ವರದಿ: ಕುನಾಲ್ ಚಟರ್ಜಿ
ಕೋಲ್ಕತ: ತೃಣಮೂಲ ಕಾಂಗ್ರೆಸ್ನ 15 ವರ್ಷಗಳ ಆಡಳಿತದ ನಂತರ, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರವು ತನ್ನ ಮೊದಲ 100 ದಿನಗಳನ್ನು ಪೂರೈಸಿದ್ದು, ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಆರೋಗ್ಯ, ಉದ್ಯೋಗ, ವಸತಿ, ಸಮಾಜ ಕಲ್ಯಾಣ ಮತ್ತು ಆಡಳಿತಾತ್ಮಕ ಸುಧಾರಣೆಗಳ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಆರಂಭಿಕ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ
ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ‘ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ’ಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಿರುವುದು ಒಂದಾಗಿದೆ. ಈ ಯೋಜನೆಯು ಅರ್ಹ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಸರ್ಕಾರದ ಮಾಹಿತಿಯಂತೆ, ಆಗಸ್ಟ್ 16 ರ ವೇಳೆಗೆ 1.23 ಕೋಟಿ ಜನರು ಆಯುಷ್ಮಾನ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ 1,240 ಖಾಸಗಿ ಆಸ್ಪತ್ರೆಗಳು ಮತ್ತು 600 ಸರ್ಕಾರಿ ಆಸ್ಪತ್ರೆಗಳನ್ನು ಈ ಯೋಜನೆಗೆ ಒಳಪಡಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಈ ವಿಮೆ ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಯೋಜನೆಗಳು
ಮಹಿಳೆಯರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರವು ತನ್ನ ಆರಂಭಿಕ ದಿನಗಳಲ್ಲೇ ಹೆಚ್ಚಿನ ಆದ್ಯತೆ ನೀಡಿದೆ. ‘ಅನ್ನಪೂರ್ಣ ಭಂಡಾರ’ ಯೋಜನೆಯಡಿ, ಬಡ ನಗರ ಮತ್ತು ಗ್ರಾಮೀಣ ಕುಟುಂಬಗಳ ಮಹಿಳೆಯರಿಗೆ ತಿಂಗಳಿಗೆ 3,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ಸುಮಾರು 28 ಲಕ್ಷ ಮಹಿಳೆಯರು ಈ ನೆರವು ಪಡೆದಿದ್ದು, ಆಗಸ್ಟ್ ವೇಳೆಗೆ ಈ ಸಂಖ್ಯೆ ಸುಮಾರು 1.45 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಉದ್ಯೋಗ ಸೃಷ್ಟಿ ಮತ್ತು ನೇಮಕಾತಿ
ಉದ್ಯೋಗ ಸೃಷ್ಟಿ ಎಂಬುದು ಈ 100 ದಿನಗಳ ಆಡಳಿತದ ಮತ್ತೊಂದು ಪ್ರಮುಖ ವಿಷಯವಾಗಿದೆ. ಮುಖ್ಯಮಂತ್ರಿ ಅಧಿಕಾರಿ ಅವರು 2027 ರ ವೇಳೆಗೆ ಶಿಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು ಒಂದು ಲಕ್ಷ ನೇಮಕಾತಿಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಪಾರದರ್ಶಕ ಪರೀಕ್ಷೆಗಳ ಮೂಲಕವೇ ನೇಮಕಾತಿ ನಡೆಸಲಾಗುವುದು ಎಂದು ಅವರು ಪುನರುಚ್ಛರಿಸಿದ್ದಾರೆ. ಸರ್ಕಾರದ ಮೊದಲ ರಾಜ್ಯ ಬಜೆಟ್ನಲ್ಲೂ ಉದ್ಯೋಗ, ಕೈಗಾರಿಕಾ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಬಜೆಟ್ ಹಂಚಿಕೆ ಮತ್ತು ಹೂಡಿಕೆ
2026-27 ರ 4.38 ಲಕ್ಷ ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಮೂಲಸೌಕರ್ಯ, ಕಲ್ಯಾಣ ಮತ್ತು ಕೈಗಾರಿಕೀಕರಣಕ್ಕೆ ಹೆಚ್ಚಿನ ಅನುದಾನವನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ‘ಅನ್ನಪೂರ್ಣ ಆಹಾರ ಭದ್ರತಾ ಕಾರ್ಯಕ್ರಮ’ಕ್ಕೆ 36,000 ಕೋಟಿ ರೂಪಾಯಿ ಮತ್ತು ಹಿರಿಯ ನಾಗರಿಕರು, ವಿಧವೆಯರು ಹಾಗೂ ವಿಕಲಚೇತನರಿಗೆ ನೀಡುವ ಆರ್ಥಿಕ ನೆರವನ್ನು ಹೆಚ್ಚಿಸುವ ಕ್ರಮಗಳು ಸೇರಿವೆ. ಕ್ರೀಡಾ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಪ್ರಮುಖ ಹೂಡಿಕೆಗಳನ್ನು ಘೋಷಿಸಿದೆ.
ವಸತಿ ಯೋಜನೆಗಳು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ
ವಸತಿ ಮತ್ತು ಗ್ರಾಮೀಣ ಅಭಿವೃದ್ಧಿಯೂ ಸರ್ಕಾರದ 100 ದಿನಗಳ ಗಮನಾರ್ಹ ವಿಷಯಗಳಲ್ಲಿ ಒಂದಾಗಿದೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಸುಮಾರು 30 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಫಲಾನುಭವಿಗಳಿಗೆ ತಲುಪುವ ಸೌಲಭ್ಯಗಳಲ್ಲಿ ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಆಗಸ್ಟ್ 17 ರಂದು ಪುರುಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮನೆ ನಿರ್ಮಾಣಕ್ಕಾಗಿ ಯಾರಾದರೂ ಒಂದು ರೂಪಾಯಿ ಕೇಳಿದರೂ ನನಗೆ ತಿಳಿಸಿ,” ಎಂದರು. ಅಲ್ಲದೆ “ಜಂಗಲ್ ಮಹಲ್ನಲ್ಲಿ ಛಾವಣಿಯಿಲ್ಲದ ಯಾವುದೇ ಮನೆ ಇರುವುದಿಲ್ಲ” ಎಂದು ತಿಳಿಸಿದರು.
ಕೇಂದ್ರ-ರಾಜ್ಯ ಬಾಂಧವ್ಯ ಸುಧಾರಣೆ
ರಾಜ್ಯಡಳಿತವು ಕೇಂದ್ರ ಸರ್ಕಾರದೊಂದಿಗೆ ನಿಕಟ ಸಹಕಾರಕ್ಕೆ ಮುಂದಾಗಿದೆ. ಗ್ರಾಮೀಣ ಉದ್ಯೋಗ ಯೋಜನೆಗಳ ಕೆಲಸವನ್ನು ಪುನರಾರಂಭಿಸಿದ್ದು, ನೀತಿ ಆಯೋಗದ ಸಭೆಗಳಲ್ಲಿ ಭಾಗವಹಿಸಿದೆ. ಇದು ಹಿಂದೆ ಇದ್ದ ಕೇಂದ್ರ-ರಾಜ್ಯ ಭಿನ್ನಾಭಿಪ್ರಾಯಗಳ ಯುಗ ಅಂತ್ಯಗೊಂಡಿರುವುದನ್ನು ಸೂಚಿಸುತ್ತದೆ. ಬೆಳೆ ವಿಮೆ ಮತ್ತು ನೈಸರ್ಗಿಕ ಕೃಷಿ ಸೇರಿದಂತೆ ಕೇಂದ್ರದ ಕೃಷಿ ಕಾರ್ಯಕ್ರಮಗಳತ್ತ ಬಂಗಾಳದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ.
ಒಂದು ವರ್ಷದ ನಂತರದ ಪರೀಕ್ಷೆ
ಆದಾಗ್ಯೂ, ಅಧಿಕಾರಿ ಅವರಿಗೆ ಈ 100 ದಿನಗಳ ಮೈಲಿಗಲ್ಲು ಅಂತಿಮ ಮೌಲ್ಯಮಾಪನವಲ್ಲ. ಪುರುಲಿಯಾದಲ್ಲಿ ಮಾತನಾಡಿದ ಅವರು, ಒಂದು ವರ್ಷ ಪೂರ್ಣಗೊಂಡ ನಂತರ ಜನರ ಮುಂದೆ ಹೋಗುವುದಾಗಿ ಭರವಸೆ ನೀಡಿದ್ದಾರೆ. “ಮೇ 9, 2027 ರಂದು ನಾನು ಅಧಿಕಾರದಲ್ಲಿ ಒಂದು ವರ್ಷವನ್ನು ಪೂರ್ಣಗೊಳಿಸುತ್ತೇನೆ. ಅಂದು ನಾನು ಪರೀಕ್ಷೆಗೆ ಕುಳಿತುಕೊಳ್ಳುತ್ತೇನೆ, ನೀವೇ ನನಗೆ ಅಂಕಗಳನ್ನು ನೀಡಬೇಕು,” ಎಂದು ಹೇಳಿದ ಅವರು, ಕನಿಷ್ಠ 10 ಕ್ಕೆ 9 ಅಂಕಗಳನ್ನು ಪಡೆಯದಿದ್ದರೆ ಸೋಲನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದರು.
ಸಾಧನಾ ವರದಿ ಮತ್ತು ಸಾರ್ವಜನಿಕ ಸಂಪರ್ಕ
ಬಿಜೆಪಿಯು ‘ಪಶ್ಚಿಮ ಬಂಗಾಳ ಸರ್ಕಾರದ 100 ದಿನಗಳ ಸಂಕಲ್ಪ ಮತ್ತು ಸಾಧನೆಗಳು’ ಎಂಬ ಶೀರ್ಷಿಕೆಯ 41 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ. ಇದು ಕಲ್ಯಾಣ ಯೋಜನೆಗಳ ವಿತರಣೆ, ಹೂಡಿಕೆ, ಆಡಳಿತಾತ್ಮಕ ಸುಧಾರಣೆಗಳು, ಮಹಿಳಾ ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣವನ್ನು ಒಳಗೊಂಡಿದೆ. ಈ ವರದಿಯನ್ನು ಪ್ರಚಾರ ಅಭಿಯಾನದ ಮೂಲಕ ಮತದಾರರಿಗೆ ತಲುಪಿಸಲು ಪಕ್ಷ ಯೋಜಿಸಿದೆ.
ಮುಂದಿರುವ ಸವಾಲುಗಳು
ಹೀಗಾಗಿ, ಮೊದಲ 100 ದಿನಗಳು ಬಿಜೆಪಿ ಸರ್ಕಾರಕ್ಕೆ ತನ್ನ ಆದ್ಯತೆಗಳನ್ನು ಸ್ಥಾಪಿಸಲು ಮತ್ತು ವಿಭಿನ್ನ ಆಡಳಿತ ಶೈಲಿಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿವೆ. ಆದರೂ, ವಿಶೇಷವಾಗಿ ಉದ್ಯೋಗ, ವಸತಿ ಮತ್ತು ಕೈಗಾರಿಕಾ ಹೂಡಿಕೆಗೆ ಸಂಬಂಧಿಸಿದಂತೆ ನೀಡಲಾದ ಪ್ರಮುಖ ಭರವಸೆಗಳ ಸತತ ಜಾರಿ ಅಗತ್ಯವಿದೆ. ಅಧಿಕಾರಿ ಅವರು ಸ್ವತಃ ಒಪ್ಪಿಕೊಂಡಂತೆ, ಸರ್ಕಾರ ತನ್ನ ಮೊದಲ ವರ್ಷವನ್ನು ಪೂರ್ಣಗೊಳಿಸಿದ ನಂತರ ಮತದಾರರು ಅದರ ಕೆಲಸವನ್ನು ಮೌಲ್ಯಮಾಪನ ಮಾಡಿದಾಗ ನಿಜವಾದ ಪರೀಕ್ಷೆ ಎದುರಾಗಲಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
