- ಟಿ. ದೇವಿದಾಸ್, ಲೇಖಕ, ಅಂಕಣಕಾರ
ಸಿನೆಮಾ ನಟನೊಬ್ಬ ಮೊತ್ತಮೊದಲ ಬಾರಿಗೆ ಇಷ್ಟೊಂದು ದೊಡ್ಡ ಗೆಲುವನ್ನು ತಮಿಳುನಾಡಿನಲ್ಲಿ ಸಾಧಿಸಿದ್ದರಲ್ಲಿ ಜೋಸೆಫ್ ವಿಜಯ್ ಅವರೇ ಮೊದಲು ಎಂಬುದು ಬಹು ಶ್ಲಾಘನೀಯವಾದುದು. ಕಮಲ್ ಹಾಸನ್ ಮಾಡಲಾಗದ ಸಾಧನೆಯನ್ನು, ಎಂಜಿಆರ್ ಮಾದರಿ ಪಡೆಯದ ಯಶಸ್ಸನ್ನು ಮೊದಲ ಬಾರಿಗೆ ಪಡೆದ ನಟನಾದ, ಈಗ ಮುಖ್ಯಮಂತ್ರಿಯಾದ ಜೋಸೆಫ್ ವಿಜಯ್ ಗೆಲುವಿನ ಅಮಲಿನಲ್ಲಿ ಗುರಿ ಮತ್ತು ಉದ್ದೇಶವನ್ನು ಮರೆಯದಿರಲಿ ಎಂಬುದೇ ಅವರ ಅಭಿಮಾನಿಗಳ ಮತ್ತು ಅವರಿಗೆ ಮತದಾನ ಮಾಡಿದವರ ಪ್ರಧಾನ ಕಾಳಜಿ. ಯಾಕೆಂದರೆ, ಇಂಥ ಗೆಲುವು ಕೊಡುವ ಎನರ್ಜಿ ಬಹುದೊಡ್ಡದು. ಹಾಗೆಯೇ ಗುರಿಯನ್ನು ತಪ್ಪಿಸುವುದಕ್ಕೂ, ಅಡ್ಡದಾರಿಯನ್ನು ಹಿಡಿಯುವುದಕ್ಕೂ ಇಂಥ ಗೆಲುವು ಕಾರಣವಾದ ನಿದರ್ಶನಗಳು ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಬಹಳಷ್ಟಿವೆ.
ಜೋಸೆಫ್ ವಿಜಯ್ ತಮ್ಮ ಅಧಿಕಾರದ ವಿನಿಯೋಗವನ್ನು ಭವಿಷ್ಯದಲ್ಲಿ ತನ್ನ ಪಕ್ಷದ ಅಸ್ತಿತ್ವವನ್ನು ಘನವಾಗಿ ಬೇರೂರುವಂತೆ ಮಾಡಿಕೊಳ್ಳಬೇಕಿದೆ ಎಂಬುದು ನಿಸ್ಸಂದೇಹ. ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬಲಗೊಳಿಸುತ್ತಲೇ ಟಿವಿಕೆಯು ದ್ರಾವಿಡ ಅಸ್ಮಿತೆ, ಮತ್ತದರ ತಾತ್ವಿಕ ಅಂಶಗಳನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ತನ್ನ ಅಸ್ಮಿತೆಯನ್ನು ಭದ್ರಗೊಳಿಸಬೇಕಿದೆ. ಅನೇಕ ವಿಚಾರಗಳಲ್ಲಿ ಪಕ್ಕದ ರಾಜ್ಯಗಳ ನಡುವಿನ ಸಂಘರ್ಷ ಹಾಗೂ ಕೇಂದ್ರದೊಂದಿಗಿನ ನಿರಂತರವಾದ ಭಿನ್ನಾಭಿಪ್ರಾಯದ ಸಂಘರ್ಷ ಸುಲಭಕ್ಕೆ ಪರಿಹಾರವಾಗುವ ಸಂಗತಿಗಳಲ್ಲ. ತಮಿಳು ಜನರ ಆಶೋತ್ತರಗಳನ್ನು ನೀಗಿಸುವುದೇ ಪ್ರಥಮ ಆದ್ಯತೆಯಾದರೂ ಭಾರತ ಒಂದು ಸಾವಯವ, ಸಮಗ್ರ, ಸಮೃದ್ಧ ರಾಷ್ಟ್ರವಾಗಿದ್ದು ಯಾವೊಂದು ಪ್ರಾಂತ್ಯ ವೈಚಾರಿಕ ದಿವಾಳಿತನಕ್ಕೆ ಬಿದ್ದರೂ ಇಡಿಯ ರಾಷ್ಟ್ರ ಅವನತಿಯ ಸ್ಪರ್ಶವನ್ನು ಹೊಂದಲಿದೆ ಎಂಬುದು ಜೋಸೆಫ್ ವಿಜಯ ಅವರ ಅರಿವಿನಲ್ಲಿರಬೇಕು. ಫೆಡರಲ್ ಸ್ಟೇಟ್ ಎಂಬುದಕ್ಕೆ ಭಾರತೀಯ ಭಾಷ್ಯವೇ ಇದು. ಗ್ರಹಿಸಿನೋಡಿ: ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ಬುದ್ಧಿಗೇಡಿತನದಿಂದ ಸಮಸ್ತ ಯುರೋಪ್ ಹಾಳಾಗಿ ಹೋಯಿತು. ಆದರೆ ಪಾಠ ಕಲಿಯಲಿಲ್ಲ. ಇದೇ ಬೌದ್ಧಿಕ ದಿವಾಳಿಕೋರತನವೇ ಸೋವಿಯತ್ ಒಕ್ಕೂಟಕ್ಕೂ ಬಂದಿತ್ತು. ಒಪ್ಪಿ ಅಪ್ಪಿದ ಕಮ್ಯುನಿಸ್ಟ್ ತತ್ತ್ವದಲ್ಲೇ ಇದ್ದು ಎಂಬತ್ತು ವರ್ಷಗಳ ಅನಂತರ ರಷ್ಯಾಕ್ಕೆ ವಿಷಫಲವನ್ನು ಕೊಟ್ಟಿತು. ರಷ್ಯಾ ಆಗ ಎಚ್ಚರಗೊಳ್ಳಲಿಲ್ಲ. ಅಮೆರಿಕಕ್ಕೂ ಅದು ಬಡಿಯಿತು. ಈಗಲೂ ಬಡಿದುಕೊಂಡೇ ಇದೆ. ಒಬ್ಬನ ಅಪರಾಧದಿಂದ ಸಮೃದ್ಧ ರಾಷ್ಟ್ರಗಳೂ ಸಾಯುತ್ತವೆ ಎಂದು ಮಾರೀಚನೂ, ಸೀತೆಯೂ ರಾವಣನಿಗೆ ಬುದ್ಧಿಹೇಳುವ ಮಾತುಗಳು ವಾಲ್ಮೀಕಿ ರಾಮಾಯಣದಲ್ಲಿವೆ. ಈಗ ನೋಡಿ: ಜಗತ್ತು ಕಷ್ಟದ ಕೂಪಕ್ಕೆ ಬಿದ್ದಿದ್ದರೂ ಅಮೆರಿಕಕ್ಕೆ, ಇರಾನ್ಗೆ ಯಾರ, ಯಾವ ಬುದ್ಧಿಮಾತುಗಳೂ ಒಗ್ಗುವುದಿಲ್ಲ.
ಲಾಗಾಯ್ತಿನಿಂದಲೂ ತಮಿಳಿಗರ ವೈಚಾರಿಕ ಮತ್ತು ಭಾವನಾತ್ಮಕ ವಲಯವೇ ಅತ್ಯಂತ ಆಶ್ಚರ್ಯಕರ ಜೋಸೆಫ್ ವಿಜಯ್ ಅವರನ್ನು ತಮಿಳಿಗರು ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ಏನೋ ಗೊತ್ತಿಲ್ಲ. ಮೊದಲ ಬಾರಿಗೇ ಅವರನ್ನು ಅಧಿಕಾರ ಪ್ರಾಪ್ತಿಯ ಹತ್ತಿರಕ್ಕೆ ತಂದು ನಿಲ್ಲಿಸಿ ಮುಖ್ಯಮಂತ್ರಿಯ ಗಾದಿಯಲ್ಲಿ ಕೂರಿಸಿಬಿಟ್ಟಿದ್ದಾರೆ. ತಮಿಳಿಗರ ಸಂಭ್ರಮದ ಗೆಲುವಿನ ಈ ಸಂದರ್ಭವನ್ನು ನೋಡುವಾಗ ಹಿಂದಿನ ಕೆಲವು ಸಂಗತಿಗಳು ನೆನಪಾಗುತ್ತವೆ. ಅಣ್ಣಾದೊರೈ ಸತ್ತಾಗ, ಅವರ ಶವಸಂಸ್ಕಾರವನ್ನು ನೋಡಲು ರೈಲುಬೋಗಿಗಳ ಮೇಲೆಲ್ಲ ಹತ್ತಿ ಕುಳಿತ ಭಾವೋದ್ವೇಗಪರ ತಮಿಳಿಗರು ಸುರಂಗದ ಛಾವಣಿಗೆ ಸಿಕ್ಕು ಶಿರಚ್ಚೇದವಾಗಿ ಸತ್ತದ್ದು ಮರೆಯಲುಂಟೇ? ಎಂಜಿಆರ್ ನಿಧನರಾದಾಗ ಅನೇಕರು ಸುಟ್ಟುಕೊಂಡು ಸತ್ತದ್ದೂ, ‘ತಮಿಳಿಗೆ ಆಪತ್ತು’ ಎಂದು ಹಿಂದಿ ಹೇರಿಕೆಯ ಸಂದರ್ಭದಲ್ಲಿ ಅನೇಕರು ಆತ್ಮಾಹುತಿ ಮಾಡಿಕೊಂಡದ್ದೂ ಹೇಗೆ ತಾನೇ ಮರೆತುಹೋದೀತು? ಹಾಗೆ ಸತ್ತವರು ಎಂಥಾ ಮುಗ್ಧರು ಅಂತ ಅನಿಸುವುದಿಲ್ಲವೆ? ಭಾವೋದ್ವೇಗಕ್ಕೊಳಗಾದರೆ ಏನಾಗುತ್ತದೆ ಎಂದು ಊಹಿಸಲೂ ಅಸಾಧ್ಯ. ಜೀವನ ಮುಖ್ಯ, ಸಾವಲ್ಲ ಎಂಬುದನ್ನು ಪೆರಿಯಾರರೂ, ಅಣ್ಣಾದೊರೈ, ಎಂಜಿಆರ್, ಕರುಣಾನಿಧಿ, ಜಯಲಲಿತಾ- ಇವರ್ಯಾರೂ ತಮಿಳಿನ ಮುಗ್ಧರಿಗೆ ಸಾರಲೇ ಇಲ್ಲವೇ?.
ತಮಿಳುನಾಡಿನ ರಾಜಕೀಯವೇ ಬಹುಸೋಜಿಗ. ಆಯಿತು ಎಂದಾದರೆ ಗದ್ದುಗೆ ಏರಿಸುವುದು; ಆಗಲ್ಲ ಎಂದಾದರೆ ಗುಡಿಸಿ ಮೂಲೆಗೊತ್ತುವುದು. ಕಂಚಿಯ ಶಂಕರಾಚಾರ್ಯರನ್ನು ಜೈಲಿಗೆ ಹಾಕಿದಾಗ ಡಿಎಂಕೆ ಪ್ರತಿಭಟಿಸಲೇ ಇಲ್ಲ!. ಜಯಲಲಿತಾ ಅವರ ರಾಜಕೀಯ ವೈರಿ ಎಂಬ ಕಾರಣಕ್ಕೂ ಪ್ರತಿಪಕ್ಷ ವಹಿಸಿ ಡಿಎಂಕೆ ವಿರೋಧಿಸಲಿಲ್ಲ! ರಾಮಸೇತೂ ವಿಷಯದಲ್ಲಿ ಜಯಲಲಿತಾ ಅವರಿಗೆ ಉಸಿರೆತ್ತುವ ಶಕ್ತಿಯೇ ಇರಲಿಲ್ಲವಾಗಿತ್ತು! ಈ ಹಿನ್ನೆಲೆಯಲ್ಲಿ ಶೈವ ಮತ್ತು ವೈಷ್ಣವ ಮಠಗಳಿಗೆ ತಮಿಳನಾಡಿನಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆ ಇರುವ ಬಗ್ಗೆ ಒಂದು ಅನುಮಾನ ಲಾಗಾಯ್ತಿನಿಂದಲೂ ಇದ್ದಂತೆ ತೋರುತ್ತದೆ. ಮೊದಲ ಬಾರಿಗೇ ಶಾಸಕರಾಗಿ ನೇರವಾಗಿ ಸಿಎಂ ಹುದ್ದೆಯೇರಿದ ವಿಜಯ ಜೋಸೆಫ್ ಆಡಳಿತಾವಧಿಯಲ್ಲಿ ನೆನಪಿಟ್ಟುಕೊಂಡು ಅಳವಡಿಸಿಕೊಳ್ಳಬೇಕಾದ ಸಂಗತಿಗಳು ಸಾಕಷ್ಟಿವೆ. ರಾಷ್ಟ್ರವನ್ನು ಆಪತ್ಕಾಲದಲ್ಲಿ ಒಗ್ಗೂಡಿಸಿ, ಭಿನ್ನತೆಯನ್ನು ಅಳಿಸಿದ ಭಕ್ತಿ ಹುಟ್ಟಿದ ಪ್ರಾಂತದ ಅರವತ್ತು ಮೂರು ನಾಯನಾರುಗಳೂ, ಹನ್ನೆರಡು ಆಳ್ವಾರಗಳೂ, ರಾಮಾನುಜರ ಪರಂಪರೆ, ಮೊದಲ ರಾಮಕೃಷ್ಣ ಮಠವನ್ನು ಮೈಲಾಪುರದಲ್ಲಿ ಕಟ್ಟಿದ ರಾಮಕೃಷ್ಣಾನಂದ ಯತಿಗಳು ಮೊದಲಾದವರನ್ನು ಸೃಷ್ಟಿಸಿದ ತಮಿಳರ ಕ್ರಿಯಾಸಂಪನ್ನತೆಯನ್ನು ಮತ್ತಷ್ಟು ಜೀವಂತಗೊಳಿಸಿ ಉಳಿಸಿ ಬೆಳೆಸಬೇಕಿದೆ.
ಪ್ರಜಾಪ್ರಭುತ್ವದಲ್ಲಿ ಜನ ಯಾವತ್ತೂ ಬಯಸುವುದೇ ಉತ್ತಮ ಆಡಳಿತ. ಹಿಂದಿನ ಸರ್ಕಾರವನ್ನು ಸಾರಾಸಗಟಾಗಿ ತಳ್ಳಿಹಾಕಲು ಇದೇ ಕಾರಣ. ಹಳ್ಳಿಯ ಸಾಮಾನ್ಯನೊಬ್ಬ ಸರ್ಕಾರಿ ಕಚೇರಿಗೆ ಹೋಗಿ ಯಾವುದೇ ಲಂಚವಿಲ್ಲದೆ, ಒತ್ತಡ, ಪ್ರಭಾವ, ಶೋಷಣೆ, ದೌರ್ಜನ್ಯ, ಹಿಂಸೆ, ಕಿರಿಕಿರಿಯಿಲ್ಲದೆ ತನ್ನ ಕೆಲಸ ಮಾಡಿಕೊಂಡು ಬರಲು ಸಾಧ್ಯವಾಗುವಂತೆ ಸರ್ಕಾರವನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲದಿದ್ದರೂ ಅದನ್ನು ನೆರವೇರಿಸುವ ತಾಕತ್ತು ಸರ್ಕಾರಕ್ಕೆ ಇದ್ದೇ ಇರುತ್ತದೆ.
ಸ್ಥಳೀಯಪ್ರಜ್ಞೆಯಿಂದ ರಾಷ್ಟ್ರೀಯ ಪ್ರಜ್ಞೆಯು ಬೆಳೆಯುತ್ತದೆ. ಸೈದ್ಧಾಂತಿಕವಾಗಿ ಬಿಜೆಪಿ ನಮ್ಮ ವಿರೋಧಿ ಎಂದಿರುವ ಟಿವಿಕೆ ಕೇಂದ್ರ ಸರ್ಕಾರದ ನೀತಿ ನಿಯಮಗಳನ್ನು ಯಾವುದೇ ಸಂದರ್ಭದಲ್ಲಿ ವಿರೋಧಿಸುವಾಗ ಅಥವಾ ಬೆಂಬಲಿಸುವಾಗ ಯಾವುದೋ ಅಥವಾ ಯಾರದ್ದೋ ಹಿಡನ್ ಅಜೆಂಡಾ ಮತ್ತು ಚಿತಾವಣೆಯ ಭಾಗವಾಗಿ ಬೌದ್ಧಿಕ ಮತ್ತು ವೈಚಾರಿಕ ದಿವಾಳಿತನವನ್ನು ಅಭಿವ್ಯಕ್ತಿಸಿ ರಾಷ್ಟ್ರೀಯ ಸಮಗ್ರತೆಯ ನಾಶಕ್ಕೆ ತಮಿಳುನಾಡಿನ ವೈಚಾರಿಕತೆಯನ್ನು ಭಾವನಾತ್ಮಕ ಅಭಿವ್ಯಕ್ತಿಯ ಮೂಲಕ ಈಡಾಗಿಸದಂತೆ ಎಚ್ಚರವಹಿಸಬೇಕಿದೆ. ರಾಜ್ಯಗಳು ಬೆಳೆದರೆ ಅಲ್ಲವೆ ರಾಷ್ಟ್ರದ ಔನ್ನತ್ಯ? ಆದರೆ, ರಾಷ್ಟ್ರದ ಅಸ್ತಿತ್ವವೇ ಇಲ್ಲದೆ ರಾಜ್ಯದ ಅಸ್ಮಿತೆಯಾದರೂ ಹೇಗೆ ಸಾಧ್ಯ?.
ಇನ್ನು ಬಿಜೆಪಿಗೆ ಪಶ್ಚಿಮ ಬಂಗಾಳವನ್ನು ಜಯಿಸಿದಷ್ಟು ಸುಲಭದಲ್ಲಿ ತಮಿಳುನಾಡನ್ನು ಜಯಿಸಲು ಸಾಧ್ಯವಿಲ್ಲ. ಈಗಂತೂ ಅಣ್ಣಾಮಲೈ ಅವರ ವಿಷಯದಲ್ಲೂ ಮತ್ತೊಂದು ಸವಾಲನ್ನು ಬಿಜೆಪಿ ಎದುರು ಹಾಕಿಕೊಂಡಿದೆ.
ಉತ್ತರ ಭಾರತದ ಸೈದ್ಧಾಂತಿಕತೆಯನ್ನು ಆಧರಿಸಿ ಬಿಜೆಪಿ ತಮಿಳುನಾಡನ್ನು ಎದುರಿಸುವುದು ಬಹುಕಷ್ಟ. ಈ ಶತಮಾನದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಅತ್ಯಲ್ಪವಾಗಿ ಉಳಿಯಲು ಇನ್ನೊಂದು ಕಾರಣವೆಂದರೆ, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳು ತಮಿಳುನಾಡಿನಷ್ಟು ಅಭಿವೃದ್ಧಿ ಹೊಂದಿಲ್ಲ ಎಂಬುದು. ಉತ್ತರ ಭಾರತದ ರಾಜಕಾರಣಿಗಳ ಪ್ರಾಬಲ್ಯವಿರುವ ಬಿಜೆಪಿಯು ತಮಿಳುನಾಡಿನ ಅಭಿವೃದ್ಧಿಗೆ ನೀಡಲು ಏನೂ ಇಲ್ಲ ಎಂಬ ಅಂಶವನ್ನು ತಮಿಳರು ಚೆನ್ನಾಗಿ ತಿಳಿದಿರುವಂತಿದೆ. ರಾಜಕೀಯವಾಗಿ ಏನೇ ಕಾರಣಗಳಿದ್ದರೂ ತಮಿಳುನಾಡಿನ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬಲಗೊಳಿಸುವತ್ತ ಜೋಸೆಫ್ ವಿಜಯ್ ಗಮನಹರಿಸಬೇಕಿದೆ.
ಈಗಾಗಲೇ ಜೋಸೆಫ್ ವಿಜಯ್ ಅವರ ಬಗ್ಗೆ ತರಹೇವಾರಿ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿವೆ. ಟಿವಿಕೆ ಗೆಲುವಿನ ಹಿಂದೆ ಕ್ರಿಶ್ಚಿಯನ್ ಅಜೆಂಡಾ ಇದೆ, ಮುಸ್ಲಿಂ ಪ್ರೊಪಗ್ಯಾಂಡಾ ಇದೆ, ಸನಾತನ ಹಿಂದೂ ದಮನದ ಹುನ್ನಾರವಿದೆ- ಹೀಗೆಲ್ಲ ಗುಲ್ಲು ಹುಟ್ಟಿಕೊಂಡಿವೆ. ಟಿವಿಕೆಯು ಬಿಜೆಪಿಯ ಬಿ ಟೀಮ್ ಅಂತಲೂ ವದಂತಿಯಿದೆ. ಅದೇನೇ ಇದ್ದರೂ ತಮಿಳುನಾಡಿನ ವೈಚಾರಿಕ ಮತ್ತು ಭಾವನಾತ್ಮಕ ಸ್ಥಿತಿಗತಿಯ ಹಳಿಯನ್ನು ತಪ್ಪದಂತೆ ಕಾಪಾಡಿಕೊಳ್ಳಬೇಕಿದೆ. ಜನರಲ್ಲಿ ಭಾವನೆಗಳು ಉದ್ವೇಗಕ್ಕೆ ಈಡಾಗಿ ದೇಶದೇಶವನ್ನೇ ಹೈರಾಣಾಗಿಸಿದ್ದು ಕಣ್ಣಮುಂದೆಯೇ ಕಾಣುತ್ತಿರುವಾಗ ಬಹುದೊಡ್ದ ಜನಪ್ರೀತಿಯೊಂದಿಗೆ ಗೆದ್ದುಬಂದ ಟಿವಿಕೆ ಫೆಡರಲ್ ಸ್ಟೇಟ್ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸಾರ್ವಭೌಮತ್ವ ಇದ್ದೇ ಇದೆ. ಆದರೆ ಅದು ರಾಷ್ಟ್ರದ ಸಾರ್ವಭೌಮತ್ವವನ್ನು ಧಕ್ಕೆಗೊಳಿಸಬಾರದು ಎಂಬ ಎಚ್ಚರ ಎಲ್ಲ ರಾಜ್ಯಗಳಲ್ಲಿ ಇರಬೇಕು.
