ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-46
ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 24, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
ಜಯಪ್ರಕಾಶ ನಾರಾಯಣರ ಕರೆಯಂತೆ ದೇಶಾದ್ಯಂತ 1975 ನವೆಂಬರ್ 14ರಂದು ಆರಂಭವಾದ ಸತ್ಯಾಗ್ರಹದ ಮೂರನೇ ವಾರ ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಒಡನಾಡಿ ಪ್ರದೇಶವಾದ ಕೇರಳದ ಕಾಸರಗೋಡಿನಲ್ಲಿಯೂ ತರುಣ ಸ್ವಯಂಸೇವಕರ ಉತ್ಸಾಹ ದಿನದಿನಕ್ಕೂ ಹೆಚ್ಚುತ್ತಿತ್ತು. ಆಳುವ ಸರ್ಕಾರ ಪೊಲೀಸ್ ಪಡೆಯ ಮೂಲಕ ಅದನ್ನು ಹತ್ತಿಕ್ಕಲು ವಿಫಲ ಪ್ರಯತ್ನ ನಡೆಸುತ್ತಿತ್ತು. ತುರ್ತುಪರಿಸ್ಥಿತಿಯ ರದ್ದತಿ, ಪತ್ರಿಕಾ ಸ್ವಾತಂತ್ರ್ಯ, ಸಂಘಸಂಸ್ಥೆಗಳ ಮೇಲಿನ ನಿರ್ಬಂಧ ತೆಗೆದುಹಾಕುವುದು, ಬಂಧಿತ ರಾಷ್ಟ್ರನಾಯಕರನ್ನು ಬಿಡುಗಡೆಗೊಳಿಸುವುದು ಎಂಬೀ ಹೇಳಿಕೆಗಳನ್ನು ಬಹಿರಂಗದಲ್ಲಿ ಉಚ್ಚರಿಸಲೂ ಇಲ್ಲಿಯ ಹಿರಿಯ ಮುಂದಾಳುಗಳೆನ್ನಿಸಿದವರು ಹೆದರಿದ್ದಾಗ, ಅದಕ್ಕಾಗಿ ಹೋರಾಡುವೆವೆನ್ನುವ ತರುಣರನ್ನು ದಮನಿಸುವುದೇನು ಮಹಾ ಎಂಬುದು ಸರ್ಕಾರದ ಅಂಬೋಣವಾಗಿದ್ದಿರಬಹುದು. ಆದರೆ ಪರಿಸ್ಥಿತಿ ಬದಲಾಯಿಸಿ ಮುಪ್ಪುರಿಗೊಳ್ಳುತ್ತಿದ್ದ ಸತ್ಯಾಗ್ರಹದ ದೃಶ್ಯ ಸರ್ಕಾರಕ್ಕೆ ಸವಾಲು ಹಾಕುತ್ತಿತ್ತು. ಭೂಗತ ಚಟುವಟಿಕೆಗಳ ತಂತ್ರಗಳನ್ನು ನಿಷ್ಕ್ರಿಯಗೊಳಿಸುವ ಕೊನೆಯ ಅಸ್ತ್ರವೆಂಬಂತೆ ‘ಮೀಸಾ’ ಪ್ರಯೋಗ ಆರಂಭವಾಯಿತು.
ಶಾಲೆಯಿಂದ ಜೈಲಿಗೆ
ಡಿಸೆಂಬರ್ 1ನೇ ತಾರೀಖು ಸಂಜೆ ನಾನು ಅಧ್ಯಾಪಕನಾಗಿ ದುಡಿಯುತ್ತಿರುವ ಪೆರಡಾಲದ ನವಜೀವನ ಹೈಸ್ಕೂಲ್ ಪರಿಸರಕ್ಕೆ ಪೊಲೀಸ್ ಜೀಪ್ ಧಾವಿಸಿ ಬಂತು. ತರಗತಿಗಳು ನಡೆಯುತ್ತಿದ್ದಂತೆ ಶಾಲಾ ಜಗಲಿಯಲ್ಲಿ ಇಬ್ಬರು ಎಸ್.ಐ.ಗಳು ಮತ್ತು ಕಾನ್ಸ್ಟೇಬಲ್ ಗಳ ಬೂಟುಗಾಲಿನ ನಡಿಗೆ ಅಧ್ಯಾಪಕರನ್ನೂ ವಿದ್ಯಾರ್ಥಿಗಳನ್ನೂ ಬೆರಗಾಗಿಸಿತು. ನನ್ನನ್ನು ಹೊರಕ್ಕೆ ಕರೆದು ಜೀಪಿನ ಬಳಿಗೆ ನಡೆಸಿಕೊಂಡು ಹೋಗುವುದನ್ನು ಅಧ್ಯಾಪಕರೂ ನೋಡಿದರು, ವಿದ್ಯಾರ್ಥಿಗಳೂ ಹೊರಬಂದರು. ಒಂದೆರಡು ಪ್ರಶ್ನೆ ಕೇಳಲಿದೆಯೆಂದು ಹೇಳಿ ನನ್ನನ್ನು ಜೀಪಿನಲ್ಲಿ ಕುಳ್ಳಿರಿಸಿದ್ದೇ, ಜೀಪು ಧಾವಿಸತೊಡಗಿತು. ಮಂಜೇಶ್ವರ, ಮೀಯಪದವು ಮೊದಲಾದ ಸ್ಥಳಗಳಿಂದಲೂ ಇದೇ ರೀತಿ ಕೆಲವರನ್ನು ಕುಳ್ಳಿರಿಸಿ ರಾತ್ರಿ ನಮ್ಮೆಲ್ಲರನ್ನೂ ಕಾಸರಗೋಡಿನ ಲಾಕಪ್ನಲ್ಲಿ ಕೂಡಿಸಲಾಯಿತು. ನಮಗಿಂತಲೂ ಮೊದಲೇ ಬಂಧಿತರಾಗಿದ್ದ ಬಂಧುಗಳು ಆ ಕತ್ತಲೆಕೋಣೆಯ ಧೂಳು ತುಂಬಿದ ಬರಿನೆಲದಲ್ಲಿ ಮಲಗಿದ್ದಂತೆ ನಾವೂ ಬಿದ್ದುಕೊಂಡೆವು. ಅದರೊಳಗಿನ ಮೂತ್ರದೊಡ್ಡಿಯ ವಾಸನೆ, ಎಡೆಬಿಡದೆ ಚುಚ್ಚುವ ನುಸಿಗಳ ಹಿಂಡು, ಮಧ್ಯಾಹ್ನದ ಬಳಿಕ ಆಹಾರವಿಲ್ಲದ ಹೊಟ್ಟೆಯ ಚುರುಚುರು! ರಾತ್ರಿ ಹೇಗೋ ಮುಗಿದು ಬೆಳಗಾಯಿತಾದರೂ ಮುಖ ತೊಳೆಯಲು ನೀರಾಗಲಿ, ಶೌಚದ ವ್ಯವಸ್ಥೆಗಾಗಲಿ ಹೇಳುವವರಿಲ್ಲ; ಕೇಳುವವರಿಲ್ಲ. ಕಾರಣ, ಬಂಧಿತರಾದ ಮೇಲೆ ನಾವು ಮನುಷ್ಯರೆಂಬುದು ಅಧಿಕಾರಿಗಳಿಗೆ ತಿಳಿಯದು. ಮೃಗಗಳಿಗಿಂತ ಕೀಳಾಗಿ ನಮ್ಮನ್ನು ಮೂರೂವರೆ ದಿನಗಳ ಕಾಲ ನೋಡಿಕೊಂಡರು. 4ನೇ ತಾರೀಖು ಮಧ್ಯಾಹ್ನ ಅಲ್ಲಿಂದ ಜಿಲ್ಲಾ ಕೇಂದ್ರವಾದ ಕಣ್ಣಾನೂರಿಗೆ ಸಾಗಿಸಲಾಯಿತು. 3ನೇ ತಾರೀಖಿನ ‘ಮೀಸಾ’ ಆರ್ಡರ್ ಕೊಟ್ಟು ನಮ್ಮೆಲ್ಲರನ್ನು ಅಲ್ಲಿಯ ಸೆಂಟ್ರಲ್ ಜೈಲಿಗೆ ಸಂಜೆ ಆರು ಗಂಟೆಯ ಸುಮಾರಿಗೆ ಸೇರಿಸಲಾಯಿತು. ನಮಗಾಗಿ ಒದಗಿಸಲಾದ ಬಟ್ಟೆ ಬರೆ, ಬಟ್ಟಲು ತಂಬಿಗೆ, ಚಾಪೆ, ತಲೆದಿಂಬುಗಳನ್ನು ನಾವೇ ಹೊತ್ತುಕೊಂಡು ಪ್ರಸಿದ್ಧವಾದ ಕಣ್ಣಾನೂರು ಸೆಂಟ್ರಲ್ ಜೈಲಿನ ಎಂಟನೇ ಬ್ಲಾಕಿನ ‘ಮೀಸಾ ಬಂಧಿತ’ರೊಡನೆ ಸೇರಿಕೊಂಡೆವು. ಒಣಚಪಾತಿ ತಿಂದು ಬಿಸಿನೀರು ಕುಡಿದು ನಿದ್ರಿಸಿದೆವು.
ಕತ್ತಲೆ ಕೋಣೆಗಳಿಗೆ
1976ನೇ ಫೆಬ್ರವರಿ ಹನ್ನೆರಡರಂದು ತಟ್ಟನೆ ನಮ್ಮನ್ನು ಇನ್ನೊಂದು ಕಟ್ಟಡಕ್ಕೆ ವರ್ಗಾಯಿಸಿದರು. ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿದ್ದ ಈ Closed Prison Blockಗೆ ಮಧ್ಯಾಹ್ನದ ಉರಿಬಿಸಿಲಿನಲ್ಲಿ ನಮ್ಮನ್ನು ಗಂಟುಮೂಟೆ ಸಹಿತ ಕರೆ ತಂದರು. ಇಲ್ಲಿಯ ಕೋಣೆಗಳಿಗೆ ಕಿಟಕಿಗಳಿಲ್ಲ. ಸಣ್ಣದೊಂದು ಬಾಗಿಲು ಮಾತ್ರ. ಒಂದು ಕೋಣೆಯಲ್ಲಿ ಒಬ್ಬನನ್ನು ಮಾತ್ರ ಕೂಡಿಸಬಹುದು. ಎತ್ತರದಲ್ಲಿದ್ದ ಗಾಳಿ ಸಂಚಾರದ ತೂತುಗಳನ್ನು ಇತ್ತೀಚೆಗೆ ಮುಚ್ಚಿದ್ದರು. ಹಗಲು ಸೆಕೆ! ರಾತ್ರಿ ಗಾಳಿಸಂಚಾರವಿಲ್ಲದ ಈ ಕೋಣೆ! ಒಬ್ಬರಿಗೇ ಸಾಲದ ಇಂತಹ ಕೋಣೆಗಳಲ್ಲಿ ಮೂರರಿಂದ ಐದರವರೆಗೆ ಬಂದಿಗಳನ್ನು ತುಂಬಿಸತೊಡಗಿದ್ದರು. ಇಲ್ಲಿಯ ಒಂದು ಕಟ್ಟಡ ನಮಗೆ ಮೀಸಲಾಯಿತು. ಉಳಿದೆರಡು ಕಟ್ಟಡಗಳ ತುಂಬ ನಕ್ಸಲೈಟ್ಗಳೆನ್ನಲಾಗಿದ್ದ ಮೀಸಾ ಬಂದಿಗಳನ್ನು ತುಂಬಿಸಲಾಗಿತ್ತು. ಸಂಜೆ ಆರು ಗಂಟೆಗೆ ನಮ್ಮನ್ನು ಒಳಗೆ ಕಳಿಸಿ ಬೀಗ ಜಡಿದ ಮೇಲೆ ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ ಅದರೊಳಗೆ ನಾವು ಉಸಿರುಕಟ್ಟಿ ಕೂರಬೇಕು, ಹೊರಭಾಗದಲ್ಲಿ ದೂರ ದೂರ ಉರಿಯುವ ವಿದ್ಯುದ್ದೀಪಗಳ ಮಂದಪ್ರಕಾಶ ತೂರಿ ಬಂದಷ್ಟು ಮಾತ್ರವೇ ನಮ್ಮ ಪಾಲಿನ ಬೆಳಕು. ರಾತ್ರಿ ಹೊತ್ತು ಮಲಮೂತ್ರ ವಿಸರ್ಜನೆಯ ಅಗತ್ಯ ಬಂದರೆ ಮಣ್ಣಿನ ‘ಚೆಟ್ಟಿ’ಯನ್ನು ಉಪಯೋಗಿಸಿ ಮರುದಿನ ಅವುಗಳನ್ನು ನಾವೇ ಶುಚಿಗೊಳಿಸಿ ತಂದಿಟ್ಟುಕೊಳ್ಳಬೇಕು. ಹಗಲಿನ ಉಪಯೋಗಕ್ಕೆ ಕಕ್ಕಸುಗಳಿದ್ದರೂ ನೀರಿನ ಅಭಾವ ಮಿತಿ ಮೀರಿತ್ತು. ಸ್ನಾನ, ಬಟ್ಟೆ ಒಗೆಯುವುದು ಎಲ್ಲವೂ ಬಾವಿಯ ನೀರನ್ನು ಸೇದುವ ಗಡಿಬಿಡಿಯಲ್ಲಿ ಸಾಧ್ಯವಾದಷ್ಟು ಮಾತ್ರ. ಶೌಚಕ್ಕೆ ನೀರು ಕೊಂಡೊಯ್ಯುವ ತಂಬಿಗೆಯಲ್ಲಿಯೇ ಮತ್ತೆ ಕುಡಿಯುವ ನೀರನ್ನು ತುಂಬಿಸಿ ಇಟ್ಟುಕೊಳ್ಳಬೇಕು. ಚಪಾತಿಯ ಹಿಟ್ಟಿನಲ್ಲಿ ಹೊಟ್ಟಿನ ಅಂಶವೇ ಜಾಸ್ತಿ. ಅನ್ನದಲ್ಲಿ ಕಲ್ಲು, ಭತ್ತ, ಹುಳುಗಳು, ಉಣ್ಣುವುದರ ಜತೆ ಅವುಗಳನ್ನು ಹೆಕ್ಕುವ ಕೆಲಸ. ಮಧ್ಯೆ ವಾಕರಿಕೆ ಬಂದು ಊಟವನ್ನು ಬಿಸಾಡುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಕಣ್ಣ ಮುಂದೆ ಮಹತ್ತಾದ ಆದರ್ಶವೊಂದು ಇಲ್ಲದಿರುತ್ತಿದ್ದರೆ ಅನೇಕರಿಗೆ ಬದುಕುವ ಆಸೆಯೇ ಉಳಿಯುತ್ತಿರಲಿಲ್ಲ. ಆದರೆ ನಮ್ಮ ಧ್ಯೇಯದ ನಂದಾದೀಪ ಸದಾ ಬೆಳಗುತ್ತಿದ್ದುದರಿಂದ ಇಲ್ಲಿಯ ಹಗಲುರಾತ್ರಿಗಳನ್ನು ದೇವರ ಧ್ಯಾನದಲ್ಲಿ, ಮಾತೃಭೂಮಿಯ ಸ್ಮರಣೆಯಲ್ಲಿ, ಕ್ರಾಂತಿವೀರರ ಜೀವನದ ಘಟನೆಗಳನ್ನು ಸ್ಮರಿಸುವುದರಲ್ಲಿ ಕಳೆಯುತ್ತಿದ್ದಂತೆ ಏಪ್ರಿಲ್ 10ರಂದು ಅಲ್ಲಿಂದಲೂ ನಮ್ಮನ್ನು ಸ್ಥಳಾಂತರಿಸಲಾಯಿತು.
ಸತ್ಯಾಗ್ರಹಿಗಳ ಸಮೀಪದಲ್ಲಿ
ಸತ್ಯಾಗ್ರಹದ ಕಾರಣಕ್ಕಾಗಿ ಡಿಐಆರ್ನಲ್ಲಿ ಬಂಧಿತರಾಗಿದ್ದ ನಮ್ಮವರೇ ಸಹೋದರರು ಈವರೆಗೆ ನಮ್ಮಿಂದ ದೂರದ ಬ್ಲಾಕಿನಲ್ಲಿದ್ದರು. ದೈವಯೋಗವೆಂಬಂತೆ ನಮ್ಮನ್ನೀಗ ಅವರ ಸಮೀಪದ ಕಟ್ಟಡಕ್ಕೆ ತರಲಾಯಿತು. ಈ ಎರಡು ಕಟ್ಟಡಗಳ ನಡುವೆ ಕಬ್ಬಿಣದ ಕಂಬಿಯ ಬೇಲಿ. ಅನ್ಯೋನ್ಯ ಸಂಪರ್ಕವಿಲ್ಲದಂತೆ ಭದ್ರವ್ಯವಸ್ಥೆಯಿದ್ದರೂ ಕಣ್ಣಿನಿಂದ ಅವರನ್ನು ಕಾಣುವ, ಹೃದಯದ ಸ್ಪಂದನದ ಸನ್ನಿವೇಶ ಒದಗಿದುದಕ್ಕೆ ದೇವರಿಗೆ ಕೈಮುಗಿದೆವು.
ಹೀಗಿದ್ದರೂ ಒಂದು ಕರಾಳದಿನ ಬಂತು. ನೀರಿನ ಅಭಾವದಿಂದ ಚಡಪಡಿಸುವ ಸಂದರ್ಭ. ಲಾರಿಯಲ್ಲಿ ಡ್ರಮ್ಗಳನ್ನು ತುಂಬಿ ನೀರನ್ನು ಅಳತೆ ಮಾಡಿ ಎಂಬಂತೆ ಬಂದಿಗಳಿಗೆ ವಿತರಣೆಮಾಡಿದರು. ಕುಡಿಯಲಾಗದ, ಇನ್ನಿತರ ಅವಶ್ಯಕತೆಗಳಿಗೆ ಸಾಲದ ಈ ನೀರನ್ನು ಕಂಡು ರೊಚ್ಚಿಗೆದ್ದ ತರುಣ ಸತ್ಯಾಗ್ರಹಿಗಳಿಗೆ ಆವೇಶ ಬಂತು. ವಾದವಿವಾದ ಬೆಳೆಯಿತು. ಸತ್ಯಾಗ್ರಹದ ಘೋಷಣೆಯಾಯಿತು. ಅಧಿಕಾರಿಗಳು ಒರಟರಾದಂತೆ ಸತ್ಯಾಗ್ರಹಿಗಳೂ ಧೀರರಾದರು. ಹಲವು ವರ್ಷಗಳಿಂದ ಕಂಡರಿಯದ ಘೋಷಣೆ, ಜಿಂದಾಬಾದ್ ಗರ್ಜನೆ ಹೊರ ಹೊಮ್ಮಿತು. ಜೈಲಿನ ಅಧಿಕಾರಿಗಳ ಬೈಗಳು ವಿಫಲ. ಲಾಠಿ ಪ್ರಹಾರವಾಯಿತು. ಇಮ್ಮಡಿ ಶಕ್ತಿಯುತವಾಗಿ ‘ಭಾರತ ಮಾತಾಕೀ ಜಯ್’ ಘೋಷಣೆ ಜೈಲಿನ ನಾಲ್ದೆಸೆಗೆ ಪಸರಿಸಿತು. ಅನೇಕರನ್ನು ಥಳಿಸಿ ಬೇರೆ ಬೇರೆ ಕಡೆಗಳಿಗೆ ಸಾಗಿಸಿದರು. ಜನಸಂಪರ್ಕ ವಿರಹಿತವಾದ ಕಾರಂಟೈನ್ ಬ್ಲಾಕ್ನಲ್ಲಿ ಅನೇಕರನ್ನು ಅಜ್ಞಾತವಾಗಿ ಇರಿಸಲಾಯಿತು. ಕ್ಷಣಮಾತ್ರದಲ್ಲಿ ನಮ್ಮೆದುರಲ್ಲಿರುವವರನ್ನೆಲ್ಲ ಬೇರಾವುದೋ ಕಟ್ಟಡಕ್ಕೆ ಸಾಗಿಸಿದಾಗ ಆವರಿಸಿದ ಶೂನ್ಯತೆ ನಮ್ಮ ಮನವನ್ನು ಎಷ್ಟು ನೋಯಿಸಿತೋ ಹೇಳಲಾರೆ. ಇಲ್ಲಿ ಕಳೆದ ಜೀವನದ ಮಾನಸಿಕ ತ್ರಾಸ, ಶಾರೀರಿಕ ಆಯಾಸ ಮತ್ತು ಡಾಕ್ಟರರು ನಮ್ಮ ಚಿಕಿತ್ಸೆಗೆ ತೋರುತ್ತಿದ್ದ ಅನಾದರದ ಪರಿಣಾಮವಾಗಿ ಅನೇಕರ ಆರೋಗ್ಯ ತೀರ ಕೆಟ್ಟಿತು. ನಾನಂತೂ ಹಾಸಿಗೆ ಹಿಡಿಯಬೇಕಾದ ರೋಗಿಯಾದೆ. ಮೇ ತಿಂಗಳ ಎಂಟನೇ ತಾರೀಖಿನಂದು ಇನ್ನೊಂದು ಕಟ್ಟಡಕ್ಕೆ ನಮ್ಮನ್ನು ಸ್ಥಳಾಂತರಿಸುವಾಗ ನನ್ನ ಚೀಲಗಳನ್ನೂ ಎತ್ತಲಾರದ ಕಡ್ಡಿಯಾಗಿದ್ದೆ.
- ಎಸ್.ವಿ. ಲಕ್ಷ್ಮೀನಾರಾಯಣ ಶರ್ಮ (ಮುಂದುವರಿಯುವುದು)
ಸೆರೆಮನೆಯೊಳಗೆ- ಅಖಂಡ ಶಾಂತಿಜಪ
ಕಾಫಿಪೋಸಾದವರಿಗೆ ತಿಂಗಳಿಗೊಮ್ಮೆ ಸಂದರ್ಶನ. ಅವರ ಮನೆಯವರಿಗೆ ತಮ್ಮವರನ್ನು ಕಾಣಬೇಕೆಂಬ ಸಹಜವಾದ ಬಯಕೆ. ಹೋಂ ಸೈನ್ಸ್ ಕಾಲೇಜಿನ ಮಹಡಿಯಿಂದ ನೋಡಿದರೆ ನಮ್ಮ ಬ್ಯಾರಕಿನಲ್ಲಿದ್ದವರು (ಅಂಗಳದಲ್ಲಿ) ಕಾಣುತ್ತಾರೆ. ಆದುದರಿಂದ ಅಲ್ಲಿಯ ಜವಾನನಿಗೆ ಭಕ್ಷೀಸುಕೊಟ್ಟು ಕಾಲೇಜಿನ ಮಹಡಿಯ ಮೇಲೆ ನಿಂತು ಕೈಗಳಿಂದ ಸಂಕೇತಮಾಡಿ ಪರಸ್ಪರ ಸಂಭಾಷಣೆ ನಡೆಸುವುದು ರೂಢಿಯಾಗಿತ್ತು, ಸೆ.28 ಭಾನುವಾರ. ಮಹಡಿ ಮೇಲಿಂದ ಬಂದವರೊಡನೆ ಸಂಕೇತದ ಮೂಲಕ ಸಂಭಾಷಿಸುತ್ತಿರುವುದನ್ನು ಜೈಲುಗಳ ಇನ್ಸ್ ಪೆಕ್ಟರ್ ಜನರಲ್ ಮಲ್ಲಯ್ಯನವರು ದೂರದಿಂದಲೇ ಕಂಡರು. ನೇರವಾಗಿ ನಮ್ಮ ವಾರ್ಡಿಗೆ ಬಂದು ಆ ರೀತಿ ಸಂಕೇತವಾಡುತ್ತಿದ್ದವರನ್ನು ಸೆಲ್ಗೆ ಹಾಕಿಸಿದರು. ಎಲ್ಲರಿಗೂ ‘ಅಯ್ಯೋ ಪಾಪ’ ಅನಿಸಿ ಆ ಶಿಕ್ಷೆ ಕೊಡಬಾರದು, ಮಾನವಸಹಜ ಭಾವನೆಯಿಂದ ಹಾಗೆ ಮಾಡಿದರು ಎಂದು ಕಾಫಿಪೋಸಾ ಸ್ಥಾನಬದ್ಧರು ಐಜಿಯವರಿಗೆ ಹೇಳಿದನಂತರ ಅವರನ್ನು ಕೇವಲ ಅರ್ಧ ಗಂಟಿ ಸೆಲ್ನಲ್ಲಿ ಇಟ್ಟು ನಂತರ ಪುನಃ ಮೀಸಾ ವಾರ್ಡಿಗೆ ಕರೆತಂದರು. ಬಿಡುಗಡೆಗಾಗಿ ಹಾಗೂ ಶಾಂತಿಗಾಗಿ ಡಿ-4ರಲ್ಲಿ ಮಾರವಾಡಿಗಳು 1975ರ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 2ರವರೆಗೆ ಏಳುದಿನ ಅಖಂಡ ಶಾಂತಿಜಪವನ್ನು ಮಾಡಿದರು. ‘ಓಂ ಶಾಂತಿನಾಥ ಗುರು ಸತಾ ಕರೋ ಪ್ರಭು – ಶಾಂತಿ ಜಿನೇಶ್ವರ ಶಾಂತಿ ಕರೋ’. ಇದು ಈ ಜಪ. ಉತ್ಸಾಹದಿಂದ ರಾಗವಾಗಿ ಹಾಡುವಾಗ ಅನೇಕರು ವಾಕ್ಯದ ಕೊನೆಯಲ್ಲಿ ‘ಶಾಂತಿ ಜಿನೇಶ್ವರ ರಿಲೀಸ್ ಕರೋ’ ಎಂದು ಹೇಳುವುದೂ ಇತ್ತು!.
