ನವದೆಹಲಿ: ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರವಾದ ಕಿರ್ಗಿಸ್ತಾನ್ ನಡುವಿನ ಆಳವಾದ ನಾಗರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಜಪರೋವ್ ಅವರಿಗೆ ವಿಶೇಷವಾದ ಸಾಂಸ್ಕೃತಿಕ ಉಡುಗೊರೆಯೊಂದನ್ನು ನೀಡಿದ್ದಾರೆ. ವಿವೇಕ ದೇಬ್ರಾಯ್ ಅವರು 10 ಸಂಪುಟಗಳಲ್ಲಿ ಇಂಗ್ಲಿಷ್ಗೆ ಭಾಷಾಂತರಿಸಿರುವ ಪ್ರಸಿದ್ಧ ‘ಮಹಾಭಾರತ’ ಗ್ರಂಥದ ಪ್ರತಿಯನ್ನು ಪ್ರಧಾನಿ ಮೋದಿ ಅವರಿಗೆ ಅನಾವರಣಗೊಳಿಸಿ ನೀಡಿದ್ದಾರೆ.
ವಿವೇಕ ದೇಬ್ರಾಯ್ ಅವರ ಈ ಬೃಹತ್ ಅನುವಾದವು ಮಹಾಭಾರತದ ಸಂಪೂರ್ಣ ಮತ್ತು ಮೂಲರೂಪದ ಕಥಾನಕವನ್ನು ಒಳಗೊಂಡಿದೆ. ಇದು ಮೂಲ ಕಥೆಯಷ್ಟೇ ಅಲ್ಲದೆ, ಮಹಾಕಾವ್ಯದ ತತ್ವಶಾಸ್ತ್ರೀಯ ಚಿಂತನೆಗಳು, ವಂಶಾವಳಿಗಳು, ಸಂವಾದಗಳು ಹಾಗೂ ಹಲವಾರು ಉಪಕಥೆಗಳನ್ನು ಒಟ್ಟಾಗಿ ಸಾರುತ್ತದೆ. ವೇದವ್ಯಾಸ ಮಹರ್ಷಿಗಳಿಂದ ರಚಿತವಾಗಿದೆ ಎನ್ನಲಾದ ಈ ಮಹಾಕಾವ್ಯವು ಭಾರತದ ಅತಿ ಪ್ರಮುಖ ಸಾಹಿತ್ಯಿಕ ಮತ್ತು ತತ್ತ್ವಶಾಸ್ತ್ರೀಯ ಕೃತಿಗಳಲ್ಲಿ ಒಂದಾಗಿದೆ.
ಈ ಕೃತಿಯು ಕೇವಲ ಪಾಂಡವರು ಮತ್ತು ಕೌರವರ ನಡುವಿನ ಯುದ್ಧದ ಕಥೆಗೆ ಸೀಮಿತವಾಗಿಲ್ಲ. ತನ್ನ ಸಂಕೀರ್ಣ ಪಾತ್ರಗಳು ಮತ್ತು ಕಥಾಹಂದರದ ಮೂಲಕ ಧರ್ಮ, ಕರ್ತವ್ಯ, ನ್ಯಾಯ, ನೈತಿಕತೆ, ನಿಷ್ಠೆ ಹಾಗೂ ರಾಜಧರ್ಮದಂತಹ ಕಾಲಾತೀತ ಪ್ರಶ್ನೆಗಳನ್ನು ವಿಶ್ಲೇಷಿಸುತ್ತದೆ. ಶತಮಾನಗಳಿಂದ ಭಾರತೀಯ ನಾಗರಿಕತೆಯ ಮೂಲಬೇರಾಗಿರುವ ಮಹಾಭಾರತವು, ಇಲ್ಲಿನ ಸಾಹಿತ್ಯ, ರಂಗಭೂಮಿ, ನೃತ್ಯ, ಸಂಗೀತ, ವರ್ಣಚಿತ್ರ ಹಾಗೂ ಶಿಲ್ಪಕಲೆ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೇಲೆ ಅಪಾರ ಪ್ರಭಾವ ಬೀರಿದೆ.
ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಹಿನ್ನೆಲೆಯಲ್ಲಿ ಈ ಮಹಾಭಾರತ ಗ್ರಂಥವನ್ನು ಉಡುಗೊರೆಯಾಗಿ ಆಯ್ಕೆ ಮಾಡಿರುವುದು ಆಳವಾದ ಸಾಂಸ್ಕೃತಿಕ ಅರ್ಥವನ್ನು ಹೊಂದಿದೆ. ಏಕೆಂದರೆ ಕಿರ್ಗಿಸ್ತಾನ್ ದೇಶವು ಕೂಡ ತನ್ನದೇ ಆದ ಮೌಖಿಕ ಮಹಾಕಾವ್ಯ ಪರಂಪರೆಯನ್ನು ಹೊಂದಿದೆ. ಅಲ್ಲಿನ ‘ಮಾನಸ್ ಮಹಾಕಾವ್ಯ’ (Epic of Manas) ಆ ದೇಶದ ಸಾಂಸ್ಕೃತಿಕ ಗುರುತಿನ ಪ್ರಮುಖ ಸಂಕೇತವಾಗಿದೆ.
ಮಹಾಭಾರತ ಮತ್ತು ‘ಮಾನಸ್’ ಮಹಾಕಾವ್ಯಗಳು ಭಿನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದರೂ, ಪರಂಪರೆ, ಮೌಲ್ಯಗಳು, ನಾಯಕರ ಕಥೆಗಳು ಮತ್ತು ಸಾಮುದಾಯಿಕ ಸ್ಮೃತಿಗಳನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ರೀತಿಯಲ್ಲಿ ಅದ್ಭುತ ಸಾಮ್ಯತೆಯನ್ನು ಹೊಂದಿವೆ. ಈ ಎರಡೂ ಮಹಾಕಾವ್ಯಗಳು ಕಾಲವನ್ನು ಮೀರಿ ನಿಂತು, ನಾಗರಿಕತೆಯ ನೆನಪುಗಳು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಬೆಸೆಯುವ ಸೇತುವೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿವೆ.
ಭಾರತೀಯರ ಸಾಂಸ್ಕೃತಿಕ ಭಾವನೆಯಲ್ಲಿ ಮಹಾಭಾರತವು ಎಂತಹ ಆಳವಾದ ಸ್ಥಾನ ಪಡೆದಿದೆಯೋ, ಅದೇ ರೀತಿ ಕಿರ್ಗಿಸ್ತಾನ್ನ ಸಾಂಸ್ಕೃತಿಕ ಚೇತನದಲ್ಲಿ ‘ಮಾನಸ್’ ಮಹಾಕಾವ್ಯವು ಕೇಂದ್ರಸ್ಥಾನದಲ್ಲಿದೆ. ಸಮಾಜ, ನೈತಿಕತೆ, ಶೌರ್ಯ ಮತ್ತು ಕರ್ತವ್ಯ ಪ್ರಜ್ಞೆಯ ಕುರಿತು ಜನಮಾನಸದ ತಿಳುವಳಿಕೆಯನ್ನು ಜೀವಂತವಾಗಿಡಲು ಮೌಖಿಕ ಹಾಗೂ ಸಾಹಿತ್ಯಿಕ ಪರಂಪರೆಗಳು ಎಷ್ಟು ಮುಖ್ಯ ಎಂಬುದನ್ನು ಈ ಎರಡೂ ಮಹಾಕಾವ್ಯಗಳು ನೆನಪಿಸುತ್ತವೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
