ಅಂಕಣ – ಪರ್ಯಾಯ
- ಪ್ರೊ. ಎಂ.ಎಸ್. ಚೈತ್ರ
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಚುನಾವಣೆಯೊಂದರಲ್ಲಿ ಅಡ್ಡಮತ ಹಾಕಿದ ಶಾಸಕರಿದ್ದರು ಎಂಬ ಚರ್ಚೆ ರಾಜ್ಯದಾದ್ಯಂತ ಸುದ್ದಿಮಾಡಿತ್ತು. ಇದರಲ್ಲಿ ಮುಖ್ಯವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರೆನ್ನುವುದು ಕೇಂದ್ರ ವಿಷಯವಾಗಿತ್ತು. ಈ ಅಡ್ಡಮತದಾನ ಹಲವಾರು ದಶಕಗಳಿಂದ ಭಾರತದಲ್ಲಿ ನಡೆಯುತ್ತಲೇ ಇದೆ. ಹಾಗಾಗಿ ಇದರಲ್ಲೇನು ವಿಶೇಷವಿಲ್ಲ. ಇಲ್ಲಿ ಚರ್ಚೆಯಾದ ವಿಷಯ ಯಾವ ಪಕ್ಷದವರು ಯಾರಿಗೆ ಅಡ್ಡಮತದಾನ ಮಾಡಿದರು ಎನ್ನುವುದಾಗಿರಲಿಲ್ಲ. ಬದಲಿಗೆ ತಾವು ಯಾರಿಗೆ ಮತದಾನ ಮಾಡಿದ್ದೇವೆ ಎನ್ನುವುದನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರಿಗೆ ಆಣೆ ಮಾಡಬೇಕೆಂದು ಬಿಜೆಪಿಯ ನಾಯಕರು ತಮ್ಮ ಶಾಸಕರಿಗೆ ಹೇಳಿದ್ದು ಚರ್ಚೆಯ ಕೇಂದ್ರವಾಗಿತ್ತು. ಸೆಕ್ಯುಲರ್ ಪ್ರಭುತ್ವದ ಅಡಿಯಲ್ಲಿ ಕೆಲಸಮಾಡುವ ರಾಜಕೀಯ ಪಕ್ಷಗಳು ತಮ್ಮ ಶಾಸಕರು ಯಾರಿಗೆ ಮತದಾನ ಮಾಡಿದರು ಎಂಬುದನ್ನು ತಿಳಿದುಕೊಳ್ಳಲು ಆಣೆ – ಪ್ರಮಾಣದ ಮೊರೆ ಹೋಗುವುದು ವಿಚಿತ್ರವಾಗಿದೆ. ಈ ಪ್ರಕ್ರಿಯೆಯ ಪರ – ವಿರೋಧವಾಗಿ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆಣೆ – ಪ್ರಮಾಣ ಮಾಡುವುದು ಏಕೆ ಇಷ್ಟೊಂದು ಗಂಭೀರವಾದ ವಿಷಯವಾಗಬೇಕು ಎನ್ನುವುದು ಭಾರತೀಯ ಸಮಾಜವನ್ನು ಗ್ರಹಿಸಲು ಸಹಾಯಕವಾಗುವುದು.
ಇದನ್ನು ಇನ್ನಷ್ಟು ಸ್ಪಷ್ಟವಾಗಿ ವಿಸ್ತರಿಸಿಕೊಳ್ಳಲು ಹಿಂದೊಮ್ಮೆ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಕರ್ನಾಟಕದ ಹಿರಿಯ ರಾಜಕಾರಣಿಯ ಮಾತುಗಳನ್ನು ಪರಿಶೀಲಿಸೋಣ. ಅವರು ಒಂದು ವಿಶ್ವವಿದ್ಯಾನಿಲಯದ ಸೆಮಿನಾರ್ನಲ್ಲಿ ಹೀಗೆ ಹೇಳುತ್ತಾರೆ – ಆ ಪಂಚಾಯಿತಿಯಲ್ಲಿ ಅಡ್ಡಮತದಾನ ಮಾಡಿದ ಜನಗಳನ್ನು ಒಂದು ಪಕ್ಷ ಕೋರ್ಟ್ ಗೆ ಕರೆದುಕೊಂಡು ಹೋದರೆ ಅವರು ಭಗವದ್ಗೀತೆಯನ್ನೇ ಹಿಡಿದು ಸುಳ್ಳು ಹೇಳಿಬಿಡುತ್ತಾರೆ ಎಂದು ನಮಗೆ ಗೊತ್ತಿದೆ. ಅದಕ್ಕಾಗಿಯೇ ನಾವು ನಮ್ಮ ಊರ ಹತ್ತಿರದ ಅಮ್ಮನವರ ದೇವಸ್ಥಾನದಲ್ಲಿ ಪ್ರಮಾಣ ಮಾಡಿಸಲು ಈ ಪಂಚಾಯಿತಿ ಸದಸ್ಯರನ್ನು ಕರೆದುಕೊಂಡು ಹೋದೆವು. ಅಲ್ಲಿ ಅಡ್ಡಮತದಾನ ಮಾಡಿದವರು ದೇವಸ್ಥಾನದ ಒಳಗೆ ಸತ್ಯವನ್ನೇ ಹೇಳಿದರು ಮತ್ತು ಕ್ಷಮೆ ಕೇಳಿದರು ಎನ್ನುತ್ತಾ ಆ ಘಟನೆಯನ್ನು ಸ್ಮರಿಸಿಕೊಂಡರು. ಅಂದರೆ ಈ ಸೆಕ್ಯುಲರ್ ಪ್ರಭುತ್ವದ ರಾಜಕಾರಣವನ್ನು ಮಾಡುವ ರಾಜಕಾರಣಿಗಳಿಗೂ ನಮ್ಮ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಯಾರೂ ಸುಳ್ಳು ಆಣೆ – ಪ್ರಮಾಣಗಳನ್ನು ಮಾಡುವುದಿಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆಯಿದೆ. ಹಾಗಾದರೆ ನಮ್ಮ ಜನಕ್ಕೆ ಕೋರ್ಟು ಕಛೇರಿಗಳಲ್ಲಿ ಸುಳ್ಳು ಹೇಳಲು ಸಾಧ್ಯವಾಗಬೇಕಾದರೆ, ದೇವಸ್ಥಾನಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಮಾಡುವ ಆಣೆ – ಪ್ರಮಾಣದ ಸಂದರ್ಭದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ.
ಈ ಪ್ರಶ್ನೆಯನ್ನೊಮ್ಮೆ ಗಂಭೀರವಾಗಿ ಯೋಚಿಸಿದರೆ ಹಲವು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಇದು ಒಂದರ್ಥದಲ್ಲಿ ಭಾರತೀಯ ಸಮಾಜದ ಕುರಿತು ವಿಸ್ತಾರವಾದ ವಿವರಣೆಯನ್ನು ನೀಡಲು ಬೇಕಾದ ಕೆಲವು ಸೂಚನೆಗಳನ್ನು ನೀಡುತ್ತದೆ. ಸಹಜವಾಗಿ ಇಂತಹ ಸಂದರ್ಭಗಳಲ್ಲಿ ಭಾರತೀಯರು ಆಳವಾಗಿ ಮೌಢ್ಯಗಳನ್ನು ನಂಬುವ ಕಾರಣಕ್ಕಾಗಿ ದೇವಸ್ಥಾನಗಳಿಗೆ ಹೆದರುತ್ತಾರೆ ಎಂದು ವಿವರಿಸಬಹುದು. ಆದರೆ ಈ ರೀತಿಯ ಹೆದರುವಿಕೆಯಲ್ಲಿ ಇರಬಹುದಾದ ನಂಬಿಕೆ ಏನು ಮತ್ತು ಅದು ಯಾಕೆ ಮೌಢ್ಯ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಉದಾಹರಣೆಗೆ ಈ ಆಣೆ – ಪ್ರಮಾಣಗಳನ್ನು ನಂಬುವವರು ಸಾಧಾರಣವಾಗಿ ಯಾಕೆ ತಾವು ಆಣೆ ಪ್ರಮಾಣಗಳನ್ನು ಮಾಡಲು ಹಿಂದೇಟು ಹಾಕುತ್ತೇವೆ ಎನ್ನುವುದನ್ನು ವಿವರಿಸಲು ಕೆಲವು ಘಟನೆಗಳನ್ನು ಮತ್ತು ಕಥೆಗಳನ್ನು ಹೇಳುತ್ತಾರೆ. ಕೆಲವೊಮ್ಮೆ ತಮ್ಮ ಊರಿನಲ್ಲಿಯೇ ಸುಳ್ಳು ಆಣೆ – ಪ್ರಮಾಣ ಮಾಡಿದವರ ಮುಂದಿನ ತಲೆಮಾರುಗಳು ಅನೇಕ ಖಾಯಿಲೆಯಿಂದ ನರಳುವುದೋ ಅಥವಾ ಅವರ ಕುಟುಂಬದ ಬೆಳೆವಣಿಗೆಯೇ ನಿಂತು ಹೋಗುವುದು ಇತ್ಯಾದಿ ಕಥೆಗಳನ್ನು ದೃಷ್ಟಾಂತವನ್ನಾಗಿ ಕೊಡುತ್ತಾರೆ. ಇನ್ನೂ ಕೆಲವೊಮ್ಮೆ ಆ ಕುಟುಂಬದ ಅನೇಕರಿಗೆ ಹುಚ್ಚು ಹಿಡಿದಿದ್ದು, ಇಲ್ಲ ಕುಟುಂಬವೇ ಸರ್ವನಾಶವಾಗಿರುವ ಕಥೆಗಳನ್ನು ಹೇಳುತ್ತಾರೆ. ಅನೇಕ ಬಾರಿ ಈ ವಿಷಯವನ್ನು ಪುರಾಣ ಪುಣ್ಯಕಥೆಗಳಿಂದ ಇನ್ನೂ ಹೆಚ್ಚು ವಿವರಿಸುತ್ತಾರೆ. ಹಾಗಿದ್ದರೆ, ಈಗ ಇವರು ನೀಡುತ್ತಿರುವ ವಿವರಣೆಗಳು ನಂಬಿಕೆಗಳಲ್ಲವೇ ಎಂದು ಮೇಲ್ನೋಟಕ್ಕೆ ವಾದಿಸಲು ಸಾಧ್ಯವಾಗುತ್ತದೆ. ಅಂದರೆ ಅನೇಕ ಭಾರತೀಯರು ಆಣೆ – ಪ್ರಮಾಣದ ಹೆಸರಿನಲ್ಲಿ ಸುಳ್ಳು ಹೇಳಲು ಹೆದರುವ ಭಾವನೆ ಒಂದು ನಿರ್ದಿಷ್ಟ ಕಾರ್ಯಕಾರಣ ಸಂಬಂಧದ ಮೇಲೆ ನಿಂತಿದೆ.
ಆದರೆ ಈ ಕಾರ್ಯಕಾರಣ ಸಂಬಂಧವನ್ನು ಅಂದರೆ ಸುಳ್ಳು ಆಣೆ ಮಾಡುವುದು ಮತ್ತು ತೊಂದರೆಗೆ ಒಳಗಾಗುವುದು ಇವುಗಳ ನಡುವೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಲು ಸಾಧ್ಯವಾಗದು. ಆ ಕಾರಣಕ್ಕಾಗಿಯೇ ಇವರು ನಿರ್ದಿಷ್ಟ ಘಟನೆಯನ್ನು ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎಂದು ವಾದಿಸುತ್ತಿದ್ದಾರೋ ಆ ಕಾರಣ ಮತ್ತು ಕಾರ್ಯದ ನಡುವಿನ ಸಂಬಂಧ ನೇರವಾಗಿ ಯಾವ ತರ್ಕದಿಂದಲೂ ಸಿದ್ಧಪಡಿಸಲಾಗದ ಸಂಬಂಧವಾಗಿದೆ. ಆ ಕಾರಣಕ್ಕಾಗಿಯೇ ಇದು ನಂಬಿಕೆಯಲ್ಲದೇ ಮತ್ತೇನು ಎಂದು ತರ್ಕಿಸಬಹುದು. ಇದಕ್ಕೆ ಭಾರತೀಯ ಪರಂಪರೆಗಳಲ್ಲಿ ಅರ್ಥವಾದವೆಂದೂ ಕರೆಯಬಹುದು. ಹಾಗಾದರೆ, ಭಾರತೀಯ ಸಮುದಾಯ ಆ ರೀತಿಯ ನಂಬಿಕೆಗಳಿಂದ ಈ ಜಗತ್ತಿನೊಡನೆ ವ್ಯವಹರಿಸುತ್ತಿದೆ ಎಂದು ಅನೇಕ ಆಧುನಿಕ ವಿದ್ವಾಂಸರು ವಾದಿಸುವುದನ್ನು ಒಪ್ಪಿಬಿಡಬೇಕಾಗುತ್ತದೆ.
ಈ ರೀತಿಯ ಸಂದರ್ಭಗಳನ್ನು ನಂಬಿಕೆಗಳು ಅಥವಾ ಹೆದರಿಕೆಯೆಂದು ಕರೆಯುವುದರಲ್ಲಿ ಇರುವ ಸಮಸ್ಯೆಯನ್ನು ನೋಡೋಣ. ಇದಕ್ಕಾಗಿ ಭವದ್ಗೀತೆಯ ಎರಡು ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಮಹಾಭಾರತದ ಯುದ್ಧದ ಆರಂಭದಲ್ಲಿ ಅರ್ಜುನನು ಕೃಷ್ಣನಿಗೆ ತಾನು ಯುದ್ಧ ಮಾಡದಿರಲು ಅನೇಕ ಕಾರಣಗಳನ್ನು ಕೊಡುತ್ತಾನೆ. ಅದರಲ್ಲಿ ಒಂದು ಕಾರಣವು ಇಂತಿದೆ – ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ। ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್ ಅಧರ್ಮಾಭಿಭವತ್ಯುತ॥’ ಅಂದರೆ ಯುದ್ಧ ಮಾಡಿದರೆ ಅನೇಕ ಕುಲಗಳು ನಾಶವಾಗುತ್ತವೆ. ಕುಲಗಳು ನಾಶವಾಗುವುದರಿಂದ ಕುಲಧರ್ಮಗಳು ನಾಶವಾಗುತ್ತವೆ. ಕುಲಧರ್ಮಗಳು ನಾಶವಾದಾಗ, ಎಲ್ಲ ಕುಲಗಳನ್ನೂ ಅಧರ್ಮವು ಆವರಿಸಿಕೊಳ್ಳುತ್ತದೆ. ಅರ್ಜುನ ಈ ಮಾತನ್ನು ಕೇಳಿದಾಗ ಅನೇಕ ಪ್ರಶ್ನೆಗಳು ಮನಸ್ಸಿಗೆ ಬರುತ್ತವೆ. ಕುಲಗಳು ನಾಶವಾದರೆ ಅಧರ್ಮವು ಆವರಿಸಿಕೊಳ್ಳುತ್ತದೆ ಎಂದು ಅರ್ಜುನನಿಗೆ ಹೇಗೆ ತಿಳಿಯಿತು? ಕೆಲ ಕುಲಗಳು ನಷ್ಟವಾದರೆ, ಹೊಸ ಕುಲಗಳು ಬರುತ್ತವೆ, ಹೊಸ ಕುಲ ಧರ್ಮಗಳು ಬರುತ್ತವೆ. ಕುಲಗಳನ್ನು ಅಧರ್ಮವು ಏಕೆ ಆವರಿಸಿಕೊಳ್ಳಬೇಕು ಎಂದು ಪ್ರಶ್ನಿಸಬಹುದಾಗಿದೆ. ಹಾಗಿದ್ದರೂ ಅರ್ಜುನನು ಕುಲಕ್ಷಯವಾದರೆ ಅಧರ್ಮವು ಆವರಿಸಿಕೊಳ್ಳುತ್ತದೆ ಎಂದು ಏಕೆ ಹೇಳಿದ್ದಾನೆ ಇತ್ಯಾದಿ ಅನೇಕ ತರ್ಕಗಳನ್ನು ಮಾಡಬಹುದು. ಇದೇ ರೀತಿಯಲ್ಲಿ ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ಕೃಷ್ಣನು ಅರ್ಜುನನಿಗೆ ಹೀಗೆ ಹೇಳುತ್ತಾನೆ – ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ। ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’. ಇದರ ಅರ್ಥವು ಇಂತಿದೆ – ಸಾಧುಗಳ ರಕ್ಷಣೆಗಾಗಿ, ದುಷ್ಕೃತ್ಯಗಳನ್ನು ಮಾಡುವುವವರ ನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ನಾನು ಅಂದರೆ ಕೃಷ್ಣನು ಯುಗಯುಗಳಲ್ಲೂ ಜನಿಸುತ್ತೇನೆ ಎಂಬುದಾಗಿದೆ. ಇಲ್ಲಿಯೂ ಇದೇ ರೀತಿಯ ಪ್ರಶ್ನೆಗಳನ್ನು ನಾವು ಕೇಳಬಹುದಾಗಿದೆ. ಸಾಧು ಸಜ್ಜನರಿಗೆ ತೊಂದರೆಯಾದಾಗ, ಯಾರೋ ಒಬ್ಬರು ರಕ್ಷಣಾರ್ಥವಾಗಿ ಬರುತ್ತಾರೆ ಎನ್ನುವುದು ಕೃಷ್ಣನಿಗೆ ಹೇಗೆ ತಿಳಿಯಿತು, ಬರದೆಯೂ ಇರಬಹುದಲ್ಲ? ಸಾಧುಸಜ್ಜನರಿಗೆ ತೊಂದರೆಯಾದರೆ ಕೃಷ್ಣನು ತಾನೇ ಬರುತ್ತೇನೆಂದು ಹೇಳುತ್ತಿದ್ದಾನೆ. ದ್ವಾಪರದ ಕೃಷ್ಣನು ಎಷ್ಟೋ ಯುಗಗಳ ನಂತರದಲ್ಲಿ ಬರುವ ಸಾಧು ಸಜ್ಜನರನ್ನು ರಕ್ಷಿಸಲು ಬರುವುದು ಹೇಗೆ ಎಂದು ವಾದಿಸಬಹುದು. ಈ ಎರಡು ಸಂದರ್ಭಗಳಲ್ಲೂ, ಕುಲಧರ್ಮಗಳು ನಾಶವಾಗುವುದರಿಂದ ಕುಲಕ್ಕೆ ಅಧರ್ಮವು ಆವರಿಸಿಕೊಳ್ಳುತ್ತದೆ ಎಂಬುದನ್ನಾಗಲಿ ಅಥವಾ ಸಾಧುಗಳಿಗೆ ತೊಂದರೆಯಾದ ರಕ್ಷಣಾರ್ಥವಾಗಿ ಯಾರೋ ಒಬ್ಬರು ಬರುತ್ತಾರೆ ಎಂಬುದನ್ನಾಗಲಿ ಯಾವುದೇ ತರ್ಕದಿಂದ ಸಾಬೀತುಪಡಿಸಲು ಸಾಧ್ಯವಿಲ್ಲ. ಅಲ್ಲದೇ ಇವುಗಳಲ್ಲಿ ಕಾರ್ಯಕಾರಣ ಸಂಬಂಧವು ಇದೆ ಎಂಬುದನ್ನೂ ಸಿದ್ಧ ಮಾಡುವುದೂ ಕಷ್ಟವೆ. ಆದರೆ ಕುಲಕ್ಷಯವಾದಾಗ ಅಧರ್ಮವು ಕುಲವನ್ನು ಆವರಿಸಿಕೊಳ್ಳುತದೆಂದೂ ಮತ್ತು ಸಾಧು – ಸಜ್ಜನರಿಗೆ ತೊಂದರೆಯಾದ ಅವರನ್ನು ಯಾರೋ ಒಬ್ಬರ ನಾಯಕತ್ವದಲ್ಲಿ ಜನರು ರಕ್ಷಿಸುತ್ತಾರೆ ಎನ್ನುವುದು ನಮಗೆ ಅನುಭವ ಸಿದ್ಧ ವಿಷಯ. ಈ ಹಿಂದೆ ಇಂತಹಾ ಘಟನೆಗಳು ಜರುಗಿದಾಗ ಜನರು ಕಂಡದ್ದನ್ನು, ಕೇಳಿದ್ದನ್ನು ಅನುಭವವಾಗಿ ಮುಂದಿನ ತಲೆಮಾರಿಗೆ ದಾಟಿಸಿದ್ದಾರೆ. ಇದೇ ರೀತಿಯಲ್ಲಿ ಆಣೆ – ಪ್ರಮಾಣಗಳ ಸಂದರ್ಭದಲ್ಲಿ ಸತ್ಯದ ಹೆಸರಲ್ಲಿ ಸುಳ್ಳು ಹೇಳಿದರೆ ಕೇಡಾಗುತ್ತದೆ ಎನ್ನುವುದೂ ನಮಗೆ ಅನುಭವದಿಂದ ತಿಳಿದಿದೆ. ರಾಜಕಾರಣಿಗಳು ಮತ್ತು ಇನ್ನಿತರ ಅನೇಕ ಭಾರತೀಯರು ಆಣೆ ಪ್ರಮಾಣಗಳ ವಿಷಯದಲ್ಲಿ ಹೇಳುವ ಕಥೆಗಳೂ ಇದೇ ರೀತಿಯಲ್ಲಿಯೇ ಇವೆ. ಆಣೆ ಪ್ರಮಾಣಗಳ ಸಂದರ್ಭದಲ್ಲಿ ಸುಳ್ಳು ಹೇಳಿದರೆ, ಹಾಗೆ ಮಾಡಿದವರಿಗೆ ಕೇಡಾಗುತ್ತದೆ ಎನ್ನುವಲ್ಲಿ ಯಾವುದೇ ಕಾರ್ಯಕಾರಣ ಸಂಬಂಧವನ್ನಾಗಲಿ ಮತ್ತು ಇದನ್ನು ತರ್ಕದಿಂದಾಗಲಿ ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೆ ಇದು ಮೌಢ್ಯ ಅಥವಾ ನಂಬಿಕೆಯಲ್ಲವೇ ಎಂದು ಸಹಜವಾಗಿಯೇ ಕೇಳಿಬಿಡಬಹುದು. ಆದರೆ ಇದು ಮೌಢ್ಯ ಅಥವಾ ನಂಬಿಕೆಯ ವಿಷಯಕ್ಕೆ ಸೇರಿದ್ದಲ್ಲ.
ನಮ್ಮ ಸಹಜ ಅನುಭವದಲ್ಲಿ ಆಣೆ ಪ್ರಮಾಣಗಳ ಸಂದರ್ಭದಲ್ಲಿ ಸುಳ್ಳು ಹೇಳಿದವರ ಅಥವಾ ಬೇರೆಯವರಿಗೆ ಅನ್ಯಾಯ ಮಾಡಿರುವವರ ಕುಲದಲ್ಲಿ ಅನೇಕ ತಲೆಮಾರುಗಳವರೆಗೂ ತೊಂದರೆ ಉಂಟಾಗಿರುವ ಅನೇಕ ಉದಾಹರಣೆಗಳು ನಮ್ಮ ಅನುಭವದಲ್ಲಿದೆ. ಹಾಗೆಂದು ಅವರು ಸುಳ್ಳು ಹೇಳಿದ್ದಕ್ಕಾಗಿ, ಇತರರಿಗೆ ಕೇಡುಮಾಡಿದ ಕಾರಣಕ್ಕಾಗಿಯೇ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ನೇರವಾಗಿ ಸಿದ್ಧಪಡಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಈ ಅನುಭವದಿಂದ ನಾವು ಆಣೆ – ಪ್ರಮಾಣಗಳಲ್ಲಿ ಸುಳ್ಳನ್ನು ಹೇಳಬಾರದು ಎನ್ನುವ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತೇವೆ. ಆದ್ದರಿಂದಲೇ ಎಲ್ಲ ಸಂದರ್ಭಗಳಲ್ಲೂ ನಾವು ಆಣೆ – ಪ್ರಮಾಣಗಳನ್ನು ಮಾಡುವುದೂ ಇಲ್ಲ. ಕೆಲ ಸಣ್ಣ ಸಣ್ಣ ವಿಷಯಗಳಿಗೂ ಆಣೆ ಮಾಡಿದಾಗ ಹಿರಿಯರು ನಮ್ಮನ್ನು ಬೈಯ್ಯುವುದನ್ನು ಕಾಣಬಹುದಾಗಿದೆ. ಹೀಗೆ ಯಾವ ಸಂದರ್ಭದಲ್ಲಿ ಆಣೆ ಪ್ರಮಾಣಗಳನ್ನು ಮಾಡಬೇಕು, ಯಾವಾಗ ಮಾಡಬಾರದು, ಆಣೆ ಪ್ರಮಾಣಗಳನ್ನು ಮಾಡುವಾಗ ಹೇಗೆ ನಡೆದುಕೊಳ್ಳಬೇಕು, ಹಾಗೆ ಮಾಡದಿದ್ದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ನಮ್ಮ ಹಿರಿಯರ ಅನುಭವದಿಂದ ಕಲಿತುಕೊಳ್ಳುತ್ತೇವೆ. ಹಾಗಾಗಿಯೇ ರಾಜಕಾರಣಿಗಳು ಅಡ್ಡಮತ ಮಾಡಿದ್ದರ ಬಗ್ಗೆ ಆಣೆ – ಪ್ರಮಾಣ ಮಾಡಿದರೆ ಧರ್ಮಸ್ಥಳಕ್ಕೆ ಅಪಚಾರವಾಗುತ್ತದೆ, ದೇವಸ್ಥಾನಕ್ಕೆ ಬಂದು ರಾಜಕಾರಣ ಮಾಡಬಾರದು ಇತ್ಯಾದಿ ಸಲಹೆಗಳನ್ನು ಜನರೇ ನೀಡಿದ್ದನ್ನು ಕಾಣಬಹುದು. ಅಷ್ಟೇ ಅಲ್ಲ, ನಮ್ಮ ದೈನಂದಿನ ಜೀವನದಲ್ಲಿ ತಾಯಿಯಾಣೆ, ತಂದೆಯಾಣೆ, ನಮ್ಮ ಪ್ರೀತಿಪಾತ್ರರ ಮೇಲೆ ಆಣೆ ಮಾಡುವುದು ತಾನು ಹೇಳುತ್ತಿರುವುದು ಸತ್ಯವೆಂಬುದನ್ನು ಪ್ರಮಾಣೀಕರಿಸುವ ಬಗ್ಗೆ ಎಂಬುದಾಗಿ ಭಾರತೀಯರೆಲ್ಲರಿಗೆ ಪರಿಚಯವಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತೀಯ ಸಮಾಜದಲ್ಲಿ ಸರ್ವೇ ಸಾಧಾರಣವಾಗಿ ಕಾಣುವ ಆಣೆ – ಪ್ರಮಾಣ ಮತ್ತು ಸತ್ಯ – ಧರ್ಮ – ನ್ಯಾಯಗಳ ಸಂಬಂಧ ಅನುಭವದ ತರ್ಕದ ಮೇಲೆ ಮಾತ್ರ ಸಿದ್ಧಪಡಿಸಬಹುದಾದ ಕಾರ್ಯಕಾರಣ ಸಂಬಂಧವಾಗಿದೆ. ಆದ್ದರಿಂದಲೇ ಭಾರತೀಯರು ದೈನಂದಿನ ವ್ಯವಹಾರದಲ್ಲಿ ‘ಇದನ್ನು ಮಾಡಿದರೆ ಮತ್ತೊಂದಾಗುತ್ತದೆ’ ಎನ್ನುವ ತರಹದ ವಾಕ್ಯಗಳನ್ನು ಕಾರ್ಯಕಾರಣ ಭಾವದಿಂದಲೇ ಗ್ರಹಿಸುತ್ತಾರೆ. ಭಾರತೀಯರಿಗೆ ಇಲ್ಲಿ ಹಿಂದಿನವರ ಅನುಭವದಿಂದ ಹುಟ್ಟಿರುವ ತಿಳಿವಳಿಕೆ ನಿರ್ದಿಷ್ಟ ಕಾರ್ಯಕ್ಕೆ ಆರೋಪಿಸುತ್ತಿರುವ ಗುಣಾವಗುಣಗಳ ಕಾರಣಕ್ಕೆ ಪ್ರಮಾಣವಾಗಿ ಕಾಣುತ್ತದೆ. ಈ ತಿಳಿವಳಿಕೆಯ ಮೇಲಿನ ವಿಶ್ವಾಸ ಅವರನ್ನು ನಿರ್ದಿಷ್ಟ ಕ್ರಿಯೆಯನ್ನು ಮಾಡಲು ಅಥವಾ ಮಾಡದಿರಲು ಪ್ರೇರೇಪಿಸುತ್ತದೆ. ಆ ಕಾರಣಕ್ಕಾಗಿಯೇ ಅವರಿಗೆ ಯುರೋಪಿನ ವ್ಯವಸ್ಥೆಯ ಭಾಗವಾಗಿ ಬಂದ ಕೋರ್ಟು-ಕಛೇರಿಗಳು ಈ ರೀತಿಯ ಸತ್ಯಧರ್ಮದ ವಾಹಕಗಳಾಗಿ ಕಾಣುವುದಿಲ್ಲ. ಅವರ ಅನುಭವದಲ್ಲಿ ಈ ಸತ್ಯಪ್ರಮಾಣಗಳು ಯಾವ ರೀತಿ ಪ್ರಮಾಣೀಕರಿಸಲಾಗುತ್ತದೆ ಎಂಬ ಪಾರಂಪರಿಕ ಅನುಭವವಿದೆಯೋ ಅದನ್ನೇ ಅವರು ಉಳಿಸಿಕೊಂಡು ಬಂದಿದ್ದಾರೆ. ಈ ಪದ್ಧತಿಗಳನ್ನು ಒಪ್ಪದಿರುವ ನ್ಯಾಯಾಧೀಶರಾಗಲಿ ಮತ್ತು ಈ ಪದ್ಧತಿಗಳನ್ನು ಒಪ್ಪದಿರುವ ವ್ಯವಸ್ಥೆಯ ಭಾಗವಾಗಿರುವ ರಾಜಕೀಯ ಕಾನೂನು ಇತ್ಯಾದಿ ಎಲ್ಲ ಕ್ಷೇತ್ರಗಳ ಜನರೂ ದೇವಸ್ಥಾನ, ತೀರ್ಥಕ್ಷೇತ್ರ ಇತ್ಯಾದಿ ಜಾಗಗಳಲ್ಲಿ ಸತ್ಯಧರ್ಮ ನ್ಯಾಯಗಳಿರುವ ನಿಷ್ಠೆ ಮತ್ತು ಮಹತ್ತ್ವವನ್ನು ಅರಿತಿದ್ದಾರೆ ಮತ್ತು ಅನುಸರಿಸುತ್ತಾರೆ.
ಬಹಳ ವಿಶೇಷವೆಂದರೆ ಈ ರೀತಿ ಅನುಭವದಿಂದ ಹುಟ್ಟುವ ತಿಳಿವಳಿಕೆಯು ಮತ್ತು ಅಂತಹ ಜ್ಞಾನವನ್ನು ದಾಟಿಸುವ ಪರಂಪರೆಗಳನ್ನು ನೋಡಿದ ಯುರೋಪಿಯನ್ನರು ಅವರ ಅನುಭವದ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಮೌಢ್ಯ, ನಂಬಿಕೆ ಇತ್ಯಾದಿ ಶಬ್ದಗಳ ಮೂಲಕ ವಿವರಿಸಿದರು. ಆ ಕಾರಣಕ್ಕಾಗಿಯೇ ಇಂದು ವಿದ್ಯಾವಂತ ಶಿಕ್ಷಿತ ಭಾರತದ ಸಮುದಾಯವು ಈ ರೀತಿ ಅನುಭವ ಜನ್ಯ ಪ್ರಮಾಣೀಕೃತ ತಿಳಿವಳಿಕೆಯನ್ನು ಮೂಢನಂಬಿಕೆ ಇತ್ಯಾದಿ ಕರೆದು ಹೊಸ ವ್ಯವಸ್ಥೆಯ ರಚನೆಗಳ ಕಡೆಗೆ ಹೊರಟಿದ್ದಾರೆ. ಈಗಾಗಲೇ ಸೂಚಿಸಿರುವಂತೆ ಹೊಸ ವ್ಯವಸ್ಥೆಗಳಲ್ಲಿ ಸತ್ಯ ಧರ್ಮ ನ್ಯಾಯಗಳ ಸ್ಥಿತಿ ಏನು ಎನ್ನುವುದು ಪ್ರಶ್ನಾರ್ಥಕವಾಗಿದೆ. ಯುರೋಪಿನವರಿಗೆ ಭಾರತವು ಹಗ್ಗವನ್ನು ನೋಡಿ ಹಾವೆಂದು ಪರಿಭಾವಿಸಿದ್ದು ಅವರ ಅನುಭವವಾದರೆ ಕಣ್ಣುಮುಂದೆ ಕಾಣುತ್ತಿರುವ ಭಾರತವೆಂಬ ಹಗ್ಗವನ್ನು ಇನ್ನೂ ಹಾವು ಎಂದು ವಿವರಿಸಿಕೊಳ್ಳುತ್ತಿರುವ ಭಾರತೀಯರ ಆಲೋಚನ ಕ್ರಮವನ್ನೇ ಶಂಕರಾಚಾರ್ಯರು ಅಧ್ಯಾಸ ಎಂದು ಕರೆದದ್ದು. ಇಂದಿಗೂ ಭಾರತೀಯರು ಗಂಭೀರವಾಗಿ ಪರಿಗಣಿಸುವ ಆಣೆ ಪ್ರಮಾಣಗಳನ್ನು ರಿಲಿಜಿಯಸ್ ಬಿಲೀಫ್ ಆಗಿ ಪರಿವರ್ತಿಸುವ ಪ್ರಕ್ರಿಯೆ ನಮ್ಮ ಬೌದ್ಧಿಕ ದಾಸ್ಯವಲ್ಲವೇ? ಇದನ್ನು ಕಳಚಲು ನಮ್ಮ ಅನುಭವವನ್ನು ಮುನ್ನೆಲೆಗೆ ತಂದು ನೋಡಿದಾಗ ನಮ್ಮ ಪೂರ್ವಜರ ಆಲೋಚನೆಯ ಸ್ವರೂಪ ನಮಗೆ ಗೋಚರವಾಗುತ್ತದೆ. ಆದರೆ ಅದನ್ನು ಗ್ರಹಿಸಲು ಇಂದು ಸಿದ್ಧವಾಗಿದ್ದೇವೆಯೇ? ಹಗ್ಗವನ್ನು ಹಾವಾಗಿ ನೋಡುವ ಪ್ರಕ್ರಿಯೆಗೆ ನಾವು ತೆರೆ ಎಳೆಯಲು ಸಿದ್ಧವಿದ್ದೇವೆಯೇ ಎನ್ನುವುದು ಇಂದಿನ ನಮ್ಮ ಮುಂದಿನ ಪ್ರಶ್ನೆ.
- ಪ್ರೊ. ಎಂ.ಎಸ್. ಚೈತ್ರ
ನಿರ್ದೇಶಕ ಮತ್ತು ಸೀನಿಯರ್ ಫೆಲೋ, ಫೌಂಡೇಶನ್ ಫಾರ್ ಸ್ಟಡಿ ಆಫ್ ಇಂಡಿಯನ್ ಕಲ್ಚರ್, ಬೆಂಗಳೂರು.
ಸಹಪ್ರಾಧ್ಯಾಪಕ, ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು
