ಸಂಯಮ ಹಾಗೂ ದೃಢಚಿತ್ತದಿಂದ, ದತ್ತೋಪಂತ್ ಥೆಂಗಡಿಯವರು ಭಾರತೀಯ ಕಾರ್ಮಿಕ ಸಂಘಟನಾ ರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದರು. ಹಾಗಂತ, ಈ ಹಬ್ಬವೇನೂ ಕೇವಲ ಶಾಸ್ತ್ರ-ಸಂಪ್ರದಾಯಗಳಿಗೋ ಅಥವಾ ಮಂತ್ರ-ಪುನಶ್ಚರಣೆಗಳಿಗೋ ಮಾತ್ರ ಸೀಮಿತವಾಗಿರಲಿಲ್ಲ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಸ್ವಾತಂತ್ರ್ಯ ಸಂಗ್ರಾಮವು ಬಿರುಸು ಪಡೆದಿದ್ದ ದಿನಗಳಲ್ಲಿ, ವಿಶ್ವಕರ್ಮ ಪೂಜೆಯು ಈ ನೆಲದಾದ್ಯಂತ ಒಂದು ವಿಶಿಷ್ಟ ಸ್ವಾತಂತ್ರ್ಯದ ಸಂಕೇತವಾಗಿ ಮೂಡಿಬಂದಿತ್ತು.
ಆದರೆ ಅತ್ಯಂತ ಬೇಸರದ ಸಂಗತಿಯೆಂದರೆ, ಮಾರ್ಕ್ಸ್ವಾದಿ ಇತಿಹಾಸಕಾರರು ಹಾಗೂ ಎಡಪಂಥೀಯ ಚಿಂತಕರು ಈ ಹಬ್ಬಗಳ ಹಿಂದಿನ ಅಪ್ಪಟ ಬ್ರಿಟಿಷ್ ವಿರೋಧಿ ಆರ್ಥಿಕ ರಾಷ್ಟ್ರೀಯತೆಯನ್ನು ಮತ್ತು ಕಾರ್ಮಿಕರ ದಿಟ್ಟ ಪ್ರತಿರೋಧವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಅಷ್ಟೇ ಅಲ್ಲದೆ, ಉದ್ದೇಶಪೂರ್ವಕವಾಗಿ ಇವುಗಳಿಗೆ ಕೋಮುವಾದದ ಬಣ್ಣ ಬಳಿಯುವ ಕುಟಿಲ ಪ್ರಯತ್ನ ಮಾಡಿದರು.
ವಿಶ್ವಕರ್ಮರ ಮಹತ್ವ ಮತ್ತು ಸ್ವದೇಶಿ ಚಳವಳಿ: ಆರ್ಥಿಕ ರಾಷ್ಟ್ರೀಯತೆಯ ಕಥಾನಕ:
ಚಾರಿತ್ರಿಕ ದಾಖಲೆಗಳ ಪ್ರಕಾರ, ಈ ಚಳವಳಿಗೆ ಅಡಿಪಾಯ ಹಾಕಿದ ಪ್ರಮುಖರೆಂದರೆ ದೇಶಬಂಧು ಚಿತ್ತರಂಜನ್ ದಾಸ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸಿ.ಆರ್. ದಾಸ್ ಅವರು, ಖರಗ್ಪುರ ರೈಲ್ವೆ ವರ್ಕ್ಶಾಪ್ ಹಾಗೂ ಹೂಗ್ಲಿಯ ಸೆಣಬಿನ ಗಿರಣಿಗಳಲ್ಲಿ ವಿಶ್ವಕರ್ಮ ಪೂಜೆಯ ಮಂಟಪಗಳನ್ನು ಕಾರ್ಮಿಕರನ್ನು ಒಗ್ಗೂಡಿಸುವ ರಾಜಕೀಯ ವೇದಿಕೆಗಳನ್ನಾಗಿ ಬಳಸಿಕೊಂಡರು. ಬ್ರಿಟಿಷ್ ಪೊಲೀಸ್ ಪಡೆಗಳು ಸಾರ್ವಜನಿಕ ಸಭೆಗಳಿಗೆ ಕಠಿಣ ತಡೆ ಹೇರಿದ್ದ ಆಪತ್ಕಾಲದಲ್ಲಿ, ವಿಶ್ವಕರ್ಮ ಪೂಜೆಯ ನೆಪದಲ್ಲಿ ಕಾರ್ಮಿಕರನ್ನು ಸೇರಿಸುವುದು ಅತ್ಯಂತ ಸುಲಭ ಹಾಗೂ ಕಾನೂನುಬದ್ಧ ಮಾರ್ಗವಾಗಿತ್ತು.
ಇನ್ನು ಸಶಸ್ತ್ರ ಕ್ರಾಂತಿಕಾರಿಗಳ ಪೈಕಿ, ಚಂದ್ರಶೇಖರ್ ಆಜಾದ್ ಅವರ ಜೊತೆಗಿದ್ದ ರಾಮದಾಸ್ ಲೋಹಾರ್ ಹಾಗೂ ನಾನಾ ಲೋಹಾರ್ನಂತಹ ಕಮ್ಮಾರ ಸಮುದಾಯದ ನುರಿತ ಕುಶಲಕರ್ಮಿಗಳು, ಗುಪ್ತವಾಗಿ ಬಾಂಬ್ ಹಾಗೂ ಶಸ್ತ್ರಾಸ್ತ್ರಗಳನ್ನು ತಯಾರಿಸಲು ವಿಶ್ವಕರ್ಮರ ಪವಿತ್ರ ಶಸ್ತ್ರ ಪೂಜೆಯನ್ನೇ ಒಂದು ರಕ್ಷಾಕವಚವನ್ನಾಗಿ ಬಳಸಿಕೊಂಡರು.
ಆದರೆ, ಕಮ್ಯುನಿಷ್ಟರು ಈ ದೇಶಪ್ರೇಮದ ಹಾಗೂ ಐತಿಹಾಸಿಕ ಬೇರುಗಳಿರುವ ಭಾರತೀಯ ಕಾರ್ಮಿಕ ಚಳವಳಿಯನ್ನು ತಮ್ಮ ವಿದೇಶಿ (ಯುರೋಪಿಯನ್) ಸಿದ್ಧಾಂತಕ್ಕೆ ಎದುರಾದ ದೊಡ್ಡ ಮುಳ್ಳು ಎಂದು ಭಾವಿಸಿ, ಅದರ ಧ್ವನಿಯನ್ನು ಹತ್ತಿಕ್ಕಲು ನಿರಂತರವಾಗಿ ಯತ್ನಿಸಿದರು.
‘ಕೈಗಾರಿಕಾ ಕುಟುಂಬ’ ವರ್ಸಸ್ ಎಡಪಂಥೀಯ ಜಡತ್ವ: ಕಾರ್ಮಿಕರ ಸ್ವಂತಿಕೆ ಹಾಗೂ ನಂಬಿಕೆಗಳ ಮೇಲಿನ ದಾಳಿ
ಒಬ್ಬ ಕುಶಲಕರ್ಮಿಯು ವಿಶ್ವಕರ್ಮರನ್ನು ಪೂಜಿಸಿದಾಗ, ಆತ ಸೃಷ್ಟಿಯ ಪರಮ ದೈವಿಕ ಶಕ್ತಿಯನ್ನು ಗೌರವಿಸುತ್ತಾನೆ. ಕಾರ್ಖಾನೆಯ ಕಠಿಣ ಯಾಂತ್ರಿಕ ವಾತಾವರಣದಲ್ಲೂ ಕಾರ್ಮಿಕರು ತಮ್ಮ ಉಪಕರಣಗಳನ್ನು ಪವಿತ್ರವೆಂದು ಭಾವಿಸಿ ವಿಶ್ವಕರ್ಮ ಪೂಜೆ ಆಚರಿಸುತ್ತಾರೆ ಎಂದು ಹಡಗು ನಿರ್ಮಾಣ ತಾಣಗಳು ಮತ್ತು ಕಮ್ಮಾರರ ಉದಾಹರಣೆಗಳನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಇದು ಯಂತ್ರಗಳ ಯಂತ್ರಣದಿಂದ ಮತ್ತು ಶೋಷಣೆಯಿಂದ ಅವರಿಗೆ ಒದಗಿಸುವ ಮಾನಸಿಕ ಮುಕ್ತಿಯಾಗಿದೆ.
ಇದಕ್ಕೆ ತದ್ವಿಪರೀತವಾಗಿ, ಎಡಪಂಥೀಯ ಕಾರ್ಮಿಕ ಸಂಘಗಳು ಈ ಜೀವಂತ ಹಾಗೂ ಸ್ಥಳೀಯ ಕಾರ್ಮಿಕ ಸಂಸ್ಕೃತಿಯನ್ನು ಬುಡಸಮೇತ ಕಿತ್ತೊಗೆಯಲು ಹೋದವು. ಇದರ ಫಲವಾಗಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ದತ್ತೋಪಂತ್ ಬಾಪುರಾವ್ ಥೆಂಗಡಿ ಮತ್ತು ಅವರು ಹುಟ್ಟುಹಾಕಿದ ಭಾರತೀಯ ಮಜ್ದೂರ್ ಸಂಘದ (BMS) ಮೂಲಕ ಒಂದು ಬಲವಾದ ರಾಷ್ಟ್ರೀಯ ಪರ್ಯಾಯ ಹುಟ್ಟಿಕೊಂಡಿತು.
ಥೆಂಗಡಿಯವರ ಕಾಲಾತೀತ ಚಿಂತನೆಯಾದ “ಕೈಗಾರಿಕಾ ಕುಟುಂಬ” (Audyogik Parivar) ಪರಿಕಲ್ಪನೆಯು, ಕಮ್ಯುನಿಷ್ಟರು ತಂದಿಟ್ಟ ವರ್ಗಸಂಘರ್ಷದ ಆಮದು ಸರಕಿಗೆ ತಕ್ಕೇಟು ನೀಡಿತು. ಇದು ಭಾರತದ ರಾಜಕೀಯ ಮತ್ತು ಕಾರ್ಮಿಕ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಯಿತು.
ದತ್ತೋಪಂತ್ ಥೆಂಗಡಿ: ದಾರ್ಶನಿಕ ಹಾಗೂ ಕುಶಲಕರ್ಮಿ
ಥೆಂಗಡಿಯವರು ಕೇವಲ ಒಬ್ಬ ಕಾರ್ಮಿಕ ಮುಖಂಡರಾಗಿರಲಿಲ್ಲ; ಅವರು ಭಾರತೀಯ ದರ್ಶನದ ಹಿನ್ನೆಲೆಯಲ್ಲಿ ಕಾರ್ಮಿಕರು ಹಾಗೂ ಕೈಗಾರಿಕೆಗಳನ್ನು ಜೋಡಿಸಿದ ಅಪರೂಪದ ದಾರ್ಶನಿಕರಾಗಿದ್ದರು. ಅವರ ಆಲೋಚನೆಯ ಮೂಲಾಧಾರವೇ ಒಂದು ಉದಾತ್ತವಾದ, ಪ್ರಾಚೀನ ಭಾರತೀಯ ಪರಿಕಲ್ಪನೆ—ಅದೇ “ಕೈಗಾರಿಕಾ ಕುಟುಂಬ”.
ಈ ಚಿಂತನೆಯ ಪ್ರಕಾರ, ಕಾರ್ಖಾನೆಯೆಂದರೆ ಕೇವಲ ಶೋಷಣೆ ನಡೆಯುವ ಜಾಗವಲ್ಲ ಅಥವಾ ಮಾಲೀಕರು-ಕಾರ್ಮಿಕರ ನಡುವಿನ ಕದನ ಭೂಮಿಯೂ ಅಲ್ಲ. ಬದಲಿಗೆ, ಮಾಲೀಕರು, ಕುಶಲಕರ್ಮಿಗಳು, ವ್ಯವಸ್ಥಾಪಕರು ಹಾಗೂ ಸಮಾಜ ಎಲ್ಲರೂ ಪರಸ್ಪರ ನಂಬಿಕೆಯಿಂದ ಒಟ್ಟಾಗಿ ನಿಂತು, ದೇಶದ ಆರ್ಥಿಕ ಜವಾಬ್ದಾರಿಯನ್ನು ಹೊರLವ ಒಂದು ಅವಿಭಕ್ತ ಕುಟುಂಬ.
ಪ್ರಾಚೀನ ಭಾರತದ ಸಹಕಾರಿ ವ್ಯವಸ್ಥೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ತಳಹದಿಯ ಮೇಲೆ ನಿಂತು, ಭಾರತೀಯ ಸಂಸ್ಕೃತಿಯಲ್ಲಿ ಕೆಲಸವೆಂದರೆ ಅದು ಒಂದು “ಯಜ್ಞ” ಹಾಗೂ ಕಾರ್ಖಾನೆಯು ಆ ಯಜ್ಞ ನಡೆಯುವ ಪವಿತ್ರ ರಂಗಸ್ಥಳ ಎಂದು ಅವರು ಪ್ರತಿಪಾದಿಸಿದರು. ಪಾಶ್ಚಿಮಾತ್ಯರ ಚಿಂತನೆಯು ಕೇವಲ ಹಕ್ಕುಗಳ ಬೆನ್ನೇBದರೆ, ನಮ್ಮ ಸಾಂಪ್ರದಾಯಿಕ ಕಾರ್ಮಿಕ ತತ್ತ್ವಶಾಸ್ತ್ರವು ನಮಗೆ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ ಎಂದು ಥೆಂಗಡಿಯವರು ಸ್ಪಷ್ಟವಾಗಿ ಸಾರಿದರು.
ಮೇ ಡೇ (May Day) ನಕಲಿ ಅಂತರರಾಷ್ಟ್ರೀಯತೆ ಹಾಗೂ ಕಮ್ಯುನಿಷ್ಟರ ದೌರ್ಜನ್ಯ
ಕಮ್ಯುನಿಷ್ಟರು ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ (ಮೇ ಡೇ) ಎಂದು ಎಷ್ಟೇ ಡಂಗೂರ ಬಾರಿಸಿದರೂ, ಅವರ ಆ ಸಿದ್ಧಾಂತಕ್ಕೂ ಭಾರತೀಯ ಕಾರ್ಮಿಕರ ಸಾಂಸ್ಕೃತಿಕ ಬೇರುಗಳಿಗೂಯೂ ಆಕಾಶ-ಭೂಮಿಯ ವ್ಯತ್ಯಾಸವಿತ್ತು. ಕಾರ್ಮಿಕರ ಕಾರ್ಖಾನೆಗಳಲ್ಲೇ ಅವರ ನಂಬಿಕೆಗಳನ್ನು ಹೀಯಾಳಿಸುವುದು, ಅವರಿಗೆ ಅವಮಾನ ಮಾಡುವುದು ಮತ್ತು ಕೆಂಪು ಭಯದ ವಾತಾವರಣ ಸೃಷ್ಟಿಸುವ ಕೆಲಸವನ್ನು ಕಮ್ಯುನಿಷ್ಟರು ಮಾಡಿದರು. ಕಾರ್ಮಿಕರ ಸ್ವಾಭಿಮಾನವನ್ನು ಹಾಗೂ ಅವರ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಹತ್ತಿಕ್ಕಲು ನೋಡಿದ ಕಮ್ಯುನಿಷ್ಟರ ಈ ಧೋರಣೆಯನ್ನು ಥೆಂಗಡಿಯವರ ರಾಷ್ಟ್ರೀಯ ಕಾರ್ಮಿಕ ಚಳವಳು ದಿಟ್ಟವಾಗಿ ಎದುರಿಸಿತು.
ಕೊನೆಯದಾಗಿ ಹೇಳುವುದಾದರೆ, ಭಾರತೀಯ ಶ್ರಮ ಸಂಸ್ಕೃತಿಯು ಕೇವಲ ಹೊಟ್ಟೆಪಾಡಿನ ವ್ಯಾಪಾರವಲ್ಲ; ಅದು ಸೃಷ್ಟಿಯ ದೈವಿಕತೆಯನ್ನು ಕಾಣುವ ಜೀವಪರ ಮಾರ್ಗ. ವಿಶ್ವಕರ್ಮ ಪೂಜೆಯು ಕೇವಲ ವೃತ್ತಿಯ ಆಚರಣೆಯಲ್ಲ, ಅದು ಶ್ರಮಕ್ಕೆ ಸಿಕ್ಕಿರುವ ಅತ್ಯುಚ್ಚ ಗೌರವ. ಕಮ್ಯುನಿಷ್ಟರ ವರ್ಗಸಂಘರ್ಷದ ರಾಜಕಾರಣವು ಕಾರ್ಮಿಕರನ್ನು ಬರೀ ದಾಳಗಳನ್ನಾಗಿ ಬಳಸಿಕೊಂಡರೆ, ಭಾರತೀಯ ಚಿಂತನೆಯು ಕಾರ್ಮಿಕನಿಗೆ ಅವನದೇ ಆದ ಆಧ್ಯಾತ್ಮಿಕ ಗೌರವವನ್ನು ತಂದುಕೊಟ್ಟಿತು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
