ಗುಡಿಲೋವಾ, ಆಂಧ್ರಪ್ರದೇಶ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ದಿಂದ ಪ್ರೇರಿತವಾದ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಸಂಘಟನೆಗಳ ಪ್ರಮುಖ ಪದಾಧಿಕಾರಿಗಳನ್ನು ಒಟ್ಟುಗೂಡಿಸುವ ‘ಅಖಿಲ ಭಾರತೀಯ ಸಮನ್ವಯ ಬೈಠಕ್’ ಆಗಸ್ಟ್ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಗುಡಿಲೋವಾದ ವಿಜ್ಞಾನ ವಿಹಾರದಲ್ಲಿ ನಡೆಯುತ್ತಿದೆ.
ಮಂಗಳವಾರ ವಿಜ್ಞಾನ ವಿಹಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್.ಎಸ್.ಎಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಸುನಿಲ್ ಅಂಬೇಕರ್ ಅವರು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್ 21 ರ ಸಂಜೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಪರಮ ಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಮತ್ತು ಮಾನ್ಯ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಜಿ ಅವರು ಈ ಬೈಠಕ್ನಲ್ಲಿ ಪ್ರಮುಖವಾಗಿ ಉಪಸ್ಥಿತರಿರುತ್ತಾರೆ. ಆರ್.ಎಸ್.ಎಸ್ನ ಸಹ ಸರಕಾರ್ಯವಾಹರು, ವಿವಿಧ ಕಾರ್ಯಾಂಗ ವಿಭಾಗಗಳ ಮುಖ್ಯಸ್ಥರು ಮತ್ತು ಇತರ ಹಿರಿಯ ಪದಾಧಿಕಾರಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ.
ಸಮನ್ವಯ ಬೈಠಕ್ ಒಂದು ಕಾರ್ಯಾಂಗ ಸಭೆಯಾಗಲೀ ಅಥವಾ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾಗಲೀ ಅಲ್ಲ. ವಿವಿಧ ಸಂಸ್ಥೆಗಳಿಗೆ ತಮ್ಮ ಚಟುವಟಿಕೆಗಳು, ಕಳೆದ ವರ್ಷದ ಅನುಭವಗಳು, ಸಾಧನೆಗಳು, ಸವಾಲುಗಳು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
ಸಂಸ್ಥೆಗಳು ವರ್ಷದಲ್ಲಿ ಕೈಗೊಂಡ ವಿಶೇಷ ಉಪಕ್ರಮಗಳು, ಅವುಗಳ ಫಲಿತಾಂಶಗಳು ಮತ್ತು ಸಾರ್ವಜನಿಕ ಜೀವನದ ಮೇಲೆ ಅವು ಬೀರಿದ ಪರಿಣಾಮಗಳ ವಿವರಗಳನ್ನು ಸಹ ಹಂಚಿಕೊಳ್ಳಲಿವೆ. ಸಮಾಜದ ಕಲ್ಯಾಣಕ್ಕಾಗಿ ಸಂಸ್ಥೆಗಳ ನಡುವಿನ ಪರಸ್ಪರ ಸಮನ್ವಯವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಉಪಕ್ರಮಗಳನ್ನು ಒಟ್ಟಾಗಿ ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬುದರ ಕುರಿತು ಚರ್ಚೆಗಳು ನಡೆಯಲಿವೆ.
ಭಾರತೀಯ ಮಜ್ದೂರ್ ಸಂಘ, ವಿಶ್ವ ಹಿಂದೂ ಪರಿಷತ್, ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ ಮತ್ತು ರಾಷ್ಟ್ರ ಸೇವಿಕಾ ಸಮಿತಿಯಂತಹ ಸಂಘ-ಪ್ರೇರಿತ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಘಟನಾ ಕಾರ್ಯದರ್ಶಿಗಳು ಬೈಠಕ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇಶದಾದ್ಯಂತ ವಿವಿಧ ಸಂಸ್ಥೆಗಳಿಂದ 49 ಮಹಿಳೆಯರು ಸೇರಿದಂತೆ ಒಟ್ಟು 253 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹಿರಿಯ ಆರ್ಎಸ್ಎಸ್ ಪದಾಧಿಕಾರಿಗಳನ್ನು ಒಳಗೊಂಡಂತೆ ಒಟ್ಟಾರೆ 327 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ಸಂಸ್ಥೆಗಳು ಸಾರ್ವಜನಿಕ ಕಲ್ಯಾಣ, ಸಾಮಾಜಿಕ ಜಾಗೃತಿ ಮೂಡಿಸುವುದು, ವ್ಯವಸ್ಥಿತ ಸುಧಾರಣೆಗಳನ್ನು ತರುವುದು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ.
ಚರ್ಚೆಯ ಪ್ರಮುಖ ವಿಷಯಗಳು:
ಮೂರು ದಿನಗಳ ಬೈಠಕ್ನಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿ, ಸಾಮಾಜಿಕ ಬೆಳವಣಿಗೆಗಳು ಮತ್ತು ಹಲವಾರು ಪ್ರಮುಖ ಸಮಕಾಲೀನ ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುವುದು.
ಜನಸಂಖ್ಯಾ ಬದಲಾವಣೆಗಳು: ದೇಶದಲ್ಲಿ ನಡೆಯುತ್ತಿರುವ ಜನಸಂಖ್ಯಾ ಬದಲಾವಣೆಗಳು, ಅವುಗಳಿಂದ ಉದ್ಭವಿಸುವ ಆತಂಕಗಳು ಮತ್ತು ಆ ಕಾಳಜಿಗಳನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಸೂಕ್ತ ಕ್ರಮಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಯುವಜನತೆ ಮತ್ತು ಮಾದಕವ್ಯಸನ: ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಸಮಸ್ಯೆ, ಅದರ ದುಷ್ಪರಿಣಾಮ, ವ್ಯಸನ ಮುಕ್ತಗೊಳಿಸುವ ಕ್ರಮಗಳು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಸಂಘಟನೆಗಳು ಕೈಗೊಳ್ಳಬಹುದಾದ ಸಮನ್ವಯದ ಉಪಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು.
ಪಂಚ ಪರಿವರ್ತನ್: ಆರ್.ಎಸ್.ಎಸ್ನ ಶತಮಾನೋತ್ಸವ ವರ್ಷದಲ್ಲಿ ಒತ್ತು ನೀಡಲಾದ ‘ಪಂಚ ಪರಿವರ್ತನ್’ (ಐದು ಬದಲಾವಣೆಗಳು) ಉಪಕ್ರಮಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ. ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ್ (ಕುಟುಂಬ ಜಾಗೃತಿ), ಪರಿಸರ ಸಂರಕ್ಷಣೆ, ‘ಸ್ವ’ (ಸ್ವಂತಿಕೆ) ದ ಜಾಗೃತಿ ಮತ್ತು ಪೌರತ್ವದ ಕರ್ತವ್ಯಗಳು ಎಂಬ ಐದು ಕ್ಷೇತ್ರಗಳ ಕುರಿತು ಸಂಘವು ಕೆಲಸ ಮಾಡುತ್ತಿದ್ದು, ಇದನ್ನು ಸಮಾಜದಲ್ಲಿ ಇನ್ನಷ್ಟು ವಿಸ್ತರಿಸುವ ಬಗ್ಗೆ ಚರ್ಚಿಸಲಾಗುತ್ತದೆ.
ಅಭಿವೃದ್ಧಿಯ ಮಾದರಿ:
ಅಭಿವೃದ್ಧಿಯ ಮಾದರಿ ಹೇಗಿರಬೇಕು ಮತ್ತು ಅದರ ಪರಿಕಲ್ಪನೆ ಏನು ಎಂಬ ಮೂಲಭೂತ ಪ್ರಶ್ನೆಯ ಬಗ್ಗೆಯೂ ಸಭೆ ಚರ್ಚಿಸಲಿದೆ. ಅಭಿವೃದ್ಧಿಯನ್ನು ಕೇವಲ ಆರ್ಥಿಕ ದೃಷ್ಟಿಯಿಂದ ನೋಡದೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ ಆಯಾಮಗಳ ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಚರ್ಚಿಸಲಾಗುತ್ತದೆ.
ಯುವಕರಲ್ಲಿ ಹೆಚ್ಚುತ್ತಿರುವ ಆಸಕ್ತಿ:
ಆರ್ಎಸ್ಎಸ್ನ ಶತಮಾನೋತ್ಸವ ವರ್ಷದಲ್ಲಿ, ಸಮಾಜದಾದ್ಯಂತ ವಿಶೇಷವಾಗಿ ಯುವಕರಲ್ಲಿ ಆರ್ಎಸ್ಎಸ್ ಬಗ್ಗೆ ಆಸಕ್ತಿ ಗಣನೀಯವಾಗಿ ಬೆಳೆದಿದೆ. ‘Join RSS’ ಆನ್ಲೈನ್ ವೇದಿಕೆಯ ಮೂಲಕ ಜನವರಿಯಿಂದ ಜುಲೈ 2025 ರವರೆಗೆ 55,423 ಜನರು ನೋಂದಾಯಿಸಿಕೊಂಡಿದ್ದರೆ, 2026 ರಲ್ಲಿ ಇದೇ ಅವಧಿಯಲ್ಲಿ 1,23,287 ಜನರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅಂತೆಯೇ, ಜುಲೈ 2025 ರಲ್ಲಿ 9,718 ಜನರು ನೋಂದಾಯಿಸಿಕೊಂಡಿದ್ದರೆ, ಜುಲೈ 2026 ರಲ್ಲಿ 24,086 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶೇ.65ರಷ್ಟು ಮಂದಿ 30 ವರ್ಷದೊಳಗಿನವರಾಗಿದ್ದರೆ, ಶೇ.85ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಸಹ ಸಂಘಚಾಲಕ ದೂಸಿ ರಾಮಕೃಷ್ಣ ಜಿ, ಸಹ ಪ್ರಚಾರ ಪ್ರಮುಖ್ ಪ್ರದೀಪ್ ಜೋಶಿ ಜಿ ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
