ಶ್ರೀನಗರ: ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಬಂದಿರುವ ಹೊಸ ಬೆದರಿಕೆ ಪತ್ರಗಳಲ್ಲಿ ವ್ಯಕ್ತಿಗಳ ಹೆಸರು ಮತ್ತು ಅವರ ನಿರ್ದಿಷ್ಟ ವಿಳಾಸಗಳನ್ನು ಪ್ರಕಟಿಸಲಾಗಿದೆ. ಈ ಕ್ರಮವು ಪುನರ್ವಸತಿ ಮತ್ತು ಕಣಿವೆಗೆ ಹಿಂತಿರುಗುವ ಪ್ರಕ್ರಿಯೆಯ ಸುತ್ತ ಭಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶ ಹೊಂದಿರುವ ‘ಮಾನಸಿಕ ಯುದ್ಧ’ (psychological warfare) ಎಂದು ಗುಪ್ತಚರ ಮೂಲಗಳು ಬಣ್ಣಿಸಿವೆ.
ವರ್ಷಗಳ ಕಾಲ ಸ್ಥಳಾಂತರಗೊಂಡ ನಂತರ ಕಣಿವೆಯ ಹೊರಗೆ ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಂಡಿರುವ ವಲಸೆ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಈ ಇತ್ತೀಚಿನ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ. ಪತ್ರದಲ್ಲಿ, ಅವರ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದು ಎಚ್ಚರಿಸಲಾಗಿದ್ದು, ದೆಹಲಿಯ ರಾಜಕೀಯ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ “ದಾಳಗಳು”, “ದ್ರೋಹಿಗಳು” ಮತ್ತು “ವೈಟ್ ಕಾಲರ್ ಭಯೋತ್ಪಾದಕರು” ಎಂದು ಆರೋಪಿಸಲಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಎಸ್ಎಸ್ನ ಆಶಯಗಳನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲಾದ ವ್ಯಕ್ತಿಗಳಿಗೂ ಬೆದರಿಕೆ ಹಾಕಲಾಗಿದೆ.
ಹೆಸರು ಮತ್ತು ವಿಳಾಸಗಳ ಪ್ರಕಟಣೆ:
ಈ ಬೆದರಿಕೆ ಪತ್ರದ ಅತ್ಯಂತ ಪ್ರಮುಖ ಅಂಶವೆಂದರೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದು. ಸಾಮಾನ್ಯ ಎಚ್ಚರಿಕೆಯಂತೆ ಇರದೆ, ನಿರ್ದಿಷ್ಟ ವ್ಯಕ್ತಿಗಳ ಹೆಸರು ಮತ್ತು ವಿಳಾಸಗಳನ್ನು ಪತ್ರದಲ್ಲಿ ಸೇರಿಸಲಾಗಿದ್ದು, ಇದು ಅವರನ್ನು ನೇರವಾಗಿ ಗುರಿಯಾಗಿಸುವ ಬೆದರಿಕೆಯಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪತ್ರದಲ್ಲಿ, “ನಾವು ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಿದ್ದೇವೆ” ಮತ್ತು “ಆಪತ್ತು ಬರಬೇಕಾದ ಸಮಯದಲ್ಲೇ ಬರುತ್ತದೆ” ಎಂಬ ಸಂದೇಶಗಳನ್ನು ನೀಡಲಾಗಿದೆ. ಈ ಭಾಷೆಯು ಈಗಾಗಲೇ ಸ್ಥಳಾಂತರ ಮತ್ತು ಬೆದರಿಕೆಗಳನ್ನು ಎದುರಿಸಿರುವ ಕುಟುಂಬಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ಹಿಂದೆ ಸರ್ಕಾರದ ಪುನರ್ವಸತಿ ಯೋಜನೆಗಳನ್ನು ಒಪ್ಪಿಕೊಳ್ಳದೆ ಕಣಿವೆಯಲ್ಲೇ ಉಳಿದುಕೊಂಡ ಕಾಶ್ಮೀರಿ ಹಿಂದೂಗಳು ಸುರಕ್ಷಿತವಾಗಿದ್ದಾರೆ ಎಂದು ಬೆದರಿಕೆ ಹಾಕಿರುವ ಸಂಘಟನೆ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಸ್ಥಳಾಂತರಗೊಂಡ ಹಿಂದೂಗಳ ಮರುಕಳಿಕೆ ಅಥವಾ ಪುನರ್ವಸತಿಗೆ ನೆರವಾಗಲು ಯತ್ನಿಸುತ್ತಿರುವ ಜನರಿಗೆ ಎಚ್ಚರಿಕೆ ನೀಡಿದೆ.
ಮಾನಸಿಕ ಯುದ್ಧದ ಕೋನವನ್ನು ಗುರುತಿಸಿದ ಗುಪ್ತಚರ ಸಂಸ್ಥೆಗಳು:
ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ಹೊಸ ಜೀವನ ಆರಂಭಿಸಲು ಬಯಸುತ್ತಿರುವ ಕಾಶ್ಮೀರಿ ಹಿಂದೂ ಕುಟುಂಬಗಳಲ್ಲಿ ಭಯ ಹುಟ್ಟಿಸುವ ವಿಶಾಲ ಹುನ್ನಾರದ ಭಾಗವಾಗಿ ಈ ಬೆದರಿಕೆಗಳು ಬಂದಿವೆ ಎಂದು ಗುಪ್ತಚರ ಮೂಲಗಳು ವಿಶ್ಲೇಷಿಸಿವೆ. ಹೆಸರು ಮತ್ತು ವಿಳಾಸಗಳನ್ನು ಪ್ರಕಟಿಸುವುದರಿಂದ, ತಮ್ಮ ಪೂವರ್ಜರ ಮನೆಗಳಿಗೆ ಹಿಂತಿರುಗುವುದು ಸುರಕ್ಷಿತವಲ್ಲ ಎಂಬ ಭಾವನೆಯನ್ನು ಕುಟುಂಬಗಳಲ್ಲಿ ಮೂಡಿಸುವುದು ಇದರ ಉದ್ದೇಶವಾಗಿರಬಹುದು.
ಉದ್ಯೋಗ, ಶಿಕ್ಷಣ, ಆಸ್ತಿ ವಿಚಾರಗಳು ಅಥವಾ ಪುನರ್ವಸತಿಗಾಗಿ ಕಣಿವೆಗೆ ಮರಳಲು ಬಯಸುವ ಕುಟುಂಬಗಳ ಮೇಲೆ ಈ ಭೀತಿ ಪ್ರಭಾವ ಬೀರಬಹುದು. ಹೀಗಾಗಿ, ಇದು ಕೇವಲ ವ್ಯಕ್ತಿಗತ ಬೆದರಿಕೆಯಷ್ಟೇ ಅಲ್ಲದೆ, ಹಿಂದೂಗಳ ಮರಳುವಿಕೆಯ ವಿರುದ್ಧ ಸೃಷ್ಟಿಸಲಾಗುತ್ತಿರುವ ಭಯದ ವಾತಾವರಣ ಎಂದು ಗುಪ್ತಚರ ಸಂಸ್ಥೆಗಳು ಪರಿಗಣಿಸಿವೆ.
ಪುನರ್ವಸತಿ ಮತ್ತು ಮರಳುವಿಕೆಯ ಮೇಲಿನ ಗಮನ:
ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳ ಮರಳುವಿಕೆ ಮತ್ತು ಪುನರ್ವಸತಿಗೆ ಹೊಸ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಈ ಇತ್ತೀಚಿನ ಬೆದರಿಕೆಗಳು ಹೊರಬಿದ್ದಿವೆ. ಈ ಹಿಂದೆಯೂ ಪುನರ್ವಸತಿ ಪ್ರಯತ್ನಗಳು ತೀವ್ರಗೊಂಡಾಗ ಇಂತಹ ಬೆದರಿಕೆ ಪಟ್ಟಿಗಳು ಹೊರಬರುತ್ತಿದ್ದವು ಎಂದು ಗುಪ್ತಚರ ವರದಿಗಳು ಸೂಚಿಸುತ್ತವೆ.
‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ ನಂತಹ ಹೊಸ ಹೆಸರುಗಳು ಮುನ್ನೆಲೆಗೆ ಬಂದಿರುವುದನ್ನು ಮೂಲಗಳು ಬೆಟ್ಟು ಮಾಡಿವೆ. ಗಡಿಯಾಚೆಗಿನ ಮಾಸ್ಟರ್ಮೈಂಡ್ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಈ ಗುಂಪುಗಳು, ಸ್ಥಳೀಯ ಸಂಘಟನೆಗಳಂತೆ ಬಿಂಬಿಸಿಕೊಳ್ಳುತ್ತವೆ. ಲಷ್ಕರ್-ಎ-ತೊಯ್ಬಾದಂತಹ ಪಾಕಿಸ್ತಾನ ಮೂಲದ ಉಗ್ರಗಾಮಿ ಜಾಲಗಳು ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಇಂತಹ ಮುಸುಕಿನ ಸಂಘಟನೆಗಳನ್ನು ಬಳಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಒತ್ತಡ ಹೇರುತ್ತಿವೆ ಎಂದು ವರದಿ ತಿಳಿಸಿದೆ.
ಪರಿಶೀಲನೆಯಲ್ಲಿ ತೊಡಗಿರುವ ಭದ್ರತಾ ಸಂಸ್ಥೆಗಳು:
ದಶಕಗಳಿಂದ ತಮ್ಮ ಮೂಲ ಮನೆಗಳಿಂದ ದೂರವಿರುವ ಕಾಶ್ಮೀರಿ ಹಿಂದೂ ಕುಟುಂಬಗಳಲ್ಲಿ, ತಮ್ಮ ಸ್ಥಳಾಂತರಕ್ಕೆ ಕಾರಣವಾಗಿದ್ದ ಅಭದ್ರತೆ ಮತ್ತೆ ಮರಳುತ್ತಿದೆಯೇ ಎಂಬ ಭಯ ಈ ಪತ್ರಗಳಿಂದ ಮರುಕಳಿಸಿದೆ. ಪ್ರಸ್ತುತ ಭದ್ರತಾ ಸಂಸ್ಥೆಗಳು ಈ ಬೆದರಿಕೆ ಪತ್ರಗಳ ಮೂಲ ಮತ್ತು ಇದರ ಹಿಂದಿರುವವರ ಗುರುತನ್ನು ತನಿಖೆ ಮಾಡುತ್ತಿವೆ.
ಸಾಮಾನ್ಯವಾಗಿ ಇಡೀ ಸಮುದಾಯಕ್ಕೆ ಎಚ್ಚರಿಕೆ ನೀಡುವ ಬದಲು ನಿರ್ದಿಷ್ಟ ವ್ಯಕ್ತಿಗಳನ್ನು ಗುರುತಿಸಿ ವೈಯಕ್ತಿಕ ವಿವರ ಪ್ರಕಟಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಬೆದರಿಕೆ ಸಂದೇಶಗಳ ಅಧಿಕೃತತೆ, ಮೂಲ ಮತ್ತು ಉದ್ದೇಶಿತ ವ್ಯಾಪ್ತಿಯನ್ನು ಕಂಡುಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದು ಸಂಘಟಿತ ಉಗ್ರಗಾಮಿ ಜಾಲಕ್ಕೆ ಲಿಂಕ್ ಆಗಿದೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ.
ಈ ಘಟನೆಯು ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂ ಕುಟುಂಬಗಳ ಭದ್ರತೆ ಮತ್ತು ಕಣಿವೆಗೆ ಅವರ ಸುರಕ್ಷಿತ ಮರಳುವಿಕೆಗೆ ಸೂಕ್ತ ವಾತಾವರಣ ನಿರ್ಮಿಸುವ ಸವಾಲನ್ನು ಮತ್ತೆ ಮುನ್ನೆಲೆಗೆ ತಂದಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
