ಬೆಂಗಳೂರು: “ಹಳೆಯ ಜಾಗತಿಕ ವ್ಯವಸ್ಥೆಯು ಅಂತ್ಯಗೊಂಡು, ಹೊಸ ಜಾಗತಿಕ ವ್ಯವಸ್ಥೆಯು ಇನ್ನೂ ರೂಪುಗೊಳ್ಳದಿರುವ ಈ ‘ಮಧ್ಯಂತರ ಕಾಲಘಟ್ಟ’ದಲ್ಲಿ (Interregnum) ವಿಶ್ವವು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಏರಿಳಿತಗಳನ್ನು ಕಾಣುತ್ತಿದೆ. ಈ ಸಂಕ್ರಾಂತಿ ಕಾಲದಲ್ಲಿ ಪ್ರತಿಯೊಂದು ರಾಷ್ಟ್ರವೂ ತನ್ನ ವಿದೇಶಾಂಗ ಹಾಗೂ ಆಂತರಿಕ ವ್ಯವಹಾರಗಳನ್ನು ಅತ್ಯಂತ ಜಾಗರೂಕತೆ ಮತ್ತು ಸುಧಾರಿತ ಮಾದರಿಯಲ್ಲಿ ನಿರ್ವಹಿಸಬೇಕಾದ ಅಗತ್ಯವಿದೆ” ಎಂದು ಪ್ರಖ್ಯಾತ ಚಿಂತಕರು, ಲೇಖಕರು ಹಾಗೂ ಇಂಡಿಯಾ ಫೌಂಡೇಶನ್ನ ಅಧ್ಯಕ್ಷರಾದ ಡಾ. ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ‘ದಿ ಮಿಥಿಕ್ ಸೊಸೈಟಿ’ ಅಡಿಟೋರಿಯಂನಲ್ಲಿ ‘ದಿಶಾ ಭಾರತ್’ ಆಯೋಜಿಸಿದ್ದ ‘ಮೈಭಾರತ್’ (MyBHARAT) 15 ದಿನಗಳ ರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಸಂವಾದ ಹಾಗೂ ಉಪನ್ಯಾಸದಲ್ಲಿ ಅವರು ಜಾಗತಿಕ ರಾಜಕೀಯ, ಆರ್ಥಿಕ ಬದಲಾವಣೆಗಳು ಮತ್ತು ಭಾರತದ ಮುಂದಿರುವ ಸವಾಲು-ಅವಕಾಶಗಳ ಕುರಿತು ವಿಸ್ತೃತವಾಗಿ ಮಾತನಾಡಿದರು.
ಜಾಗತಿಕ ವ್ಯವಸ್ಥೆಯ ರೂಪಾಂತರ ಮತ್ತು ‘ರಾಕ್ಷಸರ ಕಾಲ’
ಇಟಲಿಯ ಪ್ರಸಿದ್ಧ ವಿದ್ವಾಂಸ ಆಂಟೋನಿಯೋ ಗ್ರಾಮ್ಚಿ (Antonio Gramsci) ಅವರ ಪ್ರಸಿದ್ಧ ಉಲ್ಲೇಖವನ್ನು ಸ್ಮರಿಸಿದ ರಾಮ್ ಮಾಧವ್, “ಹಳೆಯ ವ್ಯವಸ್ಥೆಯು ಅಂತ್ಯಗೊಂಡು, ಹೊಸ ವ್ಯವಸ್ಥೆ ಹುಟ್ಟದೇ ಇರುವ ಕಾಲಘಟ್ಟವನ್ನು ಗ್ರಾಮ್ಚಿ ‘ರಾಕ್ಷಸರ/ದೈತ್ಯರ ಕಾಲ’ ಎಂದು ಬಣ್ಣಿಸಿದ್ದರು. ಎರಡನೇ ಮಹಾಯುದ್ಧದ ನಂತರ ರೂಪುಗೊಂಡ ಜಾಗತಿಕ ರಚನೆ ಹಾಗೂ ಅಮೆರಿಕದ ಏಕಧ್ರುವೀಯತೆ (Unipolarity) ಇಂದು ಕ್ಷೀಣಿಸುತ್ತಿದೆ. 1990ರ ದಶಕದಲ್ಲಿ ‘ಇತಿಹಾಸದ ಅಂತ್ಯ’ ಎಂದು ಘೋಷಿಸಿಕೊಂಡಿದ್ದ ಪಾಶ್ಚಿಮಾತ್ಯ ಶಕ್ತಿ ಇಂದು ಹಿನ್ನಡೆ ಕಾಣುತ್ತಿದ್ದು, ಅದರ ಜಾಗದಲ್ಲಿ ಹೊಸ ಶಕ್ತಿಗಳು ರೂಪುಗೊಳ್ಳುತ್ತಿವೆ” ಎಂದರು.
ಇಂಡೋ-ಪೆಸಿಫಿಕ್: ಜಗತ್ತಿನ ಹೊಸ ಆರ್ಥಿಕ ಹಾಗೂ ತಾಂತ್ರಿಕ ಕೇಂದ್ರ:
ಜಗತ್ತಿನ ಸಂಪತ್ತು ಮತ್ತು ಶಕ್ತಿಯ ಕೇಂದ್ರವು ಅಟ್ಲಾಂಟಿಕ್ನಿಂದ ಇಂಡೋ-ಪೆಸಿಫಿಕ್ ವಲಯಕ್ಕೆ ವರ್ಗಾವಣೆಯಾಗಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ ಅವರು, ಸಂಪತ್ತು ಮತ್ತು ಜನಸಂಖ್ಯೆ: ಪ್ರಪಂಚದ ಶೇಕಡಾ 60 ರಷ್ಟು ಜನಸಂಖ್ಯೆ, ಗರಿಷ್ಠ ಕೊಳ್ಳುವ ಶಕ್ತಿ ಹಾಗೂ ಭಾರಿ ಪ್ರಮಾಣದ ರಕ್ಷಣಾ ವೆಚ್ಚವು ಈ ವಲಯದಲ್ಲೇ ಕೇಂದ್ರೀಕೃತವಾಗಿದೆ.

‘ದಿಶಾ ಭಾರತ್’ ಆಯೋಜಿಸಿದ್ದ ‘ಮೈಭಾರತ್’ (MyBHARAT) 15 ದಿನಗಳ ರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸ ಮಾಲಿಕೆಯ ಮೊದಲ ಅಧಿವೇಶನದ ಕುರಿತು ವಿಕ್ರಮ ವಾರಪತ್ರಿಕೆ ಹೊರತಂದ ಸಮಗ್ರ ಸಂಚಿಕೆಯನ್ನು ಡಾ. ರಾಮ್ ಮಾಧವ್ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ದಿಶಾ ಭಾರತ್ ಅಧ್ಯಕ್ಷರಾದ ಡಾ. ರಘುರಾಮ್ ಎನ್ ವಿ, ದಿಶಾ ಭಾರತ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾ ನಾಗರಾಜ್ ಹಾಗೂ ದಿ ಮಿಥಿಕ್ ಸೊಸೈಟಿ ಅಧ್ಯಕ್ಷರಾದ ವಿ. ನಾಗರಾಜ್ ಅವರು ವೇದಿಕೆಯಲ್ಲಿದ್ದರು.
ಭಾರತದ ಪ್ರಮುಖ ಪಾತ್ರ: ಭಾರತ, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾಗಳು ಈ ವಲಯದ ಆರ್ಥಿಕ ಚಾಲಕ ಶಕ್ತಿಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಭೇಟಿಗಳು ಭಾರತವು ಇಂಡೋ-ಪೆಸಿಫಿಕ್ನ ಪ್ರಮುಖ ಭಾಗಿದಾರ ಎಂಬುದನ್ನು ಜಗತ್ತಿಗೆ ಸಾರಿವೆ.
ತ್ರಿಪಕ್ಷೀಯ ಒಕ್ಕೂಟ: ಭಾರತ-ಜಪಾನ್-ಫಿಲಿಪೈನ್ಸ್ ಒಳಗೊಂಡ ‘ಟ್ರ್ಯಾಕ್ 1.5’ (Track 1.5) ತ್ರಿಪಕ್ಷೀಯ ಸಹಕಾರವು ಈ ಭಾಗದ ಭದ್ರತೆ ಮತ್ತು ಆರ್ಥಿಕತೆಗೆ ನೂತನ ಆಯಾಮ ನೀಡಲಿದೆ.
ಸಮಗ್ರ (Inclusive) ಧೋರಣೆ: ಅಮೆರಿಕವು ‘ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್’ ಬಯಸಿದರೆ, ಭಾರತವು ‘ಸಮಗ್ರ ಇಂಡೋ-ಪೆಸಿಫಿಕ್’ ಅನ್ನು ಪ್ರತಿಪಾದಿಸುತ್ತದೆ. ಈ ವಲಯದ ಕೇಂದ್ರಬಿಂದುವಾಗಿ ಆಸಿಯಾನ್ (ASEAN) ರಾಷ್ಟ್ರಗಳನ್ನು ಭಾರತ ಮುಂಚೂಣಿಯಲ್ಲಿರಿಸಿದೆ.
ಆಂತರಿಕ ಮತ್ತು ಬಾಹ್ಯ ಸವಾಲುಗಳು: ಚೀನಾ, ಗಡಿ ಮತ್ತು ಆರ್ಥಿಕತೆ
ಭಾರತವು ಭವಿಷ್ಯದಲ್ಲಿ ಎದುರಿಸಬೇಕಾದ ವಿವಿಧ ಸವಾಲುಗಳ ಕುರಿತು ಮಾತನಾಡುತ್ತಾ, “ಅರುಣಾಚಲ ಪ್ರದೇಶದ ಗಡಿ ವಶಪಡಿಸಿಕೊಳ್ಳಲಾಗುತ್ತಿದೆ ಎಂಬಂತಹ ವದಂತಿಗಳು ಅಸತ್ಯ. ಭಾರತದ ಭದ್ರತಾ ಪಡೆಗಳು ನೈಜ ನಿಯಂತ್ರಣ ರೇಖೆಯನ್ನು (LAC) ಕಟ್ಟುನಿಟ್ಟಾಗಿ ಕಾಯುತ್ತಿವೆ. ಆದರೆ, ಚೀನಾದೊಂದಿಗೆ 110 ಬಿಲಿಯನ್ ಡಾಲರ್ಗೂ ಅಧಿಕ ವ್ಯಾಪಾರ ಕೊರತೆ (Trade Deficit) ಇರುವುದು ದೊಡ್ಡ ಸವಾಲು,” ಎಂದರು.
ಕಳೆದುಹೋದ ದಶಕಗಳು ಮತ್ತು ಸಮಾಜವಾದದ ಪರಿಣಾಮ: 1936 ರಲ್ಲೇ ಸಮಾಜವಾದಿ ಮಾದರಿಯನ್ನು ಕಾಂಗ್ರೆಸ್ನ ಪಟೇಲ್, ರಾಜೇಂದ್ರ ಪ್ರಸಾದ್ ವಿರೋಧಿಸಿದ್ದರೂ, 1955 ರ ಅವಡಿ ಅಧಿವೇಶನದಲ್ಲಿ ಅದನ್ನು ಅಳವಡಿಸಿಕೊಳ್ಳಲಾಯಿತು. 1978 ರಲ್ಲೇ ಸಮಾಜವಾದ ತೊರೆದ ಚೀನಾ ವೇಗವಾಗಿ ಬೆಳೆಯಿತು. ಭಾರತ 1991 ರವರೆಗೆ ಕಳೆದುಕೊಂಡ 40 ವರ್ಷಗಳ ಹಿನ್ನಡೆಯನ್ನು ಈಗ ತಂತ್ರಜ್ಞಾನ ಮತ್ತು ಆರ್ಥಿಕ ಹೂಡಿಕೆಯ ಮೂಲಕ ಭರ್ತಿ ಮಾಡುತ್ತಿದೆ.
ಮಧ್ಯಪ್ರಾಚ್ಯ ಹಾಗೂ ಇಸ್ಲಾಮಿಕ್ ನ್ಯಾಟೋ: ಮಧ್ಯಪ್ರಾಚ್ಯದ ಬೆಳವಣಿಗೆಗಳು ಮತ್ತು ಅಲ್ಲಿ ಪಾಕಿಸ್ತಾನದ ಉಪಸ್ಥಿತಿಯನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಲಕ್ಷಾಂತರ ಭಾರತೀಯರ ಭದ್ರತೆ ಹಾಗೂ ವಿದೇಶಿ ವಿನಿಮಯದ ದೃಷ್ಟಿಯಿಂದ ಇದು ಪ್ರಮುಖವಾಗಿದೆ.
ಎಫ್ಸಿಆರ್ಎ (FCRA) ಕಾಯ್ದೆ ಮತ್ತು ವಿದೇಶಿ ಅನುದಾನದ ನಿಯಂತ್ರಣ
ಮಸೂದೆಯ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳನ್ನು ತಳ್ಳಿಹಾಕಿದ ಅವರು, “ತೆಲುಗಿನ ಗಾದೆಯಂತೆ ಇನ್ನೂ ಮಂಡನೆಯಾಗದ ಕಾಯ್ದೆಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ದೇಶದಲ್ಲಿರುವ ಒಟ್ಟು ಎನ್ಜಿಒಗಳಲ್ಲಿ ಧಾರ್ಮಿಕ ಸಂಸ್ಥೆಗಳ ಪಾಲು ಕೇವಲ ಶೇ. 10 ಮಾತ್ರ. ನಿಯಮಗಳು ಶೇ. 100 ಎನ್ಜಿಒಗಳಿಗೂ ಅನ್ವಯಿಸುತ್ತವೆ. ಜಾರ್ಜ್ ಸೊರೊಸ್ ಅವರಂತಹ ಶಕ್ತಿಗಳು ವಿದೇಶಿ ಹಣ ಬಳಸಿ ದೇಶದಲ್ಲಿ ಅಶಾಂತಿ ಸೃಷ್ಟಿಸುವುದನ್ನು ತಡೆಯಲು ಮತ್ತು ಹಣ ದುರುಪಯೋಗವಾಗದಂತೆ ಕ್ರಮಬದ್ಧಗೊಳಿಸಲು ಈ ತಿದ್ದುಪಡಿ ಅಗತ್ಯ,” ಎಂದು ಸ್ಪಷ್ಟಪಡಿಸಿದರು.
ಜೆನ್ ಝಿ (Gen Z), ವಸಾಹತುಶಾಹಿ ಮನಸ್ಥಿತಿ ಮತ್ತು ಶಿಕ್ಷಣ ನೀತಿ ಸೇರಿದಂತೆ ಸಂವಾದ ಅವಧಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಡಾ. ರಾಮ್ ಮಾಧವ್ ಉತ್ತರಿಸಿದರು.
ಯುವಜನತೆ ಮತ್ತು ಭಾರತೀಯತೆ: ಜೆನ್ ಝಿ (Gen Z) ಯುವಕರು ಕೇವಲ ಪ್ರತಿಭಟನೆ ನಡೆಸುವ ಸ್ಥಳಗಳಲ್ಲಿ ಮಾತ್ರವಲ್ಲ, ಆರ್ಎಸ್ಎಸ್ ಶಾಖೆಗಳು, ಚಿನ್ಮಯಿ ಮಿಷನ್ ಮತ್ತು ರಾಮಕೃಷ್ಣ ಮಿಷನ್ಗಳಂತಹ ಸಾಂಸ್ಕೃತಿಕ ವೇದಿಕೆಗಳಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ.
ತಂತ್ರಜ್ಞಾನ ಮತ್ತು ‘ವಾಟ್ಸಾಪ್ ಯೂನಿವರ್ಸಿಟಿ’: ತಂತ್ರಜ್ಞಾನ ಇಂದು ಚಿಂತನೆಗಳ ಚಾಲಕ ಶಕ್ತಿಯಾಗಿದೆ. ದುಷ್ಟ ಶಕ್ತಿಗಳು ತಂತ್ರಜ್ಞಾನ ಬಳಸಿ ಗೊಂದಲ ಮೂಡಿಸುತ್ತಿರುವಾಗ, ನಾವು ಅದೇ ತಂತ್ರಜ್ಞಾನ ಬಳಸಿ ಭಾರತೀಯ ಚಿಂತನೆಗಳನ್ನು ಯುವಜನತೆಗೆ ತಲುಪಿಸಬೇಕು.
ಹೊಸ ಶಿಕ್ಷಣ ನೀತಿ (NEP): ಶಾಲಾ ಶಿಕ್ಷಣವು ಶೇ. 80 ರಷ್ಟು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿದೆ. ಕೇಂದ್ರದ ಹೊಸ ಶಿಕ್ಷಣ ನೀತಿಯು ಕೇವಲ ಮಾಹಿತಿ ತುಂಬುವುದಕ್ಕಿಂತ ಕೌಶಲ್ಯ ವೃದ್ಧಿ (Skilling) ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುತ್ತದೆ. ಇದನ್ನು ಪ್ರಾಥಮಿಕ ಹಂತದಿಂದಲೇ ಅನುಷ್ಠಾನಗೊಳಿಸಬೇಕಿದೆ ಎಂದರು.
ವಿಕಸಿತ ಭಾರತ 2047′ ಮತ್ತು ನಾಗರಿಕರ ಜವಾಬ್ದಾರಿ
“2014 ರಲ್ಲಿ ಅಮೆರಿಕದ ಅಧ್ಯಕ್ಷ ಒಬಾಮಾ ಹಾಗೂ ಪ್ರಧಾನಿ ಮೋದಿ ನೀಡಿದ ಜಂಟಿ ಹೇಳಿಕೆಯಲ್ಲಿ ಮೊದಲ ಬಾರಿಗೆ ‘ಭಾರತವು ಪ್ರಭಾವಶಾಲಿ ಹಾಗೂ ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ’ ಎಂದು ಒಪ್ಪಿಕೊಳ್ಳಲಾಗಿತ್ತು. ಮುಂಬರುವ 20 ವರ್ಷಗಳ ಕಾಲಾವಕಾಶದಲ್ಲಿ, ಅಂದರೆ 2047 ರ ವೇಳೆಗೆ ಭಾರತವು ‘ವಿಕಸಿತ ಭಾರತ’ವಾಗಿ ರೂಪುಗೊಳ್ಳಲಿದೆ. ಈ ಬದಲಾವಣೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಮಾಜವೂ ಭಗೀರಥ ಯತ್ನದಲ್ಲಿ ಕೈಜೋಡಿಸಬೇಕು,” ಎಂದು ಡಾ. ರಾಮ್ ಮಾಧವ್ ಕರೆ ನೀಡಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
