ನವದೆಹಲಿ: ವಿವೇಕಾನಂದ ರಾಕ್ ಮೆಮೋರಿಯಲ್ ಮತ್ತು ವಿವೇಕಾನಂದ ಕೇಂದ್ರದ ರಾಷ್ಟ್ರೀಯ ಅಧ್ಯಕ್ಷರಾದ ಎ. ಬಾಲಕೃಷ್ಣನ್ (88) ಅವರು ನಿಧನರಾಗಿದ್ದಾರೆ. ಅವರ ನಿಧನದೊಂದಿಗೆ ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಒಂದು ಪ್ರಮುಖ ಅಧ್ಯಾಯ ಅಂತ್ಯಗೊಂಡಂತಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ನಾಯಕರು ಗುರುವಾರ ಎ. ಬಾಲಕೃಷ್ಣನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಮಾಜಕ್ಕೆ ಅವರು ಸಲ್ಲಿಸಿದ ದಶಕಗಳ ಕಾಲದ ಸೇವೆ ಹಾಗೂ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ, ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ವಿವೇಕಾನಂದ ಕೇಂದ್ರದ ಅಖಿಲ ಭಾರತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀ ಎ. ಬಾಲಕೃಷ್ಣನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಬಾಲಕೃಷ್ಣನ್ ಅವರು ತಮ್ಮ ಜೀವನದ ಐದಕ್ಕೂ ಹೆಚ್ಚು ದಶಕಗಳನ್ನು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಮತ್ತು ಸಮಾಜ ಸೇವೆಯ ಕಾರ್ಯಗಳಿಗೆ ಮುಡಿಪಾಗಿಟ್ಟಿದ್ದರು. ವಿವೇಕಾನಂದ ಕೇಂದ್ರದ ಆರಂಭಿಕ ‘ಜೀವನವ್ರತಿ’ಗಳಲ್ಲಿ (ಪೂರ್ಣಾವಧಿ ಕಾರ್ಯಕರ್ತರು) ಒಬ್ಬರಾಗಿ, ಅವರು ದೇಶಾದ್ಯಂತ ದಣಿವರಿಯದೆ ಕೆಲಸ ಮಾಡಿದರು. ಅವರು ವಿಶೇಷವಾಗಿ ಈಶಾನ್ಯ ಭಾರತದೊಂದಿಗೆ ಆಳವಾದ ನಂಟನ್ನು ಹೊಂದಿದ್ದರು. ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ಹೇಳಿದ್ದಾರೆ.
“ಸಂಪೂರ್ಣ ವಿವೇಕಾನಂದ ಕೇಂದ್ರದ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ,” ಎಂದು ಪ್ರಧಾನಮಂತ್ರಿಯವರು ಕಂಬನಿ ಮಿಡಿದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕೂಡ ಬಾಲಕೃಷ್ಣನ್ ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದು, ಅವರನ್ನು ಸ್ವಾಮಿ ವಿವೇಕಾನಂದರ ತತ್ತ್ವಚಿಂತನೆಯ ಸಮರ್ಪಿತ ಅನುಯಾಯಿ ಎಂದು ಬಣ್ಣಿಸಿದ್ದಾರೆ. ವಿವೇಕಾನಂದ ಕೇಂದ್ರದ ಮೂಲಕ ಸ್ವಾಮೀಜಿಯವರ ಆದರ್ಶಗಳನ್ನು ಸಾಕಾರಗೊಳಿಸಲು ಅವರು ಶ್ರಮಿಸಿದರು ಎಂದಿದ್ದಾರೆ.
ಬಾಲಕೃಷ್ಣನ್ ಅವರು ಭಾರತದಾದ್ಯಂತ ಕೇಂದ್ರದ ದೂರದೃಷ್ಟಿಯನ್ನು ವಿಸ್ತರಿಸಿದರು ಮತ್ತು ನಾಗರಿಕತೆಯ ಜ್ಞಾನದ ಮೂಲಕ ರಾಷ್ಟ್ರವನ್ನು ಪೋಷಿಸಲು ನೆರವಾದರು. ಬಾಲಕೃಷ್ಣನ್ ಅವರ ಜೀವನವು ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಿವೇಕಾನಂದ ರಾಕ್ ಮೆಮೋರಿಯಲ್ ಹಾಗೂ ವಿವೇಕಾನಂದ ಕೇಂದ್ರದ ಅಧ್ಯಕ್ಷರಾಗಿ ಮತ್ತು ಜೀವನವ್ರತಿ ಕಾರ್ಯಕರ್ತರಾಗಿ ಬಾಲಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಅರುಣಾಚಲ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಬಾಲಕೃಷ್ಣನ್ ಅವರ ಪ್ರವರ್ತಕ ಕೊಡುಗೆಯನ್ನು ರಿಜಿಜು ವಿಶೇಷವಾಗಿ ಉಲ್ಲೇಖಿಸಿದ್ದು, ಅವರ ನಿಸ್ವಾರ್ಥ ಸೇವೆಯನ್ನು ರಾಜ್ಯದ ಮತ್ತು ದೇಶದ ಜನತೆ ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಬಾಲಕೃಷ್ಣನ್ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸಿದ ರಿಜಿಜು, “ತಮ್ಮ ಜೀವನದಲ್ಲೇ ಸೇವೆಯ ಮನೋಭಾವವನ್ನು ಮೈಗೂಡಿಸಿಕೊಂಡಿದ್ದ ಒಬ್ಬ ನಿಜವಾದ ಕರ್ಮಯೋಗಿ” ಎಂದು ಬಣ್ಣಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಬಾಲಕೃಷ್ಣನ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ರಾಷ್ಟ್ರಸೇವೆಗೆ ಅವರಿದ್ದ ಸಮರ್ಪಣಾಭಾವವನ್ನು ಸ್ಮರಿಸಿದ್ದಾರೆ.
ಈಶಾನ್ಯ ಭಾರತದಲ್ಲಿ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಾಲಕೃಷ್ಣನ್ ಅವರ ಕೊಡುಗೆಗಳು ಪೀಳಿಗೆಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತವೆ ಎಂದು ನವೀನ್ ಹೇಳಿದ್ದಾರೆ. ವಿವೇಕಾನಂದ ಕೇಂದ್ರದ ಪರಿವಾರಕ್ಕೆ ಮತ್ತು ಅವರ ಜೀವನ ಹಾಗೂ ಕಾರ್ಯಗಳಿಂದ ಸ್ಫೂರ್ತಿ ಪಡೆದ ಎಲ್ಲರಿಗೂ ಅವರು ಸಂತಾಪ ಸೂಚಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
