ಮಂಗಳೂರು: ವಿವಿಧ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಭಕ್ತರಿಗೆ ಮತ್ತು ಹಿಂದೂ ಸಮಾಜಕ್ಕೆ ಮರಳಿ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ದೇಶವ್ಯಾಪಿ ಚಳವಳಿ ಪ್ರಾರಂಭಿಸಲಿದೆ ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ್ ಕುಮಾರ್ ಅವರು ಆಗಸ್ಟ್ 6 ರಂದು ಘೋಷಿಸಿದರು. ದೇವಾಲಯಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕೊನೆಗೊಳಿಸಿ, ಅವುಗಳ ನಿರ್ವಹಣೆಯನ್ನು ಧಾರ್ಮಿಕ ಸಂಸ್ಥೆಗಳು ಮತ್ತು ಭಕ್ತರಿಗೆ ಮರಳಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದ ಅವರು, ಕದ್ರಿಯಲ್ಲಿರುವ ವಿಎಚ್ಪಿ ಪ್ರಾದೇಶಿಕ ಕಚೇರಿ ‘ವಿಶ್ವಶ್ರೀ’ಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವು ಪ್ರಮುಖ ಕಳಕಳಿಯ ವಿಷಯವಾಗಿದೆ. ಮುಂದಿನ ತಿಂಗಳುಗಳಲ್ಲಿ ಇದು ವಿಎಚ್ಪಿಯ ಪ್ರಮುಖ ರಾಷ್ಟ್ರೀಯ ಅಭಿಯಾನಗಳಲ್ಲಿ ಒಂದಾಗಲಿದೆ” ಎಂದರು.
ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ದೇವಾಲಯಗಳಿಗೆ ನೀಡಿದ್ದ ಭೇಟಿಯನ್ನು ಸ್ಮರಿಸಿದ ಅವರು, “ಕುಕ್ಕೆ ಸುಬ್ರಹ್ಮಣ್ಯ ದೇವಾಲಯವೊಂದರಿಂದಲೇ ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಹರಿಯುತ್ತಿದೆ. ಭಾರತದಾದ್ಯಂತ ಸರ್ಕಾರಗಳ ಆಡಳಿತದಲ್ಲಿರುವ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಹಿಂತಿರುಗಿಸಿದರೆ, ಸರ್ಕಾರದ ಮೂಲಕ ವಿನಿಯೋಗವಾಗುವ ಬದಲು 1,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಧಾರ್ಮಿಕ, ಶಿಕ್ಷಣ ಮತ್ತು ಸಮಾಜಸೇವಾ ಚಟುವಟಿಕೆಗಳಿಗೆ ಬಳಸಬಹುದು” ಎಂದು ಪ್ರತಿಪಾದಿಸಿದರು.
ಪ್ರಸ್ತುತ ವ್ಯವಸ್ಥೆಯನ್ನು ಪ್ರಶ್ನಿಸಿದ ಆಲೋಕ್ ಕುಮಾರ್, “ಸರ್ಕಾರಗಳು ಮಸೀದಿಗಳು, ಚರ್ಚ್ಗಳು, ಗುರುದ್ವಾರಗಳು, ಜೈನ ಸಂಸ್ಥೆಗಳು ಅಥವಾ ಬೌದ್ಧ ಮಠಗಳ ಆಡಳಿತವನ್ನು ನಿರ್ವಹಿಸುವುದಿಲ್ಲ. ಇತರೆ ಧರ್ಮಗಳ ಪ್ರಾರ್ಥನಾ ಮಂದಿರಗಳನ್ನು ಸರ್ಕಾರಗಳು ನಿರ್ವಹಿಸದಿರುವಾಗ, ಹಿಂದೂ ದೇವಾಲಯಗಳ ಮೇಲಷ್ಟೇ ಏಕೆ ನಿಯಂತ್ರಣ ಹೊಂದಿರಬೇಕು?” ಎಂದು ಪ್ರಶ್ನಿಸಿದರು. ದೇವಾಲಯಗಳ ಆದಾಯವನ್ನು ಸರ್ಕಾರದ ಖಜಾನೆಗೆ ಜಮಾ ಮಾಡುವುದು, ದೇವಾಲಯಗಳ ನಿಧಿಯಿಂದ ಆಡಿಟ್ ಶುಲ್ಕ ವಸೂಲಿ ಮಾಡುವುದು ಮತ್ತು ಭಕ್ತರ ಕಾಣಿಕೆಯಿಂದ ದೇವಾಲಯದ ಆಡಳಿತಾಧಿಕಾರಿಗಳಿಗೆ ವೇತನ ಪಾವತಿಸುವ ಪದ್ಧತಿಯನ್ನು ಅವರು ತೀವ್ರವಾಗಿ ಟೀಕಿಸಿದರು.
ಉದ್ದೇಶಿತ ಅಭಿಯಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ರಾಮಜನ್ಮಭೂಮಿ ಚಳವಳಿ, ರಾಮಸೇತು ರಕ್ಷಣೆ, ಏಕರೂಪ ನಾಗರಿಕ ಸಂಹಿತೆ ಮತ್ತು ಗೋರಕ್ಷಣೆ ಅಭಿಯಾನ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ವಿಎಚ್ಪಿ ಯಶಸ್ಸು ಕಂಡಿದೆ. ಸರ್ಕಾರದ ಆಡಳಿತದಿಂದ ದೇವಾಲಯಗಳನ್ನು ಮುಕ್ತಗೊಳಿಸುವಲ್ಲೂ ಅದೇ ರೀತಿಯ ಯಶಸ್ಸು ಪಡೆಯುತ್ತೇವೆ ಎಂಬ ನಂಬಿಕೆ ನಮಗಿದೆ” ಎಂದರು.
ಅಭಿಯಾನದ ತಂತ್ರವನ್ನು ವಿವರಿಸಿದ ಅವರು, 2026 ರಲ್ಲಿ ವಿಎಚ್ಪಿ ಬೃಹತ್ ಪ್ರಮಾಣದ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ದೇಶಾದ್ಯಂತ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಚಳವಳಿಗೆ ಸಾರ್ವಜನಿಕ ಬೆಂಬಲವನ್ನು ಕ್ರೋಢೀಕರಿಸಲು ಪ್ರಮುಖ ನಗರಗಳಲ್ಲಿ ಹಿರಿಯ ನಾಗರಿಕರು, ಧಾರ್ಮಿಕ ಮುಖಂಡರು ಮತ್ತು ಗಣ್ಯರನ್ನು ಒಳಗೊಂಡ ಬಹಿರಂಗ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಅಯೋಧ್ಯೆ ದೇವಾಲಯದ ಹಣಕಾಸು ಅಕ್ರಮಗಳ ಆರೋಪದ ಕುರಿತು:
ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಆಲೋಕ್ ಕುಮಾರ್, “ವಿಎಚ್ಪಿ ಈ ವಿಷಯವನ್ನು ಎಂದಿಗೂ ಮುಚ್ಚಿಡಲು ಯತ್ನಿಸಿಲ್ಲ. ಅಕ್ರಮ ನಡೆದಿರುವುದನ್ನು ದೇವಾಲಯದ ಟ್ರಸ್ಟ್ ಸ್ವತಃ ಒಪ್ಪಿಕೊಂಡಿದೆ, ಎಫ್ಐಆರ್ ದಾಖಲಿಸಿದೆ ಮತ್ತು ವಿಶೇಷ ತನಿಖಾ ತಂಡದ (SIT) ತನಿಖೆಗೆ ಆಗ್ರಹಿಸಿದೆ” ಎಂದರು.
“ಅಕ್ರಮ ನಡೆದಿರುವುದನ್ನು ಟ್ರಸ್ಟ್ ಸ್ವತಃ ಮುಂದೆ ಬಂದು ಒಪ್ಪಿಕೊಂಡಿದೆ. ಯಾವುದೇ ರಾಜಕೀಯ ಪಕ್ಷ ದೂರು ನೀಡಿಲ್ಲ, ಬದಲಿಗೆ ಟ್ರಸ್ಟ್ ಸ್ವತಃ ದೂರು ದಾಖಲಿಸಿದೆ. ಹಿರಿಯ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ತನಿಖೆಗೆ ಒಳಪಟ್ಟಿದ್ದಾರೆ. ನಮಗೆ ಪಾರದರ್ಶಕ ತನಿಖೆಯ ಅಗತ್ಯವಿದೆ ಮತ್ತು ತಪ್ಪಿತಸ್ಥರಿಗೆ 2026 ರ ಅಂತ್ಯದೊಳಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶಿಕ್ಷೆಯಾಗಬೇಕು ಎಂದು ಬಯಸುತ್ತೇವೆ,” ಎಂದು ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಹಣಕಾಸಿನ ಮೇಲ್ವಿಚಾರಣೆಯನ್ನು ಬಲಪಡಿಸಲು ವೃತ್ತಿಪರ ಸಿಇಒ (CEO) ಅವರನ್ನು ನೇಮಿಸಲು ಟ್ರಸ್ಟ್ ಪರಿಶೀಲಿಸುತ್ತಿದೆ ಎಂದರು.
ದೆಹಲಿಯಲ್ಲಿ ಸಂಸತ್ತಿನ ಬಳಿ ನಡೆದ ಪ್ರತಿಭಟನೆಯಲ್ಲಿ ಸಾದು-ಸಂತರ ಭಗವಾ ವಸ್ತ್ರಕ್ಕೆ ಅಪಮಾನ ಮಾಡಲಾಗಿದೆ ಎಂದು ರಾಜಕೀಯ ನಾಯಕರ ವಿರುದ್ಧ ಆಲೋಕ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಅಯೋಧ್ಯೆ ದೇಣಿಗೆ ಪ್ರಕರಣಕ್ಕೆ ಯಾವುದೇ ಹಿಂದೂ ಸಂತರು ಸಂಬಂಧಿಸಿಲ್ಲ ಎಂದ ಅವರು, ವಿರೋಧ ಪಕ್ಷದ ನಾಯಕರು ಸನಾತನ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ, ಮುಂದಿನ ಚುನಾವಣೆಗಳಲ್ಲಿ ಭಕ್ತರು ಅವರಿಗೆ ಪ್ರಜಾಸತ್ತಾತ್ಮಕವಾಗಿಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದರು. ಪೋಲೀಸರ ಎಐ-ಕ್ಯಾಮೆರಾ ವಿಶ್ಲೇಷಣೆಯನ್ನು ಉಲ್ಲೇಖಿಸಿ, 2,900 ಕ್ಕೂ ಹೆಚ್ಚು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಮತ್ತು ಸಮಾಜವನ್ನು ದಾರಿತಪ್ಪಿಸುವ ಉದ್ದೇಶದಿಂದ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿತ್ತು ಎಂದರು.
ಅಲ್ಲದೆ, ದಿವಂಗತ ವಿಎಚ್ಪಿ ನಾಯಕ ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಸೆಪ್ಟೆಂಬರ್ 27 ರಿಂದ ದೇಶಾದ್ಯಂತ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಅವರು ಪ್ರಕಟಿಸಿದರು. ಈ ಆಚರಣೆಗಳಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಜಾಗೃತಿ ಕಾರ್ಯಕ್ರಮಗಳು ಸೇರಿರುತ್ತವೆ ಎಂದು ಹೇಳಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
