ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಮನುಕುಲದ ಕಲ್ಯಾಣಕ್ಕಾಗಿ ಬಳಕೆಯಾಗಬೇಕೆಂಬುದು ಜಾಗತಿಕ ಆಶಯ. ಆದರೆ, 2026ರ ಇಂದಿನ ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಂತ್ರಜ್ಞಾನವು ವಿನಾಶಕಾರಿ ‘ವಾರ್ ಮೆಷಿನ್’ ಆಗಿ ರೂಪಾಂತರಗೊಂಡಿರುವುದು ಸ್ಪಷ್ಟವಾಗುತ್ತದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಹಿಡಿದು ಮಧ್ಯಪ್ರಾಚ್ಯದ ಇರಾನ್ ಸಂಘರ್ಷದವರೆಗೆ ಯುದ್ಧದ ಸ್ವರೂಪ ಸಂಪೂರ್ಣ ಬದಲಾಗಿದೆ. ಇಂದು ಯುದ್ಧಗಳು ಕೇವಲ ಸೈನಿಕರ ಬಲದಿಂದ ನಡೆಯುತ್ತಿಲ್ಲ; ಬದಲಾಗಿ ಡೇಟಾ, ಸೈಬರ್ ದಾಳಿ ಮತ್ತು ಕೃತಕ ಬುದ್ಧಿಮತ್ತೆಯ (AI) ಅಲ್ಗಾರಿದಮ್ಗಳ ಮೇಲೆ ನಿಯಂತ್ರಣ ಸಾಧಿಸುತ್ತಿವೆ.
ಇಂದಿನ ರಕ್ಷಣಾ ವಲಯವು ಜಗತ್ತಿನ ಅತ್ಯಂತ ಲಾಭದಾಯಕ ‘ಸ್ಟಾರ್ಟ್ಅಪ್’ ಉದ್ಯಮವಾಗಿ ಬೆಳೆದಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ಯಂತಹ ಭೀಕರ ಸೈಬರ್ ದಾಳಿಗಳು ಇಡೀ ದೇಶದ ಇಂಟರ್ನೆಟ್ ಮತ್ತು ಮೂಲಸೌಕರ್ಯಗಳನ್ನು ಕ್ಷಣಾರ್ಧದಲ್ಲಿ ಸ್ತಬ್ಧಗೊಳಿಸುವ ತಾಕತ್ತು ಹೊಂದಿವೆ. ನೀರಿನ ಸರಬರಾಜು, ವಿದ್ಯುತ್ ಗ್ರಿಡ್ ಮತ್ತು ಆಸ್ಪತ್ರೆಗಳ ಡೇಟಾಬೇಸ್ಗಳನ್ನು ಹ್ಯಾಕ್ ಮಾಡುವ ಮೂಲಕ ಸಾಮಾನ್ಯ ನಾಗರಿಕರನ್ನು ಡಿಜಿಟಲ್ ದಿಗ್ಬಂಧನಕ್ಕೆ ತಳ್ಳಲಾಗುತ್ತಿದೆ. ಯುದ್ಧವು ಈಗ ರಣರಂಗದಿಂದ ಹೊರಬಂದು ಸಾಮಾನ್ಯ ಜನರ ಮನೆಯ ಇಂಟರ್ನೆಟ್ ರೂಟರ್ ಮತ್ತು ಮೊಬೈಲ್ ಸಿಗ್ನಲ್ಗಳನ್ನು ತಲುಪಿದೆ.
ಇದರ ಇನ್ನೊಂದು ಕರಾಳ ಮುಖವೆಂದರೆ ‘ಜಾಕ್ಪಾಟ್’ ಆರ್ಥಿಕತೆ. ಜಾಗತಿಕ ಮಾರುಕಟ್ಟೆಗಳು ಕುಸಿಯುತ್ತಿರುವಾಗಲೂ ಲಾಕ್ಹೀಡ್ ಮಾರ್ಟಿನ್ನಂತಹ ರಕ್ಷಣಾ ಕಂಪನಿಗಳ ಷೇರುಗಳು ಗಗನಕ್ಕೇರುತ್ತಿವೆ. ಸಾರ್ವಜನಿಕರ ತೆರಿಗೆ ಮತ್ತು ದೇಶಗಳು ಮಾಡುವ ಭಾರಿ ಸಾಲದ (Debt) ಹಣವು ನೇರವಾಗಿ ರಕ್ಷಣಾ ಉದ್ಯಮದ ದೈತ್ಯ ಕಂಪನಿಗಳ ಖಜಾನೆ ಸೇರುತ್ತಿದೆ. ಅರ್ಥಶಾಸ್ತ್ರದ ನಿಯಮದಂತೆ, ರಕ್ಷಣಾ ವಲಯದಲ್ಲಿ ಹೂಡುವ ಕೋಟ್ಯಂತರ ರೂಪಾಯಿ ಹಣವು ಶಿಕ್ಷಣ ಮತ್ತು ಆರೋಗ್ಯದ ಮೇಲಿನ ಹೂಡಿಕೆಯನ್ನು ಕಸಿದುಕೊಳ್ಳುತ್ತಿದೆ. ಇದು ಮುಂದಿನ ಪೀಳಿಗೆಯ ಮೇಲೆ ಅಗಾಧ ಆರ್ಥಿಕ ಹೊರೆಯನ್ನು ಹೊರಿಸುತ್ತಿದೆ.
ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನದ ಕಂಪನಿಗಳಿಗೆ ಯುದ್ಧವು ಸಂಪತ್ತು ಸೃಷ್ಟಿಸುವ ಸಾಧನವಾಗಿರಬಹುದು. ಆದರೆ, ಮನುಕುಲದ ರಕ್ತ ಮತ್ತು ವಿನಾಶದ ಮೇಲೆ ಕಟ್ಟುವ ಆರ್ಥಿಕ ಯಶಸ್ಸು ಎಂದಿಗೂ ಸುಸ್ಥಿರವಲ್ಲ. ಜಾಗತಿಕ ಶಾಂತಿ ಮತ್ತು ಸ್ಥಿರತೆ ಇಲ್ಲದ ಮಾರುಕಟ್ಟೆ ದೀರ್ಘಕಾಲ ಬಾಳಲಾರದು. ವಿನಾಶವೇ ಬಂಡವಾಳವಾಗಿರುವ ಈ ಮಾರಣಾಂತಿಕ ಸುಳಿಯಿಂದ ಜಗತ್ತು ಹೊರಬರಬೇಕಿದೆ. ಶಸ್ತ್ರಾಸ್ತ್ರಗಳಿಗಿಂತ ಮುಂಚಿತವಾಗಿ ವಿವೇಕದ ಅಲ್ಗಾರಿದಮ್ಗಳು ಜಗತ್ತನ್ನು ಮುನ್ನಡೆಸಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಕುರಿತಂತೆ ಪ್ರಾಧ್ಯಾಪಕ ಡಾ. ವಿನೋದ್ ಕೃಷ್ಣ ಈ ವಾರದ ಮುಖಪುಟ ಲೇಖನವನ್ನು ಒದಗಿಸಿದ್ದಾರೆ.
ಸಮರ್ಪಿತ ಬದುಕಿನ ಚೇತನ ‘ರುಕ್ಕಿಣಿ ಅಕ್ಕ’
ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತ ಸಹ ಕಾರ್ಯವಾಹಿಕಾ ಕೃ. ರುಕ್ಕಿಣಿ ಅಕ್ಕನವರ ನಿಧನದಿಂದ ಸಮಾಜ ಸೇವೆಯ ಧ್ರುವತಾರೆಯೊಂದು ಮರೆಯಾದಂತಾಗಿದೆ. ಬೆಂಗಳೂರಿನ ‘ಚೈತನ್ಯ’ ನಿವಾಸದಿಂದ ರಾಷ್ಟ್ರ ಚಿಂತನೆಯ ಸಂಸ್ಕಾರ ಪಡೆದು ಹೊರಟ ಅವರು, ಸಮಾಜಕ್ಕಾಗಿ ಬದುಕನ್ನು ಶ್ರೀಗಂಧದಂತೆ ಸವೆಸಿದ ಮಹಾನ್ ಚೇತನ.
1948ರಲ್ಲಿ ಕರ್ನಾಟಕದಲ್ಲಿ ಸಮಿತಿಯ ಮೊದಲ ಶಾಖೆ ಆರಂಭಿಸಿ, ರಾಜ್ಯದಲ್ಲಿ ಸಂಘಟನೆಯ ಕೆಲಸಕ್ಕೆ ಗಟ್ಟಿ ಅಡಿಪಾಯ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೇವಲ ರಾಜ್ಯಕ್ಕಷ್ಟೇ ಸೀಮಿತವಾಗದೆ ಅಸ್ಸಾಂನಂತಹ ದೂರದ ಪ್ರಾಂತ್ಯಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಹಾಗೂ ಆಫ್ರಿಕಾ, ಮಾರಿಷಸ್ನಂತಹ ದೇಶಗಳಲ್ಲಿ ಭಾರತೀಯ ಮಾತೃತ್ವದ ಹಿರಿಮೆಯನ್ನು ಸಾರಿದ ಅವರ ಜಾಗತಿಕ ದೃಷ್ಟಿಕೋನ ಅನನ್ಯವಾಗಿತ್ತು.
“ಉನ್ನತ ಧ್ಯೇಯವನ್ನು ಸ್ವೀಕರಿಸಿದಾಗ ಕ್ಷುಲ್ಲಕ ವಿಷಯಗಳು ಗೌಣವಾಗುತ್ತವೆ” ಎನ್ನುತ್ತಿದ್ದ ಅವರ ಮಾತುಗಳು ಇಂದಿನ ಸಮಾಜಕ್ಕೆ ದಿಕ್ಸೂಚಿ. ಗಣಿತ, ಅಡುಗೆ, ಶಿಕ್ಷಕ ವೃತ್ತಿ ಹೀಗೆ ಪ್ರತಿಯೊಂದರಲ್ಲೂ ಪರಿಪೂರ್ಣತೆ ಕಾಯ್ದುಕೊಂಡಿದ್ದ ಅವರು, ತಮ್ಮ ‘ಸುಕೃಪಾ’ ನಿವಾಸವನ್ನು ಸಮಿತಿಯ ಕಾರ್ಯ ಕ್ಷೇತ್ರಕ್ಕೆ ಧಾರೆ ಎರೆದು ಆದರ್ಶ ಮೆರೆದರು. ರುಕ್ಕಿಣಿ ಅಕ್ಕನವರು ದೈಹಿಕವಾಗಿ ಅಗಲಿದ್ದರೂ, ಅವರು ಬೆಳಗಿದ ದೇಶಸೇವೆಯ ದೀಪ ಎಂದಿಗೂ ಪ್ರಜ್ವಲಿಸುತ್ತಿರುತ್ತದೆ. ಆ ಧನ್ಯ ಜೀವಿ ಮಾತೃಹೃದಯಿಗೆ ಭಾವಪೂರ್ಣ ನಮನಗಳು. ರುಕ್ಮಿಣಿ ಅಕ್ಕನವರ ಬಗ್ಗೆ ಲೇಖಕಿ ಶೋಭಾನಂದ ಮತ್ತು ರಾಷ್ಟ್ರ ಸೇವಿಕಾ ಸಮಿತಿಯ ವಿಜಯನಗರ ಪ್ರಾಂತ ಸಹ ಸೇವಾ ಪ್ರಮುಖ್ ಸ್ವರ್ಣ ಉಡುಪ ನುಡಿನಮನ ಲೇಖನ ಬರೆದಿದ್ದಾರೆ.
