ಕೊಪ್ಪಳ: ಧರ್ಮ ಮತ್ತು ಸಂಪ್ರದಾಯದ ಗಡಿಗಳನ್ನು ಮೀರಿ, ಪ್ರೀತಿ ಹಾಗೂ ಸೌಹಾರ್ದತೆಗೆ ಹೊಸ ಭಾಷ್ಯ ಬರೆದ ಅಪರೂಪದ ಕಲ್ಯಾಣವೊಂದು ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ನೆರವೇರಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಶಹೀನಾ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ವೆಂಕಟೇಶ್ ರಡ್ಡಿ ಪರಸ್ಪರ ಪ್ರೀತಿಸಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾಲೇಜು ದಿನಗಳ ಪ್ರೀತಿ:
ಕಾಲೇಜು ಶಿಕ್ಷಣದ ಅವಧಿಯಲ್ಲಿ ಆರಂಭವಾದ ಇವರ ಪರಿಚಯ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಪದವಿ ಶಿಕ್ಷಣ ಮುಗಿದ ನಂತರವೂ ಇಬ್ಬರ ಬಂಧ ಗಟ್ಟಿಯಾಗಿ ಉಳಿದಿತ್ತು. ಆರಂಭದಲ್ಲಿ ಧರ್ಮದ ಕಾರಣಕ್ಕೆ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿದ್ದರೂ, ಪೋಷಕರನ್ನು ಒಲಿಸಿಕೊಳ್ಳುವಲ್ಲಿ ಯುವ ಜೋಡಿ ಯಶಸ್ವಿಯಾಗಿದೆ.
ಸಂಪ್ರದಾಯಬದ್ಧ ವಿವಾಹ:
ಭಾಗ್ಯನಗರದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಮಹೋತ್ಸವ ಜರುಗಿತು. ವೇದಮಂತ್ರಗಳ ಘೋಷದ ನಡುವೆ ಶಹೀನಾ ಅವರಿಗೆ ಮಾಂಗಲ್ಯಧಾರಣೆ ಮಾಡಿ, ಸಪ್ತಪದಿ ತುಳಿಯಲಾಯಿತು. ಹಿಂದೂ ಸಂಪ್ರದಾಯದಂತೆ ನಡೆದ ಈ ವಿವಾಹದ ಸಂದರ್ಭದಲ್ಲಿ ವಧುವಿಗೆ ‘ಜಾನಕಿ’ ಎಂದು ಮರುನಾಮಕರಣ ಮಾಡಲಾಯಿತು.
ಸೌಹಾರ್ದತೆಗೆ ಮಾದರಿ:
ಸಮಾಜದಲ್ಲಿ ಧರ್ಮದ ಆಧಾರದ ಮೇಲೆ ಭೇದಭಾವ ವ್ಯಕ್ತವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ, ಈ ವಿವಾಹವು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಎರಡೂ ಧರ್ಮದ ಕುಟುಂಬಸ್ಥರು, ಹಿರಿಯರು, ಬಂಧು-ಬಾಂಧವರು ಹಾಗೂ ಗ್ರಾಮಸ್ಥರು ಮುಕ್ತವಾಗಿ ಪಾಲ್ಗೊಂಡು ನವದಂಪತಿಗೆ ಆಶೀರ್ವದಿಸಿದರು. ಪ್ರೀತಿ, ಪರಸ್ಪರ ಗೌರವ ಮತ್ತು ಕುಟುಂಬದ ಒಪ್ಪಿಗೆಯ ಮೂಲಕ ಸಹಬಾಳ್ವೆ ನಡೆಸಬಹುದು ಎಂಬುದಕ್ಕೆ ಈ ಜೋಡಿ ಮಾದರಿಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
