ಸ್ವಾವಲಂಬನೆ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಮೂಲಭೂತ ಆದರ್ಶಗಳಲ್ಲಿ ಬೇರೂರಿದ್ದ ಸ್ವದೇಶಿ ಚಳವಳಿಯು ವಿದೇಶಿ ಪ್ರಾಬಲ್ಯದ ವಿರುದ್ಧದ ಒಂದು ಶಕ್ತಿಶಾಲಿ ಆರ್ಥಿಕ ಹೋರಾಟವಾಗಿತ್ತು. ದೂರದೃಷ್ಟಿಯ ಭಾರತೀಯ ಉದ್ಯಮಿಗಳು ಸ್ವದೇಶಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ, ಸಾಮ್ರಾಜ್ಯಶಾಹಿ ಅವಲಂಬನೆಯ ಸಂಕೋಲೆಗಳನ್ನು ಮುರಿದು, ರಾಷ್ಟ್ರೀಯ ಸಾರ್ವಭೌಮತ್ವದತ್ತ ಹಾದಿ ನಿರ್ಮಿಸಿದರು ಮತ್ತು ‘ಸ್ವರಾಜ್ಯ’ಕ್ಕೆ ಆರ್ಥಿಕ ಅಡಿಪಾಯವನ್ನು ಹಾಕಿದರು.
1905ರ ಭಾರತೀಯ ರಾಷ್ಟ್ರೀಯ ಚಳವಳಿ ಮತ್ತು ಸ್ವದೇಶಿ ಚಳವಳಿಗಳು ಕೇವಲ ಭಾಷಣಗಳು ಮತ್ತು ಬಹಿಷ್ಕಾರದ ಕರೆಗಳಿಗೆ ಸೀಮಿತವಾದ ರಾಜಕೀಯ ಹೋರಾಟಗಳಾಗಿರಲಿಲ್ಲ; ಅವು ಸ್ವಾವಲಂಬನೆ, ಸಾಂಸ್ಕೃತಿಕ ಹೆಮ್ಮೆ ಮತ್ತು ದೇಶೀಯ ಉದ್ಯಮಶೀಲತೆಯನ್ನು ಆಧರಿಸಿದ ಆರ್ಥಿಕ ದಂಗೆಯಾಗಿದ್ದವು. ಆರ್ಥಿಕ ಸ್ವಾತಂತ್ರ್ಯವಿಲ್ಲದೆ (ಸ್ವಾವಲಂಬನೆ) ರಾಜಕೀಯ ಸಾರ್ವಭೌಮತ್ವಕ್ಕೆ (ಸ್ವರಾಜ್ಯ) ಯಾವುದೇ ಅರ್ಥವಿಲ್ಲ ಎಂಬ ದೃಢವಾದ ನಂಬಿಕೆಯೇ ಈ ಪುನರುಜ್ಜೀವನದ ಹೃದಯಭಾಗದಲ್ಲಿತ್ತು.
ಬ್ರಿಟಿಷ್ ರಾಜ್ನ ಶೋಷಣಾತ್ಮಕ ಆರ್ಥಿಕ ವ್ಯವಸ್ಥೆಯನ್ನು ಸವಾಲು ಮಾಡಲು ಭಾರತದ ದೃಷ್ಟಾರ ಉದ್ಯಮಿಗಳು ಮುಂದೆ ಬಂದರು. ಅವರು ಸಾಮ್ರಾಜ್ಯಶಾಹಿ ಆರ್ಥಿಕ ಪ್ರಾಬಲ್ಯಕ್ಕೆ ಶರಣಾಗುವ ಬದಲು, ರಾಷ್ಟ್ರೀಯ ಸಂಪತ್ತನ್ನು ಕಟ್ಟಲು ನಿರ್ಧರಿಸಿದರು. ಈ ಅವಧಿಯಲ್ಲಿ, ಪ್ರವರ್ತಕ ಉದ್ಯಮಿಗಳು ಸ್ವಾತಂತ್ರ್ಯ ಚಳವಳಿಗೆ ನೇರವಾಗಿ ಧನಸಹಾಯ ನೀಡಿದರು, ತಲೆಮರೆಸಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಿದರು ಮತ್ತು ಸ್ವತಂತ್ರವಾಗಿ ನಿಲ್ಲಬಲ್ಲ ಕೈಗಾರಿಕಾ ಅಡಿಪಾಯವನ್ನು ನಿರ್ಮಿಸಿದರು. ಉಕ್ಕು, ಹಡಗು ನಿರ್ಮಾಣ, ಜವಳಿಯಿಂದ ಹಿಡಿದು ಸೋಪುಗಳು, ಸೌಂದರ್ಯವರ್ಧಕಗಳು ಮತ್ತು ಬ್ಯಾಂಕಿಂಗ್ ಸೇವೆಗಳವರೆಗೆ ಸ್ವದೇಶಿ ಸರಕುಗಳನ್ನು ಉತ್ಪಾದಿಸುವ ಮೂಲಕ, ಈ ಉದ್ಯಮಗಳು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಶಕ್ತಿಯಾಗಿ ಕಾರ್ಯನಿರ್ವಹಿಸಿದವು.
ಬ್ರಿಟಿಷ್ ಆರ್ಥಿಕ ಆಧಿಪತ್ಯವನ್ನು ಮುರಿದು ಆರ್ಥಿಕ ರಾಷ್ಟ್ರೀಯತೆಯನ್ನು ಎತ್ತಿಹಿಡಿದ ಪ್ರಮುಖ 10 ಸ್ವದೇಶಿ ಉದ್ಯಮಗಳು:
- ಜಿಡಿ ಫಾರ್ಮಾಸ್ಯುಟಿಕಲ್ಸ್ (GD Pharmaceuticals): ಸ್ವದೇಶಿ ಹೆಮ್ಮೆಯೊಂದಿಗೆ ರಾಷ್ಟ್ರಕ್ಕೆ ಆರೈಕೆ
1929ರಲ್ಲಿ ಗೌರ್ ಮೋಹನ್ ದತ್ತಾ ಅವರು ಕೋಲ್ಕತಾದಲ್ಲಿ ಜಿಡಿ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ವಿದೇಶಿ ವಸ್ತುಗಳನ್ನು ತಿರಸ್ಕರಿಸುವ ರಾಷ್ಟ್ರೀಯತಾವಾದಿ ಕರೆಗೆ ಸ್ಪಂದಿಸಿದ ಅವರು, ತಮ್ಮ ಮನೆಯಿಂದಲೇ ಉತ್ತಮ ಗುಣಮಟ್ಟದ ಸ್ವದೇಶಿ ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರ ಕ್ರಾಂತಿಕಾರಿ ಉತ್ಪನ್ನವಾದ ‘ಬೋರೋಲಿನ್’ (Boroline) ಆಂಟಿಸೆಪ್ಟಿಕ್ ಕ್ರೀಮ್, ಭಾರತೀಯ ಉದ್ಯಮಶೀಲತೆಯ ಪ್ರಸಿದ್ಧ ಸಂಕೇತವಾಗಿ ಹೊರಹೊಮ್ಮಿತು. ಸ್ವದೇಶಿ ಉತ್ಪನ್ನಗಳು ವಿದೇಶಿ ಆಮದುಗಳಿಗೆ ಸಮಾನವಾಗಿ ನಿಲ್ಲಬಲ್ಲವು ಮತ್ತು ಅವುಗಳನ್ನು ಮೀರಿಸಬಲ್ಲವು ಎಂಬುದನ್ನು ಇದು ನಿರೂಪಿಸಿತು. - ಕಲ್ಕತ್ತಾ ಕೆಮಿಕಲ್ ಕಂಪನಿ (Calcutta Chemical Company): ‘ಮಾರ್ಗೋ’ ಮೂಲಕ ದೇಸಿ ಪದಾರ್ಥಗಳ ಬಲ
ಬಂಗಾಳ ವಿಭಜನೆಯ ನಂತರ ಉಂಟಾದ ಸ್ವದೇಶಿ ಅಲೆಯಿ೦ದ ಪ್ರೇರಿತರಾಗಿ, ಖಗೇಂದ್ರ ಚಂದ್ರ ದಾಸ್ ಅವರು ಪಾಶ್ಚಿಮಾತ್ಯ ಸರಕುಗಳ ಹಿಡಿತವನ್ನು ಮುರಿಯಲು 1916ರಲ್ಲಿ ಕಲ್ಕತ್ತಾ ಕೆಮಿಕಲ್ ಕಂಪನಿಯನ್ನು ಸ್ಥಾಪಿಸಿದರು. ಭಾರತೀಯ ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿದ ಅವರು, ‘ಮಾರ್ಗೋ’ (Margo) ಸೋಪ್ ತಯಾರಿಸಲು ಶತಮಾನಗಳಿಂದ ಬಳಸಲಾಗುತ್ತಿದ್ದ ದೇಸಿ ಅಡುಗೆ/ಔಷಧೀಯ ವಸ್ತುವಾದ ಬೇವನ್ನು ಬಳಸಿದರು. ಭಾರತದ ಶ್ರೀಮಂತ ಪರಂಪರೆಯೇ ಅದರ ಕೈಗಾರಿಕಾ ಮತ್ತು ವೈಯಕ್ತಿಕ ಅಗತ್ಯಗಳಿಗೆ ದಾರಿದೀಪ ಎಂಬುದನ್ನು ಈ ಸಾಹಸಮಯ ಹೆಜ್ಜೆ ಜಗತ್ತಿಗೆ ಸಾರಿತು. - ಅರವಿಂದ್ ಲಿಮಿಟೆಡ್ (Arvind Ltd.): ಆರ್ಥಿಕ ಸಾರ್ವಭೌಮತ್ವದ ಬಟ್ಟೆ ನೇಕಾರಿಕೆ
ಆರ್ಥಿಕ ಸ್ವಾತಂತ್ರ್ಯದ ಕರೆಯಿಂದ ಪ್ರೇರಿತರಾದ ಲಾಲ್ಭಾಯಿ ಸಹೋದರರು (ಕಸ್ತೂರ್ಭಾಯಿ, ನರೋತ್ತಮ್ಭಾಯಿ ಮತ್ತು ಚಿಮನ್ಭಾಯಿ) 1931ರಲ್ಲಿ ಅಹಮದಾಬಾದ್ನಲ್ಲಿ ‘ಅರವಿಂದ್ ಮಿಲ್ಸ್’ ಅನ್ನು ಸ್ಥಾಪಿಸಿದರು. ದೇಶದಲ್ಲೇ ವಿಶ್ವ ದರ್ಜೆಯ ಬಟ್ಟೆಗಳನ್ನು ತಯಾರಿಸುವ ಮೂಲಕ ಭಾರತೀಯ ಜವಳಿ ಮಾರುಕಟ್ಟೆಯ ಮೇಲಿದ್ದ ವಿದೇಶಿ ನಿಯಂತ್ರಣವನ್ನು ತೆರವುಗೊಳಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ೧೯೩೦ರ ದಶಕದ ಉತ್ತರಾರ್ಧದಲ್ಲಿ ಅರವಿಂದ್ ಸಂಸ್ಥೆಯ ಜವಳಿ ಉತ್ಪನ್ನಗಳು ಬ್ರಿಟನ್ ಮತ್ತು ಸ್ವಿಟ್ಜರ್ಲೆಂಡ್ಗೂ ರಫ್ತಾಗುವ ಮೂಲಕ ಭಾರತೀಯ ಕರಕುಶಲತೆಯು ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. - ಸುಲೇಖಾ ವರ್ಕ್ಸ್ (Sulekha Works): ಭಾರತೀಯ ಶಾಯಿಯಲ್ಲಿ ಬರೆದ ಸ್ವಾತಂತ್ರ್ಯದ ಕಥನ
1934ರಲ್ಲಿ ಶಂಕರಾಚಾರ್ಯ ಮತ್ತು ನಾನಿ ಗೋಪಾಲ್ ಮೈತ್ರಾ ಅವರು ಬ್ರಿಟಿಷ್ ಶಾಯಿಗಳ (Ink) ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ‘ಸುಲೇಖಾ ವರ್ಕ್ಸ್’ ಅನ್ನು ಪ್ರಾರಂಭಿಸಿದರು. ರಸಾಯನಶಾಸ್ತ್ರಜ್ಞ ಸತೀಶ್ ಚಂದ್ರ ದಾಸಗುಪ್ತಾ ಅವರು ಸಿದ್ಧಪಡಿಸಿದ ಸೂತ್ರವನ್ನು ಬಳಸಿ, ಮೈತ್ರಾ ಸಹೋದರರು ‘ಕೃಷ್ಣಧಾರಾ’ ಮತ್ತು ಇತರ ಸ್ವದೇಶಿ ಶಾಯಿಗಳನ್ನು ಮಾರುಕಟ್ಟೆಗೆ ತಂದರು. ಭಾರತದ ಸ್ವಾತಂತ್ರ್ಯ ಹೋರಾಟದ ದಾಖಲೆಗಳನ್ನು ಬರೆಯಲು ಸಂಪೂರ್ಣ ಸ್ವದೇಶಿ ಶಾಯಿಯನ್ನೇ ಬಳಸುವಂತೆ ಮಾಡುವ ಮೂಲಕ ಸುಲೇಖಾ ಆರ್ಥಿಕ ಸ್ವಾತಂತ್ರ್ಯದ ದೊಡ್ಡ ಅಸ್ತ್ರವಾಯಿತು. - ಗೋದ್ರೇಜ್ (Godrej): ಸಾಂಸ್ಕೃತಿಕ ಗುರುತು ಮತ್ತು ಆರ್ಥಿಕ ಪ್ರತಿರೋಧ
1897ರಲ್ಲಿ ಸ್ವದೇಶಿ ಬೀಗಗಳ ತಯಾರಿಕೆಯೊಂದಿಗೆ ಪ್ರಯಾಣ ಆರಂಭಿಸಿದ ಅರ್ದೇಶಿರ್ ಗೋದ್ರೇಜ್, ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಅಪಮಾನಿಸುತ್ತಿದ್ದ ವಿದೇಶಿ ಏಕಸ್ವಾಮ್ಯವನ್ನು ಸವಾಲು ಮಾಡಲು 1918ರಲ್ಲಿ ಸೋಪು ತಯಾರಿಕೆಗೆ ಕಾಲಿಟ್ಟರು. 1926ರಲ್ಲಿ ಗೋದ್ರೇಜ್, ಮಾತೃಭೂಮಿಯ ಹೆಸರಿನಲ್ಲಿ “ವಾಟ್ನಿ” (Vatni) ಸೋಪನ್ನು ಬಿಡುಗಡೆ ಮಾಡಿತು. ಇದರ ಹಸಿರು ಮತ್ತು ಬಿಳಿ ಬಣ್ಣದ ಪ್ಯಾಕಿಂಗ್ನಲ್ಲಿ ಅಖಂಡ ಭಾರತದ ನಕ್ಷೆಯನ್ನು ಪ್ರಮುಖವಾಗಿ ಮುದ್ರಿಸಲಾಗಿತ್ತು. ವಿದೇಶಿ ಸೋಪುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವುದನ್ನು ಬಹಿರಂಗಪಡಿಸಿದ ಗೋದ್ರೇಜ್, ಸಂಪೂರ್ಣ ಸಸ್ಯಜನ್ಯ ಸೋಪುಗಳನ್ನು ಪ್ರಚಾರ ಮಾಡಿತು. ಅಲ್ಲದೆ, ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ‘ತಿಲಕ್-ಸ್ವರಾಜ್ಯ ನಿಧಿ’ಗೆ ಬೃಹತ್ 30 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿತು. - ಪಾರ್ಲೆ ಪ್ರಾಡಕ್ಟ್ಸ್ (Parle Products): ಜನಸಾಮಾನ್ಯರಿಗೆ ಸ್ವದೇಶಿ ಆಹಾರ
ವಿದೇಶದಿಂದ ಬರುತ್ತಿದ್ದ ದುಬಾರಿ ಬ್ರಿಟಿಷ್ ಸಿಹಿತಿಂಡಿ ಮತ್ತು ಬಿಸ್ಕತ್ತುಗಳ ಹರಿವನ್ನು ತಡೆಯಲು 1929ರಲ್ಲಿ ಮೋಹನ್ಲಾಲ್ ದಯಾಳ್ ಚೌಹಾಣ್ ಅವರು ಮುಂಬೈನ ವಿಲೆ ಪಾರ್ಲೆಯಲ್ಲಿ ಮೊದಲ ಪಾರ್ಲೆ ಕಾರ್ಖಾನೆಯನ್ನು ಸ್ಥಾಪಿಸಿದರು. ಸಣ್ಣ ತಂಡ ಮತ್ತು ದೃಢ ಸಂಕಲ್ಪದೊಂದಿಗೆ ಚೌಹಾಣ್ ಅವರು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಭಾರತೀಯ ಬಿಸ್ಕತ್ತುಗಳನ್ನು ಒದಗಿಸುವ ಉದ್ಯಮವನ್ನು ಕಟ್ಟಿದರು. ಈ ಸಾಹಸವು ಬ್ರಿಟಿಷ್ ವಾಣಿಜ್ಯ ಹಿತಾಸಕ್ತಿಗಳಿಗೆ ನೇರ ಸವಾಲಾಗಿ ನಿಂತಿತು, ಮುಂದೆ ಇದು ‘ಪಾರ್ಲೆ-ಜಿ’ (Parle-G) ನಂತಹ ಉತ್ಪನ್ನಗಳ ಮೂಲಕ ಮನೆಮಾತಾಯಿತು. - ಲಕ್ಷ್ಮಿ ಟೀ (Luxmi Tea): ಸಾಮ್ರಾಜ್ಯಶಾಹಿ ಚಹಾ ಏಕಸ್ವಾಮ್ಯದ ಪತನ
1912ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪರೇಶ್ ಚಂದ್ರ ಚಟರ್ಜಿ ಅವರು ಬ್ರಿಟಿಷರ ಪ್ರಾಬಲ್ಯದಲ್ಲಿದ್ದ ಚಹಾ ಉದ್ಯಮಕ್ಕೆ ಪೆಟ್ಟು ನೀಡಲು ತ್ರಿಪುರಾದಲ್ಲಿ ‘ಇಂಡಿಯನ್ ಟೀ ಆಂಡ್ ಪ್ರಾವಿಷನ್ಸ್’ (ಈಗಿನ ಲಕ್ಷ್ಮಿ ಟೀ) ಅನ್ನು ಸ್ಥಾಪಿಸಿದರು. ಭಾರತೀಯ ಚಹಾ ತೋಟಗಳನ್ನು ಯುರೋಪಿಯನ್ ಲಾಭಕ್ಕಾಗಿ ಶೋಷಿಸಲಾಗುತ್ತಿದ್ದ ಸಮಯದಲ್ಲಿ, ಚಟರ್ಜಿಯವರು ಚಹಾವನ್ನು ಸ್ವತಃ ಬೆಳೆದು ನೇರವಾಗಿ ಭಾರತೀಯ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಭೂಮಿಯ ಸಂಪತ್ತಿನ ಮೇಲಿನ ನಿಯಂತ್ರಣವನ್ನು ಮರಳಿ ಪಡೆದರು. ಇವರ ಈ ಹೆಜ್ಜೆ ಬ್ರಿಟಿಷ್ ಚಹಾ ವ್ಯಾಪಾರದ ಏಕಸ್ವಾಮ್ಯವನ್ನು ಮುರಿಯಿತು. - ಸ್ವದೇಶಿ ಸ್ಟೀಮ್ ನ್ಯಾವಿಗೇಷನ್ ಕಂಪನಿ (Swadeshi Steam Navigation Company): ಸಾಗರದಲ್ಲಿ ಬ್ರಿಟಿಷ್ ಶಕ್ತಿಗೆ ಸವಾಲು
ಸಾಮಾನ್ಯ ಸಮುದ್ರ ಸಾರಿಗೆ ಮತ್ತು ವ್ಯಾಪಾರದ ಮೇಲಿದ್ದ ಬ್ರಿಟಿಷರ ಕಠೋರ ಏಕಸ್ವಾಮ್ಯವನ್ನು ಮುರಿಯಲು 1906ರಲ್ಲಿ ವಿ. ಓ. ಚಿದಂಬರಂ ಪಿಳ್ಳೈ ಅವರು ‘ಸ್ವದೇಶಿ ಸ್ಟೀಮ್ ನ್ಯಾವಿಗೇಷನ್ ಕಂಪನಿ’ಯನ್ನು ಪ್ರಾರಂಭಿಸಿದರು. ಸಂಪೂರ್ಣವಾಗಿ ಭಾರತೀಯ ಬಂಡವಾಳದೊಂದಿಗೆ ಸ್ಥಾಪಿತವಾದ ಈ ಕಂಪನಿಯು ‘ಗೇಲಿಯಾ’ ಮತ್ತು ‘ಲಾವೋ’ ಎಂಬ ಎರಡು ಹಡಗುಗಳನ್ನು ಖರೀದಿಸಿ ತೂತುಕುಡಿ ಮತ್ತು ಸಿಲೋನ್ (ಶ್ರೀಲಂಕಾ) ನಡುವೆ ಪ್ರಯಾಣಿಕ ಮತ್ತು ಸರಕು ಸೇವೆಗಳನ್ನು ನಡೆಸಿತು. ಬ್ರಿಟಿಷ್ ಆಡಳಿತದ ತೀವ್ರ ಕಿರುಕುಳ ಮತ್ತು ದಬ್ಬಾಳಿಕೆಯ ಹೊರತಾಗಿಯೂ, ಪಿಳ್ಳೈ ಅವರ ಈ ಸಾಹಸವು ಬ್ರಿಟಿಷ್ ನೌಕಾ ಪ್ರಾಬಲ್ಯಕ್ಕೆ ಭಾರತೀಯರು ನೀಡಿದ ನೇರ ಸವಾಲಾಗಿತ್ತು. - ಸಿಪ್ಲಾ (Cipla): ಸ್ವದೇಶಿ ವಿಜ್ಞಾನದ ಮೂಲಕ ರಾಷ್ಟ್ರೀಯ ಆರೋಗ್ಯ ರಕ್ಷಣೆ
1935ರಲ್ಲಿ ಡಾ. ಖ್ವಾಜಾ ಅಬ್ದುಲ್ ಹಮೀದ್ ಅವರಿಂದ ಸ್ಥಾಪಿಸಲ್ಪಟ್ಟ ಸಿಪ್ಲಾ (Cipla), ಜೀವ ರಕ್ಷಕ ಔಷಧಿಗಳಲ್ಲಿ ಭಾರತವನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿ ಮಾಡುವ ಮಹತ್ವದ ಅಗತ್ಯದಿಂದ ಜನ್ಮತಾಳಿತು. ಯುರೋಪಿಯನ್ ಫಾರ್ಮಾಸ್ಯುಟಿಕಲ್ ಕಂಪನಿಗಳ ಮಾರುಕಟ್ಟೆ ಪ್ರಾಬಲ್ಯವನ್ನು ತಿರಸ್ಕರಿಸಿದ ಸಿಪ್ಲಾ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಭಾರತೀಯ ಔಷಧಿಗಳನ್ನು ತಯಾರಿಸಿತು. ಯುದ್ಧದ ಸಮಯದಲ್ಲಿ ಎದುರಾದ ತೀವ್ರ ಪೂರೈಕೆ ಕೊರತೆಯಿಂದ ದೇಶವನ್ನು ಇದು ರಕ್ಷಿಸಿತು. ಸ್ವದೇಶಿ ಆಶಯವನ್ನು ಎತ್ತಿಹಿಡಿದ ಈ ಸಂಸ್ಥೆಯು ತನ್ನ ಪ್ರಚಾರಗಳಲ್ಲಿ ರಾಷ್ಟ್ರಧ್ವಜವನ್ನು ಪ್ರಮುಖವಾಗಿ ಬಳಸಿ, ಭಾರತೀಯ ಔಷಧಿಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರಮುಖ ದೇಶಭಕ್ತಿಯ ಕರ್ತವ್ಯವೆಂದು ಬಿಂಬಿಸಿತು. - ಟಾಟಾ ಆಯಿಲ್ ಮಿಲ್ಸ್ ಕಂಪನಿ (TOMCO): ದಿನನಿತ್ಯದ ಅಗತ್ಯಗಳನ್ನು ರಾಷ್ಟ್ರೀಯತಾವಾದಿ ಚಳವಳಿಯನ್ನಾಗಿಸಿದ್ದು
1917ರಲ್ಲಿ ದೊರಾಬ್ಜಿ ಟಾಟಾ ಅವರಿಂದ ಸ್ಥಾಪಿಸಲ್ಪಟ್ಟ ‘ಟಾಟಾ ಆಯಿಲ್ ಮಿಲ್ಸ್ ಕಂಪನಿ’ (TOMCO), ವಿದೇಶಿ ಆರ್ಥಿಕ ಶೋಷಣೆಯ ವಿರುದ್ಧ ಗ್ರಾಹಕ ಉತ್ಪನ್ನಗಳನ್ನು ಅಸ್ತ್ರವಾಗಿ ಬಳಸಿತು. ‘ಹಮಾಮ್’ (Hamam) ಮತ್ತು ‘501’ ಸೋಪುಗಳಂತಹ ಜನಪ್ರಿಯ ಬ್ರ್ಯಾಂಡ್ಗಳ ಮೂಲಕ TOMCO ಬ್ರಿಟಿಷ್ ಸೋಪುಗಳಿಗೆ ಉತ್ತಮ ಸ್ವದೇಶಿ ಪರ್ಯಾಯಗಳನ್ನು ನೀಡಿತು. ತಮ್ಮ ಜಾಹೀರಾತು ಪ್ರಚಾರಗಳಲ್ಲಿ ಸಾಂಪ್ರದಾಯಿಕ ಉಡುಪುಗಳು ಮತ್ತು ರಾಟೆಯ (ಚರಕ) ಚಿತ್ರಗಳನ್ನು ಬಳಸುವ ಮೂಲಕ, ಕಂಪನಿಯು ದಿನನಿತ್ಯದ ವೈಯಕ್ತಿಕ ನೈರ್ಮಲ್ಯದ ವಸ್ತುಗಳನ್ನು ಖಾದಿ ಚಳವಳಿಯೊಂದಿಗೆ ಯಶಸ್ವಿಯಾಗಿ ಸಂಯೋಜಿಸಿತು.
ಸ್ವದೇಶಿ ಚಳವಳಿಯು ಕೇವಲ ಒಂದು ರಾಜಕೀಯ ತಂತ್ರವಾಗಿರಲಿಲ್ಲ, ಬದಲಿಗೆ ಅದು ಭಾರತದ ರಾಷ್ಟ್ರೀಯ ಪುನರುಜ್ಜೀವನಕ್ಕೆ ಅಡಿಪಾಯ ಹಾಕಿದ ಆಳವಾದ ಆಧ್ಯಾತ್ಮಿಕ ಮತ್ತು ಆರ್ಥಿಕ ಜಾಗೃತಿಯಾಗಿತ್ತು. ಸ್ವಾವಲಂಬನೆ ಮತ್ತು ದೇಶೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಈ ದೃಷ್ಟಾರ ಉದ್ಯಮಿಗಳು ವಿದೇಶಿ ಪ್ರಾಬಲ್ಯದಿಂದ ರಾಷ್ಟ್ರದ ಆರ್ಥಿಕ ಸಾರ್ವಭೌಮತ್ವವನ್ನು ಮರಳಿ ಪಡೆದರು. ದೇಶೀಯ ಉತ್ಪಾದನೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸ್ವದೇಶಿ ಬಂಡವಾಳಕ್ಕೆ ಅವರು ನೀಡಿದ ಕೊಡುಗೆಯು, ಒಂದು ರಾಷ್ಟ್ರವು ತನ್ನದೇ ಕಾಲಿನ ಮೇಲೆ ದೃಢವಾಗಿ ನಿಂತಾಗ ಮಾತ್ರ ನೈಜ ರಾಷ್ಟ್ರೀಯ ಸ್ವಾಭಿಮಾನ ಮತ್ತು ‘ಸ್ವರಾಜ್ಯ’ವನ್ನು ಸಾಧಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
