ಆಧುನಿಕತೆಯ ಆಡಂಬರವಿಲ್ಲ, ಕೈಯಲ್ಲಿ ಡಿಜಿಟಲ್ ಲೋಕವನ್ನು ತೆರೆದಿಡುವ ಮೊಬೈಲ್ ನೆಟ್ವರ್ಕ್ ಇಲ್ಲ, ನೆಮ್ಮದಿಯಾಗಿ ಓಡಾಡಲು ಸರಿಯಾದ ರಸ್ತೆಗಳೂ ಇಲ್ಲ. ಆದರೆ, ಎದೆಯಾಳದಲ್ಲಿ ಅಖಂಡ ದೇಶಪ್ರೇಮವಿದೆ!
ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದುರ್ಗಮ ಮಲೆನಾಡಿನ ಕಾನನದಲ್ಲಿರುವ ‘ಬಾಂಜಾರುಮಲೆ’ ಎಂಬ ಪುಟ್ಟ ಹಳ್ಳಿಯ ಹೆಮ್ಮೆಯ ಕಥೆ.ಮತದಾನದಲ್ಲಿ ಶೇಕಡಾ 100 ರಷ್ಟು ದಾಖಲೆ ಬರೆಯುವ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಈ ಬಾಂಜಾರುಮಲೆ, ಈ ಬಾರಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನೂ ಅಷ್ಟೇ ಭಕ್ತಿ ಮತ್ತು ಸಡಗರದಿಂದ ಆಚರಿಸಿ ಸೈ ಎನಿಸಿಕೊಂಡಿದೆ.
ಪ್ರಕೃತಿ ಮಡಿಲಲ್ಲಿರುವ ಈ ಗ್ರಾಮದ 49 ಮನೆಗಳ ಪುಟ್ಟ ಮಕ್ಕಳಿಂದ ಹಿಡಿದು, ಮಹಿಳೆಯರು, ಪುರುಷರು ಹಾಗೂ ವೃದ್ಧರೆಲ್ಲರೂ ಒಟ್ಟಾಗಿ ಸೇರಿ ದೇಶದ ಸ್ವಾತಂತ್ರ್ಯವನ್ನು ಸಂಭ್ರಮಿಸಿದ ಆ ಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಮುದ ನೀಡುವಂತಿತ್ತು.
ತ್ರಿವರ್ಣ ಧ್ವಜದ ನೆರಳಲ್ಲೇ ಕಳೆದ ಅಪೂರ್ವ ದಿನ:
ಇಲ್ಲಿನ ಸ್ವಾತಂತ್ರ್ಯ ದಿನಾಚರಣೆಗೆ ಒಂದು ವಿಶಿಷ್ಟ ಮತ್ತು ಶಿಸ್ತಿನ ಸಂಪ್ರದಾಯವಿದೆ. ಆಗಸ್ಟ್ 15ರಂದು ಬೆಳಿಗ್ಗೆಯೇ ಇಡೀ ಹಳ್ಳಿಯ ಜನರೆಲ್ಲರೂ ಒಂದೆಡೆ ಒಟ್ಟು ಸೇರಿ ಅತ್ಯಂತ ಶ್ರದ್ಧೆಯಿಂದ ಧ್ವಜಾರೋಹಣ ಮಾಡುತ್ತಾರೆ. ವಿಶೇಷವೆಂದರೆ, ಬೆಳಿಗ್ಗೆ ಧ್ವಜ ಹಾರಿಸಿದ ನಂತರ ಸಂಜೆ ಸೂರ್ಯಾಸ್ತದ ವೇಳೆ ನಿಯಮಾನುಸಾರ ಧ್ವಜವನ್ನು ಇಳಿಸುವವರೆಗೂ ಯಾರೊಬ್ಬರೂ ತಮ್ಮ ಮನೆಗೆ ಮರಳುವುದಿಲ್ಲ! ಅಲ್ಲಿಯವರೆಗೂ ಇಡೀ ದಿನ ರಾಷ್ಟ್ರಧ್ವಜದ ಅಡಿಯಲ್ಲೇ ಹಳ್ಳಿಯ ಮಕ್ಕಳು ಮತ್ತು ಹಿರಿಯರಿಗಾಗಿ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತದೆ. ಸಂಜೆ ಸತ್ಕಾರಪೂರ್ವಕವಾಗಿ ಧ್ವಜಾವತರಣ ನೆರವೇರಿದ ಮೇಲೆಯೇ ಎಲ್ಲರೂ ಒಟ್ಟಾಗಿ ತಮ್ಮ ಮನೆಗಳ ಕಡೆಗೆ ಹೆಜ್ಜೆ ಹಾಕುತ್ತಾರೆ. ಇಂತಹ ಅಪರೂಪದ ಶಿಸ್ತು ಮತ್ತು ದೇಶಭಕ್ತಿ ಇಂದಿನ ದಿನಗಳಲ್ಲಿ ನಿಜಕ್ಕೂ ವಿರಳಾತಿವಿರಳ.
ಗ್ರಾಮಸ್ಥರ ಮನೆಮನ ಬೆಳಗಿದ ‘ಘುಮಂತು ಕಾರ್ಯ’ ತಂಡ:
ಸ್ವಾತಂತ್ರ್ಯದ ಈ ಅಪೂರ್ವ ಕ್ಷಣಕ್ಕೆ ಮತ್ತಷ್ಟು ರಂಗು ತುಂಬಿದ್ದು ‘ಘುಮಂತು ಕಾರ್ಯ’ ಗತಿವಿಧಿಯ ಧನ್ಯತಾ ಭಾವದ ಸೇವೆ. ಈ ದುರ್ಗಮ ಹಾದಿಯನ್ನು ಸವೆಸಿ ಗ್ರಾಮಕ್ಕೆ ತಲುಪಿದ ಘುಮಂತು ಕಾರ್ಯದ ಕಾರ್ಯಕರ್ತರು, ಬಾಂಜಾರುಮಲೆಯ ಎಲ್ಲಾ 49 ಮನೆಗಳಿಗೂ ಸ್ವಾತಂತ್ರ್ಯದ ಸಂಕೇತವಾದ ‘ತಿರಂಗ ಧ್ವಜ’ ಹಾಗೂ ಸಿಹಿತಿಂಡಿಗಳನ್ನು ವಿತರಿಸಿದರು.
ಕೇವಲ ದ್ವಜ ಹಸ್ತಾಂತರಿಸುವುದಷ್ಟೇ ಅಲ್ಲದೆ, ಪ್ರತಿಯೊಂದು ಕುಟುಂಬಕ್ಕೂ ಪವಿತ್ರ ‘ಭಗವದ್ಗೀತೆ’ ಗ್ರಂಥ ಹಾಗೂ ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದ್ದು ಈ ಆಚರಣೆಯ ಔನ್ನತ್ಯವನ್ನು ಮತ್ತಷ್ಟು ಹೆಚ್ಚಿಸಿತು.
ಈ ಇಡೀ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ಥಳೀಯರಾದ ನವೀನ್ ಬಾಂಜಾರುಮಲೆ, ಹಿರಿಯರಾದ ಗಣೇಶ ಬಾಂಜಾರುಮಲೆ, ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿ ಹಾಗೂ ನಾಗೇಶ್ ಬಾಂಜಾರುಮಲೆ ಅವರ ಅಪಾರ ಶ್ರಮ, ಕಾಳಜಿ ಮತ್ತು ಸಕ್ರಿಯ ಸಹಕಾರವಿತ್ತು. ಇವರ ನೆರವು ಇಡೀ ಸಂಭ್ರಮವನ್ನು ಮತ್ತಷ್ಟು ವ್ಯವಸ್ಥಿತಗೊಳಿಸಿತು.
ಗಣ್ಯರ ಉಪಸ್ಥಿತಿ, ಹಬ್ಬದ ವಾತಾವರಣ:
ಕಾಡಿನ ನಡುವಿನ ಈ ದೇಶಭಕ್ತಿಯ ಹಬ್ಬಕ್ಕೆ ಸಾಕ್ಷಿಯಾಗಲು ಮಂಗಳೂರು ವಿಭಾಗ ಘುಮಂತು ಕಾರ್ಯ ಸಂಯೋಜಕರಾದ ಸುದರ್ಶನ್ ಕನ್ಯಾಡಿ, ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಉಪಾಧ್ಯಕ್ಷರಾದ ದಿನೇಶ್ ಚಾರ್ಮಾಡಿ, ಧಾರ್ಮಿಕ ಮುಖಂಡರಾದ ಡಿ. ಕಿರಣ್ ಚಂದ್ರ ಪುಷ್ಪಗಿರಿ, ಶಿವಪ್ರಸಾದ್ ಸುರ್ಯ, ರಮೇಶ್ ಸೂರ್ಯ, ಬಾಲಚಂದ್ರ ನೀರಚಿಲುಮೆ, ಬಜರಂಗದಳದ ಕಾರ್ಯಕರ್ತ ಗೌರವ್ ಶೆಟ್ಟಿ ಉಜಿರೆ, ಬಿಜೆಪಿಯ ಪ್ರದೀಪ್ ನಾವೂರು, ಸುಧಾಕರ್ ಶೆಟ್ಟಿಗಾರ್, ಚಂದನ್ ಉಜಿರೆ, ಪ್ರಮೋದ್ ಡಿಡುಪೆ ಹಾಗೂ ಕರುಣಾಕರ್ ಮಾಚಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಗ್ರಾಮಸ್ಥರೊಂದಿಗೆ ಬೆರೆತು, ಇಡೀ ದಿನ ಅವರೊಂದಿಗೆ ಕಳೆದು ಅವರ ದೇಶಪ್ರೇಮವನ್ನು ಗೌರವಿಸಿದ ಗಣ್ಯರ ನಡೆ ಇಡೀ ಕಾರ್ಯಕ್ರಮಕ್ಕೆ ಹೊಸ ಕಳೆಯನ್ನು ತಂದಿತ್ತು.
ಸೌಲಭ್ಯಗಳ ಕೊರತೆಯನ್ನೇ ನೆಪವಾಗಿಸಿಕೊಂಡು ವ್ಯವಸ್ಥೆಯನ್ನು ದೂಷಿಸುವ ಇಂದಿನ ದಿನಗಳಲ್ಲಿ, ತಾಯ್ನಾಡಿನ ಮೇಲಿನ ಭಕ್ತಿಯ ವಿಷಯದಲ್ಲಿ ಬಾಂಜಾರುಮಲೆಯ ಜನರು ತೋರುತ್ತಿರುವ ನಿಷ್ಠೆ ಅಪ್ರತಿಮ.
ಮತದಾನದಲ್ಲೂ ನೂರು, ಸ್ವಾತಂತ್ರ್ಯ ಸಂಭ್ರಮದಲ್ಲೂ ನೂರು ಎನ್ನುವಂತೆ ಬದುಕುತ್ತಿರುವ ಬಾಂಜಾರುಮಲೆಯ ಈ 49 ಕುಟುಂಬಗಳ ಒಗ್ಗಟ್ಟು ಮತ್ತು ಅವರಿಗೆ ಗೌರವ ಸಲ್ಲಿಸಿದ ಘುಮಂತು ಕಾರ್ಯದ ಇಡೀ ತಂಡದ ಸೇವೆ ಸಮಾಜಕ್ಕೆ ನಿಜಕ್ಕೂ ದಾರಿದೀಪ.
ಶಿವಪ್ರಸಾದ್ ಸುರ್ಯ, ಉಜಿರೆ.
8310315152
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
