ಕೋಲ್ಕತ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಧ್ರುವೀಕರಣಕ್ಕೆ ವೇದಿಕೆ ಸಿದ್ಧವಾದಂತಿದೆ. ಇತ್ತೀಚೆಗಷ್ಟೇ ಎನ್ಸಿಪಿಐ (NCPI) ಸೇರಿದ 20 ಸಂಸದರ ಪೈಕಿ 17 ಮಂದಿ ಮುಂಬರುವ ದುರ್ಗಾ ಪೂಜೆಯ ಹೊತ್ತಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಟಿಎಂಸಿಯ ಬಂಡಾಯ ನಾಯಕ ಹಾಗೂ ಕೂಚ್ ಬಿಹಾರ್ ಕ್ಷೇತ್ರದ ಸಂಸದ ಜಗದೀಶ್ ಚಂದ್ರ ಬರ್ಮ ಬಸುನಿಯಾ ಬಾಂಬ್ ಸಿಡಿಸಿದ್ದಾರೆ.
ಸಂಸದರೆಲ್ಲರೂ ಒಟ್ಟಾಗಿಯೇ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎಂದು ಬಸುನಿಯಾ ತಿಳಿಸಿದ್ದಾರೆ. 20 ಜನರ ಗುಂಪಿನಲ್ಲಿ 17 ಮಂದಿ ಎಂದರೆ ಮೂರನೇ ಎರಡಕ್ಕಿಂತಲೂ (2/3) ಹೆಚ್ಚಿನ ಸಂಖ್ಯಾಬಲವಾಗುವುದರಿಂದ, ತಮ್ಮ ವಿರುದ್ಧ ‘ಪಕ್ಷಾಂತರ ನಿರೋಧಕ ಕಾಯ್ದೆ’ಯಡಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ವಾದ.
“ನಾವೆಲ್ಲ 17 ಸಂಸದರು ಒಟ್ಟಾಗಿಯೇ ಬಿಜೆಪಿ ಸೇರುತ್ತಿದ್ದೇವೆ. 20 ಜನರಲ್ಲಿ ಮೂರನೇ ಎರಡಕ್ಕಿಂತ ಹೆಚ್ಚಿನ ನಾಯಕರು ಒಂದಾಗುತ್ತಿರುವುದರಿಂದ ಪಕ್ಷಾಂತರ ನಿರೋಧಕ ಕಾಯ್ದೆ ನಮಗೆ ಅನ್ವಯಿಸುವುದಿಲ್ಲ” ಎಂದಿರುವುದಾಗಿ ಬಸುನಿಯಾ ಅವರನ್ನು ಉಲ್ಲೇಖಿಸಿ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಏನಿದು 2/3 ಸಂಖ್ಯಾಬಲದ ಲೆಕ್ಕಾಚಾರ?
ಬಸುನಿಯಾ ಅವರ ಈ ನಡೆಗೆ ಪಕ್ಷಾಂತರ ನಿರೋಧಕ ಕಾಯ್ದೆಯಲ್ಲಿರುವ ‘ಶಾಸಕಾಂಗ ಪಕ್ಷದ ವಿಲೀನ’ದ ನಿಯಮವೇ ಮುಖ್ಯ ಕಾರಣ.
ಕಳೆದ ಜೂನ್ 14 ರಂದು ಟಿಎಂಸಿಯಿಂದ ಹೊರಬಂದ 20 ಬಂಡಾಯ ಸಂಸದರು, ತಾವು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆ ವಿಲೀನಗೊಂಡು ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು.
ಸಂಸದೀಯ ಅಥವಾ ಶಾಸಕಾಂಗ ಪಕ್ಷವೊಂದರ ಒಟ್ಟು ಸದಸ್ಯರಲ್ಲಿ ಕನಿಷ್ಠ 2/3 ಭಾಗದಷ್ಟು ಜನರು ವಿಲೀನವನ್ನು ಬೆಂಬಲಿಸಿದರೆ, ಅಂತಹ ಸದಸ್ಯರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲು ಬರುವುದಿಲ್ಲ. 20 ಸಂಸದರ ಪೈಕಿ ಅನರ್ಹತೆಯಿಂದ ಪಾರಾಗಲು ಕನಿಷ್ಠ 14 ಜನರ ಬೆಂಬಲ ಬೇಕು. ಆದರೆ ಈಗ ಬಸುನಿಯಾ 17 ಸಂಸದರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿರುವುದರಿಂದ ಕಾಯ್ದೆಯ ಮಿತಿಯನ್ನು ಸುಲಭವಾಗಿ ದಾಟಲಿದ್ದಾರೆ.
ಹೊರಗಿನಿಂದ ಎನ್ಡಿಎಗೆ ಬೆಂಬಲ ನೀಡಲಿದ್ದಾರೆ ಮೂವರು ಸಂಸದರು:
ಅಂದಹಾಗೆ, ಈ 20 ಸಂಸದರ ಗುಂಪಿನಲ್ಲಿದ್ದ ಮೂವರು ಮಾತ್ರ ಬಿಜೆಪಿಗೆ ಅಧಿಕೃತವಾಗಿ ಸೇರುವುದಿಲ್ಲ ಎಂದು ಬಸುನಿಯಾ ಸ್ಪಷ್ಟಪಡಿಸಿದ್ದಾರೆ. ಆ ಮೂವರು ನಾಯಕರೆಂದರೆ: ಅಬು ತಾಹಿರ್ ಖಾನ್, ಖಲೀಲುರ್ ರಹಮಾನ್, ಯೂಸುಫ್ ಪಠಾಣ್
ತಮ್ಮ ತಮ್ಮ ಕ್ಷೇತ್ರಗಳ ರಾಜಕೀಯ ಹಾಗೂ ಆಡಳಿತಾತ್ಮಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂವರು ಹೊರಗಿನಿಂದ ಎನ್ಡಿಎಗೆ ಬೆಂಬಲ ನೀಡಲಿದ್ದಾರೆ. “ಇವರು ಎನ್ಡಿಎಗೆ ಬೆಂಬಲ ಕೊಡಲಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ಅಥವಾ ಸಚಿವ ಸಂಪುಟದ ಖಾತೆಗಳನ್ನು ನೀಡುವ ಸಾಧ್ಯತೆಯಿದೆ,” ಎಂದು ಬಸುನಿಯಾ ಹೇಳಿದ್ದಾರೆ.
ಟಿಎಂಸಿಯಿಂದ ಎನ್ಸಿಪಿಐ, ಅಲ್ಲಿಂದ ಬಿಜೆಪಿಯತ್ತ…
ಟಿಎಂಸಿಯ ಬಂಡಾಯ ನಾಯಕರ ಈ ನಡೆ ಬೆಂಗಾಲ್ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಟಿಎಂಸಿಯಿಂದ ಹೊರಬಿದ್ದಿದ್ದ ಸಂಸದರು, ಬಳಿಕ ಎನ್ಸಿಪಿಐ ಜೊತೆ ವಿಲೀನಗೊಂಡು ಜೂನ್ 14 ರಂದು ಎನ್ಡಿಎಗೆ ಬೆಂಬಲ ಪ್ರಕಟಿಸಿದ್ದರು.
ಇದೀಗ ಬಸುನಿಯಾ ಅವರ ಹೇಳಿಕೆಯು, ಈ ಬಂಡಾಯ ನಾಯಕರ ದೊಡ್ಡ ಪಡೆ ಶೀಘ್ರದಲ್ಲೇ ಕಮಲ ಪಾಳೆಯವನ್ನು ಅಧಿಕೃತವಾಗಿ ಸೇರಲಿದೆ ಎಂಬುದನ್ನು ಖಚಿತಪಡಿಸಿದೆ.
ಕೂಚ್ ಬಿಹಾರ್ನಲ್ಲಿ ಬಸುನಿಯಾಗೆ ಕಾದಿತ್ತು ಪ್ರತಿಭಟನೆಯ ಬಿಸಿ!
ಮತ್ತೊಂದೆಡೆ, ಬಸುನಿಯಾ ಹಾಗೂ ಅವರ ಪತ್ನಿ (ಟಿಎಂಸಿ ಶಾಸಕಿ ಸಂಗೀತಾ ರಾಯ್) ಇತ್ತೀಚೆಗಷ್ಟೇ ಕೂಚ್ ಬಿಹಾರ್ನ ಸಿಟಾಯಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದಾಗ ಸಾರ್ವಜನಿಕರ ತೀವ್ರ ವಿರೋಧ ಎದುರಿಸಬೇಕಾಯಿತು.
ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಮತ್ತು ಬಿಜೆಪಿ ಕರ್ತಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಗಲಾಟೆಯ ನಡುವೆ ಅವರ ಮನೆಯ ಹತ್ತಿರದಲ್ಲಿದ್ದ ಟಿಎಂಸಿ ಕಚೇರಿಯೊಂದಕ್ಕೆ ಬೆಂಕಿ ಹಚ್ಚಲಾಗಿತ್ತು ಎಂದೂ ವರದಿಯಾಗಿದೆ.
ತಮಗೆ ಈಗ ಟಿಎಂಸಿ ಜೊತೆ ಯಾವುದೇ ಸಂಬಂಧವಿಲ್ಲ, ತಾವು ಎನ್ಡಿಎ ಬೆಂಬಲಕ್ಕೆ ನಿಂತಿರುವುದಾಗಿ ಬಸುನಿಯಾ ಪುನರುಚ್ಚರಿಸಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆ ಎರಡರಲ್ಲೂ ನಾಯಕರು ಸಾಲು ಸಾಲಾಗಿ ಪಕ್ಷ ತೊರೆಯುತ್ತಿರುವುದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈಗ ತೀವ್ರ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
