ರಾಜಕೀಯ ನಿರೂಪಣೆಗಳ ನಡುವೆ ಮರೆಯಾದ ವೈದಿಕ ಮತ್ತು ಪೌರಾಣಿಕ ಹೆಜ್ಜೆಗುರುತುಗಳು
- ಡಾ. ವಿಷ್ಣು ಅರವಿಂದ್
ಇಂದು ಬಳಕೆಯಲ್ಲಿರುವ ವಿಭಿನ್ನ ವ್ಯಾಖ್ಯಾನಗಳಿಗಿಂತ ಓಣಂನ ಇತಿಹಾಸವು ಬಹಳ ಹಳೆಯದು ಮತ್ತು ಹೆಚ್ಚು ಆಳವಾದುದು. ಭಗವಾನ್ ವಾಮನ ಮತ್ತು ಮಹಾಬಲಿ ನಡುವಿನ ಸಂಬಂಧವನ್ನು ಬ್ರಾಹ್ಮಣ ವಿರುದ್ಧ ದಲಿತ, ಉತ್ತರ ವಿರುದ್ಧ ದಕ್ಷಿಣ ಹಾಗೂ ವೈಷ್ಣವ ವಿರುದ್ಧ ಶೈವ ಎಂಬಂತಹ ಆಧುನಿಕ ರಾಜಕೀಯ/ದ್ವಂದ್ವ ಚೌಕಟ್ಟುಗಳಿಗೆ ಸೀಮಿತಗೊಳಿಸುವ ನಿರೂಪಣೆಗಳನ್ನು ಮೀರಿ ನಿಲ್ಲುವ ಹಬ್ಬ ಓಣಂ ಎಂಬುದನ್ನು ಅದರ ಹಿಂದು ನಾಗರಿಕತೆಯ ಬೇರುಗಳು, ಸಾಹಿತ್ಯಿಕ ಪರಂಪರೆ ಮತ್ತು ಭಾರತದಾದ್ಯಂತ ಇರುವ ಅದರ ವಿಸ್ತಾರ ತೋರಿಸಿಕೊಡುತ್ತದೆ.
ಈ ವರ್ಷ ಕೇರಳವು ಓಣಂ ಆಚರಣೆಗೆ ಸಜ್ಜಾಗುತ್ತಿರುವಂತೆ, ಹತ್ತು ದಿನಗಳ ಈ ಉತ್ಸವವು ಆಗಸ್ಟ್ 16ರಂದು ಪ್ರಾರಂಭವಾಗಿ ಆಗಸ್ಟ್ 26ರ ತಿರುಓಣಂನಂದು ಮುಕ್ತಾಯಗೊಳ್ಳಲಿದೆ. ರಾಜ್ಯದಾದ್ಯಂತ ಮನೆಗಳು, ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳು ಪೂಕಳಂ (ಹೂವಿನ ಅಲಂಕಾರಗಳು), ಓಣಸದ್ಯ (ಸಮೃದ್ಧ ಊಟ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಸಂಭ್ರಮಗಳಿಂದ ಕಂಗೊಳಿಸಲಿವೆ.
ಇಂದಿನ ಸಾರ್ವಜನಿಕ ನಿರೂಪಣೆಗಳಲ್ಲಿ ಓಣಂ ಅನ್ನು ಕೇರಳದ ಪ್ರಮುಖ ಸುಗ್ಗಿ ಹಬ್ಬ, ಸಮೃದ್ಧಿ, ಸಮಾನತೆ, ಹೂವುಗಳು, ಭೋಜನ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತವಾಗಿ ಯಾವುದೇ ಹಿಂದು ನಾಗರಿಕತೆಯ ಚೌಕಟ್ಟಿನಿಂದ ಬೇರ್ಪಡಿಸಿ ನಿರೂಪಿಸಲಾಗುತ್ತಿದೆ. ಓಣಂ ಕೇರಳದ ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿರುವ ಹಬ್ಬ ಎಂಬುದು ನಿಜ. ಆದರೆ ಹಬ್ಬದ ಧಾರ್ಮಿಕ ಅಡಿಪಾಯವನ್ನೇ ಸಂಪೂರ್ಣವಾಗಿ ತೆಗೆದುಹಾಕಿದಾಗ ಇತಿಹಾಸದ ಸತ್ಯ ಮರೆಯಾಗುತ್ತದೆ.
ಆಧುನಿಕ ಕೇರಳದಲ್ಲಿ, ಓಣಂನ ಕಥೆಯು ವಿಭಿನ್ನ ವೈಚಾರಿಕ ದೃಷ್ಟಿಕೋನಗಳ ನಡುವಿನ ಸಂಘರ್ಷದ ಕಣವಾಗಿ ಬದಲಾಗಿದೆ. ಮಹಾಬಲಿ ಮತ್ತು ಭಗವಾನ್ ವಾಮನನ ಸಾಂಪ್ರದಾಯಿಕ ಕಥೆಯ ಜೊತೆಗೆ, ಎಡಪಂಥೀಯ ಮತ್ತು ಮಾರ್ಕ್ಸ್ವಾದಿ ಚಿಂತನೆಗಳ ಒಂದು ವಿಭಾಗವು ಮಹಾಬಲಿಯನ್ನು ‘ಅವರ್ಣ’ ಆಡಳಿತಗಾರನೆಂದು ಚಿತ್ರಿಸಲು ಮತ್ತು ವಾಮನ-ಮಹಾಬಲಿ ಪ್ರಸಂಗವನ್ನು ಜಾತಿ ಸಂಘರ್ಷದ ಭಾಷೆಯಲ್ಲಿ ಮರುಸೃಷ್ಟಿಸಲು ಯತ್ನಿಸಿದೆ. ಈ ವ್ಯಾಖ್ಯಾನದಲ್ಲಿ, ಭಗವಾನ್ ವಾಮನನನ್ನು ಶೋಷಣಾತ್ಮಕ ಸಾಮಾಜಿಕ ವ್ಯವಸ್ಥೆಯ ಬ್ರಾಹ್ಮಣ ಪ್ರತಿನಿಧಿಯಂತೆ ಮತ್ತು ಮಹಾಬಲಿಯನ್ನು ದಲಿತ ಅಥವಾ ಮೂಲವಾಸಿ ಆಡಳಿತಗಾರನೆಂದು ಬಿಂಬಿಸಲಾಗುತ್ತದೆ; ಅವರ ಸೋಲನ್ನು ಬ್ರಾಹ್ಮಣಶಾಹಿ ಶಕ್ತಿಯ ವಿಜಯವೆಂದು ನಿರೂಪಿಸಲಾಗುತ್ತದೆ.
ಕೆಲವು ವಿವರಣೆಗಳು ಇಷ್ಟಕ್ಕೇ ನಿಲ್ಲದೆ, ಇದನ್ನು ‘ಉತ್ತರ ಭಾರತ ಹಾಗೂ ದಕ್ಷಿಣ ಭಾರತ’ ಎಂಬ ದ್ವಂದ್ವವಾಗಿ ಬಿಂಬಿಸುತ್ತವೆ. ಭಗವಾನ್ ವಾಮನ ಮತ್ತು ಬ್ರಾಹ್ಮಣೀಯ ಪರಂಪರೆಯನ್ನು ದಕ್ಷಿಣದ ಮೂಲ ರಾಜನನ್ನು ಎದುರಿಸಿದ ಉತ್ತರದಿಂದ ಬಂದ ಬಾಹ್ಯ ಶಕ್ತಿಯೆಂದು ಚಿತ್ರಿಸಲಾಗುತ್ತದೆ. ಇಂತಹ ವ್ಯಾಖ್ಯಾನಗಳು ಆಧುನಿಕ ರಾಜಕೀಯ ಮತ್ತು ಬೌದ್ಧಿಕ ಚರ್ಚೆಗಳಲ್ಲಿವೆ. ಆದರೆ, ಮಹಾಬಲಿಯು ಆಧುನಿಕ ಸಂವಿಧಾನಿಕ ಅಥವಾ ಸಮಾಜಶಾಸ್ತ್ರೀಯ ಅರ್ಥದಲ್ಲಿ ‘ದಲಿತ’ ಆಡಳಿತಗಾರನಾಗಿದ್ದ ಎಂಬುದಕ್ಕೆ ಅಥವಾ ಓಣಂ ಹಿನ್ನೆಲೆಯಲ್ಲಿ ಉತ್ತರ-ದಕ್ಷಿಣ ಭಾರತಗಳ ನಡುವೆ ಯುದ್ಧ ನಡೆದಿತ್ತು ಎಂಬುದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಾಧಾರಗಳಿಲ್ಲ. ಹಿಂದು ಸಾಂಪ್ರದಾಯಿಕ ಕಥೆಯನ್ನು ಆಧುನಿಕ ಜಾತಿ ಅಥವಾ ಪ್ರಾದೇಶಿಕ ದ್ವಂದ್ವವಾಗಿ ಪರಿವರ್ತಿಸಿ, ಆ ಮರುವ್ಯಾಖ್ಯಾನವನ್ನೇ ಹಬ್ಬದ ಮೂಲ ಇತಿಹಾಸವೆಂದು ಬಿಂಬಿಸುವುದರಲ್ಲೇ ಅಪಾಯವಿದೆ.
ಮತ್ತೊಂದೆಡೆ, ಓಣಂನ ಹಿಂದು ಸಾಂಸ್ಕೃತಿಕ ಗುರುತನ್ನೇ ಸಂಪೂರ್ಣವಾಗಿ ತೆಗೆದುಹಾಕಿ, ಅದನ್ನು ಕೇವಲ ಸಮಾನತೆ, ಸಮೃದ್ಧಿ, ಸಾಮಾಜಿಕ ಸೌಹಾರ್ದತೆ ಮತ್ತು ಕೇರಳೀಯ ಸಾಂಸ್ಕೃತಿಕ ಗುರುತನ್ನು ಪ್ರತಿಪಾದಿಸುವ ಜಾತ್ಯತೀತ ಸುಗ್ಗಿ ಹಬ್ಬವಾಗಿ ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ. ವಿಭಿನ್ನ ಸಮುದಾಯಗಳ ಜನರನ್ನು ಒಂದೆಡೆ ತರುವ ಹಬ್ಬವಾಗಿ ಓಣಂ ಅನ್ನು ಆಚರಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ನಿಜ ಹೇಳಬೇಕೆಂದರೆ, ಅದರ ಇಂದಿನ ಸಾಮಾಜಿಕ ವ್ಯಾಪ್ತಿಯೇ ಅದರ ದೊಡ್ಡ ಶಕ್ತಿ. ಆದರೆ, ಈ ಸಮಾವೇಶಿ ಗುಣವನ್ನೇ ನೆಪವಾಗಿಟ್ಟುಕೊಂಡು, ಹಬ್ಬಕ್ಕೆ ಯಾವುದೇ ಹಿಂದು ನಾಗರಿಕತೆಯ ಅಡಿಪಾಯವಿಲ್ಲ ಎಂದು ಸಾಧಿಸಲು ಹೊರಟಾಗ ಸಮಸ್ಯೆ ಎದುರಾಗುತ್ತದೆ.
ಆದರೆ, ಹಳೆಯ ಗ್ರಂಥಗಳ ದಾಖಲೆಗಳು ವಾಮನ-ಬಲಿ ಕಥೆಯನ್ನು ಅತ್ಯಂತ ವಿಶಾಲವಾದ ಹಿಂದು ಪವಿತ್ರ ಭೂಗೋಳದ ವ್ಯಾಪ್ತಿಯಲ್ಲಿರಿಸುತ್ತವೆ. ಭಗವಾನ್ ವಿಷ್ಣುವಿನ ತ್ರಿವಿಕ್ರಮ (ಮೂರು ಹೆಜ್ಜೆಗಳ) ಉಲ್ಲೇಖಗಳು ವೈದಿಕ ಸಾಹಿತ್ಯದಲ್ಲೇ ಕಂಡುಬರುತ್ತವೆ, ಅದನ್ನು ನಂತರದ ಪೌರಾಣಿಕ ಪರಂಪರೆಗಳು ಬೆಳೆಸಿದವು. ಮಹಾಭಾರತ ಮತ್ತು ರಾಮಾಯಣಗಳು ಬಲಿ ಮತ್ತು ವಾಮನನ ಕಥೆಯ ವಿವಿಧ ರೂಪಗಳನ್ನು ಕಾಯ್ದುಕೊಂಡಿವೆ; ತಮಿಳು ಸಾಹಿತ್ಯ ಮತ್ತು ದೇವಾಲಯ ಪರಂಪರೆಗಳಲ್ಲಿ ತಿರುಓಣಂ ನಕ್ಷತ್ರ ಮತ್ತು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಆಚರಣೆಗಳ ಸ್ಪಷ್ಟ ಉಲ್ಲೇಖಗಳಿವೆ.
ಕೇರಳವು ತರುವಾಯ ತನ್ನದೇ ಆದ ವಿಶಿಷ್ಟ ಓಣಂ ಪರಂಪರೆಯನ್ನು, ವಿಶೇಷವಾಗಿ ತೃಕ್ಕಾಕರ ವಾಮನಮೂರ್ತಿ ದೇವಾಲಯ, ಮಹಾಬಲಿ ಮತ್ತು ಕೃಷಿ ಪಂಚಾಂಗದ ಸುತ್ತ ಬೆಳೆಸಿಕೊಂಡಿತು.
ಮಹಾಬಲಿಗಿಂತ ಮೊದಲು: ಭಗವಾನ್ ವಿಷ್ಣುವಿನ ಮೂರು ಹೆಜ್ಜೆಗಳ ವೈದಿಕ ಬೇರುಗಳು
ಈ ಪರಂಪರೆಯ ಅತ್ಯಂತ ಆಳವಾದ ಪದರ ಎಂದರೆ ಮಹಾಬಲಿ ಕೇರಳಕ್ಕೆ ಹಿಂತಿರುಗುವ ಜನಪ್ರಿಯ ಚಿತ್ರಣವಲ್ಲ, ಬದಲಿಗೆ ಮೂರು ಹೆಜ್ಜೆಗಳ ಮೂರ್ತಿಯಾದ ಭಗವಾನ್ ವಿಷ್ಣುವಿನ ಅತ್ಯಂತ ಹಳೆಯ ವೈದಿಕ ಕಲ್ಪನೆ.
ಋಗ್ವೇದದಲ್ಲಿ ಭಗವಾನ್ ವಿಷ್ಣುವಿನ ಪ್ರಸಿದ್ಧ ತ್ರಿವಿಕ್ರಮಾವತಾರದ ಬಗ್ಗೆ, ಅಂದರೆ ಮೂರು ಬ್ರಹ್ಮಾಂಡದ ಹೆಜ್ಜೆಗಳ ಮೂಲಕ ಅವರು ಜಗತ್ತನ್ನು ಅಳೆದ ಮತ್ತು ಸ್ಥಾಪಿಸಿದ ಹಲವಾರು ಉಲ್ಲೇಖಗಳಿವೆ. ಋಗ್ವೇದ (1.154.2) ಹೀಗೆ ಹೇಳುತ್ತದೆ:
“ಪ್ರ ತದ್ ವಿಷ್ಣುಃ ಸ್ತವತೇ ವೀರ್ಯೇಣ ಮೃಗೋ ನ ಭೀಮಃ ಕುಚರೋ ಗಿರಿಷ್ಠಾಃ |
ಯಸ್ಯೋರುಷು ತ್ರಿಷು ವಿಕ್ರಮಣೇಷು ಅಧಿಕ್ಷಿಯಂತಿ ಭುವನಾನಿ ವಿಶ್ವಾ ||”
ಇದರ ಅರ್ಥ: ಭಗವಾನ್ ವಿಷ್ಣುವಿನ ಮೂರು ವಿಶಾಲವಾದ ಹೆಜ್ಜೆಗಳಲ್ಲಿ ಎಲ್ಲಾ ಲೋಕಗಳು ನೆಲೆಸಿವೆ; ಅವರ ಈ ಬೃಹತ್ ಕಾರ್ಯವನ್ನು ಪರ್ವತಗಳಲ್ಲಿ ಸಂಚರಿಸುವ ಭೀಕರ ಸಿಂಹದಂತೆ ಕೊಂಡಾಡಲಾಗುತ್ತದೆ. ಅಂದರೆ, ಭಗವಾನ್ ವಿಷ್ಣುವಿನ ಮೂರು ಹೆಜ್ಜೆಗಳು ಇಡೀ ಬ್ರಹ್ಮಾಂಡವನ್ನೇ ಆವರಿಸುತ್ತವೆ, ಅವರನ್ನು ಸರ್ವವ್ಯಾಪಿ ಶಕ್ತಿಯಾಗಿ ನಿರೂಪಿಸುತ್ತವೆ. ಈ ಪ್ರಾಚೀನ ವೈದಿಕ ಪರಿಕಲ್ಪನೆಯೇ ಮುಂದೆ ಪೌರಾಣಿಕ ವಾಮನ-ಮಹಾಬಲಿ ಕಥೆಗೆ ಮುಖ್ಯ ಆಧಾರವಾಯಿತು.
ಬ್ರಾಹ್ಮಣ ಸಾಹಿತ್ಯಕ್ಕೆ ಬರುವಷ್ಟರಲ್ಲಿ ಈ ಕಥೆ ವಾಮನ ಸ್ವರೂಪಕ್ಕೆ ಹತ್ತಿರವಾಗುತ್ತದೆ. ಶatapatha ಬ್ರಾಹ್ಮಣದಲ್ಲಿರುವ ಒಂದು ಕಥೆಯ ಪ್ರಕಾರ, ಭಗವಾನ್ ವಿಷ್ಣು ಕುಬ್ಜ (ವಾಮನ) ರೂಪದಲ್ಲಿ ಬಂದು, ಅಸುರರಿಂದ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೇಳಿ ಪಡೆಯುತ್ತಾರೆ. ನಂತರ ಬ್ರಹ್ಮಾಂಡದಷ್ಟಕ್ಕೆ ಬೆಳೆದು ಇಡೀ ಅಸ್ತಿತ್ವವನ್ನೇ ಆವರಿಸುತ್ತಾರೆ. ಆದ್ದರಿಂದ, ಬ್ರಹ್ಮಾಂಡವಾಗಿ ಬೆಳೆಯುವ ಕುಬ್ಜ ರೂಪವು ಮೂಲಭೂತವಾಗಿ ಬ್ರಹ್ಮಾಂಡದ ಮೇಲೆ ಭಗವಾನ್ ವಿಷ್ಣುವಿನ ಸಾರ್ವಭೌಮತ್ವದ ಕಥೆಯಾಗಿದ್ದು, ಇದು ಕೇರಳದ ಓಣಂ ಪರಂಪರೆಗಿಂತಲೂ ಅತ್ಯಂತ ಹಳೆಯ ವೈದಿಕ ಅರ್ಥವನ್ನು ಹೊಂದಿದೆ.
ತರುವಾಯ ಪೌರಾಣಿಕ ಪರಂಪರೆಯು ಈ ಕಥೆಗೆ ಹೆಚ್ಚು ವಿಸ್ತಾರವಾದ ನಿರೂಪಣೆಯನ್ನು ನೀಡಿತು. ವಿರೋಚನನ ಮಗ ಹಾಗೂ ಪ್ರಹ್ಲಾದನ ಮೊಮ್ಮಗನಾದ ಬಲಿಯು ಅತ್ಯಂತ ಶಕ್ತಿಶಾಲಿಯಾಗುತ್ತಾನೆ. ಆತ ಮಹಾಯಜ್ಞವನ್ನು ಮಾಡುತ್ತಿರುವಾಗ ಭಗವಾನ್ ವಾಮನನು ಆತನ ಬಳಿ ಬಂದು ಕೇವಲ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಬಲಿ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಭಗವಾನ್ ವಾಮನನು ಆಗ ಬ್ರಹ್ಮಾಂಡ ರೂಪ ತಾಳಿ, ಎರಡು ಹೆಜ್ಜೆಗಳಲ್ಲಿ ಭೂಮಿ ಮತ್ತು ಸ್ವರ್ಗವನ್ನು ಆವರಿಸುತ್ತಾನೆ. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ ಬಲಿ ತನ್ನ ಶಿರಸ್ಸನ್ನೇ ಅರ್ಪಿಸುತ್ತಾನೆ. ವಾಮನನು ಆತನ ತಲೆಯ ಮೇಲೆ ಕಾಲಿಟ್ಟು ಆತನನ್ನು ಸುತಳ ಲೋಕಕ್ಕೆ ಕಳುಹಿಸುತ್ತಾನೆ.
ಓಣಂನ ನಾಗರಿಕತೆಯ ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ಇದು ನಿರ್ಣಾಯಕ. ಭಗವಾನ್ ವಾಮನ ಕೇರಳದ ಜಾನಪದದ ಸೃಷ್ಟಿಯಲ್ಲ. ಮಹಾಬಲಿ ಕೇವಲ ಕೇರಳಕ್ಕಷ್ಟೇ ಸೀಮಿತವಾದ ಪಾತ್ರವಲ್ಲ. ಅವರಿಬ್ಬರ ಸಂಬಂಧವು ಇಡೀ ಭಾರತೀಯ ಹಿಂದು ಗ್ರಂಥಗಳ ಪರಂಪರೆಗೆ ಸೇರಿದ್ದಾಗಿದೆ.
ರಾಮಾಯಣ, ಮಹಾಭಾರತ ಮತ್ತು ಪುರಾಣಗಳು: ಅಖಿಲ ಭಾರತೀಯ ಪವಿತ್ರ ನಿರೂಪಣೆ
ವಾಮನ-ಬಲಿಯ ಕಥೆಯು ಹಿಂದು ಸಾಹಿತ್ಯದ ವಿವಿಧ ಪದರಗಳ ಮೂಲಕ ಸಾಗಿದೆ. ರಾಮಾಯಣದ ಬಾಲಕಾಂಡದಲ್ಲಿ ವಿಶ್ವಾಮಿತ್ರ ಮಹರ್ಷಿಗಳು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಭಗವಾನ್ ವಿಷ್ಣುವಿನ ವಾಮನ ಅವತಾರವನ್ನು ವಿವರಿಸುತ್ತಾರೆ. ಅದೇ ರೀತಿ ಮಹಾಭಾರತದಲ್ಲೂ ಯುವ ಬ್ರಹ್ಮಚಾರಿಯು ದಾನವ ರಾಜನನ್ನು ಸಮೀಪಿಸಿ ಮೂರು ಹೆಜ್ಜೆಗಳಲ್ಲಿ ಜಗತ್ತನ್ನು ಅಳೆದ ಉಲ್ಲೇಖಗಳಿವೆ.
ಪುರಾಣಗಳು ಈ ಕಥೆಯನ್ನು ಮತ್ತಷ್ಟು ವಿಸ್ತರಿಸುತ್ತವೆ. ಭಾಗವತ ಪುರಾಣವು ಬಲಿಯನ್ನು ಅತ್ಯಂತ ಪರಾಕ್ರಮಿ ರಾಜನೆಂದು ಮತ್ತು ಆತ ಯಜ್ಞ ಮಾಡುತ್ತಿದ್ದಾಗ ವಾಮನನು ಬಂದನೆಂದು ವರ್ಣಿಸುತ್ತದೆ. ಬಲಿಯ ಉದಾರತೆ ಮತ್ತು ಮಾತು ತಪ್ಪದ ಗುಣವು ಈ ಪ್ರಸಂಗದ ಮುಖ್ಯ ಭಾಗವಾಗಿದೆ. ತನ್ನ ಸಾಮ್ರಾಜ್ಯವನ್ನೇ ಕಳೆದುಕೊಂಡರೂ ಬಲಿ ಕೊಟ್ಟ ಮಾತನ್ನು ಮುರಿಯಲು ಒಪ್ಪುವುದಿಲ್ಲ. ಅಂತಿಮವಾಗಿ ಮೂರನೇ ಹೆಜ್ಜೆಗೆ ತನ್ನ ತಲೆಯನ್ನೇ ನೀಡುತ್ತಾನೆ. ಹೀಗಾಗಿ ಭಾಗವತವು ಬಲಿಯನ್ನು ಕೇವಲ ದುಷ್ಟ ವ್ಯಕ್ತಿಯಾಗಿ ಚಿತ್ರಿಸುವುದಿಲ್ಲ; ಬದಲಿಗೆ ಭಗವಾನ್ ವಿಷ್ಣುವಿನಿಂದಲೇ ಮೆಚ್ಚುಗೆ ಪಡೆದ ಆತನ ಭಕ್ತಿ, ದಾನಗುಣ ಮತ್ತು ಸತ್ಯಪಾಲನೆಯನ್ನು ಎತ್ತಿಹಿಡಿಯುತ್ತದೆ.
ಈ ಅಂಶವು ಅತ್ಯಂತ ಮುಖ್ಯ, ಏಕೆಂದರೆ “ಹಿಂದು ವಾಮನ” ಮತ್ತು “ಜನಪ್ರಿಯ ಜಾತ್ಯತೀತ ಮಹಾಬಲಿ” ನಡುವೆ ಆಧುನಿಕ ಸಮಾಜ ಸೃಷ್ಟಿಸಿರುವ ದ್ವಂದ್ವವು ಐತಿಹಾಸಿಕವಾಗಿ ತಪ್ಪು ಗ್ರಹಿಕೆಯಿಂದ ಕೂಡಿದೆ. ಹಿಂದು ಪರಂಪರೆಯೇ ಇಬ್ಬರ ನಡುವಿನ ಸಂಕೀರ್ಣ ಸಂಬಂಧವನ್ನು ಕಾಯ್ದುಕೊಂಡಿದೆ. ಬಲಿ ಅಸುರ ರಾಜ ಹಾಗೂ ವಿಷ್ಣು ಭಕ್ತ ಪ್ರಹ್ಲಾದನ ಮೊಮ್ಮಗ. ಆತನ ಸೋಲು ಎಂದರೆ ಕೇವಲ ಒಬ್ಬ ದುಷ್ಟನ ವಧೆಯಲ್ಲ; ಅದು ಶಕ್ತಿ, ನಮ್ರತೆ, ದಾನ, ಭಕ್ತಿ ಮತ್ತು ಸರ್ವೋಚ್ಚ ಪರಮಾತ್ಮನಿಗೆ ಶರಣಾಗತಿಯನ್ನು ಸಾರುವ ಭಕ್ತಿ ಮಾರ್ಗದ ಕಥೆ.
ಪುರಾಣಗಳಲ್ಲಿರುವ ಭೌಗೋಳಿಕ ವಿವರಗಳೂ ಗಮನಾರ್ಹ. ಕೆಲವು ಗ್ರಂಥಗಳು ಬಲಿಯ ಯಜ್ಞ ನರ್ಮದಾ ನದಿಯ ತೀರದಲ್ಲಿ ನಡೆಯಿತೆಂದು ಹೇಳಿದರೆ, ವಾಮನ ಪುರಾಣವು ವಾಮನನನ್ನು ಕುರುಕ್ಷೇತ್ರಕ್ಕೆ ಜೋಡಿಸುತ್ತದೆ. ಭಾಗವತ ಪರಂಪರೆಯೂ ಸಹ ಮಹಾಬಲಿಯನ್ನು ಕೇವಲ ಕೇರಳವನ್ನು ಆಳಿದ ರಾಜನೆಂದು ಸೀಮಿತಗೊಳಿಸುವುದಿಲ್ಲ.
ಆದ್ದರಿಂದ, ವಾಮನ ಮತ್ತು ಬಲಿಯ ಅಖಿಲ ಭಾರತೀಯ ಹಿಂದು ಕಥಾನಕವನ್ನು ಮತ್ತು ನಂತರದ ಕಾಲದಲ್ಲಿ ಕೇರಳದ ಸಂಸ್ಕೃತಿಯಲ್ಲಿ ಮಹಾಬಲಿ ಪ್ರಜಾಪಾಲಕ ರಾಜನಾಗಿ ಮರುರೂಪ ಪಡೆದಿದ್ದನ್ನು ನಾವು ಪ್ರತ್ಯೇಕವಾಗಿ ಗ್ರಹಿಸಬೇಕಾಗಿದೆ.
ಆಧುನಿಕ ಕೇರಳದ ಗುರುತಿಗೆ ಮುಂಚಿನ ಓಣಂ
ಓಣಂ ಕೇವಲ ಆಧುನಿಕ ಕೇರಳದ ಹಬ್ಬವಾಗಿ ಹುಟ್ಟಿಕೊಂಡಿತು ಎಂಬ ಕಲ್ಪನೆಗೆ ಐತಿಹಾಸಿಕ ಪುರಾವೆಗಳು ಸವಾಲು ಹಾಕುತ್ತವೆ.
ತಮಿಳು ಸಾಹಿತ್ಯದ ಪುರಾವೆಗಳು ಇಲ್ಲಿ ಮುಖ್ಯವಾಗುತ್ತವೆ. ಸಂಗಮ್ ಸಾಹಿತ್ಯಕ್ಕೆ ಸೇರಿದ ಮತ್ತು ಮಾಂಗುಡಿ ಮರುದನಾರ್ ರಚಿಸಿದ ಮದುರೈಕ್ಕಾಂಚಿ ಕೃತಿಯಲ್ಲಿ ಪಾಂಡ್ಯರ ರಾಜ್ಯದಲ್ಲಿದ್ದ ಓಣಂ ಆಚರಣೆಯ ಉಲ್ಲೇಖವಿದೆ.
ಈ ವರ್ಣನೆಯು ಹಬ್ಬವನ್ನು ದೇವಾಲಯಗಳು, ರಾಜಮನೆತನದ ಆಚರಣೆಗಳು, ಸಾರ್ವಜನಿಕ ಮನರಂಜನೆ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಜೋಡಿಸುತ್ತದೆ. ಅಂದರೆ, ಆಧುನಿಕ ಕೇರಳ ರಾಜ್ಯ ರಚನೆಗಿಂತ ಶತಮಾನಗಳ ಮುಂಚೆಯೇ ಪ್ರಾಚೀನ ತಮಿಳು ಸಾಂಸ್ಕೃತಿಕ ವಲಯದಲ್ಲಿ ಓಣಂ ಆಚರಣೆಯಲ್ಲಿದ್ದದ್ದು ಸ್ಪಷ್ಟವಾಗುತ್ತದೆ.
ನಂತರದ ತಮಿಳು ವೈಷ್ಣವ ಸಾಹಿತ್ಯವೂ ಇದಕ್ಕೆ ಆಧಾರ ನೀಡುತ್ತದೆ. ವೈಷ್ಣವ ಭಕ್ತಿ ಪರಂಪರೆಯಲ್ಲಿ ತಿರುಓಣಂ ನಕ್ಷತ್ರವನ್ನು ಭಗವಾನ್ ವಿಷ್ಣುವಿಗೆ ಜೋಡಿಸಲಾಗಿದೆ. ನಾಲ್ಕಾಯಿರ ದಿವ್ಯ ಪ್ರಬಂಧಂನಲ್ಲಿ ತಿರುಓಣಂ ಆಚರಣೆಯ ಉಲ್ಲೇಖಗಳಿವೆ. ಅಲ್ಲದೆ, ವೈಷ್ಣವರ 108 ದಿವ್ಯ ದೇಶಗಳಲ್ಲಿ ಕೇರಳದ ‘ತೃಕ್ಕಾಕರ’ವೂ ಒಂದಾಗಿದೆ.
ಮೈಲಾಪುರದ (ತಮಿಳುನಾಡು) ಕಪಾಲೀಶ್ವರರ್ ದೇವಾಲಯದಲ್ಲಿ ನಡೆಯುತ್ತಿದ್ದ ಓಣಂ ಆಚರಣೆಗೆ ಸಂಬಂಧಿಸಿದಂತೆ 7ನೇ ಶತಮಾನದ ಶೈವ ಸಂತರಾದ ತಿರುಜ್ಞಾನಸಂಬಂಧರ್ ಅವರ ಉಲ್ಲೇಖವನ್ನೂ ನೀಡಲಾಗುತ್ತದೆ. ಪ್ರಾಚೀನ ತಮಿಳುನಾಡು ಇಂದಿನ ಕೇರಳದ ರೀತಿಯಲ್ಲೇ ಹತ್ತು ದಿನಗಳ ಓಣಂ ಆಚರಿಸುತ್ತಿತ್ತು ಎಂದು ಇದು ನಿರೂಪಿಸುವುದಿಲ್ಲವಾದರೂ, ತಿರುಓಣಂಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳು ಇಂದಿನ ಕೇರಳದ ಭೌಗೋಳಿಕ ಗಡಿಗಳನ್ನು ಮೀರಿಯೂ ಅಸ್ತಿತ್ವದಲ್ಲಿದ್ದವು ಎಂಬುದನ್ನು ಸಾರುತ್ತದೆ.
ಪ್ರತಿಯೊಂದು ಪ್ರದೇಶವೂ ಒಂದೇ ರೀತಿಯ ಆಚರಣೆಗಳನ್ನು ಕಾಯ್ದುಕೊಳ್ಳಬೇಕೆಂದೇನೂ ಇಲ್ಲ. ಹಬ್ಬಗಳು ಪ್ರಸಾರವಾಗುತ್ತವೆ, ಸ್ಥಳೀಯ ರೂಪಗಳನ್ನು ಪಡೆದುಕೊಳ್ಳುತ್ತವೆ. ಕೇರಳದಲ್ಲಿ ಪೂಕಳಂ, ದೋಣಿ ಸ್ಪರ್ಧೆ, ಓಣಸದ್ಯ ಮತ್ತು ಮಹಾಬಲಿ ಮೆರವಣಿಗೆಗಳು ರೂಪುಗೊಂಡ ಮಾತ್ರಕ್ಕೆ, ವಾಮನ-ತಿರುಓಣಂ ಪರಂಪರೆಯು ಪ್ರಸಾರಗೊಂಡಿದ್ದ ಹಳೆಯ ಹಿಂದು ಸಾಂಪ್ರದಾಯಿಕ ನೆಟ್ವರ್ಕ್ ಇಲ್ಲವೆಂದಾಗುವುದಿಲ್ಲ.
ತೃಕ್ಕಾಕರ ಮತ್ತು ಕೇರಳದಲ್ಲಿ ಓಣಂ ಪಡೆದ ರೂಪಾಂತರ
ಆದಾಗ್ಯೂ, ಕೇರಳವು ಈ ಪರಂಪರೆಯ ಅತ್ಯಂತ ವಿಶಿಷ್ಟ ಮತ್ತು ಪ್ರಮುಖ ಕೇಂದ್ರವಾದ ‘ತೃಕ್ಕಾಕರ’ವನ್ನು ಹೊಂದಿದೆ.
ಎರ್ನಾಕುಲಂ ಜಿಲ್ಲೆಯ ತೃಕ್ಕಾಕರ ವಾಮನಮೂರ್ತಿ ದೇವಾಲಯವು ಭಗವಾನ್ ವಾಮನನು ಮಹಾಬಲಿಯ ವಿರುದ್ಧ ತನ್ನ ಬ್ರಹ್ಮಾಂಡದ ಹೆಜ್ಜೆಯನ್ನಿಟ್ಟ ಸ್ಥಳವೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ. ದೇವಾಲಯದ ಪ್ರಧಾನ ಮೂರ್ತಿ ಭಗವಾನ್ ವಾಮನನಾಗಿದ್ದು, ಮಹಾಬಲಿಯ ಪ್ರತೀಕವೂ ಅಲ್ಲಿದೆ. ಹೀಗಾಗಿ ಕೇರಳದ ಸಾಂಪ್ರದಾಯಿಕ ನಿರೂಪಣೆಯು ವಾಮನ ಮತ್ತು ಮಹಾಬಲಿಯನ್ನು ಪರಸ್ಪರ ವಿರೋಧಿಗಳಾಗಿ ನೋಡುವುದಿಲ್ಲ. ಇಬ್ಬರೂ ಒಂದೇ ಹಿಂದು ಧಾರ್ಮಿಕ ಪರಂಪರೆಗೆ ಸೇರಿದವರು.
ಮಧ್ಯಕಾಲೀನ ಶಾಸನಗಳು ಇದಕ್ಕೆ ಐತಿಹಾಸಿಕ ಆಧಾರ ನೀಡುತ್ತವೆ. ಕ್ರಿ.ಶ. 861ರ ಸ್ಥಾನು ರವಿವರ್ಮನ ಆಡಳಿತಾವಧಿಯ ತಾಮ್ರಶಾಸನವು ಕೇರಳದ ತಿರುವಲ್ಲಾ ದೇವಾಲಯದಲ್ಲಿ ಓಣಂಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಿದ್ದ ಬಗ್ಗೆ ಉಲ್ಲೇಖಿಸುತ್ತದೆ. 12ನೇ ಶತಮಾನದ ಮತ್ತೊಂದು ತಿರುವಲ್ಲಾ ಶಾಸನವು ‘ಆವಣಿ ಓಣಂ’ ಆಚರಣೆಗೆ ತಗುಲುತ್ತಿದ್ದ ಆದಾಯ ಮತ್ತು ವೆಚ್ಚಗಳನ್ನು ದಾಖಲಿಸಿದೆ. ತೃಕ್ಕಾಕರದ ಶಾಸನಗಳೂ ಓಣಂ ಆಚರಣೆಯನ್ನು ಭಗವಾನ್ ವಾಮನನ ಆರಾಧನೆಗೆ ಜೋಡಿಸುತ್ತವೆ.
11ನೇ ಶತಮಾನದ ತೃಕ್ಕಾಕರ ಶಾಸನವೊಂದು ದೇವಾಲಯದ ಪಂಚಾಂಗದಲ್ಲಿ ‘ಪೂರಾಡಂ’, ‘ಉತ್ರಾಡಂ’ ಮತ್ತು ‘ತಿರುಓಣಂ’ ದಿನಗಳನ್ನು ಅತ್ಯಂತ ಪ್ರಮುಖ ದಿನಗಳೆಂದು ಗುರುತಿಸಿದೆ. ಈ ಹಬ್ಬವು ಮಧ್ಯಕಾಲೀನ ಕೇರಳದ ರಾಜಕೀಯ ಮತ್ತು ಧಾರ್ಮಿಕ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿದ್ದು, 56 ಸ್ಥಳೀಯ ರಾಜರು ಮತ್ತು 64 ಗ್ರಾಮ ಪ್ರಮುಖರು ತೃಕ್ಕಾಕರ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ದಾಖಲೆಗಳು ಹೇಳುತ್ತವೆ. ರಾಜರಿಗೆ ತೃಕ್ಕಾಕರಕ್ಕೆ ಬರಲು ಸಾಧ್ಯವಾಗದಿದ್ದಾಗ, ತಮ್ಮ ತಮ್ಮ ಪ್ರದೇಶಗಳಲ್ಲೇ ‘ತೃಕ್ಕಾಕರ ಅಪ್ಪನ್’ (ವಾಮನ) ವಿಗ್ರಹವನ್ನಿಟ್ಟು ಆಚರಿಸಲು ಸೂಚಿಸಲಾಯಿತು.
ಜನಪ್ರಿಯ ಓಣಂನ ಕೇಂದ್ರವಾಗಿ ಮಹಾಬಲಿ ಬೆಳೆದದ್ದು ಹೇಗೆ?
ಇಂದಿನ ಓಣಂನ ಅತ್ಯಂತ ಚಿರಪರಿಚಿತ ಚಿತ್ರಣವೆಂದರೆ ಬ್ರಹ್ಮಾಂಡವನ್ನು ಅಳೆಯುವ ಭಗವಾನ್ ವಾಮನನಲ್ಲ, ಬದಲಿಗೆ ತನ್ನ ಪ್ರಜೆಗಳನ್ನು ನೋಡಲು ಹಿಂತಿರುಗುವ ಮಹಾಬಲಿ. ಜನಪ್ರಿಯ ದಂತಕಥೆಯು ಮಹಾಬಲಿಯನ್ನು ನ್ಯಾಯಪ್ರಿಯ ಮತ್ತು ಉದಾರ ರಾಜನೆಂದು ನಿರೂಪಿಸುತ್ತದೆ. ಭಗವಾನ್ ವಿಷ್ಣು ವಾಮನ ರೂಪದಲ್ಲಿ ಬಂದು ಆತನನ್ನು ಸೋಲಿಸಿದರೂ, ವರ್ಷಕ್ಕೊಮ್ಮೆ ತನ್ನ ಜನರನ್ನು ಭೇಟಿ ಮಾಡಲು ಅನುಮತಿ ನೀಡುತ್ತಾನೆ. ಕೇರಳದ ಅಧಿಕೃತ ಸಾಂಸ್ಕೃತಿಕ ನಿರೂಪಣೆಯು ಈ ಕಥೆಯನ್ನು ಕಾಯ್ದುಕೊಂಡಿದೆ.
ಆದರೆ, ಓಣಂನ ಆರಂಭಿಕ ಐತಿಹಾಸಿಕ ಆಧಾರಗಳಿಗಿಂತ ನಂತರದ ಕಾಲದ ಕೇರಳದ ಪರಂಪರೆಯಲ್ಲಿ ಮಹಾಬಲಿಯ ಕೇಂದ್ರಿತ ವ್ಯಾಖ್ಯಾನವು ಹೆಚ್ಚು ಪ್ರಾಮುಖ್ಯತೆ ಪಡೆಯಿತು ಎಂದು ಇತಿಹಾಸಕಾರರು ಬೆಟ್ಟುಮಾಡುತ್ತಾರೆ. ಮಧ್ಯಕಾಲೀನ ಅವಧಿಯಿಂದೀಚೆಗೆ ಬದಲಾದ ಕೃಷಿ ಮತ್ತು ಸಾಮಾಜಿಕ ಸಂಬಂಧಗಳು ಮಹಾಬಲಿಯನ್ನು ಜನಪ್ರಿಯ ಸಂಕೇತವಾಗಿ ಎತ್ತಿಹಿಡಿಯಲು ಕಾರಣವಾಯಿತು.
ಇದರ ಅರ್ಥ ಮಹಾಬಲಿ ಆಧುನಿಕ ಕಾಲದಲ್ಲಿ ಸೃಷ್ಟಿಯಾದವನೆಂದಲ್ಲ, ಬದಲಿಗೆ ಆತನಿಗೆ ನೀಡಲಾದ ಪ್ರಾಮುಖ್ಯತೆ ಶತಮಾನಗಳ ಅವಧಿಯಲ್ಲಿ ಬದಲಾಯಿತು. ವಾಮನ-ಬಲಿಯ ಕಥೆಯು ಹಿಂದು ಸಾಹಿತ್ಯದಲ್ಲಿ ಪ್ರಾಚೀನವಾದುದು. ಆದರೆ ಪ್ರಾಚೀನ ಕೇರಳದ ಮನೆಗಳಲ್ಲಿ ಮಹಾಬಲಿ ಪ್ರತಿವರ್ಷ ಪ್ರತ್ಯಕ್ಷವಾಗಿ ಹಿಂತಿರುಗುತ್ತಾನೆ ಎಂಬ ಆಧುನಿಕ ನಂಬಿಕೆಯೇ ಇತ್ತೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ.
17ನೇ ಶತಮಾನದ ಜೇಸುಯಿಟ್ ಮಿಷನರಿ ಜಾಕೋಬೋ ಫೆನಿಷಿಯೋ 1609ರಲ್ಲಿ ಬರೆದ ಕೃತಿಯಲ್ಲಿ ಓಣಂ ಅನ್ನು ಮಹಾಬಲಿಯ ವಾರ್ಷಿಕ ಆಗಮನಕ್ಕೆ ಜೋಡಿಸಿರುವುದನ್ನು ಉಲ್ಲೇಖಿಸಿದ್ದಾರೆ.
ಆದ್ದರಿಂದ, “ಓಣಂ ಯಾವಾಗಲೂ ಒಂದೇ ರೀತಿಯಾಗಿತ್ತು” ಎನ್ನುವುದಾಗಲಿ ಅಥವಾ “ಮಹಾಬಲಿ ಎಂಬುದು ನಂತರದ ಹಿಂದುವೇತರ ಸೃಷ್ಟಿ” ಎನ್ನುವುದಾಗಲಿ ಎರಡೂ ಸರಿಯಲ್ಲ. ಹಬ್ಬವು ಕಾಲಾಂತರದಲ್ಲಿ ವಿಕಸನಗೊಂಡಿತು, ಆದರೆ ಅದು ಹಿಂದು ನಾಗರಿಕತೆಯ ಚೌಕಟ್ಟಿನೊಳಗೇ ವಿಕಸನಗೊಂಡಿತು.
ಪವಿತ್ರ ಉತ್ಸವದಿಂದ ಜಾತ್ಯತೀತ ಸಂಕೇತದತ್ತ
ದೊಡ್ಡ ಮಟ್ಟದ ರೂಪಾಂತರ ಬಂದದ್ದು ಆಧುನಿಕ ಅವಧಿಯಲ್ಲಿ. ಓಣಂ ದೇವಾಲಯ ಮತ್ತು ಗೃಹಸ್ಥರ ಆಚರಣೆಯಿಂದ ಇಡೀ ರಾಜ್ಯದ ಸಾರ್ವಜನಿಕ ಹಬ್ಬವಾಗಿ ಬದಲಾಯಿತು. ಸ್ವಾತಂತ್ರ್ಯಾನಂತರ ಕೇರಳ ಸರ್ಕಾರವು ಓಣಂ ಅನ್ನು ಸಾಂಸ್ಕೃತಿಕ ಹಬ್ಬವಾಗಿ ಸಾಂಸ್ಥಿಕಗೊಳಿಸಿತು. 1961ರಲ್ಲಿ ಕೇರಳ ಸರ್ಕಾರವು ಓಣಂ ಅನ್ನು ತನ್ನ ‘ರಾಷ್ಟ್ರೀಯ/ರಾಜ್ಯ ಹಬ್ಬ’ ಎಂದು ಅಧಿಕೃತವಾಗಿ ಘೋಷಿಸಿತು.
ಈ ಪ್ರಕ್ರಿಯೆಯಿಂದ ಧನಾತ್ಮಕ ಪರಿಣಾಮಗಳೂ ಆದವು. ಓಣಂ ಎಲ್ಲಾ ಸಮುದಾಯಗಳು ಆಚರಿಸುವ ಹಬ್ಬವಾಯಿತು. ಪೂಕಳಂ ಸ್ಪರ್ಧೆಗಳು, ಓಣಸದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೋಣಿ ಸ್ಪರ್ಧೆಗಳು ಇದನ್ನು ಕೇರಳದ ಸಾಮಾಜಿಕ ಗುರುತನ್ನಾಗಿ ಮಾಡಿದವು.
ಆದರೆ ಸಮಾವೇಶಿ ಗುಣ (Inclusiveness) ಮತ್ತು ಜಾತ್ಯತೀತತೆ ಒಂದೇ ಅಲ್ಲ. ಒಂದು ಹಬ್ಬವು ತನ್ನ ಹಿಂದು ನಾಗರಿಕತೆಯ ಬೇರುಗಳನ್ನು ಕಾಯ್ದುಕೊಂಡೇ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳಬಹುದು. ದೀಪಾವಳಿ, ಕ್ರಿಸ್ಮಸ್ ಹಾಗೂ ಇತರ ಧಾರ್ಮಿಕ ಹಬ್ಬಗಳು ತಮ್ಮ ಸಾಂಪ್ರದಾಯಿಕ ಧಾರ್ಮಿಕ ಮೂಲಗಳನ್ನು ಕಳೆದುಕೊಳ್ಳದೇ ಸಾಂಸ್ಕೃತಿಕ ಆಯಾಮಗಳನ್ನು ಬೆಳೆಸಿಕೊಂಡಿವೆ. ಓಣಂಗೂ ಅದೇ ರೀತಿಯ ವೈಚಾರಿಕ ಗೌರವ ಸಿಗಬೇಕಿದೆ.
ಓಣಂನ ಜಾತ್ಯತೀತಕರಣವು, ಅದರ ಹಿಂದು ಅಡಿಪಾಯವನ್ನೇ ಏನೋ ಮುಜುಗರದ ಸಂಗತಿಯೆಂಬಂತೆ ನಿರಾಕರಿಸಲು ಬಳಸಲ್ಪಟ್ಟಾಗ ಸಮಸ್ಯೆಯಾಗುತ್ತದೆ. ವೈದಿಕ ವಿಷ್ಣು ಪರಂಪರೆ, ವಾಮನ ಅವತಾರ, ರಾಮಾಯಣ-ಮಹಾಭಾರತಗಳ ನಿರೂಪಣೆ, ಪುರಾಣಗಳಲ್ಲಿನ ಬಲಿ ಕಥೆ, ತೃಕ್ಕಾಕರ ದೇವಾಲಯ ಪರಂಪರೆ ಮತ್ತು ಮಧ್ಯಕಾಲೀನ ಶಾಸನಗಳನ್ನು ಓಣಂನ ಇತಿಹಾಸದಿಂದ ತೆಗೆದುಹಾಕಲು ಸಾಧ್ಯವಿಲ್ಲ.
ಆದ್ದರಿಂದ, ಓಣಂ ಕೇರಳದ ಹಬ್ಬ ಹೌದು, ಆದರೆ ಅದರ ಪವಿತ್ರ ಕಥಾನಕ ಕೇವಲ ಕೇರಳಕ್ಕಷ್ಟೇ ಸೀಮಿತವಲ್ಲ. ಇದು ಸುಗ್ಗಿ ಹಬ್ಬ ಹೌದು, ಆದರೆ ಕೇವಲ ಸುಗ್ಗಿ ಹಬ್ಬವಷ್ಟೇ ಅಲ್ಲ. ಮಹಾಬಲಿಯು ಕೇರಳದ ನೆನಪುಗಳಲ್ಲಿ ಮುಖ್ಯವಾಗಿದ್ದಾನೆ, ಆದರೆ ಆ ಕಥೆ ಇರುವ ವಾಮನ-ವಿಷ್ಣು ಹಿಂದು ಪರಂಪರೆಯಿಂದ ಆತನನ್ನು ಬೇರ್ಪಡಿಸಲು ಸಾಧ್ಯವಿಲ್ಲ.
ಇಂದಿನ ಅಗತ್ಯ ಓಣಂ ಆಚರಣೆಯ ವ್ಯಾಪಕತೆಯನ್ನು ಕುಗ್ಗಿಸುವುದಲ್ಲ; ಬದಲಿಗೆ ಅದರ ಇತಿಹಾಸವನ್ನು ಹೆಚ್ಚು ಪರಿಪೂರ್ಣವಾಗಿ ಮತ್ತು ಸತ್ಯಪೂರ್ಣವಾಗಿ ಗ್ರಹಿಸುವುದಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
