ವಿಶಾಖಪಟ್ಟಣಂ (ಆಂಧ್ರಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪ್ರೇರಿತ ವಿವಿಧ ಸಂಘಟನೆಗಳ “ಅಖಿಲ ಭಾರತೀಯ ಸಮನ್ವಯ ಸಭೆ”ಯು ಆಗಸ್ಟ್ 19 ರಿಂದ 21 ರವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗುಡಿಲೋವಾದಲ್ಲಿ ನಡೆಯಲಿದೆ. (ಯುಗಾಬ್ದ 5128, ವಿಕ್ರಮ ಸಂವತ್ಸರ 2083ರ ಶ್ರಾವಣ ಶುಕ್ಲ ಸಪ್ತಮಿ, ಅಷ್ಟಮಿ ಹಾಗೂ ನವಮಿ). ಪ್ರತಿವರ್ಷ ನಡೆಯುವ ಈ ಮಹತ್ವದ ಸಮಾವೇಶದ ಕುರಿತು ಆರ್ಎಸ್ಎಸ್ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಅವರು ಸೋಮವಾರ (ಆ. 10) ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಆರ್ಎಸ್ಎಸ್ ಪ್ರೇರಿತ ಒಟ್ಟು 32 ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಘಟನೆಗಳ ಅಖಿಲ ಭಾರತ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು ಮತ್ತು ಆಯ್ದ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಮತ್ತು ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಈ ಸಂಘಟನೆಗಳು, ದೇಶ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ, ರಾಷ್ಟ್ರಹಿತದ ಜನಜಾಗೃತಿಗಾಗಿ ಹಾಗೂ ಅಗತ್ಯ ವ್ಯವಸ್ಥಿತ ಸುಧಾರಣೆಗಳಿಗಾಗಿ ಶ್ರಮಿಸುತ್ತಿವೆ.
ಪ್ರಮುಖ ಚರ್ಚಾ ವಿಷಯಗಳು:
ಮೂರು ದಿನಗಳ ಕಾಲ ನಡೆಯುವ ಈ ವೈಚಾರಿಕ ವಿನಿಮಯ ಸಭೆಯಲ್ಲಿ ಪ್ರತಿಯೊಂದು ಸಂಘಟನೆಯು ತಮ್ಮ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಲಿದ್ದು, ಪ್ರಸ್ತುತ ವಿದ್ಯಮಾನಗಳ ಕುರಿತು ತಮ್ಮ ವೀಕ್ಷಣೆ ಮತ್ತು ಸಲಹೆಗಳನ್ನು ಹಂಚಿಕೊಳ್ಳಲಿವೆ. ಸಂಘಟನೆಗಳ ನಡುವೆ ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದು, ಜನಕಲ್ಯಾಣ ಹಾಗೂ ನೀತಿ ನಿರೂಪಣೆಗಳ ಕುರಿತು ಸಂವಾದ ನಡೆಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ.
ಇದರೊಂದಿಗೆ ದೇಶದಲ್ಲಿನ ಜನಸಂಖ್ಯಾ ಅಸಮತೋಲನ, ಮಾದಕ ದ್ರವ್ಯ/ನಶೆ ಮುಕ್ತ ಸಮಾಜ ನಿರ್ಮಾಣ, ಯುವಜನರಲ್ಲಿ ಜಾಗೃತಿ, ‘ಪಂಚ ಪರಿವರ್ತನೆ’ಯ ಅನುಷ್ಠಾನ ಹಾಗೂ ಅಭಿವೃದ್ಧಿಯ ಭಾರತೀಯ ಪರಿಕಲ್ಪನೆ ಸೇರಿದಂತೆ ಪ್ರಚಲಿತ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.
ಪ್ರಮುಖರ ಉಪಸ್ಥಿತಿ:
ಸಭೆಯಲ್ಲಿ ಆರ್ಎಸ್ಎಸ್ನ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ-ಸರಕಾರ್ಯವಾಹರು ಹಾಗೂ ಅಖಿಲ ಭಾರತ ಕಾರ್ಯ ವಿಭಾಗಗಳ ಪ್ರಮುಖರು ಭಾಗವಹಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘ (BMS), ಭಾರತೀಯ ಕಿಸಾನ್ ಸಂಘ (BKS), ಭಾರತೀಯ ಜನತಾ ಪಾರ್ಟಿ (BJP), ವಿಶ್ವ ಹಿಂದೂ ಪರಿಷತ್ (VHP), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ಸಕ್ಷಮ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸೇರಿದಂತೆ ಒಟ್ಟು 32 ಸಂಘಟನೆಗಳ ರಾಷ್ಟ್ರೀಯ ಮಟ್ಟದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
