ವಿದ್ಯಾರ್ಥಿಗಳನ್ನು ರಾಷ್ಟ್ರದ ಭವಿಷ್ಯದ ಅಡಿಪಾಯ ಎಂದು ಬಣ್ಣಿಸಿದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಈ ಲಾಭರಹಿತ ಸಂಸ್ಥೆಯ ಹಿಂದಿರುವ ಸಮಾಜದ ಸಾಮೂಹಿಕ ಶ್ರಮವನ್ನು ಶ್ಲಾಘಿಸಿದರು. ಅಲ್ಲದೆ, ವಿಶ್ವವಿದ್ಯಾಲಯದ ಮೊದಲ ಬ್ಯಾಚ್ನ ವಿದ್ಯಾರ್ಥಿಗಳ ವಿಶಿಷ್ಟ ಕೊಡುಗೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.
ಗುವಾಹಟಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸೆಪ್ಟೆಂಬರ್ 8ರ ಮಂಗಳವಾರದಂದು ಪ್ರಾಗ್ಜ್ಯೋತಿಷಪುರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ವಿಶ್ವವಿದ್ಯಾಲಯದ ಪರಿವಾರವನ್ನು ಉದ್ದೇಶಿಸಿ ಮಾತನಾಡಿದ ಸರಕಾರ್ಯವಾಹರು, ಸಮಾಜವನ್ನು ರೂಪಿಸುವಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಮೌಲ್ಯಗಳ ಪಾತ್ರದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಅವರ ದಿಕ್ಸೂಚಿ ಭಾಷಣವು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಸಮುದಾಯಕ್ಕೆ ಶಿಕ್ಷಣ, ಸಾಂಸ್ಕೃತಿಕ ಅರಿವು ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಬಲವಾದ ಮತ್ತು ಅರ್ಥಪೂರ್ಣ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡಿತು.
ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಪರಿವರ್ತನಾತ್ಮಕ ಪಾತ್ರವನ್ನು ಎತ್ತಿಹಿಡಿದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ವಿದ್ಯಾರ್ಥಿ ಕೇಂದ್ರಿತ, ಅನುಭವ ಆಧಾರಿತ ಮತ್ತು ಕೌಶಲ್ಯ ಆಧಾರಿತ ಕಲಿಕೆಯ ಅಗತ್ಯವನ್ನು ಪ್ರತಿಪಾದಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿ ಚಾರಿತ್ರ್ಯ ನಿರ್ಮಾಣ ಮತ್ತು ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ಅವರು ಒತ್ತು ನೀಡಿ ಹೇಳಿದರು. ವಿದ್ಯಾರ್ಥಿಗಳನ್ನು ರಾಷ್ಟ್ರದ ಭವಿಷ್ಯದ ಅಡಿಪಾಯ ಎಂದು ಬಣ್ಣಿಸಿದ ಅವರು, ಈ ಲಾಭರಹಿತ ಸಂಸ್ಥೆಯ ಸ್ಥಾಪನೆಯ ಹಿಂದಿರುವ ಸಾಮೂಹಿಕ ಸಾಮಾಜಿಕ ಪ್ರಯತ್ನವನ್ನು ಶ್ಲಾಘಿಸಿದರು. ವಿಶ್ವವಿದ್ಯಾಲಯದ ಮೊದಲ ಬ್ಯಾಚ್ನ ವಿದ್ಯಾರ್ಥಿಗಳನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ಸಂಸ್ಥೆಯ ಸಂಸ್ಥಾಪಕ ಬ್ಯಾಚ್ ಆಗಿ ಅವರ ಕೊಡುಗೆ ಅನನ್ಯವಾದದ್ದು ಎಂದರು.
ಇದಕ್ಕೂ ಮುನ್ನ, ಕುಲಪತಿ (ವೈಸ್ ಚಾನ್ಸಲರ್) ಪ್ರೊ. ರಾಘವೇಂದ್ರ ಪ್ರಸಾದ್ ತಿವಾರಿ ಅವರು ಸ್ವಾಗತ ಭಾಷಣ ಮಾಡಿದರು. ಭಾರತೀಯ ಜ್ಞಾನ ಪರಂಪರೆ ಮತ್ತು ಮೌಲ್ಯಗಳನ್ನು ಆಧುನಿಕ ಜಾಗತಿಕ ಶಿಕ್ಷಣದೊಂದಿಗೆ ಸಂಯೋಜಿಸುವ ವಿಶ್ವವಿದ್ಯಾಲಯದ ದೃಷ್ಟಿಕೋನವನ್ನು ಅವರು ವಿವರಿಸಿದರು. ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ, ಆಧುನಿಕ ಜ್ಞಾನವನ್ನು ಹೊಂದಿರುವ ಮತ್ತು ಭಾರತವನ್ನು ‘ವಿಶ್ವಗುರು’ ಮಾಡುವಲ್ಲಿ ಕೊಡುಗೆ ನೀಡಲು ಬದ್ಧವಾಗಿರುವ ಪೀಳಿಗೆಯನ್ನು ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮವು ವಿಶ್ವವಿದ್ಯಾಲಯದ ಕುಲಾಧಿಪತಿ (ಚಾನ್ಸಲರ್) ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಣಾ ಪ್ರತಾಪ್ ಕಲಿತಾ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕ್ರಮದ ನಂತರ, ದತ್ತಾತ್ರೇಯ ಹೊಸಬಾಳೆ ಅವರು ಆರ್ಎಸ್ಎಸ್ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ವಿ. ಭಾಗಯ್ಯ ಅವರೊಂದಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೃಕ್ಷಾರೋಪಣ ಅಭಿಯಾನವು ಪರಿಸರ ಜವಾಬ್ದಾರಿ ಮತ್ತು ಹಸಿರು ಹಾಗೂ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಜಂಟಿ ಬದ್ಧತೆಯನ್ನು ಸಂಕೇತಿಸಿತು. ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪರಿಸರ ಸಂರಕ್ಷಣೆಯೊಂದಿಗೆ ಜೋಡಿಸುವುದರ ಮಹತ್ವವನ್ನೂ ಈ ಕಾರ್ಯಕ್ರಮ ಎತ್ತಿಹಿಡಿಯಿತು.
ಈ ಭೇಟಿಯು ಅರ್ಥಪೂರ್ಣ ಸಂವಾದ, ವಿಚಾರಪೂರ್ಣ ಆಲೋಚನೆಗಳು ಹಾಗೂ ಜವಾಬ್ದಾರಿಯುತ ಪೌರತ್ವ, ಸಾಂಸ್ಕೃತಿಕ ಬೇರುಗಳು ಮತ್ತು ಸುಸ್ಥಿರ ಅಭಿವೃದ್ಧಿಯ ಬಲವಾದ ಸಂದೇಶಕ್ಕೆ ಸಾಕ್ಷಿಯಾಯಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
