ಜಗತ್ತು ಇಂದು ಅಭೂತಪೂರ್ವ ಸಂಕಷ್ಟ ಮತ್ತು ಗೊಂದಲಗಳ ಸುಳಿಯಲ್ಲಿದೆ. ಒಂದು ದೇಶದ ಆಂತರಿಕ ಸಂಘರ್ಷಗಳು ಮತ್ತೊಂದು ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿರುವ ವರ್ತಮಾನದಲ್ಲಿ, ಭೌತಿಕ ಪ್ರಗತಿ ಮತ್ತು ಮಾನಸಿಕ ಶಾಂತಿಯ ನಡುವಿನ ಕೊಂಡಿ ಕಳಚಿದಂತಿದೆ. ಇಂತಹ ಸಂದರ್ಭದಲ್ಲಿ, ನಾಗಪುರ ದಲ್ಲಿ ಇತ್ತೀಚೆಗೆ ಜರುಗಿದ ಸಂಘ ಶಿಕ್ಷಾವರ್ಗದ ಸಮಾರೋಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಂಡಿಸಿದ ವಿಚಾರಗಳು ಕೇವಲ ಒಂದು ಸಂಘಟನೆಯ ಸಿದ್ಧಾಂತವಾಗಿರದೆ, ಸಮಕಾಲೀನ ಜಗತ್ತಿಗೆ ಭಾರತ ನೀಡಬಹುದಾದ ದಿಕ್ಸೂಚಿಯಂತೆ ಕಾಣುತ್ತಿವೆ.
ಜಗತ್ತು ಇಂದು ಎದುರಿಸುತ್ತಿರುವ ಪರಿಸರ ಮಾಲಿನ್ಯ, ಯುದ್ಧ ಮತ್ತು ಮಾರುಕಟ್ಟೆ ಕೇಂದ್ರಿತ ಸ್ವಾರ್ಥಕ್ಕೆ ಭಾರತದ ‘ಸಮಗ್ರ ವಿಕಾಸ’ದ ಪರಿಕಲ್ಪನೆಯೇ ಮದ್ದಾಗಬೇಕಿದೆ. ಪ್ರಕೃತಿಯನ್ನು ಲೂಟಿ ಮಾಡುವ ವಸ್ತುವನ್ನಾಗಿ ನೋಡದೆ, ಅದನ್ನು ಪೋಷಿಸುವ ‘ಮಾತೆ’ ಎಂದು ಭಾವಿಸುವ ಭಾರತೀಯ ಜೀವನಕ್ರಮವು ಪರಿಸರ ಸಂರಕ್ಷಣೆಗೆ ಇರುವ ಸುಸ್ಥಿರ ಮಾರ್ಗವಾಗಿದೆ. “ಎರಡೂ ಕೈಗಳಿಂದ ಸಂಪಾದಿಸಿ ಸಾವಿರ ಕೈಗಳಿಂದ ಹಂಚು” ಎನ್ನುವ ಭಾರತೀಯ ಪರಂಪರೆ, ಜಾಗತಿಕ ಆರ್ಥಿಕ ಅಸಮಾನತೆಗೆ ಉತ್ತರ ನೀಡಬಲ್ಲ ಶಕ್ತಿಯನ್ನು ಹೊಂದಿದೆ.
ಕ್ರಿಸ್ತಶಕ 1ರಿಂದ 1600ರವರೆಗೆ ಭಾರತವು ಜಾಗತಿಕ ಜಿಡಿಪಿಯಲ್ಲಿ ಅಗ್ರಸ್ಥಾನದಲ್ಲಿತ್ತು ಮತ್ತು ಜ್ಞಾನ-ವಿಜ್ಞಾನದ ಕೇಂದ್ರವಾಗಿತ್ತು ಎಂಬುದು ಇತಿಹಾಸದ ಸತ್ಯ. ಆದರೆ, ಅಷ್ಟೊಂದು ಸಮೃದ್ಧವಾಗಿದ್ದ ದೇಶವು ವಿದೇಶಿ ಆಕ್ರಮಣಕಾರರಿಗೆ ತಲೆಬಾಗಬೇಕಾಗಿ ಬಂದದ್ದು ನಮ್ಮ ಸಿದ್ಧತೆಯ ಕೊರತೆಯಿಂದ ಎಂಬುದನ್ನು ಡಾ. ಭಾಗವತ್ ಅವರು ಮಾರ್ಮಿಕವಾಗಿ ನೆನಪಿಸಿದ್ದಾರೆ. ಕಳೆದಿದ್ದನ್ನು ಮರಳಿ ಪಡೆಯಲು ಇಂದು ನಮಗೆ ಸಮಾಜದ ಸಂಘಟಿತ ಶಕ್ತಿಯ ಅಗತ್ಯವಿದೆ. ವಿಶ್ವಗುರು ಪಟ್ಟ ಎಂಬುದು ಕೇವಲ ಅಲಂಕಾರಿಕ ಪದವಲ್ಲ, ಅದು ಜಗತ್ತನ್ನು ಮುನ್ನಡೆಸುವ ಹೊಣೆಗಾರಿಕೆ. ಆ ಹೊಣೆಗಾರಿಕೆಯನ್ನು ನಿಭಾಯಿಸಲು ಭಾರತೀಯ ಸಮಾಜವು ತನ್ನ ‘ಸ್ವತ್ವ’ದ ಅರಿವನ್ನು ಮರಳಿ ಪಡೆದುಕೊಳ್ಳಬೇಕಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಶ್ರಮವು ಕೇವಲ ಒಂದು ಸಂಘಟನೆಯ ಬೆಳವಣಿಗೆಯಲ್ಲ, ಬದಲಾಗಿ ಅದು ರಾಷ್ಟ್ರದ ಹಿತಕ್ಕಾಗಿ ಸಮಾಜವನ್ನು ಸಜ್ಜುಗೊಳಿಸುವ ಪ್ರಕ್ರಿಯೆ. ಸಂಘದ ಕಾರ್ಯವು ‘ಸಮಾಜದ ಒಳಗಿನ ಸಂಘಟನೆ’ಯಾಗಬೇಕೇ ಹೊರತು ‘ಸಮಾಜದೊಳಗೊಂದು ಪ್ರತ್ಯೇಕ ಸಂಘಟನೆ’ಯಾಗಬಾರದು ಎನ್ನುವ ಆಶಯ ಇಲ್ಲಿ ವ್ಯಕ್ತವಾಗಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಈ ಪಯಣದಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಭಾಗಿಯಾಗಬೇಕಾದ ಅನಿವಾರ್ಯತೆ ಇದೆ.
ಎಚ್ಚರಿಕೆಯ ಹೆಜ್ಜೆ: ಭಾರತವು ಬಲಿಷ್ಠವಾಗುವುದನ್ನು ಸಹಿಸದ ವಿಚ್ಛಿದ್ರಕಾರಿ ಶಕ್ತಿಗಳು ಸಮಾಜದಲ್ಲಿ ಒಡಕು ಮೂಡಿಸಲು ಹೊಂಚುಹಾಕುತ್ತಿವೆ. ಇಂತಹ ಸಮಯದಲ್ಲಿ ಜನಸಾಮಾನ್ಯರು ಕೇವಲ ಪ್ರೇಕ್ಷಕರಾಗದೆ, ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳ ರಕ್ಷಣೆಗೆ ಕಟಿಬದ್ಧರಾಗಬೇಕಿದೆ. ಸಂಘದ ಸಮವಸ್ತ್ರ ಧರಿಸಲಿ ಅಥವಾ ಬಿಡಲಿ, ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ಪ್ರತಿಯೊಬ್ಬನೂ ರಾಷ್ಟ್ರಕಾರ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ವಿಶಾಲ ಮನೋಭಾವವು ಇಲ್ಲಿನ ಪ್ರಮುಖ ಸಂದೇಶ.
ಒಟ್ಟಾರೆಯಾಗಿ, ಜಗತ್ತು ಭಾರತದತ್ತ ಕುತೂಹಲ ಮತ್ತು ಭರವಸೆಯಿಂದ ನೋಡುತ್ತಿದೆ. ನಿಯತಿಯು ನಮಗಾಗಿ ವೇದಿಕೆಯನ್ನು ಸಿದ್ಧಪಡಿಸಿದೆ. ಆದರೆ ಈ ಅವಕಾಶವನ್ನು ಬಳಸಿಕೊಂಡು ಭವ್ಯ ಭಾರತವನ್ನು ನಿರ್ಮಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಮುಂದಿನ ಎರಡು-ಮೂರು ದಶಕಗಳು ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದು, ‘ಸಂಘಟಿತ ಸಮಾಜವೇ ಸಮರ್ಥ ಭಾರತ’ದ ಬುನಾದಿಯಾಗಲಿದೆ.
ರಾಷ್ಟ್ರ ನಿರ್ಮಾಣದ ಪೂರಕ ಶಕ್ತಿಗಳು
ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ನಾಗ್ಪುರದಲ್ಲಿ ನೀಡಿದ ಭಾಷಣವು ಭಾರತದ ವಿಕಾಸದ ಹಾದಿಯಲ್ಲಿ ಸಾಮಾಜಿಕ ಬದ್ಧತೆ ಮತ್ತು ಆರ್ಥಿಕ ಪ್ರಗತಿಯ ನಡುವಿನ ಅವಿನಾಭಾವ ಸಂಬಂಧವನ್ನು ಎತ್ತಿ ತೋರಿಸಿದೆ. ನೂರು ವರ್ಷಗಳನ್ನು ಪೂರೈಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕೇವಲ ವಿಪತ್ತುಗಳ ಸಂದರ್ಭದಲ್ಲಷ್ಟೇ ಅಲ್ಲದೆ, ರಾಷ್ಟ್ರದ ಆತ್ಮವಿಶ್ವಾಸವನ್ನು ಮರಳಿ ಗಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.
ಸ್ವಾತಂತ್ರ್ಯದ ಸಂದರ್ಭದಲ್ಲಿ ಎದುರಾದ ಸವಾಲುಗಳ ನಡುವೆಯೇ ‘ಗ್ರಾಸಿಮ್’ನಂತಹ ಸಂಸ್ಥೆಗಳು ದೇಶಿ ಕೈಗಾರಿಕೆಗೆ ಅಡಿಪಾಯ ಹಾಕಿದವು. ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿರುವುದು ಮತ್ತು ಮೂಲಸೌಕರ್ಯದಲ್ಲಿ ಸಾಧಿಸಿರುವ ಅಭೂತಪೂರ್ವ ಪ್ರಗತಿಯು ‘ಅಮೃತಕಾಲ’ದ ಯಶಸ್ಸಿಗೆ ಸಾಕ್ಷಿಯಾಗಿದೆ. ಉದ್ಯಮ ಕ್ಷೇತ್ರದ ಸಾಧನೆ ಮತ್ತು ಸಂಘದ ಸಾಮಾಜಿಕ ಚಟುವಟಿಕೆಗಳ ನಡುವೆ ಶಿಕ್ಷಣ, ಆರೋಗ್ಯ ಮತ್ತು ಸಬಲೀಕರಣದ ಉದ್ದೇಶಗಳು ಒಂದೇ ಆಗಿವೆ.
