ಬೆಂಗಳೂರು: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿರುವ ಈ ಶುಭ ಸಂದರ್ಭದಲ್ಲಿ, ನಗರದ ಸ್ಲಂ ಪ್ರದೇಶಗಳ ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್ ಒಂದು ವಿಶಿಷ್ಟ ಹಾಗೂ ಅಭಿನಂದನೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಸ್ಥೆಯ ‘ಸೇವಾವಸತಿ ಪ್ರಕಲ್ಪ’ದ ಅಡಿಯಲ್ಲಿ ಬೆಂಗಳೂರಿನ ವಿವಿಧ ಸ್ಲಂಗಳು ಹಾಗೂ ಅವುಗಳ ಸುತ್ತಮುತ್ತಲಿನ ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳಲ್ಲಿ ’80ನೇ ಸ್ವಾತಂತ್ರ್ಯೋತ್ಸವ’ದ ನಿಮಿತ್ತ 80 ಮಹಾಪುರುಷರ ಕಥಾಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ.
ಪ್ರಸ್ತುತ ದಿನಗಳಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರಪುರುಷರ ಇತಿಹಾಸವು ಶಾಲಾ ಪಠ್ಯಪುಸ್ತಕಗಳಲ್ಲಿ ಅತ್ಯಂತ ಸಂಕ್ಷಿಪ್ತವಾಗಿದ್ದು, ಯುವ ಪೀಳಿಗೆಯೂ ಅವರನ್ನು ಮರೆಯುತ್ತಿರುವ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕೈಗೊಂಡಿರುವ ಈ ಜಾಗೃತಿ ಅಭಿಯಾನವು ನಾಡಿನ ಇತರೆ ಸಾಮಾಜಿಕ ಹಾಗೂ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ.
ಪಠ್ಯದಲ್ಲೂ ಇಲ್ಲದ ಇತಿಹಾಸ ಉಣಬಡಿಸುವ ಪ್ರಯತ್ನ:
ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ವಾಸುದೇವ ಬಲವಂತ ಫಡ್ಕೆ, ಉಧಮ್ ಸಿಂಗ್, ರಾಮಪ್ರಸಾದ್ ಬಿಸ್ಮಿಲ್ ಸೇರಿದಂತೆ ಕರ್ನಾಟಕದ ಹೆಮ್ಮೆಯ ಸುರಪುರದ ರಾಜಾ ವೆಂಕಟಪ್ಪ ನಾಯಕರಂತಹ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಕ್ರಾಂತಿಕಾರಿಗಳ ಶೌರ್ಯ-ಬಲಿದಾನದ ನೈಜ ಕಥೆಗಳನ್ನು ಮಕ್ಕಳಿಗೆ ತಲುಪಿಸಲಾಗುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ಸಕಾರಾತ್ಮಕ ಸ್ಪಂದನೆ:
ಈ ಅಭಿಯಾನಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಸಾಮಾನ್ಯವಾಗಿ ದಿನನಿತ್ಯದ ಪಠ್ಯಕ್ರಮದಲ್ಲಿ ಸಿಗದ ಇಂತಹ ಸ್ಫೂರ್ತಿದಾಯಕ ಕಥೆಗಳನ್ನು ಮಕ್ಕಳು ಅತ್ಯಂತ ಆಸಕ್ತಿ ಮತ್ತು ಕುತೂಹಲದಿಂದ ಕೇಳುತ್ತಿದ್ದಾರೆ.
ಸ್ಲಂ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸೇವಾವಸತಿ ಪ್ರಕಲ್ಪದ ಮೂಲಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಜನತೆಯಲ್ಲಿ ರಾಷ್ಟ್ರೀಯ ಚಿಂತನೆ ಹಾಗೂ ಸಂಸ್ಕಾರವನ್ನು ಬಿತ್ತುವ ಈ ಕಥಾಭಿಯಾನವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
- ನಾಗರಾಜ ಮಕಾಶಿ

