ಅಂಕಣ – ದೃಶ್ಯ
● ಇತಿಹಾಸದಲ್ಲೇ ಸಮಕಾಲೀನ ಕಲಾಕೃತಿಗಳಿಗೆ ಅವಕಾಶ ಇದೇ ಮೊದಲು
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಭಾರತೀಯ ಕಲಾವಿದರ ಕಲಾಕೃತಿಗಳು ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ ಎನ್ನುವುದರಲ್ಲಿ ಅಂತಹದ್ದೇನು ವಿಶೇಷ ಅನಿಸಬಹುದು. ಆದರೆ, ಎಲ್ಲಾ ಪ್ರದರ್ಶನಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲವಲ್ಲ. ತಮಗೆಲ್ಲರಿಗೂ ತಿಳಿದಂತೆ, ಕೆಲವೊಂದು ಪ್ರದರ್ಶನಗಳು ಬೇರೆ ಬೇರೆ ಕಾರಣಗಳಿಗಾಗಿ ವಿಶೇಷ ಅನಿಸಿಕೊಳ್ಳುತ್ತವೆ. ಬೇರೆ ಬೇರೆ ಕಾರಣಗಳಿಗಾಗಿಯೇ ಪ್ರಸ್ತುತ ಅನಿಸಿಕೊಳ್ಳುತ್ತವೆ. ಹೀಗಾಗಿ, ದೂರದ ಊರಲ್ಲಿ ನಡೆಯುತ್ತಿರುವ ‘Sediments of Becoming: Fossilised Present, Summoned Pasts’ ಪ್ರದರ್ಶನ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಳ್ಳುವುದು ಸೂಕ್ತವೆನಿಸಿತು.
ಬೆಂಗಳೂರಿನಿಂದ ಸರಿಸುಮಾರು ನಾಲ್ಕು ಸಾವಿರ ಮೈಲು, ಅಂದರೆ ಅಂದಾಜು 6,500 ಕಿಲೋಮೀಟರ್ ದೂರದ ರಷ್ಯಾದ ಪೀಟರ್ಸ್ ಬರ್ಗ್ ನ ಜನಪ್ರಿಯ ದಿ ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂನಲ್ಲಿ (The State Hermitage Museum) ಆರಂಭವಾಗಿರುವ ಕಲಾಪ್ರದರ್ಶನವಿದು. ಭಾರತದ ಪ್ರತಿಷ್ಠಿತ ಖಾಸಗಿ ಗ್ಯಾಲರಿ ಥ್ರೆಶೋಲ್ಡ್ (Gallery Threshold) ಸ್ಟೇಟ್ ಹರ್ಮಿಟೇಜ್ ಜೊತೆ ಕೈಜೋಡಿಸಿ ಈ ಕಲಾಪ್ರದರ್ಶನ ಆಯೋಜಿಸಿದೆ. ಆಸಕ್ತಿದಾಯಕ ವಿಚಾರ ಏನೆಂದರೆ, 260 ವರ್ಷಗಳ ಇತಿಹಾಸವಿರುವ ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂನಲ್ಲಿ ಇದೇ ಮೊದಲ ಬಾರಿಗೆ ಸಮಕಾಲೀನ ಕಲಾಕೃತಿಗಳ ಪ್ರದರ್ಶನವೊಂದು ನಡೆಯುತ್ತಿದೆ. ಈ ಮೊದಲ ಪ್ರದರ್ಶನವೇ ಭಾರತೀಯ ಕಲಾವಿದರದ್ದು ಎನ್ನುವುದು ಇನ್ನೊಂದು ವಿಶೇಷ. ಇಂತಹದ್ದೊಂದು ಅಪರೂಪದ ಕಲಾಪ್ರದರ್ಶನದಲ್ಲಿ ಕನ್ನಡಿಗರೂ ಇದ್ದಾರೆ ಎನ್ನುವುದು ಹೆಮ್ಮೆಪಡಬೇಕಾದ ಮತ್ತೊಂದು ವಿಚಾರ. ಭಾರತದ 11 ಮಂದಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಅಫ್ರಾ ಶಫೀಕ್ (Afrah Shafiq), ಅನಿಂದಿತಾ ಭಟ್ಟಾಚಾರ್ಯ (Anindita Bhattacharya), ದೆಬಶೀಷ್ ಮುಖರ್ಜಿ (Debashish Mukherjee), ಗಾರ್ಗಿ ರೈನಾ (Gargi Raina), ಲಕ್ಷ್ಮೀ ಮಾಧವನ್ (Lakshmi Madhavan), ಮಂಜುನಾಥ್ ಕಾಮತ್ (Manjunath Kamath), ಪುಷ್ಪಮಾಲಾ ಎನ್. (Pushpamala N.), ರವೀಂದ್ರ ರೆಡ್ಡಿ (Ravinder Reddy), ಸುಮಾಕ್ಷಿ ಸಿಂಗ್ (Sumakshi Singh), ವಿ. ರಮೇಶ್ (V Ramesh) ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಅಲ್ಲದೆ, ಖ್ಯಾತ ರಂಗಭೂಮಿ ಕಲಾವಿದೆ ಮಾಯಾ ಕೃಷ್ಣ ರಾವ್ (Maya Krishna Rao) ಅವರ ಪರ್ಫಾರ್ಮೆನ್ಸ್ ಇರಲಿದೆ. 2026, ಜೂನ್ 4ರಿಂದ ಆರಂಭವಾದ ಕಲಾಪ್ರದರ್ಶನ ಅಕ್ಟೋಬರ್ 4ರಂದು ಸಂಪನ್ನಗೊಳ್ಳಲಿದೆ. ಕಲಾಪ್ರದರ್ಶನವನ್ನು ತುಂಟಿ ಚೌಹಾಣ್ (Tunty Chauhan) ಮತ್ತು ಮರೀನಾ ಶುಲ್ಜ್ (Marina Schulz) ಅವರು ಕ್ಯುರೇಟ್ ಮಾಡಿದ್ದಾರೆ.
ಇಬ್ಬರು ಕರ್ನಾಟಕದ ಕಲಾವಿದರು ಈ ಕಲಾವಿದರ ಗುಂಪಿನಲ್ಲಿದ್ದಾರೆ ಎನ್ನುವುದು ಕನ್ನಡಿಗರು ಖುಷಿ ಪಡುವ ವಿಚಾರವಾಗಿದೆ. ಮಂಜುನಾಥ್ ಕಾಮತ್ ಮತ್ತು ಪುಷ್ಪಮಾಲಾ ಎನ್. ಅವರು ಈ ನೆಲದ ಕಲಾವಿದರು. ಮಂಜುನಾಥ್ ಕಾಮತ್ ಅವರ ಶಿಲ್ಪ ಕಲಾಕೃತಿ, ಪುಷ್ಪಮಾಲಾ ಎನ್. ಅವರ ಛಾಯಾಚಿತ್ರ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಉಳಿದ ಕಲಾವಿದರು ದೇಶದ ಬೇರೆ ಬೇರೆ ಭಾಗದವರಾಗಿದ್ದು, ಇವರೆಲ್ಲರ ಸಮಕಾಲೀನ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಸೋವಿಯತ್ ಯುಗದ ಕಾಲ್ಪನಿಕ ಕಥೆಗಳನ್ನು ಆಧರಿಸಿರುವ ಅಫ್ರಾ ಶಫೀಕ್ ಅವರ ಮಲ್ಟಿಮೀಡಿಯಾ ವೀಡಿಯೊಗಳನ್ನು ಒಳಗೊಂಡಿರುವ ಪ್ರತಿಷ್ಠಾಪನಾ ಕಲಾಕೃತಿ, ಭಾರತೀಯ ಪರಂಪರೆಗಳನ್ನು ಹೇಳುವ ಸ್ಥಳಗಳು ಹೇಗೆ ನಗರೀಕರಣಕ್ಕೆ ಒಳಗಾಗುತ್ತಿವೆ ಎನ್ನುವ ಸಂದೇಶ ನೀಡುವ ಮಿಶ್ರಮಾಧ್ಯಮದ ಕಲಾಕೃತಿಗಳನ್ನು ದೇಬಾಶಿಶ್ ಮುಖರ್ಜಿ ಅವರು ರಚಿಸಿದ್ದಾರೆ. ಕೇರಳದ ಜವಳಿ ಉದ್ಯಮ ಮತ್ತು ಪರಂಪರೆಯನ್ನು ಲಕ್ಷ್ಮೀ ಮಾಧವನ್ ಅವರ ಕಲಾಕೃತಿಗಳಲ್ಲಿ ನೋಡಬಹುದಾಗಿದೆ ಎಂದು ಕ್ಯುರೆಟರ್ ತಮ್ಮ ಟಿಪ್ಪಣಿಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಷ್ಯಾದಲ್ಲಿ ಭಾರತೀಯ ಸಮಕಾಲೀನ ಕಲಾಕೃತಿಗಳು ಪ್ರದರ್ಶನವಾಗಿಲ್ಲ. ಈ ನಿಟ್ಟಿನಲ್ಲಿ ಈ ಕಲಾಪ್ರದರ್ಶನ ಹೆಚ್ಚು ಜನಮನ್ನಣೆ ಕಾಣಲಿದೆ ಎನ್ನುವ ಭರವಸೆ ಕ್ಯುರೆಟರ್ಗಳದ್ದಾಗಿದೆ. ಭಾರತೀಯ ಸಮಕಾಲೀನ ಕಲೆಯ ಏಳ್ಗೆಯ ದೃಷ್ಟಿಯಿಂದಲೂ ಇದೊಂದು ಮೈಲಿಗಲ್ಲು ಆಗಿ ಪರಿಣಸಮಿಸಲಿದೆ. ಇಂತಹ ಪ್ರಯತ್ನಗಳು ಹೆಚ್ಚೆಚ್ಚು ಅವಕಾಶಗಳನ್ನೂ ಹುಟ್ಟಿಹಾಕಲಿದೆ.
ಅಷ್ಟಕ್ಕೂ ಈ ಕಲಾಪ್ರದರ್ಶನ ಎಷ್ಟು ಮಹತ್ವದ್ದಾಗಲಿದೆ ಎನ್ನುವುದನ್ನಿಲ್ಲಿ ಉಲ್ಲೇಖಿಸಲೇಬೇಕು. ಯಾವುದೇ ದೇಶದ ಕಲಾವಿದರ ಕಲಾಕೃತಿಗಳು ವಿದೇಶದಲ್ಲಿ ಪ್ರದರ್ಶನಗೊಳ್ಳುವುದರಿಂದ ಅದನ್ನು ಕೇವಲ ಮನೋರಂಜನೆಯಾಗಿ ನೋಡುವುದಲ್ಲ. ಸಾಂಸ್ಕೃತಿಕ ರಾಯಭಾರತ್ವ, ಜಾಗತಿಕ ಮಾರುಕಟ್ಟೆಗಳ ವಿಸ್ತರಣೆ ಹಾಗೂ ಅಂತಾರಾಷ್ಟ್ರೀಯ ಬಾಂಧವ್ಯ ವೃದ್ಧಿಸಿಕೊಳ್ಳಲು ಇದು ಪ್ರಮುಖವೆನಿಸಿಕೊಳ್ಳಲಿದೆ. ಜೊತೆ ಜೊತೆಗೆ ಆ ದೇಶದ ಕಲಾ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಪರಿಣಾಮಕಾರಿ ಹೆಜ್ಜೆಯಾಗಲಿದೆ. ಭಾರತೀಯ ಕಲಾವಿದರ ಕಲಾಕೃತಿಗಳು ಇದೀಗ ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂನಲ್ಲಿ ಪ್ರದರ್ಶನ ಆಗುತ್ತಿರುವುದರಿಂದಲೂ ಈ ಒಂದಿಷ್ಟು ಪ್ರಯೋಜನಗಳು ಇವೆ. ಬಹಳ ಮುಖ್ಯವಾಗಿ ಸಮಕಾಲೀನ ಕಲಾಕ್ಷೇತ್ರದಲ್ಲಿ ಭಾರತೀಯ ಕಲಾವಿದರಿಗೆ ಇದರಿಂದ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯ ಮತ್ತು ಬೇಡಿಕೆಗಳು ವೃದ್ಧಿಸಲಿವೆ. ಜಾಗತಿಕವಾಗಿ ಭಾರತೀಯ ಸಮಕಾಲೀನ ಕಲೆಯ ಸಾಧ್ಯತೆಗಳು ಆ ದೇಶದ ನೆಲದಲ್ಲಿ ಇನ್ನಷ್ಟು ಪರಿಚಯಗೊಳ್ಳಲು ಸಹಕಾರಿಯಾಗಲಿದೆ. ವಿಶೇಷವಾಗಿ ಭಾರತೀಯ ಕಲಾಧ್ಯಯನಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಹೊಸ ಹೊಸ ಆವಿಷ್ಕಾರಗಳಿಗೆ ಅವಕಾಶಗಳು ತೆರೆದುಕೊಳ್ಳಲಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಸೌಹಾರ್ದಯುತ ಸಂಬಂಧ ವೃದ್ಧಿಗೂ ಸಹಕಾರಿಯಾಗಲಿದೆ.
ಇನ್ನೊಂದು ವಿಚಾರ ಏನೆಂದರೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ದೇಶದ ಕಲಾವಿದರ ಬಗ್ಗೆ, ಕಲಾಕೃತಿಗಳ ಕುರಿತಾಗಿ ತಿಳಿದುಕೊಳ್ಳಲೂ ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಈ ಕಲಾಪ್ರದರ್ಶನ ವಿಶೇಷ ಮಹತ್ವ ಪಡೆದುಕೊಂಡಿದೆ. ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂ ಪ್ರಪಂಚದ ಅತ್ಯಂತ ದೊಡ್ಡದಾದ ಮತ್ತು ಹಳೆಯ ಮ್ಯೂಸಿಯಂಗಳಲ್ಲಿ ಒಂದಾಗಿದೆ. 1764ರಲ್ಲಿ ಗ್ರೇಟ್ ಕ್ಯಾಥರಿನ್ (Catherine the Great) ಸ್ಥಾಪಿಸಿದ ಈ ವಸ್ತುಸಂಗ್ರಹಾಲಯ ಆರು ಪ್ರಮುಖ ಕಟ್ಟಡಗಳನ್ನು ಒಳಗೊಂಡಿದೆ. ಶಿಲಾಯುಗದಿಂದ ಹಿಡಿದು ಇಂದಿನ ಕಾಲಘಟ್ಟದ 3 ದಶಲಕ್ಷಕ್ಕೂ ಹೆಚ್ಚು ಕಲಾಕೃತಿಗಳ ಮತ್ತು ಸಾಂಸ್ಕೃತಿಕ-ಐತಿಹಾಸಿಕ ವಸ್ತುಗಳ ಸಂಗ್ರಹ ಈ ವಸ್ತುಸಂಗ್ರಹಾಲಯದಲ್ಲಿವೆ. ವಿಶ್ವವಿಖ್ಯಾತ ಕಲಾವಿದರಾದ ಲಿಯೊನಾರ್ಡೊ ಡಾ ವಿಂಚಿ, ಮೈಕೆಲೆಂಜಲೋ, ರೆಂಬ್ರಾಂಟ್, ರಾಫೆಲ್ ಅವರಂತಹ ದಿಗ್ಗಜ ಕಲಾವಿದರ ಕಲಾಕೃತಿಗಳು ಈ ವಸ್ತುಸಂಗ್ರಹಾಲಯದಲ್ಲಿವೆ.
