ನವದೆಹಲಿ: ಆಯುರ್ವೇದದ ವೈವಿಧ್ಯಮಯ ಜ್ಞಾನ ಪರಂಪರೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಜಾಗತಿಕ ಸಾಮರ್ಥ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ, ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಮುಂಬರುವ ಆಯುರ್ವೇದ ದಿನಾಚರಣೆಯ ಅಂಗವಾಗಿ ‘ಆಯುರ್ವಾರ್ತಾ’ (AyurVarta) ಎಂಬ ವಿಶೇಷ ಡಿಜಿಟಲ್ ಸಂವಾದ ಸರಣಿಯನ್ನು ಪ್ರಾರಂಭಿಸಿದೆ.
‘ಆಯುರ್ವಾರ್ತಾ’ ಮೂಲಕ ಆಯುರ್ವೇದ ಕ್ಷೇತ್ರದ ಪ್ರಮುಖ ತಜ್ಞರೊಂದಿಗೆ ಅರ್ಥಪೂರ್ಣ ಸಂವಾದಗಳನ್ನು ಆಯೋಜಿಸಲಾಗುತ್ತಿದ್ದು, ಆಯುರ್ವೇದದ ಪ್ರಮುಖ ರಂಗಗಳು, ಸಮಕಾಲೀನ ಆರೋಗ್ಯ ಸವಾಲುಗಳು, ವೈಜ್ಞಾನಿಕ ಸಂಶೋಧನೆಗಳು, ಶಿಕ್ಷಣ, ಕ್ಲಿನಿಕಲ್ ಪದ್ಧತಿಗಳು ಹಾಗೂ ಆಯುರ್ವೇದದ ಜಾಗತಿಕ ವಿಸ್ತರಣೆಯ ಕುರಿತು ಚರ್ಚೆಗಳು ನಡೆಯಲಿವೆ.
ಆಯುರ್ವೇದ ದಿನಾಚರಣೆಯ ಸ್ಥಿರ ದಿನಾಂಕದ ಕುರಿತು ಮೊದಲ ಸಂಚಿಕೆಯಲ್ಲಿ ವಿಶೇಷ ಚರ್ಚೆ
‘ಆಯುರ್ವಾರ್ತಾ’ ಕಾರ್ಯಕ್ರಮದ ಉದ್ಘಾಟನಾ ಸಂಚಿಕೆಯಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯ (AIIA) ನಿರ್ದೇಶಕರಾದ ಪ್ರೊಫೆಸರ್ (ವೈದ್ಯ) ಪಿ. ಕೆ. ಪ್ರಜಾಪತಿ ಹಾಗೂ ಎಐಐಎ ಪಿಎಚ್ಡಿ ವಿಭಾಗದ ಡೀನ್ ಪ್ರೊಫೆಸರ್ (ಡಾ.) ಮಹೇಶ್ ವ್ಯಾಸ್ ಅವರ ನಡುವೆ ವಿಶೇಷ ಸಂವಾದ ನಡೆಯಿತು.
ಈ ಸಂಚಿಕೆಯ ಪ್ರಮುಖ ವಿಷಯ “ಆಯುರ್ವೇದ ದಿನವನ್ನು ಸೆಪ್ಟೆಂಬರ್ 23 ರಂದೇ ಏಕೆ ಆಚರಿಸಲಾಗುತ್ತದೆ?” ಎಂಬುದಾಗಿತ್ತು. ಈ ಸಂವಾದದಲ್ಲಿ ಆಯುರ್ವೇದ ದಿನಾಚರಣೆಯ ಇತಿಹಾಸ, ಹಿಂದೆ ಧನ್ವಂತರಿ ಜಯಂತಿ (ಧನತ್ರಯೋದಶಿ) ಯಂದು ಇದನ್ನು ಆಚರಿಸುತ್ತಿದ್ದ ವಿಧಾನ ಹಾಗೂ ಭಾರತ ಸರ್ಕಾರವು ವಾರ್ಷಿಕ ಆಯುರ್ವೇದ ದಿನಾಚರಣೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿದ ನಿರ್ಧಾರದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಹಿಂದೆ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ, ಭಾರತ ಸರ್ಕಾರವು ೨೦೨೫ರ ಮಾರ್ಚ್ನಲ್ಲಿ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಮೂಲಕ ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಆಯುರ್ವೇದ ದಿನವನ್ನು ಆಚರಿಸಲು ಸ್ಥಿರ ದಿನಾಂಕವನ್ನು ನಿಗದಿಪಡಿಸಿತು. ಅದರಂತೆ ೨೦೨೫ ರಿಂದ ಪ್ರತೀವರ್ಷ ಸೆಪ್ಟೆಂಬರ್ 23 ರಂದು ಆಯುರ್ವೇದ ದಿನವನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಆಯುರ್ವೇದದ ಪ್ರಭಾವ
ಈ ಸಂದರ್ಭದಲ್ಲಿ ಮಾತನಾಡಿದ ಎಐಐಎ ನಿರ್ದೇಶಕ ಪ್ರೊ. (ವೈದ್ಯ) ಪಿ. ಕೆ. ಪ್ರಜಾಪತಿ: “ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ, ಆಯುರ್ವೇದವನ್ನು ಭಾರತದ ಪ್ರಾಚೀನ ಆರೋಗ್ಯ ಪದ್ಧತಿಯಾಗಿ ಮಾತ್ರವಲ್ಲದೆ, ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರಸ್ತುತತೆ ಹೊಂದಿರುವ ಪ್ರಮುಖ ಜ್ಞಾನ ಮತ್ತು ಆರೋಗ್ಯ ವ್ಯವಸ್ಥೆಯಾಗಿ ಸ್ಥಾಪಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ವರ್ಷ ಆಯುರ್ವೇದ ದಿನವನ್ನು ದೇಶಾದ್ಯಂತ ಮಾತ್ರವಲ್ಲದೆ ಪ್ರಪಂಚದ ಹಲವು ದೇಶಗಳಲ್ಲೂ ಅತ್ಯಂತ ಉತ್ಸಾಹ ಮತ್ತು ವ್ಯಾಪಕ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ.
ಈ ಜಾಗತಿಕ ಭಾಗವಹಿಸುವಿಕೆಯು ಆಯುರ್ವೇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ಮತ್ತು ಸ್ವೀಕಾರಾರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಆಯುರ್ವೇದ ದಿನಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿರುವುದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಆಯುರ್ವೇದಕ್ಕೆ ಬಲವಾದ ಗುರುತನ್ನು ನೀಡಲು ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಕಲ್ಪನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ತೆಗೆದುಕೊಂಡ ಪ್ರಮುಖ ಹೆಜ್ಜೆಯಾಗಿದೆ” ಎಂದರು.
ಆರೋಗ್ಯಕರ ಮತ್ತು ನೈಸರ್ಗಿಕ ಜೀವನಶೈಲಿ, ತಡೆಗಟ್ಟುವ ಆರೋಗ್ಯ ರಕ್ಷಣೆ (Preventive Healthcare) ಮತ್ತು ಸಮಗ್ರ ಯೋಗಕ್ಷೇಮದ ಕಡೆಗೆ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಆಸಕ್ತಿಯು ಆಯುರ್ವೇದಕ್ಕೆ ಜಾಗತಿಕವಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ‘ಆಯುರ್ವಾರ್ತಾ’ ಡಿಜಿಟಲ್ ಸರಣಿಯು ಈ ಬೃಹತ್ ದೃಷ್ಟಿಕೋನದ ಒಂದು ಭಾಗವಾಗಿದ್ದು, ಅಧಿಕೃತ ಆಯುರ್ವೇದ ಜ್ಞಾನ ಮತ್ತು ತಜ್ಞರ ಅಭಿಪ್ರಾಯಗಳನ್ನು ಭಾರತ ಮತ್ತು ಪ್ರಪಂಚದಾದ್ಯಂತದ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದೆ ಎಂದರು.
ಎಐಐಎ: ಆಯುರ್ವೇದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯಲ್ಲಿ ಮುಂಚೂಣಿ
ಅಖಿಲ ಭಾರತ ಆಯುರ್ವೇದ ಸಂಸ್ಥೆಯು (AIIA) ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಆಯುರ್ವೇದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸುಧಾರಿತ ಸಂಶೋಧನೆಗಳಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸಲು ಈ ಸಂಸ್ಥೆಯು ಬದ್ಧವಾಗಿದೆ.
ಆಯುರ್ವೇದದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ಆಧಾರಸಹಿತ (evidence-based) ವಿಧಾನಗಳೊಂದಿಗೆ ಸಂಯೋಜಿಸಲು ಎಐಐಎ ಶ್ರಮಿಸುತ್ತಿದೆ. ಶಿಕ್ಷಣ, ಸಂಶೋಧನೆ, ರೋಗಿಗಳ ಆರೈಕೆ, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆಯ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದವನ್ನು ಬಲಪಡಿಸಲು ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ.
ಸೆಪ್ಟೆಂಬರ್ 23: ಆಯುರ್ವೇದ ದಿನಕ್ಕೆ ಹೊಸ ಗುರುತು
ಆಯುರ್ವೇದ ದಿನಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸುವುದರಿಂದ ವಾರ್ಷಿಕ ಆಚರಣೆಗೆ ಹೆಚ್ಚು ವ್ಯವಸ್ಥಿತ ಮತ್ತು ಜಾಗತಿಕ ಸ್ವರೂಪ ಸಿಗಲಿದೆ.
ಸಂವಾದದಲ್ಲಿ ಮಾತನಾಡಿದ ಎಐಐಎ ಪಿಎಚ್ಡಿ ವಿಭಾಗದ ಡೀನ್ ಪ್ರೊಫೆಸರ್ (ಡಾ.) ಮಹೇಶ್ ವ್ಯಾಸ್, ಸೆಪ್ಟೆಂಬರ್ ೨೩ ರ ಸಮಯವು ‘ಶರತ್ ವಿಷುವತ್’ (Autumnal Equinox) ಗೆ ಹತ್ತಿರದಲ್ಲಿದೆ. ಈ ಸಮಯದಲ್ಲಿ ಹಗಲು ಮತ್ತು ರಾತ್ರಿಯ ಅವಧಿಗಳು ಸಮಾನವಾಗಿರುತ್ತವೆ. ಆಯುರ್ವೇದದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮದ ಮೂಲತತ್ತ್ವವೇ ‘ಸಮತೋಲನ ಮತ್ತು ಸಮಸ್ಥಿತಿ’ (Balance and Equilibrium). ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೩ ರ ದಿನಾಂಕವು ಆಯುರ್ವೇದದ ಸಮತೋಲನದ ಸಿದ್ಧಾಂತಕ್ಕೆ ಅತ್ಯಂತ ಸೂಕ್ತ ಹಾಗೂ ಸೈದ್ಧಾಂತಿಕ ಸಂಕೇತವಾಗಿದೆ ಎಂದು ವಿವರಣೆ ನೀಡಿದರು.
ಚರ್ಚೆಗೆ ಡಿಜಿಟಲ್ ವೇದಿಕೆಯಾಗಲಿರುವ ‘ಆಯುರ್ವಾರ್ತಾ’
ಎಐಐಎ ಪ್ರಾರಂಭಿಸಿರುವ ‘ಆಯುರ್ವಾರ್ತಾ’ ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಆಯುರ್ವೇದದ ಕುರಿತು ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸುವ ಸುಸ್ಥಿರ ಡಿಜಿಟಲ್ ಹೆಜ್ಜೆಯಾಗಿದೆ. ಈ ಸರಣಿಯಲ್ಲಿ ಭಾರತ ಮತ್ತು ವಿದೇಶಗಳ ಪ್ರಮುಖ ಆಯುರ್ವೇದ ತಜ್ಞರು, ವೈದ್ಯರು, ಶಿಕ್ಷಣತಜ್ಞರು, ವಿಜ್ಞಾನಿಗಳು, ಸಂಶೋಧಕರು ಮತ್ತು ನೀತಿ ನಿರೂಪಕರೊಂದಿಗೆ ಸಂವಾದಗಳು ನಡೆಯಲಿವೆ.
ಮುಂಬರುವ ಸಂಚಿಕೆಗಳಲ್ಲಿ ಆಯುರ್ವೇದದ ವೈಜ್ಞಾನಿಕ ತಡಿ ಹಾಗೂ ಆಧುನಿಕ ಸಂಶೋಧನೆಗಳು, ಆಯುರ್ವೇದ ಶಿಕ್ಷಣದಲ್ಲಿ ಯುವ ಪೀಳಿಗೆಯ ಪಾತ್ರ, ಸಾರ್ವಜನಿಕ ಆರೋಗ್ಯದಲ್ಲಿ ಆಯುರ್ವೇದದ ಮಹತ್ವ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ನಾವೀನ್ಯತೆ ಹಾಗೂ ತಂತ್ರಜ್ಞಾನದ ಬಳಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು. ಜೊತೆಗೆ ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಆಯುರ್ವೇದದ ಸಂಯೋಜನೆ, ಮೂಲಿಕೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ತಡೆಗಟ್ಟುವ ಆರೋಗ್ಯ ರಕ್ಷಣೆ, ಜಾಗತಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಯುರ್ವೇದದ ಅಂತಾರಾಷ್ಟ್ರೀಯ ವಿಸ್ತರಣೆ ಹಾಗೂ ಆಧಾರ-ಆಧಾರಿತ ಆಯುರ್ವೇದ ಸಂಶೋಧನೆಗಳ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲಲಾಗುವುದು.
ಡಿಜಿಟಲ್ ವೇದಿಕೆಗಳ ಮೂಲಕ ವೀಕ್ಷಕರಿಗೆ ಲಭ್ಯ
ಆಯುರ್ವಾರ್ತಾ’ ಕಾರ್ಯಕ್ರಮದ ಸಂಚಿಕೆಗಳು ಎಐಐಎ ಸಂಸ್ಥೆಯ ಅಧಿಕೃತ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಾದ YouTube, Facebook, X (ಟ್ವಿಟರ್) ಮತ್ತು Instagram ವೇದಿಕೆಗಳಲ್ಲಿ ವೀಕ್ಷಕರಿಗೆ ವೀಕ್ಷಿಸಲು ಲಭ್ಯವಿರುತ್ತವೆ.
ಈ ಹೆಜ್ಜೆಯ ಮೂಲಕ ಆಯುರ್ವೇದದ ಕುರಿತಾದ ಅಧಿಕೃತ ಮತ್ತು ವೈಜ್ಞಾನಿಕ ಮಾಹಿತಿಯನ್ನು ಯುವಕರು, ವಿದ್ಯಾರ್ಥಿಗಳು, ವೈದ್ಯರು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಸರಳ ಮತ್ತು ಪರಿಣಾಮಕಾರಿ ರೂಪದಲ್ಲಿ ತಲುಪಿಸುವುದು ಎಐಐಎ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
