- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ನಮ್ಮ ಮಾನಸಿಕತೆ, ನಮ್ಮ ಅಸ್ಮಿತೆಗಳ ಮೇಲೆ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಅದೆಂತಹ ಹೊಡೆತ ಕೊಟ್ಟಿವೆಯೆಂದರೆ, ಗಣಿತ – ವಿಜ್ಞಾನ – ಪ್ರಜಾಪ್ರಭುತ್ವ – ಸಮಾಜಶಾಸ್ತ್ರ ಎಲ್ಲವೂ ಎಲ್ಲವೂ ಬ್ರಿಟಿಷರಿಂದಲೇ ಬಂದಿವೆ ಎಂದುಕೊಂಡುಬಿಟ್ಟಿದ್ದೇವೆ. ನಮ್ಮ ವಿಳಾಸವನ್ನೋ, ಮೊಬೈಲ್ ಫೋನಿನ ಸಂಖ್ಯೆಯನ್ನೋ ಕನ್ನಡದಲ್ಲಿ ಹೇಳಿದರೆ, ನಮ್ಮ ಕನ್ನಡಿಗರೇ ಇಂಗ್ಲಿಷಿನಲ್ಲಿಯೇ ಹೇಳಿ, ಎನ್ನುತ್ತಾರೆ. “ಗಣಿತ, ಕಲನಶಾಸ್ತ್ರ, ಕಟ್ಟಡನಿರ್ಮಾಣ ಶಾಸ್ತ್ರ, ಅಂತರಿಕ್ಷ ವಿಜ್ಞಾನ ಇತ್ಯಾದಿ ಎಲ್ಲವೂ ಭಾರತೀಯ ಮೂಲದವು” ಎಂದೇನಾದರೂ ಹೇಳಿದಿರೋ, ಇದೊಂದು ಜೋಕು ಎಂಬಂತೆ ನಮ್ಮವರೇ ಬಿದ್ದೂ ಬಿದ್ದೂ ನಗುತ್ತಾರೆ. ಇವೆಲ್ಲವೂ ಐರೋಪ್ಯರ – ಬ್ರಿಟಿಷರ ವಸಾಹತುಶಾಹಿಯ ಕೊಡುಗೆ ಎಂದು ತುಂಬಾ ಜನ ನಂಬಿಕೊಂಡುಬಿಟ್ಟಿದ್ದಾರೆ. ಇಂಗ್ಲಿಷ್ ಭಾಷೆಗೆ ಲಿಪಿ ಇಲ್ಲ ಮತ್ತು ಅದು ರೋಮನ್ ಲಿಪಿಯನ್ನು ಬಳಸುತ್ತದೆ ಎಂದರೆ ಬಹಳ ಜನರಿಗೆ ಅರ್ಥವೇ ಆಗುವುದಿಲ್ಲ. ಅನುಭವೀ ಪತ್ರಿಕಾ ಸಂಪಾದಕರೊಬ್ಬರಿಗೆ ಹತ್ತಾರು ವರ್ಷಗಳ ಹಿಂದೆ ಯೂನಿಕೋಡ್ನಲ್ಲಿ ಲೇಖನವೊಂದನ್ನು ಕಳುಹಿಸಿ, “ನಡುವೆ ಇರುವ ರೋಮನ್ ಲಿಪಿಯ ಉಲ್ಲೇಖಗಳನ್ನು ಸರಿಯಾಗಿ ಪರಿಶೀಲಿಸಿ. ಮುದ್ರಣಕ್ಕೆ ಹೋಗುವಾಗ ಕೆಲವೊಮ್ಮೆ ಫಾಂಟ್ ಬದಲಾಗಿ ಏನೇನೋ ಅಚ್ಚಾಗಿಬಿಡುತ್ತದೆ” ಎಂದೆ. ಅವರು “ಯಾವುದಿದು ರೋಮನ್ ಲಿಪಿ?” ಎಂದು ಮುಗ್ಧತೆಯಿಂದ ಪ್ರಶ್ನಿಸಿದಾಗ ಕ್ಷಣಕಾಲ ಮೂಕನಾಗಿಬಿಟ್ಟೆ. ಅನಂತರ ವಿವರ ತಿಳಿಸಿದೆ. ಇಂಗ್ಲಿಷ್ ಭಾಷೆಗೆ ಲಿಪಿ ಇಲ್ಲ ಮತ್ತು ಅದು ರೋಮನ್ ಲಿಪಿಯನ್ನು ಬಳಸುತ್ತದೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ.
ಗಣಿತ, ಕಲನಶಾಸ್ತ್ರ, ಕಟ್ಟಡನಿರ್ಮಾಣ ಶಾಸ್ತ್ರ ಇತ್ಯಾದಿಗಳಿಲ್ಲದಿದ್ದರೆ ನಮ್ಮ ಪ್ರಾಚೀನ ಭಾರತದ ಸಹಸ್ರ ಸಹಸ್ರ ದೇವಾಲಯಗಳು, ಕೋಟೆ-ಕೊತ್ತಲುಗಳು, ಅರಮನೆಗಳು, ವೇಧಶಾಲೆಗಳು ನಿರ್ಮಾಣವೇ ಆಗುತ್ತಿರಲಿಲ್ಲ. ರೋಮನ್ ಅಂಕಿಗಳನ್ನೇ (I V X D C L M ಇತ್ಯಾದಿ) ನಂಬಿಕೊಂಡಿದ್ದರೆ, ವಿಜ್ಞಾನದಲ್ಲಿ ಈ ಐರೋಪ್ಯರು ಏಳೇಳು ಜನ್ಮಗಳಲ್ಲಿಯೂ ಏನೂ ಸಾಧಿಸಲಾಗುತ್ತಿರಲಿಲ್ಲ. ಸೊನ್ನೆಯ ಪರಿಕಲ್ಪನೆಯೇ ನಮ್ಮದು. ಸಾಮಾನ್ಯ ಯುಗದ (Common Era) 628ರಲ್ಲಿಯೇ ಬ್ರಹ್ಮಗುಪ್ತನು ತನ್ನ ಬ್ರಹ್ಮಸ್ಫುಟಸಿದ್ಧಾಂತದಲ್ಲಿ ಸೊನ್ನೆಯ ಕಲ್ಪನೆಯನ್ನು, ಕೆಲವು ಲೆಕ್ಕಗಳನ್ನು ವಿವರಿಸಿದ್ದಾನೆ. ಅವಿಭಜಿತ ಭಾರತದ ಗಾಂಧಾರ ಪ್ರಾಂತದ ಪೇಶಾವರದ ಬಳಿ ದೊರೆತ ಪುರಾವೆಯು ಸೊನ್ನೆಯ ಲಿಖಿತ ಸಾಕ್ಷ್ಯಾಧಾರವು ದೊರೆತ ವಿಶೇಷ ಅನ್ವೇಷಣೆಯಾಗಿದೆ. ಸುಮಾರು 2ನೆಯ ಶತಮಾನಕ್ಕೆ ಸೇರಿದ, ಭೂರ್ಜ ಮರದ ಎಲೆ ಅಥವಾ ತೊಗಟೆಗಳಲ್ಲಿ ಈ ಸೊನ್ನೆಯ ಚಿತ್ರ ದೊರೆತಿದೆ.
ತಮಾಷೆಯೆಂದರೆ, ನಮ್ಮ ಭಾರತೀಯ ಮೂಲದ ಅಂಕಿಗಳನ್ನು ‘ಇಂಡೋ ಅರೇಬಿಕ್ ನ್ಯೂಮರಲ್ಸ್’ ಎನ್ನಲಾಗುತ್ತದೆ. ಅಲ್ಲಿ ಅರೇಬಿಯಾ ದೇಶದ ಪಾತ್ರವೇ ಇಲ್ಲದಿದ್ದರೂ, ಈ ಐರೋಪ್ಯರಿಗೆ ಅವು ಅಲ್ಲಿ ಪರಿಚಯವಾದವು ಎಂಬ ಕಾರಣಕ್ಕೆ ಈ ಹೆಸರು ಬಂದುಬಿಟ್ಟಿದೆ. ಅದು ಬಿಡಿ. ನಮ್ಮಲ್ಲಿಯೇ ಬಹಳಷ್ಟು ಜನ ಇವುಗಳನ್ನು ‘ಇಂಗ್ಲಿಷ್ ಅಂಕಿಗಳು’ ಎನ್ನುತ್ತಾರೆ, ಹಾಗೆಯೇ ತಿಳಿದುಕೊಂಡೂಬಿಟ್ಟಿದ್ದಾರೆ. ಎಷ್ಟು ವಿಚಿತ್ರ. ನಮ್ಮ ಅತ್ಯದ್ಭುತ ಶಿಕ್ಷಣ ಪರಂಪರೆಯನ್ನು ಸಮೂಲ ನಾಶ ಮಾಡಿದ ಬ್ರಿಟಿಷರಿಗೆ ಈ ‘ಕೀರ್ತಿ’ ದೊರೆತಿದೆ.
ಇನ್ನು ಚದುರಂಗದಾಟವಿದೆ (Chess). ಅನೇಕ ನಗರಗಳಲ್ಲಿ ಈ ಆಟವನ್ನು ಕಲಿಸುವ ವ್ಯವಸ್ಥೆಯಿದೆ. ಕಲಿಸುವವರಿಗೂ, ಕಲಿಯುವವರಿಗೂ ಈ ಆಟ ಮೂಲತಃ ಭಾರತದ್ದು ಎಂದರೆ ಕಕ್ಕಾಬಿಕ್ಕಿಯಾಗುತ್ತಾರೆ. ನಮ್ಮ ಕನ್ನಡ, ತೆಲುಗು, ಸಂಸ್ಕೃತ ಮೊದಲಾದ ಭಾಷೆಗಳು ವೈಜ್ಞಾನಿಕವಾಗಿ ರೂಪಿತವಾದಂತಹುವು. ಈ ಭಾಷೆಗಳಲ್ಲಿರುವ ಸ್ವರಗಳು, ವ್ಯಂಜನಗಳು ಅವರ್ಗೀಯ ವ್ಯಂಜನಗಳು ವ್ಯವಸ್ಥಿತವಾಗಿ ವಿಭಾಗಿಸಲ್ಪಟ್ಟಿವೆ, ವರ್ಗೀಕರಿಸಲ್ಪಟ್ಟಿವೆ. ಚದುರಂಗದಾಟದ ಕುದುರೆಯ ನಡಿಗೆ ಅಪೂರ್ವವಾದುದು. ಈ ಆಟದ ಇಡೀ ಪರಿಕಲ್ಪನೆಯೇ ವಿಸ್ಮಯಗೊಳಿಸುತ್ತದೆ. ಸಂಸ್ಕೃತ ಭಾಷೆಗೆ ವಿಸ್ಮಯದ ವಿನ್ಯಾಸವಿದೆ. ತುಂಬ ವರ್ಷಗಳ ಹಿಂದೆ ಗ್ರಂಥಾಲಯದಲ್ಲಿ ಒಂದು ಸಂಸ್ಕೃತದ ಪಠ್ಯವನ್ನು ಚದುರಂಗದಾಟದ ಮನೆಗಳ ಮೇಲೆ ಬರೆದು, ಅನಂತರ ಅವೇ ಅಕ್ಷರಗಳನ್ನು ಕುದುರೆಯ ನಡಿಗೆಯಂತೆ ಮರುಜೋಡಣೆ ಮಾಡಿದರೆ, ಅದು ಬೇರೆಯೇ ಅರ್ಥವನ್ನು ಹೊಮ್ಮಿಸುತ್ತಿತ್ತು. ಎರಡೂ ಬಗೆಯಲ್ಲಿ ಜೋಡಿಸಿದ ಪಠ್ಯಗಳನ್ನು ನೋಡಿ ನನಗೆ ವಿಸ್ಮಯವಾಗಿತ್ತು. ಪ್ರಾಚೀನ ಭಾರತದಲ್ಲಿ ಗೂಢಸಂದೇಶ ಬಳಸಲೂ ಕಳುಹಿಸಲೂ ಈ ರೀತಿಯ ವಿಧಾನಗಳನ್ನು ಬಳಸುತ್ತಿದ್ದರಂತೆ. ಇಂತಹ ಪರಿಕಲ್ಪನೆಗಳೇ ಅದ್ಭುತ.
ಈ ಅದ್ಭುತ ಕಲ್ಪನೆಯನ್ನು ಸಂಸ್ಕೃತ ಚಿತ್ರಕಾವ್ಯ ಪದ್ಧತಿಯಲ್ಲಿ ‘ತುರಂಗ ಪದಬಂಧ’ (Turanga padabandha) ಅಥವಾ ಚದುರಂಗದಾಟದ ಕುದುರೆಯ ನಡಿಗೆಯ ವಿನ್ಯಾಸ (Knight’s Tour) ಎನ್ನಲಾಗುತ್ತದೆ. ಇದಕ್ಕೆ ಜಗತ್ಪ್ರಸಿದ್ಧವಾದ ಮತ್ತು ಅತ್ಯಂತ ರೋಮಾಂಚಕಾರಿಯಾದ ಉದಾಹರಣೆ ಸಿಗುವುದು 14ನೇ ಶತಮಾನದ ಮಹಾವಿದ್ವಾಂಸರಾದ ಶ್ರೀ ವೇದಾಂತ ದೇಶಿಕರ ಮಹಾಕಾವ್ಯ ‘ಪಾದುಕಾ ಸಹಸ್ರಮ್’ (ಚಿತ್ರ ಪದ್ಧತಿ – ಶ್ಲೋಕ 929 ಮತ್ತು 930) ಕೃತಿಯಲ್ಲಿ. ಚದುರಂಗದ ಅರ್ಧಮನೆಯ (8×4 = 32 ಚೌಕಗಳು) ಮೇಲೆ ಮೊದಲ ಶ್ಲೋಕದ ಅಕ್ಷರಗಳನ್ನು ಸಾಲಾಗಿ ಬರೆದು, ಅನಂತರ ಕುದುರೆಯ ನಡಿಗೆಯ ಕ್ರಮದಲ್ಲಿ ಆ ಅಕ್ಷರಗಳನ್ನು ಜೋಡಿಸುತ್ತಾ ಹೋದರೆ ಎರಡನೇ ಶ್ಲೋಕವು ಸೃಷ್ಟಿಯಾಗುತ್ತದೆ.
ಈ ಅಪೂರ್ವ ಸಂಸ್ಕೃತ ಶ್ಲೋಕಗಳ ಕನ್ನಡ ಲಿಪ್ಯಂತರ ರೂಪ ಇಲ್ಲಿದೆ:
ಮೂಲ ಶ್ಲೋಕ (ಶ್ಲೋಕ 929):
ಸ್ಥಿರಾಗಸಾಂ ಸದಾರಾಧ್ಯಾ ವಿಹತಾಕತಮತಾಮತಾ|
ಸತ್ಪಾದುಕಾ ಸರಸಾ ಮಾ ರಂಗರಾಜಪದಂ ನಯ||
ಕುದುರೆ ನಡಿಗೆಯ ಮರುಜೋಡಣೆಯಿಂದ ಮೂಡುವ ಶ್ಲೋಕ (ಶ್ಲೋಕ 930):
ಸ್ಥಿತಾ ಸಮಯರಾಜತ್ಪಾ ಗತಾರಾ ಮಾದಕೇ ಗವಿ|
ದುರಂಹಸಾಂ ಸನ್ನತಾದಾ ಸಾಧ್ಯಾದಾ ಪಕರಾ ಸ ರಾ||
ಶ್ಲೋಕಗಳ ಸಂಕ್ಷಿಪ್ತ ಅರ್ಥ
ಮೊದಲ ಶ್ಲೋಕ: “ಮಹಾ ಅಪರಾಧಗಳನ್ನು ಮಾಡಿದವರಿಗೂ ಆಶ್ರಯ ನೀಡುವ, ಭಕ್ತರ ದುಃಖಗಳನ್ನು ದೂರಮಾಡುವ, ನಾದಮಯವಾದ ಶ್ರೀ ರಂಗನಾಥನ ದಿವ್ಯ ಪಾದುಕೆಗಳೇ, ನನ್ನನ್ನು ರಂಗರಾಜನ ಚರಣ ಕಮಲಗಳತ್ತ ನಡೆಸಿಕೊಡಿ”.
ಎರಡನೇ ಶ್ಲೋಕ: “ಸನ್ಮಾರ್ಗದಲ್ಲಿ ನಡೆಯುವವರನ್ನು ರಕ್ಷಿಸುವ, ಸದಾ ಪ್ರಕಾಶಿಸುವ ಸೂರ್ಯನಂತೆ ಕತ್ತಲೆಯನ್ನು ಸರಿಸುವ, ಶರಣಾಗತರ ಪಾಪಗಳನ್ನು ಕಳೆದು ಶಾಂತಿ ಕರುಣಿಸುವ ಆ ಪರಬ್ರಹ್ಮನ ದಿವ್ಯ ಪಾದುಕೆಗಳು ನನ್ನನ್ನು ಭಗವಂತನ ಪಾದದತ್ತ ಕೊಂಡೊಯ್ಯಲಿ”.
ಪ್ರಾಚೀನ ಭಾರತದಲ್ಲಿ ಕಾವ್ಯ ಚಮತ್ಕಾರ ಮಾತ್ರವಲ್ಲದೆ ಗೂಢಲಿಪಿ (Cryptography) ಮತ್ತು ರಹಸ್ಯ ಸಂದೇಶಗಳನ್ನು ರವಾನಿಸಲು ಈ ತಂತ್ರವನ್ನು ಬಳಸುತ್ತಿದ್ದರು ಎಂಬುದು ಅಕ್ಷರಶಃ ಸತ್ಯ. ಸಂಸ್ಕೃತ ಭಾಷೆಯ ಗಣಿತೀಯ ಮತ್ತು ವಿನ್ಯಾಸದ ಶಕ್ತಿಗೆ ಇದು ಅದ್ಭುತ ನಿದರ್ಶನ.
ಪದಬಂಧ, ಸಂಖ್ಯಾಬಂಧ, ಮೊದಲಾದವುಗಳು ನಮ್ಮ ಭವ್ಯ ಸಂಸ್ಕೃತಿಯ ಭಾಷೆ ಮತ್ತು ಅಂಕಿಗಳ ಪ್ರೌಢಿಮೆ – ಪಾರಮ್ಯಗಳ ಔನ್ನತ್ಯದ ಆಯಾಮಗಳು. ನಮ್ಮ ಪರಂಪರೆಯಲ್ಲಿ ಗಣಿತ ಮತ್ತು ಕಲನಶಾಸ್ತ್ರಗಳಿಗೆ ಸಂಬಂಧಿಸಿದಂತೆ, ಜೈನರ ಕೊಡುಗೆಯೂ ಅದ್ವಿತೀಯವಾದುದು.
ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಪ್ರಸಿದ್ಧ ಪಾರ್ಶ್ವನಾಥ ಜೈನ ದೇವಾಲಯದ ಪ್ರವೇಶ ದ್ವಾರದಲ್ಲಿ ಕೆತ್ತಲಾಗಿರುವ 34ರ ಮಾಯಾ ಚೌಕ (Magic Square 34) ಭಾರತೀಯ ಗಣಿತ ಮತ್ತು ಆಧ್ಯಾತ್ಮಿಕ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದ ಕಲಾಕೃತಿಯಾಗಿದೆ. ಇದನ್ನು ಸ್ಥಳೀಯವಾಗಿ ‘ಚೌತೀಸಾ ಯಂತ್ರ’ (Chautisa Yantra) ಅಥವಾ ‘ಜೈನ ಚೌಕ’ ಎಂದೂ ಕರೆಯಲಾಗುತ್ತದೆ.
ಈ ಮಾಯಾ ಚೌಕವಿರುವ ದೇವಾಲಯವನ್ನು ಚಂದೇಲ ರಾಜವಂಶದ ರಾಜ ಧಂಗನ ಆಳ್ವಿಕೆಯ ಅವಧಿಯಲ್ಲಿ (ಸಾಮಾನ್ಯ ಯುಗದ 950–970) ನಿರ್ಮಿಸಲಾಯಿತು. ಅಂದರೆ, ಈ ಮಾಯಾ ಚೌಕವು ಕನಿಷ್ಠ 1000 ವರ್ಷಗಳಿಗಿಂತಲೂ ಹಳೆಯದಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ಹಳೆಯ ಮತ್ತು ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಅತ್ಯಂತ ನಿಖರವಾದ ದೋಷರಹಿತವಾದ ‘ಮಾಯಾ ಚೌಕ’ ಎಂದು ಗಣಿತಜ್ಞರು ಗುರುತಿಸಿದ್ದಾರೆ. ಐರೋಪ್ಯ ದೇಶಗಳಲ್ಲಿ ಇಂತಹ ಚೌಕಗಳನ್ನು ಕಲ್ಪಿಸಿಕೊಳ್ಳುವುದಕ್ಕಿಂತ ಹಲವು ಶತಮಾನಗಳ ಮೊದಲೇ ಭಾರತದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಅಡ್ಡ ಮತ್ತು ಲಂಬ ಸಾಲುಗಳು, ಕರ್ಣರೇಖೆಗಳು (Diagonals), ಉಪ-ಚೌಕಗಳು (2×2 Sub-squares) ಹೀಗೆ ಹೇಗೆಹೇಗೆ ಕೂಡಿದರೂ ಒಟ್ಟು ಮೊತ್ತ ಮೂವತ್ತನಾಲ್ಕೇ ಬರುತ್ತದೆ.
ಖಜುರಾಹೋ ಎಂದರೆ ಕೇವಲ ಶೃಂಗಾರ ಶಿಲ್ಪಕಲಾಕೃತಿಗಳ ತಾಣ ಅಲ್ಲ. ಪ್ರಾಚೀನ ಭಾರತದ ದೇವಾಲಯಗಳು ಕೇವಲ ಪೂಜಾಸ್ಥಳಗಳಾಗಿರದೆ ಗಣಿತ, ಖಗೋಳಶಾಸ್ತ್ರ ಮತ್ತು ತತ್ತ್ವಜ್ಞಾನದ ಕೇಂದ್ರಗಳಾಗಿದ್ದವು ಎಂಬುದಕ್ಕೆ ಈ ಕೆತ್ತನೆಯೇ ಸಾಕ್ಷಿ. ಜೈನ ಪರಂಪರೆಯಲ್ಲಿ ತರ್ಕ ಮತ್ತು ಸಂಖ್ಯಾಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ಈ ಗಣಿತದ ಅದ್ಭುತವನ್ನು ದೇವಾಲಯದ ಗೋಡೆಯ ಮೇಲೆ ಅತ್ಯಂತ ಗೌರವಪೂರ್ವಕವಾಗಿ ಕೆತ್ತಲಾಗಿದೆ. ಇಂತಹ ಅದ್ಭುತ ಪರಂಪರೆಯನ್ನು, ಇಂತಹ ಪುರಾವೆಗಳನ್ನು ಉಳಿಸಿಕೊಳ್ಳೋಣ. ನಮ್ಮ ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಇಲ್ಲದಿದ್ದರೂ ನಾವು ತಿಳಿಯೋಣ, ತಿಳಿಸೋಣ.
