GoPalsನ 12ನೇ ವಾರ್ಷಿಕೋತ್ಸವ “ಗವೋತ್ಸವ 2026”ರಲ್ಲಿ ವಿಡಿಯೋ ಸಂದೇಶ
ಬೆಂಗಳೂರು, ಆಗಸ್ಟ್ 9: ವಿಡಿಯೋ ಸಂದೇಶದ ಮೂಲಕ ಆಧ್ಯಾತ್ಮಿಕ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು, ಶೃಂಗೇರಿ ಶಾರಾದಾ ಪೀಠ ಇವರು ದೇಶಾದ್ಯಂತ ದೇಶಿ ಗೋವುಗಳ ಸಂರಕ್ಷಣೆ, ಗೋಹತ್ಯೆಯ ಸಂಪೂರ್ಣ ನಿರ್ಮೂಲನೆ ಹಾಗೂ ಗೋವಂಶದ ಕಲ್ಯಾಣವನ್ನು ರಕ್ಷಿಸಲು ಕಠಿಣ ಕಾನೂನು ಚೌಕಟ್ಟಿನ ಅಗತ್ಯವನ್ನು ಒತ್ತಿಹೇಳಿದರು.
ಈ ಆಶೀರ್ವಚನವು ಬೆಂಗಳೂರಿನ ಶ್ರೀ ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ GoPals ಆಯೋಜಿಸಿದ್ದ 12ನೇ ವಾರ್ಷಿಕ “ಗಾವೋತ್ಸವ 2026 / Music2HEAL 2026” ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ದೇಶಿ ಗೋವುಗಳ ಪವಿತ್ರ ಮತ್ತು ಕೃಷಿ ಆಧಾರಿತ ಮಹತ್ವವನ್ನು ಒತ್ತಿಹೇಳಿದ ಶೃಂಗೇರಿ ಶ್ರೀ ಜಗದ್ಗುರುಗಳು ಮಾನವ ಬದುಕು ಮತ್ತು ನಾಗರಿಕತೆಯ ಬೆಳವಣಿಗೆ ದೇಶಿ ಗೋವುಗಳ ಪರಂಪರೆಯೊಂದಿಗೆ ಆಂತರಿಕವಾಗಿ ಬೆಸೆದುಕೊಂಡಿದೆ ಎಂದು ತಿಳಿಸಿದರು.
ಮಾನವಕುಲದ ಜೀವನಾಡಿಯಾಗಿರುವ ಕೃಷಿಯು ಸಾವಿರಾರು ವರ್ಷಗಳಿಂದ ಗೋವಂಶದ ಪರಂಪರೆಯ ನೆರವಿನಿಂದ ಬೆಳೆದು ಬಂದಿದೆ. ಈ ಪರಂಪರೆಯನ್ನು ನಿರ್ಲಕ್ಷಿಸುವುದು ಆ ಪರಂಪರೆಯ ಮೇಲಿನ ಗಾಢ ಕೃತಘ್ನತೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಆದಿ ಶಂಕರ ಭಗವತ್ಪಾದರ “ಪ್ರಶ್ನೋತ್ತರ ರತ್ನಮಾಲಿಕಾ” ಕೃತಿಯನ್ನು ಉಲ್ಲೇಖಿಸಿದ ಅವರು, ಗೋವನ್ನು— ಧೇನು— ವಿಶ್ವಮಾತೆಯಾಗಿ, ಸಕಲ ದೇವತೆಗಳ ನೆಲೆ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಮರಿಸಿದರು.
12 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ GoPals ಮತ್ತು ಅದರ ಸಮರ್ಪಿತ ಸ್ವಯಂಸೇವಕರಿಗೆ ವಿಶೇಷ ಆಶೀರ್ವಾದ ನೀಡಿದ ಜಗದ್ಗುರುಗಳು, ಗೋಹತ್ಯೆಯನ್ನು ತಡೆಗಟ್ಟಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೇಶಾದ್ಯಂತ ಬಲಿಷ್ಠ ಕಾನೂನು ರಕ್ಷಣೆಯನ್ನು ರೂಪಿಸುವಂತೆ ಸಮಾಜ ಮತ್ತು ಸರ್ಕಾರದ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕರೆ ನೀಡಿದರು. ಜೊತೆಗೆ, ಗೋ ಸಂರಕ್ಷಣೆ ಹಾಗೂ ಸುಸ್ಥಿರ ಜೀವನಶೈಲಿಗೆ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸುವಂತೆ ನಾಗರಿಕರನ್ನು ಪ್ರೇರೇಪಿಸಿದರು.
ಧಾರ್ಮಿಕ ವಿಧಿವಿಧಾನಗಳು, ಶಾಸ್ತ್ರೀಯ ಸಂಗೀತ; ಯುವಜನರ ಸಹಭಾಗಿತ್ವ:
ಗಾವೋತ್ಸವ 2026 ಭಾರತದ ಸಾಂಸ್ಕೃತಿಕ ಹಾಗೂ ಪರಿಸರ ಪರಂಪರೆಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿತು.
- ಸಾಮೂಹಿಕ ಗೋಸೂಕ್ತ ಪಾರಾಯಣ: ನೂರಾರು ಭಕ್ತರು ಸಾಮೂಹಿಕವಾಗಿ ಪವಿತ್ರ ಗೋಸೂಕ್ತ ಪಠಣದಲ್ಲಿ ಭಾಗವಹಿಸಿ ಶಾಂತಿ, ಸಮೃದ್ಧಿ ಮತ್ತು ಪರಿಸರ ಸಮತೋಲನಕ್ಕಾಗಿ ಪ್ರಾರ್ಥಿಸಿದರು.
-108 ಕುಟುಂಬಗಳಿಂದ ಗೋ ಪೂಜೆ: 108 ಕುಟುಂಬಗಳು ಒಟ್ಟಾಗಿ ಪವಿತ್ರ ಗೋ ಪೂಜೆ ನೆರವೇರಿಸಿ, ದೇಶಿ ಗೋವುಗಳನ್ನು ಮಾತೃತ್ವ, ಸಮೃದ್ಧಿ ಮತ್ತು ಕಲ್ಯಾಣದ ಸಂಕೇತವಾಗಿ ಗೌರವಿಸಿದರು.
-ವಿದ್ವಾನ್ ಶೇಖರ್ರಾಮನ್ ಅವರ ಸಂಗೀತ ಕಛೇರಿ: ಖ್ಯಾತ ಶಾಸ್ತ್ರೀಯ ಗಾಯಕರಾದ ವಿದ್ವಾನ್ ಶೇಖರ್ರಾಮನ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Music2HEAL ವಿಭಾಗದಡಿ ಭಾರತೀಯ ಶಾಸ್ತ್ರೀಯ ಸಂಗೀತದ ಚಿಕಿತ್ಸಕ ಹಾಗೂ ಮನಸ್ಸಿಗೆ ಶಾಂತಿ ನೀಡುವ ಶಕ್ತಿಯನ್ನು ಪ್ರಸ್ತುತಪಡಿಸಲಾಯಿತು.
ಗೋ ಕ್ವೆಸ್ಟ್ ಸ್ಪರ್ಧೆಗಳು: ಬೆಂಗಳೂರಿನ ವಿವಿಧ ಶಾಲೆಗಳ 4ರಿಂದ 8ನೇ ತರಗತಿಯ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಜ್ಞಾನ, ಸೃಜನಶೀಲತೆ ಮತ್ತು ಕಥನ ಕೌಶಲ್ಯವನ್ನು ಪ್ರದರ್ಶಿಸಿದರು. ಗೋ ಕಥಾ — ಕಥೆ ಹೇಳುವ ಸ್ಪರ್ಧೆ, ಅಂತರಶಾಲಾ ರಸಪ್ರಶ್ನೆ ಹಾಗೂ ಗೋ ಚಿತ್ರ — ಚಿತ್ರಕಲೆ ಸ್ಪರ್ಧೆ ಎಂಬ ಮೂರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. GoPals Go Chetana – Zero Carbon, Zero Waste ಪರಿಕಲ್ಪನೆಗೆ ಅನುಗುಣವಾಗಿ, ವಿಜೇತ ವಿದ್ಯಾರ್ಥಿಗಳಿಗೆ ದೇಶಿ ತಳಿಯ ಗೋಮಯದಿಂದ ತಯಾರಿಸಲಾದ ಸುಸ್ಥಿರ ವಸ್ತುಗಳಿಂದ ನಿರ್ಮಿಸಿದ ವಿಶೇಷ ಗೋಮಯ ಗೋಡೆ ಗಡಿಯಾರಗಳು ಮತ್ತು ಟೇಬಲ್ ಗಡಿಯಾರಗಳನ್ನು ಪ್ರಶಸ್ತಿಯಾಗಿ ನೀಡಲಾಯಿತು.
ಗೌರವ ಪ್ರಶಸ್ತಿಗಳು: ಗೋ ಸಂರಕ್ಷಣೆ, ಸಾಂಪ್ರದಾಯಿಕ ಕೃಷಿ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಸಮುದಾಯದ ನಾಯಕರು ಹಾಗೂ ತಳಮಟ್ಟದ ಸಂಘಟಕರನ್ನು GoPals ವತಿಯಿಂದ ಸನ್ಮಾನಿಸಲಾಯಿತು.
12ನೇ ವಾರ್ಷಿಕೋತ್ಸವದ ಮೈಲಿಗಲ್ಲು ಮತ್ತು ಬಹುರಾಜ್ಯ ಪರಿಸರ ಅಭಿಯಾನ
GoPals ತನ್ನ 12 ವರ್ಷಗಳ ಸ್ವಯಂಸೇವಾ ಸೇವೆಯನ್ನು ಗುರುತಿಸುವ ಸಲುವಾಗಿ, 4 ರಾಜ್ಯಗಳ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಿಕ ಸಸಿ ನೆಡುವ ಅಭಿಯಾನಗಳನ್ನು ಹಮ್ಮಿಕೊಂಡಿತು.
ಗ್ರಾಮೀಣ ಪರಿವರ್ತನೆಗಾಗಿ 10 ವರ್ಷಗಳ ದೂರದೃಷ್ಟಿಯ ಕಾರ್ಯಯೋಜನೆ ಅನಾವರಣ
ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ GoPals ತನ್ನ 10 ವರ್ಷಗಳ ಕಾರ್ಯಯೋಜನೆಯನ್ನು ಪ್ರಕಟಿಸಿತು:
- ನೈಸರ್ಗಿಕ ಕೃಷಿಗೆ ಅಗತ್ಯವಿರುವ ಒಳಾಂಶಗಳು ಮತ್ತು ಸಂಪನ್ಮೂಲಗಳ ಲಭ್ಯತೆಗಾಗಿ- 1,000 ಗ್ರಾಮೀಣ ಇನ್ಪುಟ್ ಕೇಂದ್ರಗಳು
- ಗ್ರಾಮೀಣ ಪರಿಸರ ವ್ಯವಸ್ಥೆಗಳ ಬಲವರ್ಧನೆಗಾಗಿ- ಅಗ್ರೋ-ಫಾರೆಸ್ಟ್ರಿ ಮೂಲಕ 25 ಲಕ್ಷ ಸಸಿಗಳ ನೆಡುವಿಕೆ.
- ಕೃಷಿಯನ್ನು ಯುವಜನರಿಗೆ ಒಂದು ಸಮರ್ಥ ಮತ್ತು ಆಕರ್ಷಕ ವೃತ್ತಿ ಆಯ್ಕೆಯಾಗಿ ರೂಪಿಸುವ ಉದ್ದೇಶದಿಂದ- 1,000 ಯುವ ಕೃಷಿ ಉದ್ಯಮಿಗಳ ನಿರ್ಮಾಣ.
GoPals ದೇಶಿ ಗೋವುಗಳ ರಕ್ಷಣೆ, ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಮರ್ಪಿತ ಸ್ವಯಂಸೇವಾ ಸಂಸ್ಥೆಯಾಗಿದೆ.
