ಮಾವು ಬೆಳೆಗಾರರ ಹಿತ ಕಾಯಲು ಸರಕಾರದ ಕ್ರಮ
ನವದೆಹಲಿ: ಕೇಂದ್ರ ಸರ್ಕಾರವು ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಅವರಿಂದ ಕೊಬ್ರಿ (ಖೋಪ್ರಾ) ಮತ್ತು ತೋತಾಪುರಿ ಮಾವಿನ ಹಣ್ಣುಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಇದರಿಂದಾಗಿ ಉತ್ಪಾದಕರಿಗೆ ಉತ್ತಮ ಬೆಲೆ ಸಿಗಲಿದ್ದು, ಮಾರುಕಟ್ಟೆಯ ಏರಿಳಿತಗಳಿಂದಾಗಿ ಅವರು ನಷ್ಟಕ್ಕೆ ಸಿಲುಕಿ ಕಡಿಮೆ ಬೆಲೆಗೆ ಮಾರಾಟ ಮಾಡುವುದು ತಪ್ಪಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯ ಆಧಾರದ ಮೇಲೆ ಈ ಅನುಮೋದನೆ ನೀಡಲಾಗಿದೆ. ಇದರ ಅಡಿಯಲ್ಲಿ, ರಾಜ್ಯದಲ್ಲಿ 87 ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ಕೊಬ್ರಿಯನ್ನು ಖರೀದಿಸಲಾಗುತ್ತದೆ. ಈ ಸಂಪೂರ್ಣ ಖರೀದಿಯನ್ನು ಬೆಲೆ ಬೆಂಬಲ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಪಿಸಿ) ಕೈಗೊಳ್ಳಲಾಗುತ್ತದೆ. ಅನುಮೋದಿತ ಖರೀದಿಯ ಒಟ್ಟು ಎಂಪಿಸಿ ಮೌಲ್ಯ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಇದಲ್ಲದೆ, ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ (ಎಮ್ಐಎಸ್) ಈ ವರ್ಷ ತಮಿಳುನಾಡಿನಲ್ಲಿ 96 ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ತೋತಾಪುರಿ ಮಾವಿನ ಹಣ್ಣುಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
ಈ ಖರೀದಿಯನ್ನು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ನಡೆಸಲಾಗುತ್ತಿದ್ದು, ಮಾರುಕಟ್ಟೆ ಹಸ್ತಕ್ಷೇಪ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಎಂದು ನಿಗದಿಪಡಿಸಲಾಗಿದೆ. ತೋತಾಪುರಿ ಮಾವು ಬೆಳೆಗಾರರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಸಿಗುವಂತೆ ಮಾಡುವುದು ಹಾಗೂ ಮಾರುಕಟ್ಟೆ ಬೆಲೆಯಲ್ಲಿನ ಹಠಾತ್ ಕುಸಿತದಿಂದಾಗಿ ಅವರು ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಕ್ರಮವು ಬೆಲೆ ಸ್ಥಿರತೆಯನ್ನು ಒದಗಿಸಲು, ರೈತರ ಆದಾಯವನ್ನು ರಕ್ಷಿಸಲು ಮತ್ತು ಅವರ ಬೆಳೆಗೆ ಉತ್ತಮ ಲಾಭವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕೊಬ್ರಿ ಮತ್ತು ತೋತಾಪುರಿ ಮಾವಿನ ಹಣ್ಣುಗಳ ದೊಡ್ಡ ಪ್ರಮಾಣದ ಖರೀದಿಗೆ ಅನುಮೋದನೆ ನೀಡಿರುವುದು ಮತ್ತು ಕೊಬ್ರಿಗಾಗಿ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಎಂಪಿಸಿ ಬೆಂಬಲ ಘೋಷಿಸಿರುವುದು ತಮಿಳುನಾಡಿನ ರೈತರಿಗೆ ದೊಡ್ಡ ನಿಮ್ಮಳವನ್ನು ತಂದಿದೆ. ಇಂತಹ ಕ್ರಮಗಳು ರೈತರ ಆದಾಯವನ್ನು ಹೆಚ್ಚಿಸುವಲ್ಲಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಕೃಷಿ ವಲಯದ ಮೇಲಿನ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
