- ಸಾಕ್ಷಿ ಶ್ರೀಕಾಂತ ಟಿಕೋಟಿಕರ್, ಲೇಖಕಿ
“ಸುಳ್ಳು ಹೇಳಿದಷ್ಟು ಹಣ ಜಾಸ್ತಿ.. ಕೇಳುವವರು ಯಾರು?”– ಇಂದಿನ ಮಾರುಕಟ್ಟೆ ಪ್ರಪಂಚದ ಅಲಿಖಿತ ನಿಯಮವಿದು. ಸುಳ್ಳನ್ನೇ ಬಂಡವಾಳವಾಗಿಸಿಕೊಂಡು, ಭ್ರಮೆಯ ಲೋಕವನ್ನು ಸೃಷ್ಟಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಬೃಹತ್ ಕಂಪನಿಗಳ ಜಾಲ ಒಂದೆಡೆಯಾದರೆ, ಆ ಸುಳ್ಳುಗಳನ್ನು ಸತ್ಯವೆಂದು ನಂಬಿ ಮರುಳಾಗುವ ಜನಸಾಮಾನ್ಯರ ಮುಗ್ಧತೆ ಇನ್ನೊಂದೆಡೆ. 2 ರೂ.ಗಾಗಿ ಬೀದಿಬದಿಯ ಸೊಪ್ಪು ಮಾರುವ ಬಡ ವ್ಯಾಪಾರಿಯೊಂದಿಗೆ ಚೌಕಾಸಿ ಮಾಡುವ ಸಮಾಜ, ಬಹುರಾಷ್ಟ್ರೀಯ ಕಂಪನಿಗಳ ಕೋಟಿ ರೂ.ಗಳ ಸುಳ್ಳು ಜಾಹಿರಾತುಗಳಿಗೆ ಮರುಳಾಗಿ ಸಾವಿರಾರು ರೂಪಾಯಿಗಳನ್ನು ಸುರಿಯುತ್ತಿರುವುದು ಇಂದಿನ ಕಟುವಾಸ್ತವ.
- ಭ್ರಾಂತಿದಾಯಕ ಜಾಹಿರಾತುಗಳು ಮತ್ತು ಮಾರುಕಟ್ಟೆಯ ಮಾಯಾಜಾಲ
ನಾವು ದಿನನಿತ್ಯ ಮಾಧ್ಯಮಗಳಲ್ಲಿ ನೋಡುವ ಬಹುತೇಕ ಜಾಹಿರಾತುಗಳು ವೈಜ್ಞಾನಿಕ ಸತ್ಯಕ್ಕೆ ತದ್ವಿರುದ್ಧವಾಗಿವೆ. ಸೌಂದರ್ಯ, ಆರೋಗ್ಯ ಮತ್ತು ಶಕ್ತಿಯ ಹೆಸರಿನಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳ ಅಸಲೀ ಮುಖ ಹೀಗಿದೆ: ಸೌಂದರ್ಯದ ಭ್ರಮೆ (Fairness Creams): ‘ಫೇರ್ ಅಂಡ್ ಲವ್ಲಿ’ (ಈಗ ಗ್ಲೋ ಅಂಡ್ ಲವ್ಲಿ) ಹಚ್ಚಿ ಆರೇ ವಾರಗಳಲ್ಲಿ ಮೈಕಾಂತಿ ಪಡೆಯಿರಿ ಎಂಬ ಪ್ರಚಾರ ದಶಕಗಳಿಂದ ನಡೆಯುತ್ತಿದೆ. ಆದರೆ ವೈಜ್ಞಾನಿಕವಾಗಿ ಚರ್ಮದ ಬಣ್ಣವು ದೇಹದಲ್ಲಿರುವ ಮೆಲನಿನ್ ಅಂಶದ ಮೇಲೆ ನಿರ್ಧಾರವಾಗುತ್ತದೆ. ಈ ಕ್ರೀಮ್ಗಳಿಂದಲೇ ಬಣ್ಣ ಬದಲಾಗುವುದಾಗಿದ್ದರೆ ವೆಸ್ಟ್ ಇಂಡೀಸ್ ಅಥವಾ ಅಮೆರಿಕದಲ್ಲಿ ಕರಿಯರು-ಬಿಳಿಯರೆಂಬ ಭೇದವೇ ಇರುತ್ತಿರಲಿಲ್ಲ.
ಪೌಷ್ಟಿಕಾಂಶದ ಹೆಸರಿನಲ್ಲಿ ಸಕ್ಕರೆಯ ವಿಷ (Health Drinks): ಮಕ್ಕಳ ಎತ್ತರ, ಬುದ್ಧಿಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಬಿಂಬಿಸಿಕೊಳ್ಳುವ ಹಾರ್ಲಿಕ್ಸ್, ಕಾಂಪ್ಲಾನ್, ಬೌರ್ನ್ ವಿಟಾ, ಬೂಸ್ಟ್ ನಂತಹ ಪೇಯಗಳನ್ನು ಯಾವೊಬ್ಬ ಮಕ್ಕಳ ತಜ್ಞರೂ ಅಥವಾ ಪೌಷ್ಟಿಕಾಂಶ ತಜ್ಞರೂ ಶಿಫಾರಸು ಮಾಡುವುದಿಲ್ಲ. ವಾಸ್ತವದಲ್ಲಿ, ಇವುಗಳಲ್ಲಿ ಅತಿಯಾದ ಸಕ್ಕರೆ ಮತ್ತು ಸಂಸ್ಕರಿಸಿದ ಅಂಶಗಳಿದ್ದು, ಇವು ಮಕ್ಕಳ ಆರೋಗ್ಯಕ್ಕೆ ಪೂರಕವಾಗುವ ಬದಲು ಮಾರಕವಾಗುತ್ತವೆ.
ಆರೋಗ್ಯಕರ ಆಹಾರದ ಮುಖವಾಡ (Muesli & Cornflakes): ತೂಕ ಇಳಿಸಲು ಮತ್ತು ಆರೋಗ್ಯಕರ ಉಪಾಹಾರಕ್ಕೆ ‘ಮ್ಯೂಸ್ಲಿ’ ಮತ್ತು ‘ಕಾರ್ನ್ಫ್ಲೇಕ್ಸ್’ ಅತ್ಯುತ್ತಮ ಎಂದು ಜಾಹಿರಾತು ನೀಡಲಾಗುತ್ತದೆ. ಆದರೆ ಇವುಗಳಲ್ಲಿ ಹೆಚ್ಚುವರಿ ಕ್ಯಾಲೊರಿಗಳು, ಚಾಕೊಲೇಟ್ ಮತ್ತು ಕೃತಕ ಸಕ್ಕರೆಗಳನ್ನು ಅಡಗಿಸಿಡಲಾಗಿರುತ್ತದೆ.
ರಾಸಾಯನಿಕ ಯುಕ್ತ ಪೇಯಗಳು (Soft Drinks): ‘ಮಾಝಾ’ ಅಥವಾ ‘ಸ್ಟಿಂಗ್’ನಂತಹ ಪೇಯಗಳನ್ನು ತಾಜಾ ಹಣ್ಣಿನ ರಸ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಇವು ಕೇವಲ ಅತಿಯಾದ ಸಕ್ಕರೆ, ಕೃತಕ ಬಣ್ಣ ಮತ್ತು ರಾಸಾಯನಿಕಗಳ ಮಿಶ್ರಣವಾಗಿವೆ.
ಕಟು ಸತ್ಯ: ಕೋಟಿಗಟ್ಟಲೆ ಸಂಭಾವನೆ ಪಡೆದು ಈ ಉತ್ಪನ್ನಗಳ ರಾಯಭಾರಿಗಳಾಗಿ ನಟಿಸುವ ಸಿನಿಮಾ ತಾರೆಯರು ಅಥವಾ ಕ್ರೀಡಾಪಟುಗಳು, ತಮ್ಮ ನಿಜ ಜೀವನದಲ್ಲಿ ಇವುಗಳ ಒಂದು ಹನಿಯನ್ನೂ ಬಳಸುವುದಿಲ್ಲ!.
2. ಕಾನೂನಿನ ಚೌಕಟ್ಟು ಮತ್ತು ಪ್ರಚಾರಕರ ಜವಾಬ್ದಾರಿ
ಕಾಯ್ದೆಯ ಪ್ರಮುಖ ಮುಖ್ಯಾಂಶಗಳು:
ನಿಷೇಧ: ಸಾಬೀತುಪಡಿಸಲಾಗದ ಸುಳ್ಳು ಭರವಸೆಗಳು ಮತ್ತು ತಕ್ಷಣದ ಫಲಿತಾಂಶದ ದಾವೆಗಳನ್ನು (ಉದಾ: ತಕ್ಷಣ ಬಿಳಿಯಾಗುವುದು, ಆಯುರ್ವೇದದ ಹೆಸರಿನ ನಕಲಿ ಚಿಕಿತ್ಸೆ) ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದಂಡ ಮತ್ತು ಶಿಕ್ಷೆ: ಮೊದಲ ಬಾರಿಯ ಅಪರಾಧಕ್ಕೆ 10 ಲಕ್ಷ ರೂ.ವರೆಗೆ ದಂಡ. ಪುನರಾವರ್ತಿತ ಅಪರಾಧಕ್ಕೆ 50 ಲಕ್ಷ ರೂ.ವರೆಗೆ ದಂಡ ಹಾಗೂ ಜಾಹಿರಾತು ನಿಷೇಧದ ಆದೇಶ.
ಸೆಲೆಬ್ರಿಟಿಗಳ ಹೊಣೆಗಾರಿಕೆ: ತಪ್ಪು ಮಾಹಿತಿಯುಳ್ಳ ಉತ್ಪನ್ನಗಳನ್ನು ಪ್ರಚಾರ ಮಾಡುವ ಪ್ರಸಿದ್ಧ ವ್ಯಕ್ತಿಗಳಿಗೂ (ಸೆಲೆಬ್ರಿಟಿಗಳು) ದಂಡ ಮತ್ತು ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
3. ಅಗತ್ಯವಿರುವ ಜಾಹಿರಾತುಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಯೋಜನೆಗಳು
ಖಾಸಗಿ ಕಂಪನಿಗಳು ತಮ್ಮ ಲಾಭಕ್ಕಾಗಿ ಸುಳ್ಳುಗಳನ್ನು ವೈಭವೀಕರಿಸಿ ಪ್ರಚಾರ ಮಾಡುತ್ತವೆ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಜನಸಾಮಾನ್ಯರಿಗೆ ತಲುಪಬೇಕಾದ ಸರ್ಕಾರದ ಉಚಿತ ಮತ್ತು ಅತ್ಯಗತ್ಯ ಯೋಜನೆಗಳ ಬಗ್ಗೆ ಸಮಾಜದಲ್ಲಿ ಅರಿವೇ ಇಲ್ಲದಂತಾಗಿದೆ. ಉದಾಹರಣೆಗೆ, ಭಾರತದಲ್ಲಿ ಪ್ರತಿ ಐದು ಮಹಿಳೆಯರಲ್ಲಿ ಮೂವರಿಗೆ ಕಬ್ಬಿಣಾಂಶದ (Iron) ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತ ಪೂರಕ ಔಷಧಿಗಳನ್ನು ನೀಡಲಾಗುತ್ತದೆ, ಆದರೆ ಇದರ ಪ್ರಚಾರ ಮಾತ್ರ ಶೂನ್ಯ.
ಜನಸಾಮಾನ್ಯರಿಗೆ ತಲುಪಬೇಕಾದ ಕೆಲವು ಪ್ರಮುಖ ಉಚಿತ ಯೋಜನೆಗಳು ಇಲ್ಲಿವೆ:

ಈ ಮಾಹಿತಿ ಜನರಿಗೆ ತಲುಪದಿರಲು ಕಾರಣಗಳೇನು?
- ಸರ್ಕಾರಿ ಯೋಜನೆಗಳ ಕುರಿತು ಮಾಧ್ಯಮಗಳಲ್ಲಿ ಅತ್ಯಂತ ಕಡಿಮೆ ಪ್ರಚಾರ ಇರುವುದು.
- ಲಭ್ಯವಿರುವ ಆನ್ಲೈನ್ ಮಾಹಿತಿಗಳು ತಾಂತ್ರಿಕವಾಗಿದ್ದು, ಗ್ರಾಮೀಣ ಜನರಿಗೆ ಅರ್ಥವಾಗದ ಭಾಷೆಯಲ್ಲಿರುವುದು.
- ತಳಮಟ್ಟದ ಜನರಿಗೆ ಮಾಹಿತಿ ತಲುಪಿಸುವ ವ್ಯವಸ್ಥಿತ ಬದ್ಧತೆಯ ಕೊರತೆ.
ಜಾಗೃತ ಗ್ರಾಹಕನೇ ದೇಶದ ಶಕ್ತಿ
ನಾವು ಮಾರುಕಟ್ಟೆಯಿಂದ ತಂದ ಹಣ್ಣುಗಳಲ್ಲಿ ಎರಡು ಕೆಟ್ಟಿದ್ದರೂ ತಕ್ಷಣವೇ ಅಂಗಡಿಯವನಿಗೆ ವಾಪಸ್ ಕೊಟ್ಟು ಬದಲಾಯಿಸಿಕೊಳ್ಳುತ್ತೇವೆ. ಆದರೆ, ಟಿವಿ ಪರದೆಯ ಮೇಲೆ ನಿರಂತರವಾಗಿ ಬಿತ್ತರವಾಗುವ ಸುಳ್ಳು ಮಾಹಿತಿಗಳನ್ನು ನೋಡಿಯೂ ಮೂಕಪ್ರೇಕ್ಷಕರಾಗಿ ಇರುತ್ತೇವೆ. ಈ ಧೋರಣೆ ಬದಲಾಗಬೇಕು.
ಜಾಹಿರಾತುಗಳ ಮೂಲ ಉದ್ದೇಶ ಮಾಹಿತಿ ನೀಡುವುದೇ ಹೊರತು ಭ್ರಮೆಗಳನ್ನು ಬಿತ್ತುವುದಲ್ಲ. ಗ್ರಾಹಕರಾದ ನಾವು ಜಾಗೃತರಾಗಿ, ಕಣ್ಣು-ಕಿವಿಗಳನ್ನು ತೆರೆದು ಉತ್ಪನ್ನಗಳ ಹಿಂದಿನ ಸತ್ಯಾಸತ್ಯತೆಯನ್ನು ಪ್ರಶ್ನಿಸದಿದ್ದರೆ, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಕಾರ್ಪೊರೇಟ್ ಜಗತ್ತು ನಮ್ಮನ್ನು ಮತ್ತಷ್ಟು ಶೋಷಿಸುತ್ತಲೇ ಇರುತ್ತದೆ. “ಎಚ್ಚೆತ್ತುಕೊಳ್ಳಿ ಗ್ರಾಹಕರೆ, ಜಾಗೃತಿಯೇ ನಮ್ಮ ರಕ್ಷಾಕವಚ”.
