ಬರೇಲಿ ಹಿಂಸಾಚಾರ ಪ್ರಕರಣದ ಆರೋಪಿ ಧರ್ಮಗುರು ತೌಕೀರ್ ರಾಜಾಗೆ ಜಾಮೀನು ನಿರಾಕರಣೆ
ನವದೆಹಲಿ: ಸೆಪ್ಟೆಂಬರ್ 26, 2025 ರಂದು ಬರೇಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಮೌಲಾನಾ ತೌಕೀರ್ ರಜಾ ಖಾನ್ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಶಿರಚ್ಛೇದನಕ್ಕೆ ಕರೆ ನೀಡುವ ಘೋಷಣೆಯು ಕಾನೂನಿನ ಆಡಳಿತಕ್ಕೆ ಹಾಗೂ ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಸವಾಲೆಸೆಯುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರು ಸೆಪ್ಟೆಂಬರ್ 7, 2026 ರಂದು ಈ ಆದೇಶವನ್ನು ಹೊರಡಿಸಿದ್ದಾರೆ.
ರಜಾ ಅವರು ಬರೇಲಿ ಮೂಲದ ಮುಸ್ಲಿಂ ಧರ್ಮಗುರುವಾಗಿದ್ದು, ಬರೇಲ್ವಿ ಸುನ್ನಿ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಬರೇಲ್ವಿ ಚಳವಳಿಯನ್ನು ಸ್ಥಾಪಿಸಿದ ಅಹ್ಮದ್ ರಜಾ ಖಾನ್ (ಅಲಾ ಹಜರತ್) ಅವರ ವಂಶಸ್ಥರಾಗಿದ್ದಾರೆ. 2001 ರಲ್ಲಿ, ರಜಾ ಅವರು ಬರೇಲಿಯಲ್ಲಿ ಪ್ರಭಾವ ಹೊಂದಿರುವ ‘ಇತ್ತೇಹಾದ್-ಎ-ಮಿಲ್ಲತ್ ಕೌನ್ಸಿಲ್’ (IMC) ಎಂಬ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದರು.
ಕೇಸಿನ ಹಿನ್ನೆಲೆ ಏನೆಂದರೆ, ಕಾನ್ಪುರದಲ್ಲಿ ಧಾರ್ಮಿಕ ಪ್ರದರ್ಶನ ಮತ್ತು ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ವಿವಾದದ ನಂತರ ಹರಡಿದ “ಐ ಲವ್ ಮುಹಮ್ಮದ್” ಪ್ರಚಾರ ಅಭಿಯಾನವನ್ನು ಬೆಂಬಲಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಬರೇಲಿಯಲ್ಲಿ, ಸರಕಾರದಆಪಾದಿತ ಅತಿರೇಕಗಳು ಮತ್ತು ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ಪ್ರತಿಭಟಿಸಲು ಆಯೋಜಕರು ಉದ್ದೇಶಿಸಿದ್ದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಅವರು ಯೋಜಿಸಿದ್ದರು.
ಅಭಿಯೋಜನೆಯ (Prosecution) ಪ್ರಕಾರ, ರಜಾ ಅವರು ಸೆಪ್ಟೆಂಬರ್ 19, 2025 ರಂದು ನಡೆದ ಸಭೆಯಲ್ಲಿ, ಶುಕ್ರವಾರದ ಪ್ರಾರ್ಥನೆಯ ನಂತರ ಇಸ್ಲಾಮಿಯಾ ಇಂಟರ್ ಕಾಲೇಜು ಮೈದಾನದಲ್ಲಿ ಒಟ್ಟುಗೂಡುವಂತೆ ಮುಸ್ಲಿಮರಿಗೆ ಕರೆ ನೀಡಿದ್ದರು. ಸೆಪ್ಟೆಂಬರ್ 25 ರಂದು, ಆಡಳಿತ ಮಂಡಳಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ (ಹಿಂದೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144) ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸಾರ್ವಜನಿಕವಾಗಿ ಒಟ್ಟುಗೂಡುವುದನ್ನು ನಿಷೇಧಿಸಿತ್ತು.
ಹೀಗಿದ್ದೂ, ಸೆಪ್ಟೆಂಬರ್ 26 ರಂದು ಸುಮಾರು 200–250 ಜನರು ಮೈದಾನದ ಕಡೆಗೆ ಮೆರವಣಿಗೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿದಾಗ, ಪೈಗಂಬರರನ್ನು ನಿಂದಿಸಿದವರಿಗೆ ಶಿರಚ್ಛೇದನದ ಶಿಕ್ಷೆ ನೀಡಬೇಕೆಂದು “ಗುಸ್ತಾಖ್-ಎ-ನಬಿ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ” ಎಂಬ ಘೋಷಣೆಗಳನ್ನು ಗುಂಪು ಕೂಗಿತು ಎಂದು ಆಪಾದಿಸಲಾಗಿದೆ. ಅಲ್ಲದೆ, ಗುಂಪಿನಲ್ಲಿದ್ದವರು ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ತೂರಿದರು ಹಾಗೂ ಪೊಲೀಸರ ಮೇಲೆ ಗುಂಡು ಹಾರಿಸಿ, ಸಿಬ್ಬಂದಿಗೆ ಗಾಯಗೊಳಿಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರು ಎಂದು ಆರೋಪಿಸಲಾಗಿದೆ.
ಈ ಅಶಾಂತಿಯ ಹಿಂದಿನ ಮಾಸ್ಟರ್ ಮೈಂಡ್ ರಜಾ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಗಲಭೆ ನಿಗ್ರಹ ಗನ್ ಮತ್ತು ವೈರ್ಲೆಸ್ ಸೆಟ್ ಸೇರಿದಂತೆ ಪೊಲೀಸರ ಉಪಕರಣಗಳನ್ನು ಕಸಿದುಕೊಳ್ಳಲಾಗಿದೆ ಎಂದೂ ಆರೋಪಿಸಲಾಗಿದೆ.
ಆದರೆ, ರಜಾ ಅವರ ಪರ ವಕೀಲರು, ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ ಮತ್ತು ರಾಜಕೀಯವಾಗಿ ಅವರನ್ನು ಗುರಿಮಾಡಲಾಗುತ್ತಿದೆ ಎಂದು ವಾದಿಸಿದರು. ಅನುಮತಿ ನಿರಾಕರಿಸಿದ ನಂತರ ಸಭೆಯನ್ನು ರದ್ದುಗೊಳಿಸಲಾಗಿತ್ತು ಹಾಗೂ ಹಿಂಸಾಚಾರ ನಡೆದಾಗ ಅವರು ಗೃಹಬಂಧನದಲ್ಲಿದ್ದರು ಎಂದು ಪ್ರತಿಪಾದಿಸಿದರು. ಗೃಹಬಂಧನದ ಹೇಳಿಕೆಯನ್ನು ರಾಜ್ಯ ಸರ್ಕಾರ ನಿರಾಕರಿಸಿದೆ.
ರಜಾ ಅವರು ಘಟನಾ ಸ್ಥಳದಲ್ಲಿ ಇರಲಿಲ್ಲ ಮತ್ತು ಸಹ-ಆರೋಪಿ ಫರ್ಹತ್ ಅಲಿ ಅವರ ಮನೆಯಲ್ಲಿದ್ದರು ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿತು. ಆದರೆ, ಆಡಳಿತಾತ್ಮಕ ಅನುಮತಿಯಿಲ್ಲದೆ ಸಭೆಗೆ ಕರೆ ನೀಡಿದ್ದು ಮತ್ತು ನಂತರ ಅದಕ್ಕೆ ಸ್ಪಂದಿಸಿದವರನ್ನು ಅಭಿನಂದಿಸಿ, ಅವರ ನಡವಳಿಕೆಯನ್ನು ಶ್ಲಾಘಿಸಿ ಭಾಷಣ ಮಾಡಿದ್ದನ್ನು ಕೋರ್ಟ್ ಗಮನಿಸಿತು. ಕರ್ತವ್ಯದಲ್ಲಿದ್ದ ಪೊಲೀಸರ ಮೇಲಿನ ದಾಳಿ ಮತ್ತು ನಂತರ ರಜಾ ಅವರು ನೀಡಿದ ಪ್ರಶಂಸೆ ಎರಡನ್ನೂ ಕೋರ್ಟ್ ಅಸಮ್ಮತಿಸಿತು.
ನ್ಯಾಯಾಲಯವು ಶಿರಚ್ಛೇದನದ ಈ ಘೋಷಣೆಯನ್ನು “ಜೈ ಶ್ರೀ ರಾಮ್”, “ಹರ್ ಹರ್ ಮಹಾದೇವ್”, “ನಾರಾ-ಎ-ತಕ್ಬೀರ್, ಅಲ್ಲಾಹು-ಅಕ್ಬರ್” ಮತ್ತು “ಜೋ ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್” ನಂತಹ ಘೋಷಣೆಗಳಿಂದ ಪ್ರತ್ಯೇಕಿಸಿ ನೋಡಿದೆ. ಈ ಇತರ ಘೋಷಣೆಗಳು ದೇವರು ಅಥವಾ ಗುರುಗಳ ಮೇಲಿನ ಗೌರವವನ್ನು ವ್ಯಕ್ತಪಡಿಸುತ್ತವೆ ಎಂದು ವಿವರಿಸಿದ ಕೋರ್ಟ್, ಶಿರಚ್ಛೇದನದ ಘೋಷಣೆಯು ಭಾರತದ ಸಾರ್ವಭೌಮತ್ವ ಮತ್ತು ಕಾನೂನು ಪ್ರಾಧಿಕಾರಕ್ಕೆ ಸವಾಲೆಸೆಯುತ್ತದೆ ಹಾಗೂ ಸಶಸ್ತ್ರ ದಂಗೆಗೆ ಪ್ರಚೋದಿಸುತ್ತದೆ ಎಂದು ತೀರ್ಪು ನೀಡಿದೆ.
ಈ ವಿಚಾರಣೆಯು ಬರೇಲಿಯ ಕೊತ್ವಾಲಿ ಪೊಲೀಸ್ ಠಾಣೆಯ 2025 ರ ಅಪರಾಧ ಪ್ರಕರಣ ಸಂಖ್ಯೆ 489 ಕ್ಕೆ ಸಂಬಂಧಿಸಿದೆ. ಇದರಲ್ಲಿ ಕೊಲೆ ಯತ್ನ, ಗಲಭೆ, ಶತ್ರುತ್ವವನ್ನು ಉತ್ತೇಜಿಸುವುದು, ಕ್ರಿಮಿನಲ್ ಸಂಚು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪಗಳು ಸೇರಿವೆ. ರಜಾ ಅವರು ಸೆಪ್ಟೆಂಬರ್ 27, 2025 ರಿಂದ ಬಂಧನದಲ್ಲಿದ್ದಾರೆ. ಡಿಸೆಂಬರ್ 21, 2025 ರಂದು ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಆರೋಪಗಳನ್ನು ಇನ್ನೂ ನಿಗದಿಪಡಿಸಬೇಕಿದೆ.
2026 ರ ಕ್ರಿಮಿನಲ್ ವಿವಿದ ಜಾಮೀನು ಅರ್ಜಿ ಸಂಖ್ಯೆ 2637 ಅನ್ನು ವಜಾಗೊಳಿಸಿದ ನ್ಯಾಯಾಲಯ, ಈ ಹಂತದಲ್ಲಿ ರಜಾ ಅವರನ್ನು ಬಿಡುಗಡೆ ಮಾಡಲು ನಿರಾಕರಿಸಿದೆ. ಈ ತೀರ್ಪು ಕೇವಲ ಜಾಮೀನಿಗೆ ಸಂಬಂಧಿಸಿದ್ದಾಗಿದ್ದು, ಅಪರಾಧದ ಆರೋಪಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
