ತಿರುವನಂತಪುರಂ: ಕೇರಳದ ಅತ್ಯಂತ ಹಿರಿಯ ಸಂಘ ಕಾರ್ಯಕರ್ತರಲ್ಲಿ ಒಬ್ಬರು ಹಾಗೂ ವಿಶ್ವ ಹಿಂದೂ ಪರಿಷತ್ (VHP) ಕೇರಳದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಆರ್. ರವೀಂದ್ರನ್ ಅವರು ಜುಲೈ 7ರ ಮಧ್ಯರಾತ್ರಿ ನಿಧನರಾದರು. ಅವರು ತಮ್ಮ ಇಡೀ ಜೀವನವನ್ನು ಸಾಂಘಿಕ ಕೆಲಸ, ಸೇವಾ ಚಟುವಟಿಕೆಗಳು ಮತ್ತು ಮಧ್ಯ ಕೇರಳದಲ್ಲಿ ಸಂಘವನ್ನು ಬಲಪಡಿಸಲು ಮುಡುಪಾಗಿಟ್ಟಿದ್ದರು.
ಅವರು ಆಲುವಾ ಜಿಲ್ಲಾ ಕಾರ್ಯವಾಹ ಮತ್ತು ಎರ್ನಾಕುಲಂ ವಿಭಾಗ ಕಾರ್ಯವಾಹ ಆಗಿಯೂ ಸೇವೆ ಸಲ್ಲಿಸಿದ್ದರು. ಕೊಚ್ಚಿ ಸಮೀಪದ ಎಚ್ಎಂಟಿ (HMT) ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿದ್ದ ಅವರು, ತುರ್ತು ಪರಿಸ್ಥಿತಿಯ (1975-1977) ಸಂಪೂರ್ಣ ಅವಧಿಯಲ್ಲಿ ಮಿಸಾ (MISA – ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಜೈಲುವಾಸ ಅನುಭವಿಸಿದ್ದರು.
ಲೋಕಪ್ರಿಯವಾಗಿ ‘ರವಿಚೇಟ್ಟನ್’ (ಮಲಯಾಳಂನಲ್ಲಿ ಚೇಟ್ಟನ್ ಎಂದರೆ ಅಣ್ಣ) ಎಂದು ಕರೆಯಲ್ಪಡುತ್ತಿದ್ದ ರವೀಂದ್ರನ್ ಅವರು 1957 ರಲ್ಲಿ ಬಾಲ ಸ್ವಯಂಸೇವಕರಾಗಿ ಸಂಘವನ್ನು ಸೇರಿದರು. ಆಲುವಾ ತಾಲೂಕು ಕಾರ್ಯವಾಹ, ಆಲುವಾ ಜಿಲ್ಲಾ ಕಾರ್ಯವಾಹ ಮತ್ತು ಎರ್ನಾಕುಲಂ ವಿಭಾಗ ಕಾರ್ಯವಾಹ ಆಗಿ ಸಂಘದ ಜವಾಬ್ದಾರಿಗಳನ್ನು ಹಂತಹಂತವಾಗಿ ನಿರ್ವಹಿಸಿದರು. ನಂತರ ಅವರು ವಿಶ್ವ ಹಿಂದೂ ಪರಿಷತ್ಗಾಗಿ ಕೆಲಸ ಮಾಡಿದರು. ಆರೋಗ್ಯ ಕ್ಷೀಣಿಸುವವರೆಗೂ ಹಲವು ವರ್ಷಗಳ ಕಾಲ ವಿಎಚ್ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1980 ರಲ್ಲಿ ಆಲುವಾದಲ್ಲಿ ಸಂಘವು ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಿದಾಗ, ಅವರನ್ನು ಗ್ರಾಮ ಸೇವಾ ಸಮಿತಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ದಿವಂಗತ ಪ್ರಾಂತ ಪ್ರಚಾರಕ್ ಕೆ. ಭಾಸ್ಕರ್ ರಾವ್, ಹಿರಿಯ ಪ್ರಚಾರಕರುಗಳಾದ ರಂಗ ಹರಿ ಜೀ, ಪಿ. ಮಾಧವ್ ಜೀ ಮತ್ತು ಪಿ. ಪರಮೇಶ್ವರ್ ಜೀ ಅವರ ನೇತೃತ್ವದಲ್ಲಿ 1982 ರ ಏಪ್ರಿಲ್ನಲ್ಲಿ ಕೊಚ್ಚಿಯಲ್ಲಿ ನಡೆದ ಐತಿಹಾಸಿಕ ‘ವಿಶಾಲ ಹಿಂದೂ ಸಮ್ಮೇಳನ’ದ ಪ್ರಮುಖ ಸಂಘಟಕರಲ್ಲಿ ರವಿಚೇಟ್ಟನ್ ಒಬ್ಬರಾಗಿದ್ದರು.
ಎರ್ನಾಕುಲಂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಮ್ಯುನಿಸ್ಟ್ ಗೂಂಡಾಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳ ದಾಳಿಗಳ ನಡುವೆಯೂ ಅವರು ನೂರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದರು. ಸ್ವಯಂಸೇವಕರ ಕುಂದುಕೊರತೆಗಳನ್ನು ಮತ್ತು ಕಷ್ಟಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದ ಅವರು, ಮಧ್ಯ ಕೇರಳದಲ್ಲಿ ಅತ್ಯುತ್ತಮ ಸಂಘಟಕರಾಗಿದ್ದರು.
ತುರ್ತು ಪರಿಸ್ಥಿತಿಯ ನಂತರ ಸಂಘಕ್ಕೆ ವ್ಯಾಪಕ ಸ್ವೀಕಾರಾರ್ಹತೆ ದೊರೆತಾಗ, ಹೊಸ ಶಾಖೆಗಳನ್ನು ಪ್ರಾರಂಭಿಸುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದರು. ಸಮಾಜದಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಘರ್ಷಣೆಗಳು ಮತ್ತು ವಿವಾದಗಳನ್ನು ಬಗೆಹರಿಸಲು ಸಹಾಯ ಮಾಡುವ ಮೂಲಕ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಗೌರವ ಮತ್ತು ಮನ್ನಣೆಗೆ ಪಾತ್ರರಾಗಿದ್ದರು.
ಕಳೆದ ವರ್ಷ ದೀಪಾವಳಿ ಹಬ್ಬದಂದು ಬಾಲ ಸಂಸ್ಕಾರ ಕೇಂದ್ರವು ರವಿಚೇಟ್ಟನ್ ಅವರನ್ನು ಸನ್ಮಾನಿಸಿತ್ತು. ಕೆಲವು ವಾರಗಳ ಹಿಂದೆ, ಸ್ವರ್ಗೀಯ ಪಿ. ಮಾಧವ್ ಜೀ ಅವರು ಪ್ರಾರಂಭಿಸಿದ್ದ ಆಲುವಾ ಮೂಲದ ‘ತಂತ್ರ ವಿದ್ಯಾ ಪೀಠಂ’ ರವಿಚೇಟ್ಟನ್ ಅವರಿಗೆ ‘ಮಾಧವ್ ಜೀ ಪುರಸ್ಕಾರ’ವನ್ನು ನೀಡಿ ಗೌರವಿಸಿತ್ತು. ಅವರು ಆಸ್ಪತ್ರೆಗೆ ದಾಖಲಾಗಿದ್ದರಿಂದ, ಅವರ ಪರವಾಗಿ ಅವರ ಪುತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಬಾಲ ಸಂಸ್ಕಾರ ಕೇಂದ್ರದ ಸನ್ಮಾನವನ್ನು ಸ್ವೀಕರಿಸಿದ ನಂತರ ಅವರು, “ನಮ್ಮ ಚಟುವಟಿಕೆಗಳು ಅಹಂಕಾರದಿಂದ ಕೂಡಿದ್ದಲ್ಲ, ಆದರ್ಶಪ್ರಾಯವಾದದ್ದು. ಕಾಲಾನಂತರದಲ್ಲಿ ಹಳೆಯ ಕಾರ್ಯಕರ್ತರ ಸ್ಥಾನಕ್ಕೆ ಹೊಸಬರು ಬರುತ್ತಾರೆ. ಆದರೆ ನಮ್ಮ ಕಾರ್ಯ ನಿರಂತರ ಮತ್ತು ಶಾಶ್ವತವಾದದ್ದು” ಎಂದು ಹೇಳಿದ್ದರು.
