ಕೊಲ್ಲಂ ಜಿಲ್ಲೆಯ ಶಾಸ್ತಾಂಕೋಟ ಶ್ರೀ ಧರ್ಮಶಾಸ್ತಾ ದೇವಾಲಯದಲ್ಲಿ ಓಣಂ ಹಬ್ಬದ ಅಂಗವಾಗಿ ಕೋತಿಗಳಿಗೆ ಸಾಂಪ್ರದಾಯಿಕ ‘ವಾನರ ಸದ್ಯ’ ಎಂಬ ವಿಶೇಷ ಭೋಜನವನ್ನು ಆಗಸ್ಟ್ 25 ರಂದು ಆಯೋಜಿಸಲಾಗಿದ್ದು, ಈ ವಿಶಿಷ್ಟ ಆಚರಣೆಯು ಆಗಸ್ಟ್ 26 ರಂದೂ ಮುಂದುವರಿದಿದೆ.
ಕೊಲ್ಲಂ ಜಿಲ್ಲೆಯ ಶಾಸ್ತಾಂಕೋಟ ಶ್ರೀ ಧರ್ಮಶಾಸ್ತಾ ದೇವಾಲಯದಲ್ಲಿ ನಡೆಯುವ ಓಣಂ ಆಚರಣೆಯು ಅತ್ಯಂತ ವಿಶಿಷ್ಟವಾದ ಆಚರಣೆಯನ್ನು ಒಳಗೊಂಡಿದೆ. ಇಲ್ಲಿ ಸಾಂಪ್ರದಾಯಿಕ ಓಣಂ ಸದ್ಯವನ್ನು (ಊಟ) ಜನರಿಗಷ್ಟೇ ಅಲ್ಲದೆ, ಕೋತಿಗಳಿಗೂ ಉಣಬಡಿಸಲಾಗುತ್ತದೆ. ಓಣಂ ಹಬ್ಬದ ಹಿಂದಿನ ದಿನವಾದ ‘ಉತ್ರಾಡಂ’ ದಿನದಂದು ಮತ್ತು ಓಣಂ ದಿನದಂದು ‘ವಾನರ ಸದ್ಯ’ವನ್ನು ಆಯೋಜಿಸಲಾಗುತ್ತದೆ. ಈ ವರ್ಷ ಮೊದಲ ದಿನದ ವಾನರ ಸದ್ಯವನ್ನು ಆಗಸ್ಟ್ 25 ರಂದು ಆಯೋಜಿಸಲಾಗಿತ್ತು.
ವಿವಿಧ ರೀತಿಯ ಖಾದ್ಯಗಳನ್ನು ಒಳಗೊಂಡ ಓಣಂ ಸದ್ಯವು ಈ ಆಚರಣೆಯ ಪ್ರಮುಖ ಭಾಗವಾಗಿದೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ವಿವಿಧ ತರಕಾರಿ ಸಾಂಬಾರ್/ಪಲ್ಯಗಳು, ಬಾಳೆಹಣ್ಣಿನ ಚಿಪ್ಸ್ ಮತ್ತು ಪಾಯಸವನ್ನು ತಯಾರಿಸಿ, ನಂತರ ಎಲ್ಲರೂ ಒಟ್ಟಾಗಿ ಕುಳಿತು ಸವಿಯುವುದು ಪದ್ಧತಿ. ಆದರೆ ಶಾಸ್ತಾಂಕೋಟದಲ್ಲಿ ಈ ಭೋಜನವನ್ನು ಕೋತಿಗಳಿಗಾಗಿ ಸಿದ್ಧಪಡಿಸಲಾಗುತ್ತದೆ.
‘ವಾನರ’ ಎಂದರೆ ಕೋತಿ ಹಾಗೂ ‘ಸದ್ಯ’ ಎಂದರೆ ಭೋಜನ/ಹಬ್ಬದ ಊಟ. ದೇವಾಲಯದ ಭಕ್ತರು ಹಲವಾರು ದಶಕಗಳಿಂದ ಈ ವಾನರ ಸದ್ಯವನ್ನು ಆಯೋಜಿಸುತ್ತಾ ಬಂದಿದ್ದಾರೆ. ಇನ್ನು ಕೆಲವರ ನಂಬಕೆಯ ಪ್ರಕಾರ ಈ ಪರಂಪರೆಯು ಶತಮಾನಗಳಷ್ಟು ಹಳೆಯದಾಗಿದೆ.
ಮನುಷ್ಯರಿಗೆ ಬಡಿಸುವಂತೆಯೇ ಕೋತಿಗಳಿಗೂ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಎಲೆಗಳಲ್ಲಿ ಊಟವನ್ನು ಬಡಿಸುತ್ತಿದ್ದಂತೆಯೇ ಕೋತಿಗಳು ಬಂದು ತಿನ್ನಲು ಪ್ರಾರಂಭಿಸುತ್ತವೆ, ಇದು ನೋಡಲು ಅತ್ಯಂತ ಕುತೂಹಲಕಾರಿಯಾದ ದೃಶ್ಯವಾಗಿರುತ್ತದೆ. ಕೆಲವು ಮಲಯಾಳಂ ಕಿರುತೆರೆ ವಾಹಿನಿಗಳು ಈ ಕಾರ್ಯಕ್ರಮವನ್ನು ನೇರಪ್ರಸಾರ (ಲೈವ್) ಕೂಡ ಮಾಡಿದವು.
ಈ ವಾನರ ಸದ್ಯವನ್ನು ದೇವರ ಸೃಷ್ಟಿಯಾದ ಪ್ರಾಣಿಗಳ ಪ್ರತ್ಯಕ್ಷ ಕರುಣೆ ಮತ್ತು ಸಾಂವೇದನಾಶೀಲತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ, ಕಟಾವಿನ ಹಬ್ಬದ ದಿನದಂದು ಮಾನವರು ಪ್ರಾಣಿಗಳನ್ನು ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಯಾರೂ ಹಸಿವಿನಿಂದ ಇರಬಾರದು ಎಂಬ ಸಂದೇಶವನ್ನೂ ಇದು ಸಾರುತ್ತದೆ. ಈ ಸದ್ಯವು ಆಗಸ್ಟ್ 26 ರ ಓಣಂ ದಿನದಂದೂ ಮುಂದುವರಿಯುತ್ತದೆ.
ಹಿಂದಿನ ವರ್ಷಗಳಂತೆಯೇ ಈ ವರ್ಷವೂ ಅನ್ನ, ಬೇಳೆ ಸಾರು, ಹಪ್ಪಳ, ಪಚಡಿ (ಮೊಸರಿನಲ್ಲಿ ಬೇಯಿಸಿದ ತರಕಾರಿ), ಅವಿಯಲ್ (ವಿವಿಧ ತರಕಾರಿಗಳ ಮಿಶ್ರಣದ ಪದಾರ್ಥ), ಉಪ್ಪಿನಕಾಯಿ, ಬಾಳೆಹಣ್ಣಿನ ಚಿಪ್ಸ್, ಸಿಹಿ ಬಾಳೆಹಣ್ಣಿನ ಚಿಪ್ಸ್ ಮತ್ತು ಪಾಯಸವನ್ನು ತಯಾರಿಸಲಾಗಿತ್ತು. ಆಯೋಜಕರ ಪ್ರಕಾರ ಕೋತಿಗಳು ವಿಶೇಷವಾಗಿ ಅವಿಯಲ್, ಹಪ್ಪಳ, ಪಾಯಸ ಮತ್ತು ಚಿಪ್ಸ್ ಅನ್ನು ಹೆಚ್ಚು ಇಷ್ಟಪಟ್ಟು ತಿಂದವು.
ಕೋತಿಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಊಟದ ಪಂಡಾಲಿನಲ್ಲಿ (ಚಪ್ಪರ) ಈ ಭೋಜನವನ್ನು ಬಡಿಸಲಾಯಿತು. ಕೋತಿಗಳ ವಿವಿಧ ಗುಂಪುಗಳು ಒಂದಾದ ಮೇಲೊಂದರಂತೆ ಬಂದು ಊಟವನ್ನು ಸವಿದವು.
ರಾಮಾಯಣ ಕಾಲದ ಪೌರಾಣಿಕ ನಂಬಿಕೆ:
ಶಾಸ್ತಾಂಕೋಟದಲ್ಲಿ ಕೋತಿಗಳ ಉಪಸ್ಥಿತಿಯು ರಾಮಾಯಣ ಕಾಲದಿಂದಲೂ ಇದೆ ಎಂಬ ಪೌರಾಣಿಕ ನಂಬಿಕೆಯಿದೆ. ಶ್ರೀರಾಮ ಮತ್ತು ಆತನ ವಾನರ ಸೇನೆಯು ರಾವಣನನ್ನು ಸಂಹರಿಸಿದ ನಂತರ ಶ್ರೀಲಂಕಾದಿಂದ ಅಯೋಧ್ಯೆಗೆ ಹಿಂತಿರುಗುವಾಗ ಶಾಸ್ತಾಂಕೋಟ ತಲುಪಿದ್ದರೆನ್ನಲಾಗಿದೆ. ಆಗ ಶ್ರೀರಾಮನು ದೇವಾಲಯದ ಮುಖ್ಯ ದೇವತೆಯಾದ ಶಾಸ್ತಾರನ (ಅಯ್ಯಪ್ಪ) ಮಿತ್ರರಾಗಿರಲು ವಾನರ ಸಮೂಹ ನಿಯೋಜಿಸಿದನು ಎಂದು ಹೇಳಲಾಗುತ್ತದೆ.
ಇಂದು ಶಾಸ್ತಾಂಕೋಟದಲ್ಲಿ ಕಂಡುಬರುವ ಕೋತಿಗಳು ಶ್ರೀರಾಮನ ಕಾಲದ ವಾನರರ ವಂಶಸ್ಥರು ಎಂದು ಭಕ್ತರು ನಂಬುತ್ತಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
