ರಾಜಕೀಯ ಪಯಣ ಮತ್ತು ಭಾರತದ ಆರ್ಥಿಕ ಪರಿವರ್ತನೆಗೆ ಅವರು ನೀಡಿದ ಕೊಡುಗೆಯನ್ನು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಸ್ಮರಿಸುತ್ತಿದ್ದಾರೆ.
ವೃತ್ತಿಯಿಂದ ವಕೀಲರಾಗಿದ್ದ ಮತ್ತು ಪ್ರಮುಖ ಸಂಸದರಾಗಿದ್ದ ಜೇಟ್ಲಿ ಅವರು ದಶಕಗಳ ರಾಜಕೀಯ ವೃತ್ತಿಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ವಹಿಸಿದ್ದರು. ತಮ್ಮ ಚುರುಕಾದ ಸಂಸದೀಯ ಚರ್ಚೆಗಳು, ಕಾನೂನು ಪಾಂಡಿತ್ಯ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಅವರು ಹೆಸರುವಾಸಿಯಾಗಿದ್ದರು.
ಜೇಟ್ಲಿ ಅವರ ರಾಜಕೀಯ ಪಯಣ ವಿದ್ಯಾರ್ಥಿ ದೆಸೆಯಲ್ಲೇ ಪ್ರಾರಂಭವಾಯಿತು. ಅವರು 1973 ರಲ್ಲಿ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ BCom (ಆನರ್ಸ್) ಪದವಿ ಪಡೆದರು ಮತ್ತು 1977 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ LLB ಪದವಿ ಪಡೆದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ, ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ಸಕ್ರಿಯ ನಾಯಕರಾಗಿದ್ದರು ಮತ್ತು 1974 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
1975 ಮತ್ತು 1977 ರ ನಡುವೆ ಹೇರಲಾದ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಜೇಟ್ಲಿ ಅವರನ್ನು ಮುನ್ನೆಚ್ಚರಿಕೆ ಬಂಧನ ಕಾಯ್ದೆಯಡಿ ಬಂಧಿಸಲಾಯಿತು ಮತ್ತು ಅವರು 19 ತಿಂಗಳ ಕಾಲ ಜೈಲಿನಲ್ಲಿ ಕಾಲ ಕಳೆದರು. ಬಿಡುಗಡೆಯ ನಂತರ, ಅವರು ಜನಸಂಘವನ್ನು ಸೇರಿದರು ಮತ್ತು ತದನಂತರ ಬಿಜೆಪಿಯ ಸಾಂಸ್ಥಿಕ ಮತ್ತು ರಾಜಕೀಯ ಶ್ರೇಣಿಯಲ್ಲಿ ಬೆಳೆದರು.
ಜೇಟ್ಲಿ ಅವರು 1991 ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು ಮತ್ತು 1999 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಪ್ರಮುಖ ವಕ್ತಾರರಾಗಿ ಹೊರಹೊಮ್ಮಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ, ಅವರು ವಾಣಿಜ್ಯ ಮತ್ತು ಕೈಗಾರಿಕೆ, ಕಾನೂನು ಮತ್ತು ನ್ಯಾಯ, ಕಾರ್ಪೊರೇಟ್ ವ್ಯವಹಾರಗಳು ಮತ್ತು ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದರು.
ನಂತರ ಅವರು ಬಿಜೆಪಿಯ ಅತ್ಯಂತ ಪ್ರಭಾವಶಾಲಿ ಸಂಸದೀಯ ನಾಯಕರಲ್ಲಿ ಒಬ್ಬರಾದರು. 2009 ರಿಂದ 2014 ರವರೆಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. ಪ್ರಮುಖ ರಾಜಕೀಯ ಮತ್ತು ನೀತಿ ಚರ್ಚೆಗಳ ಸಮಯದಲ್ಲಿ ಅವರು ಪಕ್ಷದ ಪ್ರಮುಖ ತಂತ್ರಜ್ಞ ಮತ್ತು ಸಂವಹನಕಾರರಾಗಿದ್ದರು.
ನರೇಂದ್ರ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ, ಜೇಟ್ಲಿ ಅವರು ಹಲವಾರು ಪ್ರಮುಖ ಆರ್ಥಿಕ ಸುಧಾರಣೆಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರು:
ಸರಕು ಮತ್ತು ಸೇವಾ ತೆರಿಗೆ (GST): 2017 ರಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (GST) ಸುತ್ತ ರಾಜಕೀಯ ಸಮ್ಮತಿಯನ್ನು ರೂಪಿಸುವಲ್ಲಿ ಜೇಟ್ಲಿ ಕೇಂದ್ರ ಪಾತ್ರ ವಹಿಸಿದರು. ಇದು ಸಂಕೀರ್ಣವಾದ ಪರೋಕ್ಷ ತೆರಿಗೆಗಳ ಜಾಲವನ್ನು ತೆಗೆದುಹಾಕಿ ದೇಶಾದ್ಯಂತ ಏಕರೂಪದ ತೆರಿಗೆ ಚೌಕಟ್ಟನ್ನು ತಂದಿತು.
ದಿವಾಳಿತನ ಮತ್ತು ದಿವಾಳಿ ಸಂಹಿತೆ (IBC): 2016 ರಲ್ಲಿ ಜಾರಿಗೆ ತರಲಾದ IBC, ದಿವಾಳಿತನವನ್ನು ಬಗೆಹರಿಸಲು ಮತ್ತು ಸುಸ್ತಿಸಾಲದ ಸಮಸ್ಯೆಯನ್ನು ಪರಿಹರಿಸುವ ಮೂಲಕ ಆಸ್ತಿಗಳನ್ನು ಮರುಪಡೆಯಲು ಸಮಯಮಿತಿಯ ಚೌಕಟ್ಟನ್ನು ಸ್ಥಾಪಿಸಲು ಶ್ರಮಿಸಿತು.
ಆರ್ಥಿಕ ಸೇರ್ಪಡೆ: ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಸೇರಿದಂತೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ತಲುಪುವಿಕೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದ ಉಪಕ್ರಮಗಳಿಗೆ ಜೇಟ್ಲಿ ಬೆಂಬಲ ನೀಡಿದರು.
ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು: ಅವರ ಅಧಿಕಾರಾವಧಿಯಲ್ಲಿ ಮರುಬಂಡವಾಳೀಕರಣ ಮತ್ತು ವಿಲೀನೀಕರಣ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳಲಾಯಿತು.
ನೋಟು ಅಮಾನ್ಯೀಕರಣ (Demonetisation): ನವೆಂಬರ್ 2016 ರಲ್ಲಿ ಹಳೆಯ 500 ಮತ್ತು 1,000 ರೂಪಾಯಿ ನೋಟುಗಳನ್ನು ಹಿಂಪಡೆಯುವ ನಿರ್ಧಾರದ ನಂತರ, ಸರ್ಕಾರದ ಆರ್ಥಿಕ ಕ್ರಮಗಳನ್ನು ವಿವರಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಜೇಟ್ಲಿ ಪ್ರಮುಖ ಪಾತ್ರ ವಹಿಸಿದರು.
ಡಿಜಿಟಲ್ ಅರ್ಥವ್ಯವಸ್ಥೆ: ಅವರ ಅಧಿಕಾರಾವಧಿಯು ಡಿಜಿಟಲ್ ಪಾವತಿಗಳ ಕ್ಷಿಪ್ರ ವಿಸ್ತರಣೆ ಮತ್ತು ಅರ್ಥವ್ಯವಸ್ಥೆಯ ಸಾಂಸ್ಥಿಕೀಕರಣಕ್ಕೆ ಸಾಕ್ಷಿಯಾಯಿತು.
ಕಾರ್ಪೊರೇಟ್ ತೆರಿಗೆ ಸುಧಾರಣೆಗಳು: ಅರ್ಹ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡುವ ಕ್ರಮಗಳು ಹೂಡಿಕೆಯನ್ನು ಉತ್ತೇಜಿಸುವ ಮತ್ತು ವ್ಯವಹಾರ ವಾತಾವರಣವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದವು.
ವಿದೇಶಿ ಹೂಡಿಕೆ: ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಉದಾರೀಕರಣಗೊಳಿಸುವ ನೀತಿ ಕ್ರಮಗಳಿಗೆ ಅವರ ಅಧಿಕಾರಾವಧಿ ಸಾಕ್ಷಿಯಾಯಿತು.
ಸಾಮಾಜಿಕ ಕ್ಷೇತ್ರದ ಉಪಕ್ರಮಗಳು: ಹಣಕಾಸು ಸಚಿವರಾಗಿ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಸೇರಿದಂತೆ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಿಗೆ ಆಯವ್ಯಯದ ಬೆಂಬಲ ನೀಡುವಲ್ಲಿ ಜೇಟ್ಲಿ ಭಾಗಿಯಾಗಿದ್ದರು.
ಕಾರ್ಮಿಕ ಮತ್ತು ಮಾತೃತ್ವ ಸೌಲ್ಯಗಳು: ಶಾಸನಬದ್ಧ ಮಾತೃತ್ವ ರಜೆಯನ್ನು 26 ವಾರಗಳಿಗೆ ವಿಸ್ತರಿಸಿದ್ದು ಅವರ ಅಧಿಕಾರಾವಧಿಯ ಮತ್ತೊಂದು ಮಹತ್ವದ ನೀತಿ ಬದಲಾವಣೆಯಾಗಿತ್ತು.
ಆರ್ಥಿಕ ಕ್ಷೇತ್ರದಾಚೆಗೆ, ಜೇಟ್ಲಿ ಅವರು ಗೌರವಾನ್ವಿತ ಸುಪ್ರೀಂ ಕೋರ್ಟ್ ವಕೀಲರೂ ಆಗಿದ್ದರು. ಅವರು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳಲ್ಲಿ ವಕೀಲ ವೃತ್ತಿ ನಡೆಸಿದ್ದರು ಹಾಗೂ ತಮ್ಮ ಕಾನೂನು ಬುದ್ಧಿಮತ್ತೆಗೆ ಹೆಸರುವಾಸಿಯಾಗಿದ್ದರು.
ಅವರ ಅಗಲಿಕೆಯ ಏಳು ವರ್ಷಗಳ ನಂತರವೂ, ಅರುಣ್ ಜೇಟ್ಲಿ ಅವರ ಪರಂಪರೆಯು ಪ್ರಮುಖ ಆರ್ಥಿಕ ಮತ್ತು ಸಾಂಸ್ಥಿಕ ಬದಲಾವಣೆಯ ಕಾಲಘಟ್ಟದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಸಂಸತ್ತಿನಲ್ಲಿರಲಿ, ನ್ಯಾಯಾಲಯದಲ್ಲಿರಲಿ ಅಥವಾ ಹಣಕಾಸು ಸಚಿವಾಲಯದಲ್ಲಿರಲಿ, ಭಾರತದ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳ ಮೇಲಿನ ಅವರ ಪ್ರಭಾವವು ಅವರ ಶಾಶ್ವತ ಪರಂಪರೆಯ ಪ್ರಮುಖ ಭಾಗವಾಗಿ ಉಳಿದಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
