- ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ
ವ್ಯಾವಹಾರಿಕ ಜಗತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ವೇಗವಾಗಿ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ, ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯು ಹಿಜಾಬ್, ಕೇಸರಿ ಶಾಲು ಹಾಗೂ ಜನಿವಾರದಂತಹ ವಿವಾದಗಳ ಸುಳಿಗೆ ಸಿಲುಕಿರುವುದು ದುರದೃಷ್ಟಕರ. ಇತ್ತೀಚೆಗೆ ಹಿಜಾಬ್ ಮತ್ತು ಜನಿವಾರವನ್ನು ಸಮೀಕರಿಸಿ ಮಾತನಾಡುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಕೇವಲ ‘ವಸ್ತ್ರಸಂಹಿತೆ ವಿವಾದ’ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಇಲ್ಲಿ ನಡೆಯುತ್ತಿರುವುದು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸದ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರಗಾರಿಕೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಲೆ-ಕಾಲೇಜುಗಳು ಎಂದರೆ ಅವು ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ಮಕ್ಕಳೂ ಸಮಾನತೆಯ ಭಾವನೆಯಿಂದ ಭವಿಷ್ಯದ ಬುನಾದಿ ಕಟ್ಟಿಕೊಳ್ಳುವ ಪವಿತ್ರ ಕಲಿಕಾ ಕೇಂದ್ರಗಳಾಗಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇವು ಜಾತಿ-ಸಮುದಾಯಗಳ ಗುರುತುಗಳನ್ನು ಬಿಂಬಿಸುವ ಮತ್ತು ಅದನ್ನು ವಿರೋಧಿಸುವ ರಾಜಕೀಯ ವೇದಿಕೆಗಳಾಗಿ ಮಾರ್ಪಡುತ್ತಿರುವುದು ಆತಂಕಕಾರಿ ಸಂಗತಿ.
ನಾಲ್ಕು ವರ್ಷಗಳ ಹಿಂದೆ, ಅಂದರೆ 2022ರಲ್ಲಿ ಉಡುಪಿಯ ಪದವಿ ಪೂರ್ವ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಯತ್ನಿಸಿದಾಗ ಈ ವಿವಾದ ಭುಗಿಲೆದ್ದಿತು. ಕಾಲೇಜು ಆಡಳಿತ ಮಂಡಳಿಯು ಸಮವಸ್ತ್ರದ ನಿಯಮಗಳನ್ನು ಉಲ್ಲೇಖಿಸಿ ಹಿಜಾಬ್ಗೆ ತಡೆ ಒಡ್ಡಿದಾಗ ಪ್ರತಿಭಟನೆಗಳು ಆರಂಭವಾದವು. ಆಡಳಿತ ಮತ್ತು ಪ್ರತಿಪಕ್ಷಗಳು ಈ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಪರಿಣಾಮ, ಆಡಳಿತಾತ್ಮಕವಾಗಿ ಬಗೆಹರಿಯಬೇಕಾಗಿದ್ದ ವಿಷಯವೊಂದು ಇಂದಿಗೂ ಜೀವಂತ ವಿವಾದವಾಗಿ ಉಳಿದುಕೊಂಡಿದೆ. ಆ ಸಂದರ್ಭದಲ್ಲಿ ಹಿಜಾಬ್ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ವ್ಯಕ್ತವಾದ ಬಳಿಕ ವಿವಾದ ಮತ್ತಷ್ಟು ತಾರಕಕ್ಕೇರಿತು.
ಬಳಿಕ ಈ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಏಕರೂಪದ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವ ಶಿಕ್ಷಣ ಸಂಸ್ಥೆಗಳ ಅಧಿಕಾರ ಸಮಂಜಸವಾಗಿದೆ” ಎಂದು ಸ್ಪಷ್ಟಪಡಿಸಿತು. ಶಾಲಾ-ಕಾಲೇಜುಗಳ ಸಮವಸ್ತ್ರವು ಸಮಾನತೆ, ಶಿಸ್ತು ಹಾಗೂ ಏಕತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿರುವುದರಿಂದ, ಇದು ಸಂವಿಧಾನಬದ್ಧವಾದ ನಿರ್ಬಂಧವೇ ಆಗಿದೆ ಎಂದು ನ್ಯಾಯಾಲಯ ಒತ್ತಿಹೇಳಿತು. ಅಲ್ಲದೆ, ಶಿಕ್ಷಣದ ಆರೋಗ್ಯಕರ ವಾತಾವರಣವನ್ನು ಕಾಪಾಡಲು ಬಹಿರಂಗವಾಗಿ ಗೋಚರಿಸುವ ಎಲ್ಲ ಧಾರ್ಮಿಕ ಚಿಹ್ನೆಗಳನ್ನು (ಹಾಗೂ ಹಿಜಾಬ್, ಕೇಸರಿ ಶಾಲುಗಳನ್ನು) ತರಗತಿಯಿಂದ ಹೊರಗಿಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ಹೀಗಿದ್ದಾಗ್ಯೂ ವಿವಾದ ತಣ್ಣಗಾಗಲಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಹಿಜಾಬ್ ಹಾಗೂ ಶಾಲುಗಳು ಹೊರಗೆ ಕಾಣಿಸುವ ಉಡುಪುಗಳು. ಆದರೆ, ಪರೀಕ್ಷಾ ಸಂದರ್ಭದಲ್ಲಿ ಅಧಿಕಾರಿಗಳು ಉಡುಪಿನ ಒಳಗಿರುವ ಜನಿವಾರ, ಶಿವದಾರ, ಉಡುದಾರಗಳನ್ನೂ ಕಡಿಸಿದ್ದು ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯಿತು. ಶಿಕ್ಷಣದ ಗುಣಮಟ್ಟದ ಮೇಲೆ ಇರಬೇಕಾದ ಸಮಾಜದ ಗಮನ ಈಗ ರಾಜಕೀಯ ವಿಚಾರಗಳ ಮೇಲೆ ಕೇಂದ್ರಿಕೃತವಾಗಿ ಇಡೀ ವ್ಯವಸ್ಥೆ ಜಟಿಲಗೊಳ್ಳುತ್ತಿದೆ.
ಇದೀಗ ರಾಜ್ಯದಲ್ಲಿ ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿ, ಹಿಜಾಬ್ಗೆ ಅವಕಾಶ ನೀಡುವ ಸುಳಿವು ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಸಂವಿಧಾನದ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ವಸ್ತ್ರಸಂಹಿತೆಯನ್ನು ತರಲಾಗಿದೆ. ಇದು ಯಾರನ್ನೂ ಓಲೈಸುವ ಅಥವಾ ನೋಯಿಸುವ ಉದ್ದೇಶ ಹೊಂದಿಲ್ಲ; ಬದಲಿಗೆ ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳನ್ನು ಗೌರವಿಸುವ ನಿಲುವಾಗಿದೆ” ಎಂದಿದ್ದರು. ಮುಖ್ಯಮಂತ್ರಿಯವರ ಈ ಹೇಳಿಕೆಯನ್ನು ಗಮನಿಸಿದಾಗ, “ಹಾಗಾದರೆ ನ್ಯಾಯಾಲಯದ ತೀರ್ಪು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿತ್ತೇ?” ಎಂಬ ಪ್ರಶ್ನೆ ಮೂಡುವುದು ಸಹಜ.
ಇಲ್ಲಿ ನಾವು ಯೋಚಿಸಬೇಕಾದ ಮುಖ್ಯ ವಿಷಯ: ಶಿಕ್ಷಣದ ವಾತಾವರಣ ಕಾಪಾಡುವುದು ಎಂದರೆ ‘ತಟಸ್ಥ ಭಾವ’ವೇ (Neutrality) ಅಥವಾ ‘ಸರ್ವಧರ್ಮ ಸಮಭಾವ’ವೇ? ನ್ಯಾಯಾಲಯದ ತೀರ್ಪು ಉಲ್ಲೇಖಿಸಿದ ‘ತಟಸ್ಥ ಭಾವ’ ಎಂದರೆ ಜಾತಿ, ಸಮುದಾಯಗಳ ಆಚಾರ-ವಿಚಾರಗಳು ಅಥವಾ ಸಂಕೇತಗಳಿಂದ ಮಕ್ಕಳಲ್ಲಿ ಬಡವ-ಬಲ್ಲಿದ, ಮೇಲು-ಕೀಳು ಎಂಬ ಭೇದಭಾವ ಮೂಡಬಾರದು ಎಂದೇ ಹೊರತು, ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದಲ್ಲ. ಆದರೆ ಇಂದು ಬಹುತೇಕರು ತಮ್ಮ ರಾಜಕೀಯ ಹಿತಾಸಕ್ತಿಗೆ ತಕ್ಕಂತೆ ನಿಯಮಗಳನ್ನು ತಿರುಚುತ್ತಿರುವುದರಿಂದ ಇಂತಹ ಗೊಂದಲಗಳು ಸೃಷ್ಟಿಯಾಗುತ್ತಿವೆ.
ಸಮವಸ್ತ್ರದ ವಿಚಾರದಲ್ಲಿ ರಾಜಕೀಯ ಲಾಭ ಹುಡುಕುವವರ ವಾದಗಳು ಹಿಜಾಬ್ನಿಂದ ಆರಂಭವಾಗಿ, ಕೇಸರಿ ಶಾಲಿನ ಮೂಲಕ ಜನಿವಾರ, ಶಿವದಾರಗಳವರೆಗೆ ಬಂದು ನಿಂತಿವೆ. ಜನಿವಾರ, ಶಿವದಾರ, ಉಡುದಾರಗಳೆಲ್ಲವೂ ಉಡುಪಿನ ಒಳಗಿರುವ ಕಾರಣ, ಅವುಗಳು ಕಳೆದ ಹಲವಾರು ವರ್ಷಗಳಿಂದ ಶಾಲಾ ಶಿಸ್ತಿಗೆ ಅಥವಾ ತಟಸ್ಥ ಭಾವಕ್ಕೆ ಎಂದಿಗೂ ಅಡ್ಡಿ ಉಂಟುಮಾಡಿರಲಿಲ್ಲ ಎಂಬುದನ್ನು ಮರೆಯಬಾರದು. ಕೇವಲ ರಾಜಕೀಯ ಓಲೈಕೆಗಾಗಿ ಇದನ್ನು ಇತರೆ ಬಾಹ್ಯ ಧಾರ್ಮಿಕ ಉಡುಪುಗಳಿಗೆ ಹೋಲಿಸುವುದು ಕಳವಳಕಾರಿ ಪ್ರವೃತ್ತಿಯಾಗಿದೆ. ಇದು ಧರ್ಮನಿರಪೇಕ್ಷತೆ ಮತ್ತು ಸಮಾನತೆಯ ನೈಜ ಅರ್ಥದ ಬಗ್ಗೆಯೇ ತಪ್ಪು ಸಂದೇಶ ರವಾನಿಸುತ್ತಿದೆ.
ಇಂದು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ರಾಜಕೀಯವೇ ಮುಖ್ಯವಾಗಿದೆ. ಆದರೆ, ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ಮಕ್ಕಳ ನೈಜ ಶಿಕ್ಷಣದ ಬಗ್ಗೆ ಯೋಚಿಸುವವರು ಯಾರು? ಈ ರಾಜಕೀಯ ಮೇಲಾಟದಲ್ಲಿ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪುತ್ತಿದೆ. ಶಿಕ್ಷಕರು ಪಾಠ ಮಾಡುವುದರ ಜೊತೆಗೆ ಸಮಾಜ ಸೃಷ್ಟಿಸಿರುವ ಉದ್ವಿಗ್ನತೆಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ ಯಾವುದನ್ನು ಪಾಲಿಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿವೆ. ಈ ಪರಿಸ್ಥಿತಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆಯೂ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಮವಸ್ತ್ರದ ಕಠಿಣ ನಿಯಮಗಳೇ ಬೇಡ ಎನ್ನುವುದು ಎಷ್ಟು ತಪ್ಪೋ, ರಾಜಕೀಯವಾಗಿ ಎಲ್ಲರನ್ನೂ ಖುಷಿಪಡಿಸಲು ಅತಿಯಾದ ಸಡಿಲಿಕೆ ನೀಡುವುದೂ ಅಷ್ಟೇ ತಪ್ಪು.
ಶಾಲಾ-ಕಾಲೇಜು ವ್ಯವಸ್ಥೆಯಲ್ಲಿ ಶಿಸ್ತು ಅತ್ಯಂತ ಮುಖ್ಯ. ಅದರ ಮೇಲೆ ಇಂತಹ ರಾಜಕೀಯ ಪ್ರೇರಿತ ವಿಚಾರಗಳು ಸವಾರಿ ನಡೆಸಿದರೆ ಮಕ್ಕಳಲ್ಲಿ ಸಂಘರ್ಷದ ಭಾವನೆ ಮೂಡುತ್ತದೆ. ಬಹುಸಂಸ್ಕೃತಿಯ ನಮ್ಮ ಸಮಾಜದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ‘ತಟಸ್ಥ ಭಾವ’ದ ನಿಜವಾದ ಅರ್ಥವೇನು ಎಂಬುದರ ಕುರಿತು ಆಳವಾದ ಚಿಂತನೆ ನಡೆಯಬೇಕಿದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಮೂರು ಪ್ರಮುಖ ಅಂಶಗಳನ್ನು ಗಮನಿಸಬಹುದು:
ನಿಯಮಗಳಲ್ಲಿ ಸ್ಪಷ್ಟತೆ: ಸಮವಸ್ತ್ರ ಮತ್ತು ಶಿಸ್ತಿನ ನಿಯಮಗಳು ಗೊಂದಲವಿಲ್ಲದೆ ಸ್ಪಷ್ಟವಾಗಿರಬೇಕು.
ನಿಯಮ ಜಾರಿಯಲ್ಲಿ ಸಮಾನತೆ: ನಿಯಮಗಳು ಎಲ್ಲ ಧರ್ಮ, ಜಾತಿಯ ವಿದ್ಯಾರ್ಥಿಗಳಿಗೂ ಸಮಾನವಾಗಿ ಅನ್ವಯವಾಗಬೇಕು.
ಸಂವೇದನಾಶೀಲತೆ: ನಿಯಮಗಳನ್ನು ಜಾರಿಗೊಳಿಸುವಾಗ ವಿದ್ಯಾರ್ಥಿಗಳ ಭಾವನೆ ಹಾಗೂ ಜೀವನಾನುಭವಗಳ ಬಗ್ಗೆ ಅಧಿಕಾರಿಗಳು ಮತ್ತು ಶಿಕ್ಷಕರು ಸಂವೇದನಾಶೀಲರಾಗಿರಬೇಕು (Sensitivity).
ಶಾಲಾ ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರಗಳು ಮತೀಯ ಸಂಘರ್ಷಕ್ಕೆ ವಿಷಯವಾಗದಂತೆ ನೋಡಿಕೊಳ್ಳುವುದು ಮಹತ್ವದ ವಿಚಾರವಾಗಿದೆ. ಪರಸ್ಪರ ಸಹಬಾಳ್ವೆಯಿಂದ, ಸಮಾನತೆಯಿಂದ ಬದುಕುವ ದಾರಿಗಳನ್ನು ಮಕ್ಕಳು ಕಂಡುಕೊಳ್ಳುವ ಸಮಯದಲ್ಲಿ ಇಂತಹ ವಿಚಾರಗಳು ಅಡ್ಡಲಾದರೆ ಭವಿಷ್ಯದ ಅವರ ಅಭಿಪ್ರಾಯಗಳ ಮೇಲೂ ಅವು ಪರಿಣಾಮ ಬೀರುತ್ತವೆ. ಮುಖ್ಯವಾಗಿ, ತರಗತಿಗಳು ಶಿಕ್ಷಣವನ್ನು ಮೀರಿಸುವ ಅಸ್ಮಿತೆಗಳ ಸಂಘರ್ಷದ ವೇದಿಕೆಯಾಗದಂತೆ ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ.
