ಭಾರತೀಯ ಸನಾತನ ಚಿಂತನೆಗಳ ಆಧಾರಿತ ‘ಶಾಶ್ವತ ಆರ್ಥಿಕ ತತ್ವ’ಗಳ ಕುರಿತು ಪೂರ್ವಭಾವಿ ಗೋಷ್ಠಿ
ಬೆಂಗಳೂರು: ಆಧುನಿಕ ಜಾಗತಿಕ ಅರ್ಥವ್ಯವಸ್ಥೆಗೆ ಭಾರತದ ಪ್ರಾಚೀನ ಹಾಗೂ ಕಾಲಾತೀತ ಜ್ಞಾನ ಪರಂಪರೆಯನ್ನು ಜೋಡಿಸುವ ಮಹತ್ವಾಕಾಂಕ್ಷೆಯ ‘ವಸುಧೈವ ಕುಟುಂಬಕಂ ಕೆ ಓರ್ 5.0’ (VK 5.0) ಸರಣಿಯ ಎರಡನೇ ಪೂರ್ವಭಾವಿ ಗೋಷ್ಠಿಯು ನಾಳೆ (ಆಗಸ್ಟ್ 8) ನಗರದಲ್ಲಿ ನಡೆಯಲಿದೆ.
ಪರಮ ಪೂಜ್ಯ ಜೈನಾಚಾರ್ಯ ಯುಗಭೂಷಣಸೂರೀಶ್ವರಜಿ ಮಹಾರಾಜರ ದಿವ್ಯ ಸನ್ನಿಧಿ ಹಾಗೂ ಮಾರ್ಗದರ್ಶನದಲ್ಲಿ ಆಯೋಜಿತವಾಗಿರುವ ಈ ಗೋಷ್ಠಿಯಲ್ಲಿ ‘ಧ್ರುವ ತತ್ವಂ: ಕಾಲಾತೀತ ಆರ್ಥಿಕ ತತ್ವಗಳು’ (Dhruv Tatvam: Timeless Principles of Economics) ಎಂಬ ವಿಷಯದ ಕುರಿತು ದೇಶದ ಅಗ್ರಮಾನ್ಯ ಆರ್ಥಿಕ ತಜ್ಞರು, ನೀತಿ ನಿರೂಪಕರು, ರಾಜತಾಂತ್ರಿಕರು ಮತ್ತು ಕಾನೂನು ಪಂಡಿತರು ತೀವ್ರ ವಿಚಾರಮಂಥನ ನಡೆಸಲಿದ್ದಾರೆ.
ನಾಲ್ಕು ಮೂಲಭೂತ ಪ್ರಶ್ನೆಗಳ ಕುರಿತು ಚರ್ಚೆ:
ಈ ವಿಶೇಷ ವಿಚಾರಸಂಕಿರಣದಲ್ಲಿ ಮುಖ್ಯವಾಗಿ ನಾಲ್ಕು ಪ್ರಮುಖ ವಿಷಯಗಳ ಕುರಿತು ಗಹನ ಚರ್ಚೆ ನಡೆಯಲಿದೆ:
- ರಾಷ್ಟ್ರಗಳ ನಿಜವಾದ ಸಂಪತ್ತು: ಕೇವಲ ಜಿಡಿಪಿ (GDP) ಮತ್ತು ಉತ್ಪಾದಕತೆ ಮಾತ್ರವೇ ದೇಶದ ಪ್ರಗತಿಯ ಮಾನದಂಡವೇ ಅಥವಾ ಭಾರತೀಯ ಸನಾತನ ತತ್ವಗಳು ಸೂಚಿಸುವ ಪರ್ಯಾಯ ಸೂಚಕಗಳನ್ನು ಅಳವಡಿಸಿಕೊಳ್ಳಬೇಕೇ?
- ನ್ಯಾಯಯುತ ಬೆಲೆ ನಿರ್ಧಾರ: ಮಾರುಕಟ್ಟೆಯ ಬೆಡಿಕೆ-ಪೂರೈಕೆ ಶಕ್ತಿಗಳು ಮಾತ್ರವೇ ಬೆಲೆಯನ್ನು ನಿರ್ಧರಿಸುವುದು ಸರಿಯೇ ಅಥವಾ ಸಾಮಾಜಿಕ ನ್ಯಾಯ ಆಧರಿಸಿದ ಬೆಲೆ ನಿಗದಿಯ ಸೂತ್ರಗಳು ಬೇಕೇ?
- ಮುಕ್ತ ಮಾರುಕಟ್ಟೆ ಹಾಗೂ ವ್ಯಾಪಾರ: ಆಧುನಿಕ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಮಾನವಕುಲದ ಹಿತ ಕಾಪಾಡುತ್ತಿದೆಯೇ? ಸಂಪತ್ತಿನ ಅಸಮಾನತೆ ಹಾಗೂ ಶೋಷಣೆಯನ್ನು ತಡೆಯುವುದು ಹೇಗೆ?
- ಪುರಾತನ ತತ್ವಗಳ ಪುನರುತ್ಥಾನ: ಕಳೆದ ಐದು ಶತಮಾನಗಳ ವಸಾಹತುಶಾಹಿ ಆಡಳಿತದಲ್ಲಿ ಮರೆಯಾದ ಭಾರತೀಯ ಮೂಲ ಆರ್ಥಿಕ ತತ್ವಗಳನ್ನು ಪ್ರಸ್ತುತ ಜಾಗತಿಕ ಸನ್ನಿವೇಶಕ್ಕೆ ಹೇಗೆ ಪುನರುಜ್ಜೀವನಗೊಳಿಸಬಹುದು?
ಆಡಮ್ ಸ್ಮಿತ್ ಪೂರ್ವದ ಭಾರತೀಯ ಅರ್ಥಶಾಸ್ತ್ರದ ಮರುಚಿಂತನೆ:
1776 ರಲ್ಲಿ ಆಡಮ್ ಸ್ಮಿತ್ ಅವರ ‘ವೆಲ್ತ್ ಆಫ್ ನೇಷನ್ಸ್’ ಕೃತಿಯಿಂದ ಆರಂಭವಾದ ಬಂಡವಾಳಶಾಹಿ ಮತ್ತು ಸಮಾಜವಾದಿ ಮಾದರಿಗಳನ್ನು ಚರ್ಚಿಸುವುದರ ಜೊತೆಗೆ, ಭಾರತದ ಪ್ರಾಚೀನ ಗ್ರಂಥಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ಶುಕ್ರ ನೀತಿಸಾರ, ಕಾಮಂದಕೀಯ ನೀತಿಸಾರ, ಸ್ಮೃತಿಗಳು ಹಾಗೂ ಜೈನ ಮತ್ತು ಬೌದ್ಧ ಸಾಹಿತ್ಯಗಳಲ್ಲಿರುವ ಆರ್ಥಿಕ ಸೂತ್ರಗಳನ್ನು ಆಧುನಿಕ ಅರ್ಥವ್ಯವಸ್ಥೆಗೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಈ ಗೋಷ್ಠಿ ಪರಿಶೀಲಿಸಲಿದೆ.
ಭಾಗವಹಿಸುವ ಪ್ರಮುಖ ಗಣ್ಯರು:
ನಾಳೆ ನಡೆಯಲಿರುವ ಈ ರೌಂಡ್ ಟೇಬಲ್ ಚರ್ಚೆಯಲ್ಲಿ ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ, 15ನೇ ಹಣಕಾಸು ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ. ಎನ್. ಕೆ. ಸಿಂಗ್, ಆರ್ಬಿಐ ನಿಕಟಪೂರ್ವ ಡೆಪ್ಯುಟಿ ಗವರ್ನರ್ ಎಮ್. ಕೆ. ಜೈನ್, ನಾಲಂದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಚಿನ್ ಚತುರ್ವೇದಿ, ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣಿಯನ್ ಕೃಷ್ಣಮೂರ್ತಿ, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಅಡ್ವೊಕೇಟ್ ಪ್ರಶಾಂತ್ ಕುಮಾರ್, ಹಿರಿಯ ವಕೀಲ ಎಸ್. ಎಸ್. ನಾಗಾನಂದ್, ಐಐಎಂ ಬೆಂಗಳೂರಿನ ಪ್ರೊ. ಪುಲಕ್ ಘೋಷ್, ಇಂಡಿಯಾ ಫೌಂಡೇಶನ್ ನಿರ್ದೇಶಕ ಶೌರ್ಯ ಡೋವಲ್ ಹಾಗೂ ಫಾರ್ಮ್ಈಸಿ ಸಂಸ್ಥಾಪಕ ಸಿದ್ಧಾರ್ಥ್ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಗೋಷ್ಠಿಯಲ್ಲಿ ಜ್ಯೋತ್ (Jyot) ಸಂಸ್ಥೆಯ ಸಂಶೋಧನಾ ತಂಡವು ಸಿದ್ಧಪಡಿಸಿರುವ ಕರಡು ಆರ್ಥಿಕ ‘ಧ್ರುವ ಪತ್ರ’ ವನ್ನು ಮಂಡಿಸಲಾಗುವುದು. ಇಲ್ಲಿ ವ್ಯಕ್ತವಾಗುವ ತಜ್ಞರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮ ‘ಧ್ರುವ ಪತ್ರ’ವನ್ನು ಸಿದ್ಧಪಡಿಸಿ, ‘ವಸುಧೈವ ಕುಟುಂಬಕಂ ಕೆ ಓರ್ 5.0’ ನ ಮುಖ್ಯ ಸಮಾವೇಶದಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
