- ಚಿನ್ನಾಗನಹಳ್ಳಿ ಸೂರ್ಯಪ್ರಕಾಶ್, ನಿವೃತ್ತ ವಾಯುದಳ ಸೈನಿಕ
ಒಂದು ಕಾಲದಲ್ಲಿ ಮನೆಗಳಲ್ಲಿ ದೇವರ ಕೋಣೆಯ ನಂತರ ಅತ್ಯಂತ ಗೌರವ ಪಡೆದ ಜಾಗ ಪುಸ್ತಕಗಳ ಕಪಾಟು ಆಗಿತ್ತು. ಹೊಸ ಪುಸ್ತಕ ಮನೆಗೆ ಬಂದರೆ ಅದನ್ನು ಎದೆಗೆ ಒತ್ತಿಕೊಂಡು ಓದುತ್ತಿದ್ದ ದಿನಗಳಿದ್ದವು. ಹಳೆಯ ಪುಸ್ತಕದ ಪುಟಗಳ ನಡುವೆ ಒಣಗಿದ ಹೂವುಗಳು, ನವಿಲುಗರಿ, ಮಸುಕಾದ ಅಕ್ಷರಗಳು, ಮೂಲೆ ಮಡಚಿದ ಪುಟಗಳು—ಇವೆಲ್ಲವೂ ಓದಿನ ಜೊತೆಗಿನ ಆತ್ಮೀಯತೆಯ ಗುರುತುಗಳಾಗಿದ್ದವು.
ಇಂದು ಅದೇ ಮನೆಗಳ ದುಬಾರಿ ಮೊಬೈಲ್ಗಳಿವೆ ಹಾಗೂ ಅವಕ್ಕೆ ವಿಶೇಷ ಕವರ್ಗಳಿವೆ, ಆದರೆ ಪುಸ್ತಕಗಳಿಗೆ ಜಾಗವೇ ಇಲ್ಲ. ಪುಸ್ತಕಗಳು ನಿಧಾನವಾಗಿ ಮೌನವಾಗುತ್ತಿವೆ. ಅವುಗಳ ಪುಟ ತಿರುಗುವ ಸದ್ದು ಈಗ ಕೀಬೋರ್ಡ್ ಟೈಪಿಂಗ್ ಮತ್ತು ಮೊಬೈಲ್ ನೋಟಿಫಿಕೇಶನ್ಗಳ ಗದ್ದಲದಲ್ಲಿ ಕಣ್ಮರೆಯಾಗುತ್ತಿದೆ.
ಪುಸ್ತಕ: ವ್ಯಕ್ತಿತ್ವ ರೂಪಿಸುವ ಸಂಜೀವಿನಿ
ಪುಸ್ತಕ ಓದುವುದು ಅಂದರೆ ಕೇವಲ ಜ್ಞಾನ ಪಡೆಯುವುದಲ್ಲ, ಅದು ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆ. ಒಂದು ಒಳ್ಳೆಯ ಪುಸ್ತಕ, ಮನುಷ್ಯನೊಳಗೆ ಮಲಗಿರುವ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಅದು ಜೀವನದ ನೋವನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ. ಒಳ್ಳೆಯ ಪುಸ್ತಕ ಓದಿದ ನಂತರ, ನಾವು ಹಳೆಯ ವ್ಯಕ್ತಿಯಾಗಿಯೇ ಉಳಿಯುವುದಿಲ್ಲ. ಕೆಲವೊಮ್ಮೆ ನಗುವಿನೊಂದಿಗೆ ಕಣ್ಣೀರೂ ತರಿಸುತ್ತದೆ; ಕೆಲವೊಮ್ಮೆ ಬದುಕಿನ ದಿಕ್ಕನ್ನೇ ಬದಲಿಸುತ್ತದೆ.
ಹಿಂದೆ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದಿದ್ದರೂ, ಮಕ್ಕಳು ಬೀದಿ ದೀಪದ ಕೆಳಗೆ ಕೂತು ಓದುತ್ತಿದ್ದರು. ಬಡತನ ಇದ್ದರೂ ಪುಸ್ತಕಗಳ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಪುಸ್ತಕ ಖರೀದಿಸಲು ಹಣ ಇಲ್ಲದವರು ಗ್ರಂಥಾಲಯಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದರು. ಯಾಕೆಂದರೆ ಅವರಿಗೆ ಗೊತ್ತಿತ್ತು—ಜೀವನವನ್ನು ಬದಲಾಯಿಸುವ ಶಕ್ತಿ ಪುಸ್ತಕಗಳಲ್ಲಿದೆಯೆಂದು.
ಆದರೆ ಇಂದು ಮಾಹಿತಿ ಹೆಚ್ಚಾಗಿದೆ, ಜ್ಞಾನ ಕಡಿಮೆಯಾಗಿದೆ!. ಇಂದಿನ ಪರಿಸ್ಥಿತಿ ವಿಚಿತ್ರವಾಗಿದೆ. ಮಾಹಿತಿ ಹೆಚ್ಚಾಗಿದ್ದರೂ ಮನಸ್ಸಿನ ಆಳ ಕಡಿಮೆಯಾಗಿದೆ. ಗೂಗಲ್ ಉತ್ತರ ಕೊಡುತ್ತದೆ… ಆದರೆ ಕೇವಲ ಪುಸ್ತಕ ಮಾತ್ರ ಪ್ರಶ್ನೆ ಕೇಳಲು ಕಲಿಸುತ್ತದೆ. ಇಂದಿನ ಓದು ಬಹುಪಾಲು ಪರೀಕ್ಷೆ ಮತ್ತು ಉದ್ಯೋಗಕ್ಕೆ ಸೀಮಿತವಾಗಿದೆ. ಅಂಕಗಳಿಗಾಗಿ ಕಂಠಪಾಠ ಮಾಡಿ ಓದುವ ಪೀಳಿಗೆಯೇ ಹೆಚ್ಚಾಗಿದೆ, ಆದರೆ ಬದುಕನ್ನು ಅರ್ಥಮಾಡಿಕೊಳ್ಳಲು ಓದುವವರು ಕಡಿಮೆಯಾಗುತ್ತಿದ್ದಾರೆ.
ಡಿಜಿಟಲ್ ಯುಗದ ಚಂಚಲತೆ ಮತ್ತು ಕಣ್ಮರೆಯಾಗುತ್ತಿರುವ ಸಹನೆ
ಒಂದು ಪುಸ್ತಕವನ್ನು ನಿಧಾನವಾಗಿ ಓದುವಾಗ, ಮನುಷ್ಯ ಸಹನೆಯನ್ನು ಕಲಿಯುತ್ತಾನೆ. ಪಾತ್ರಗಳ ನೋವನ್ನು ಓದುವಾಗ, ಮನಸ್ಸಿನಲ್ಲಿ ಕರುಣೆ ಬೆಳೆಯುತ್ತದೆ. ಇತಿಹಾಸ ಓದುವಾಗ ಸಮಾಜದ ತಪ್ಪುಗಳು ಗೋಚರಿಸುತ್ತವೆ. ಕಾವ್ಯ ಓದುವಾಗ ಭಾಷೆಯ ಸೌಂದರ್ಯ ಹಾಗೂ ಭಾವನೆಗಳ ಅರಿವಾಗುತ್ತದೆ. ಅಂದರೆ ಪುಸ್ತಕಗಳು ಕೇವಲ ಜ್ಞಾನ ನೀಡುವುದಿಲ್ಲ; ಅವು ಮನುಷ್ಯನನ್ನು “ಮನುಷ್ಯ”ನನ್ನಾಗಿಸುತ್ತವೆ.
ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಮನಸ್ಸು ಕ್ಷಣಕ್ಷಣಕ್ಕೂ ಚಲಿಸುತ್ತಿದೆ. ಎರಡು ನಿಮಿಷದ ವಿಡಿಯೋಗಳಿಗೆ ಅಭ್ಯಾಸವಾದ ಕಣ್ಣುಗಳು, ಎರಡು ನೂರು ಪುಟಗಳ ಪುಸ್ತಕದ ಮುಂದೆ ಬೇಗ ದಣಿಯುತ್ತಿವೆ. ತ್ವರಿತ ಮನರಂಜನೆಗೆ ಒಲಿದ ಮನಸ್ಸು, ಆಳವಾದ ಚಿಂತನೆಯಿಂದ ದೂರವಾಗುತ್ತಿದೆ. ಇದು ಕೇವಲ ಓದಿನ ಕುಸಿತವಲ್ಲ; ಇದು ಸಮಾಜದ ಒಳನೋಟ ಕುಸಿಯುತ್ತಿರುವ ಸೂಚನೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹೇಳುವವರು ಸಾವಿರಾರು ಮಂದಿ, ಆದರೆ ಅಧ್ಯಯನ ಮಾಡಿ ಮಾತನಾಡುವವರು ಕಡಿಮೆ. ಮಾತುಗಳಿಗೆ ಗದ್ದಲ ಹೆಚ್ಚಾಗಿದೆ, ಆದರೆ ಅರ್ಥದ ತೂಕ ಕಡಿಮೆಯಾಗಿದೆ. ಯಾಕೆಂದರೆ ಪುಸ್ತಕ ಓದದೇ ಬೆಳೆದ ಚಿಂತನೆಗೆ ಆಳವಿರುವುದಿಲ್ಲ.
ಮೌನ ಗೆಳೆಯರ ಒಡನಾಟ
ಪುಸ್ತಕಗಳು ಮನುಷ್ಯನ ಅತ್ಯಂತ ಮೌನ ಸ್ನೇಹಿತರು. ನಾವು ದುಃಖದಲ್ಲಿದ್ದಾಗ ಧೈರ್ಯ ಕೊಡುತ್ತವೆ. ಒಂಟಿತನದಲ್ಲಿ ಜೊತೆಗಿರುತ್ತವೆ ಮತ್ತು ನಿರಾಶೆಯಲ್ಲಿ ಬೆಳಕಾಗುತ್ತವೆ. ಯಾವ ಪ್ರತಿಫಲವನ್ನೂ ಬೇಡದೆ, ಜೀವನಪೂರ್ತಿ ನಮ್ಮನ್ನು ಸಮೃದ್ಧಗೊಳಿಸುತ್ತವೆ. ಕುವೆಂಪು, ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ಎಪಿಜೆ ಅಬ್ದುಲ್ ಕಲಾಮ್ರಂತಹ ಮಹಾನ್ ಚೇತನಗಳ ಚಿಂತನೆಯ ಹಿಂದೆ ಆಳವಾದ ಓದಿನ ಸಂಸ್ಕೃತಿ ಇತ್ತು. ಯಾವ ಮಹಾನ್ ಸಾಧನೆಯೂ ಪುಸ್ತಕಗಳ ಜೊತೆಗಿನ ಸ್ನೇಹವಿಲ್ಲದೆ ಹುಟ್ಟಿಲ್ಲ.
ಬದಲಾಗಬೇಕಿದೆ ಇಂದಿನ ಕೌಟುಂಬಿಕ ಸಂಸ್ಕೃತಿ
ಇಂದು ಮಕ್ಕಳಿಗೆ ಆಟಿಕೆ ಕೊಡುವಷ್ಟು ಆಸಕ್ತಿಯಿಂದ ಪುಸ್ತಕ ಕೊಡುವ ಪೋಷಕರು ಕಡಿಮೆಯಾಗುತ್ತಿದ್ದಾರೆ. ಮನೆಗಳಲ್ಲಿ ಟಿವಿಗೆ ವಿಶೇಷ ಜಾಗ ಇದೆ, ಆದರೆ ಪುಸ್ತಕಗಳಿಗೆ ಶಾಂತವಾದ ಒಂದು ಮೂಲೆಯೂ ಇಲ್ಲ. ಇದು ಕೇವಲ ಅಭ್ಯಾಸದ ಬದಲಾವಣೆ ಅಲ್ಲ… ಸಂಸ್ಕೃತಿಯ ಬದಲಾವಣೆ.
ಗ್ರಂಥಾಲಯಗಳು ಖಾಲಿಯಾಗುತ್ತಿರುವುದು ಎಂದರೆ ಕಟ್ಟಡಗಳು ಖಾಲಿಯಾಗುತ್ತಿರುವುದಲ್ಲ, ಅದು ಸಮಾಜದ ಚಿಂತನೆ ಖಾಲಿಯಾಗುತ್ತಿರುವ ಸೂಚನೆ. ನಾವು ಮಕ್ಕಳಿಗೆ ಆಸ್ತಿ ಮಾಡಬಹುದು, ಹಣ ಉಳಿಸಬಹುದು, ಸೌಲಭ್ಯ ಕೊಡಬಹುದು. ಆದರೆ ಓದುವ ಅಭ್ಯಾಸ ಕೊಡದಿದ್ದರೆ, ಅವರ ಒಳಜಗತ್ತನ್ನು ಬಡವಾಗಿಯೇ ಬಿಡುತ್ತೇವೆ. ಯಾಕೆಂದರೆ… ಪುಸ್ತಕಗಳು ಇಲ್ಲದ ಮನೆಗಳಲ್ಲಿ ವಸ್ತುಗಳು ಇರಬಹುದು, ಆದರೆ ವಿಚಾರಗಳು ಹುಟ್ಟುವುದಿಲ್ಲ.
ಪುಸ್ತಕಗಳು ಮೌನದಲ್ಲೇ ಮಾತಾಡುವ ಜ್ಞಾನಿಗಳಾಗಿವೆ. ಪುಸ್ತಕ ಬೆಳೆಸಿದ ಜ್ಞಾನದ ಮನಸ್ಸು ಎಂದಿಗೂ ಬಡವಾಗುವುದಿಲ್ಲ. ಒಂದು ಸಮಾಜ ಪುಸ್ತಕಗಳನ್ನು ಮರೆತ ದಿನ, ನಿಧಾನವಾಗಿ ತನ್ನ ಸಂಸ್ಕಾರ, ಸಂವೇದನೆ, ಸಂಸ್ಕೃತಿ ಮತ್ತು ಭವಿಷ್ಯದ ಬೆಳಕನ್ನೇ ಕಳೆದುಕೊಳ್ಳತೊಡಗುತ್ತದೆ. ಸಂಸ್ಕಾರವಂತ ಸಮಾಜದ ಬೇರು ಪುಸ್ತಕಗಳಲ್ಲಿ ಅಡಗಿದೆ ಎಂಬುದನ್ನು ಒತ್ತಿ ಹೇಳುವ ಕಾಲ ಇದಾಗಿದೆ.
ಮೌನ ಮುರಿಯುವ ಹಾದಿ: ಮನೆ-ಮನಗಳಲ್ಲಾಗಲಿ ಬದಲಾವಣೆ
ಆದರೆ ಈ ಮೌನವನ್ನು ಮುರಿಯುವ ಪ್ರಯತ್ನಗಳು ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಮಕ್ಕಳನ್ನು ಪುಸ್ತಕ ಸಂತೆಗೆ ಕರೆದೊಯ್ಯಬೇಕು. ಮನೆಯಲ್ಲಿ ದೊಡ್ಡವರೇ ಸ್ವಲ್ಪ ಸಮಯ ಟಿವಿ ಮತ್ತು ಮೊಬೈಲ್ಗಳನ್ನು ಆಫ್ ಮಾಡಿ, ಮಕ್ಕಳ ಜೊತೆ ಕೂತು ಓದಬೇಕು. ಹೊಸ ಹೊಸ ಪುಸ್ತಕಗಳ ಬಗ್ಗೆ ಚರ್ಚೆಗಳು ನಡೆಯಬೇಕು. ಮನೆಗೆ ನಿಯತಕಾಲಿಕೆಗಳು, ಕಥಾಸಂಕಲನಗಳು, ಜೀವನ ಚರಿತ್ರೆಗಳು ಬರಬೇಕು. ವಿವಾಹ, ಹುಟ್ಟುಹಬ್ಬ ಹಾಗೂ ಇತರೆ ಸಂಭ್ರಮಾಚರಣೆಗಳಲ್ಲಿ ಉಡುಗೊರೆಯಾಗಿ ಪುಸ್ತಕಗಳನ್ನು ನೀಡುವ ಸಂಪ್ರದಾಯ ಬೆಳೆಸಬೇಕು. ಓದನ್ನು ಬಲವಂತದ ಅಭ್ಯಾಸವಾಗಲ್ಲದೆ ಸಂತೋಷದ ಸಂಸ್ಕೃತಿಯಾಗಿಸಬೇಕು.
ಇತ್ತೀಚೆಗೆ ಕೆಲ ಪುಸ್ತಕಪ್ರಿಯರು ಪ್ರತಿ ಶನಿವಾರ ಕಬ್ಬನ್ ಪಾರ್ಕ್ ಹಾಗೂ ಪ್ರತಿ ಭಾನುವಾರ ಲಾಲ್ಬಾಗ್ನಲ್ಲಿ ಒಂದಾಗಿ ಸೇರಿ ಪುಸ್ತಕ ಓದುವ ಸುಂದರ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಗದ್ದಲವಿಲ್ಲದೆ, ಮೌನದಲ್ಲೇ ಓದಿನ ಹಬ್ಬವನ್ನು ಆಚರಿಸುತ್ತಿರುವ ಈ ಪ್ರಯತ್ನ ಒಂದು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇಂತಹ ಚಿಕ್ಕ ಚಿಕ್ಕ ಬೆಳಕುಗಳು ಮತ್ತಷ್ಟು ಹರಡಬೇಕು. ಓದಿನ ಆಸಕ್ತಿ ಇರುವವರಿಗಷ್ಟೇ ಅಲ್ಲ, ಓದಿನಿಂದ ದೂರವಾಗಿರುವವರಿಗೂ ಇದು ಪ್ರೇರಣೆಯಾಗಬೇಕು. ಪುಸ್ತಕ ಓದುವ ಒಂದು ಮಗು, ಕೇವಲ ತನ್ನ ಭವಿಷ್ಯವನ್ನು ಕಟ್ಟುವುದಲ್ಲದೆ ಒಂದು ಉತ್ತಮ ಸಮಾಜದ ಅಡಿಪಾಯವನ್ನೂ ನಿರ್ಮಿಸಬಲ್ಲದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
