80ನೇ ಸ್ವಾತಂತ್ರ್ಯ ದಿನೋತ್ಸವದಂದು 100 GW ಅಣು ವಿದ್ಯುತ್ ಗುರಿ ನಿಗದಿಪಡಿಸಿದ ಪ್ರಧಾನಿ ಮೋದಿ
ನವದೆಹಲಿ: ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಹಾಗೂ 100 GW ಅಣು ವಿದ್ಯುತ್ ಸಾಮರ್ಥ್ಯವನ್ನು ತಲುಪಲು ಭಾರತವು ಈ ದಶಕದೊಳಗೆ ಐದು ಹೊಸ ಅಣುಸ್ಥಾವರಗಳನ್ನು ಕಾರ್ಯಾಚರಣೆಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದ್ದಾರೆ.
ಶನಿವಾರ ಭಾರತದ 80ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ನಿರಂತರ ಆರ್ಥಿಕ ಪ್ರಗತಿಗೆ ಇಂಧನ ಭದ್ರತೆಯು ನಿರ್ಣಾಯಕ ಅಗತ್ಯವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಶಾಂತಿ (SHANTI- Sustainable Harnessing and Advancement of Nuclear Energy Technologies in India Act) ಕಾಯಿದೆಯು ಭಾರತದ ಅಣು ಇಂಧನ ಆಕಾಂಕ್ಷೆಗಳನ್ನು ಮುನ್ನಡೆಸಲು ಒಂದು ಚೌಕಟ್ಟನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದರು. ಜೊತೆಗೆ ಅಣು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಸರ್ಕಾರದ ದೀರ್ಘಕಾಲದ ಗುರಿಯನ್ನು ಪುನರುಚ್ಚರಿಸಿದರು.
“ಇಂಧನ ಭದ್ರತೆಯು ಪ್ರಸ್ತುತ ಸಮಯದ ಪ್ರಮುಖ ಬೇಡಿಕೆಯಾಗಿದೆ. ಸಂಸತ್ತಿನಲ್ಲಿ ಶಾಂತಿ (SHANTI) ಕಾಯಿದೆ ಅಂಗೀಕಾರಗೊಳ್ಳುವುದರೊಂದಿಗೆ, ನಮ್ಮ ಗುರಿಯನ್ನು ತಲುಪಲು ನಾವು ಸೂಕ್ತ ಚೌಕಟ್ಟನ್ನು ರೂಪಿಸಿದ್ದೇವೆ. 100 ಗಿಗಾವ್ಯಾಟ್ (GW) ಅಣು ವಿದ್ಯುತ್ ಸಾಮರ್ಥ್ಯವನ್ನು ತಲುಪುವುದು ನಮ್ಮ ಗುರಿಯಾಗಿದೆ. ಈ ದಶಕದಲ್ಲಿ ಐದು ಹೊಸ ಅಣುಸ್ಥಾವರಗಳನ್ನು ಪ್ರಾರಂಭಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಪ್ರಧಾನಿ ಹೇಳಿದರು.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಹಾಗೂ ಆಮದು ಮಾಡಿಕೊಳ್ಳುವ ಇಂಧನ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ತನ್ನ ಇಂಧನ ಮೂಲಸೌಕರ್ಯವನ್ನು ವಿಸ್ತರಿಸಲು ಮುಂದಾಗಿರುವಾಗ ಈ ಘೋಷಣೆ ಹೊರಬಿದ್ದಿದೆ.
ಇಂಧನ ಭದ್ರತಾ ಉಪಕ್ರಮದ ಕೇಂದ್ರಬಿಂದುವಾದ ಅಣು ವಿದ್ಯುತ್:
ಪ್ರಧಾನಿ ಮೋದಿಯವರು ಅಣು ವಿದ್ಯುತ್ ವಿಸ್ತರಣೆಯ ಗುರಿಯನ್ನು ‘ಆತ್ಮನಿರ್ಭರ ಭಾರತ’ ನಿರ್ಮಿಸುವ ತಮ್ಮ ವಿಸ್ತೃತ ಉದ್ದೇಶದೊಂದಿಗೆ ಬೆಸೆದಿದ್ದಾರೆ. ನಿರ್ಣಾಯಕ ಅಗತ್ಯಗಳಿಗಾಗಿ ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗುವ ಬದಲು ತನ್ನ ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳಬೇಕು ಎಂದು ಅವರು ಒತ್ತು ನೀಡಿದರು.
“ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗಬಾರದು ಎಂಬುದು ನಮ್ಮ ಧೃಡ ನಂಬಿಕೆಯಾಗಿದೆ. ನಾವು ಸ್ವಾವಲಂಬಿಗಳಾಗಬೇಕು. ನಮ್ಮ ಸಾಮರ್ಥ್ಯಗಳನ್ನು ನಾವು ಬಲಪಡಿಸಿಕೊಳ್ಳಬೇಕು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಭಾರತದ ಆರ್ಥಿಕತೆಯು ವಿಸ್ತರಿಸುತ್ತಿರುವಾಗ ನಂಬಿಕಾರ್ಹ ವಿದ್ಯುತ್ ಪೂರೈಕೆಯ ಪ್ರಾಮುಖ್ಯತೆಯನ್ನು ಪ್ರಧಾನಿಯವರ ಈ ಒತ್ತು ಬಿಂಬಿಸುತ್ತದೆ. ಅಣು ವಿದ್ಯುತ್ ನಿರಂತರ ವಿದ್ಯುತ್ ಉತ್ಪಾದನೆಯನ್ನು ಒದಗಿಸಬಲ್ಲದು ಮತ್ತು ಸೌರ ಹಾಗೂ ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲದು.
100 GW ಗುರಿಯು ಭಾರತದ ಅಣು ಇಂಧನ ಸಾಮರ್ಥ್ಯದ ಪ್ರಮುಖ ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದಕ್ಕೆ ಅಣುಸ್ಥಾವರಗಳು, ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಕೌಶಲ್ಯಪೂರ್ಣ ಮಾನವ ಸಂಪನ್ಮೂಲದಲ್ಲಿ ನಿರಂತರ ಹೂಡಿಕೆಯ ಅಗತ್ಯವಿದೆ. ಈ ದಶಕಕ್ಕೆ ನಿಗದಿಪಡಿಸಲಾದ ಐದು ರಿಯಾಕ್ಟರ್ಗಳ ಗುರಿಯು 2047ರ ಸುದೀರ್ಘ ಗುರಿಯತ್ತ ತಲುಪಲು ಸಮೀಪದ ಮೈಲಿಗಲ್ಲಾಗಿದೆ.
ರೈಲ್ವೆ ಜಾಲದಲ್ಲಿ ಶೇ.100 ರಷ್ಟು ವಿದ್ಯುದ್ದೀಕರಣ ಸಾಧನೆ:
ಅಣು ಇಂಧನದ ಹೊರತಾಗಿ, ಭಾರತೀಯ ರೈಲ್ವೆ ಜಾಲದ ವಿದ್ಯುದ್ದೀಕರಣದಲ್ಲಿ ಕಂಡುಬಂದ ಬದಲಾವಣೆಯನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. ಭಾರತವು ತನ್ನ ರೈಲ್ವೆ ಜಾಲದಲ್ಲಿ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಿದೆ ಎಂದು ತಿಳಿಸಿದ ಅವರು, ಹಿಂದಿನ ದಶಕಗಳಲ್ಲಿದ್ದ ವೇಗವನ್ನು ಕಳೆದ ಹತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಹೋಲಿಸಿದರು.
“ಭಾರತದಲ್ಲಿ ರೈಲ್ವೆ ವಿದ್ಯುದ್ದೀಕರಣವು 1925 ರಲ್ಲಿ ಪ್ರಾರಂಭವಾಯಿತು. ಆದರೆ, ಸುಮಾರು 90 ವರ್ಷಗಳಲ್ಲಿ ಕೇವಲ ಶೇಕಡಾ 30 ರಷ್ಟು ರೈಲ್ವೆ ಜಾಲ ಮಾತ್ರ ವಿದ್ಯುದ್ದೀಕರಣಗೊಂಡಿತ್ತು. ಆದರೆ ಕಳೆದ ಒಂದೇ ದಶಕದಲ್ಲಿ ಭಾರತವು 100 ಪ್ರತಿಶತ ರೈಲ್ವೆ ವಿದ್ಯುದ್ದೀಕರಣವನ್ನು ಸಾಧಿಸಿದೆ,” ಎಂದು ಅವರು ಹೇಳಿದರು.
ಪ್ರಧಾನಿಯವರ ಪ್ರಕಾರ, ವಿದ್ಯುತ್ ಚಾಲಿತ ರೈಲ್ವೆಗಳ ವಿಸ್ತರಣೆಯು ಆಮದು ಮಾಡಿಕೊಳ್ಳುವ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ಸ್ವಚ್ಛ ಸಾರಿಗೆಗೆ ಕೊಡುಗೆ ನೀಡಿದೆ. ಸರ್ಕಾರವು ರೈಲ್ವೆ ವಿದ್ಯುದ್ದೀಕರಣವನ್ನು ಇಂಧನ ದಕ್ಷತೆ, ಪಳೆಯುಳಿಕೆ ಇಂಧನದ (ಫಾಸಿಲ್ ಫ್ಯುಯೆಲ್) ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನಗಳಿಗೆ ಸತತವಾಗಿ ಸಂಯೋಜಿಸುತ್ತಿದೆ.
ಸಾರಿಗೆಯಲ್ಲಿ ಸ್ವಚ್ಛ ತಂತ್ರಜ್ಞಾನಗಳನ್ನು ಅನ್ವೇಷಿಸುವ ದೇಶದ ಪ್ರಯತ್ನಕ್ಕೆ ಮತ್ತೊಂದು ಉದಾಹರಣೆಯಾಗಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಪ್ರಾರಂಬಿಸಿರುವುದನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು.
ರಕ್ಷಣಾ ಉತ್ಪಾದನೆಯಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಳ:
ಪ್ರಧಾನಮಂತ್ರಿಯವರು ತಮ್ಮ ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ಭಾರತದ ಉತ್ಪಾದನೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಎತ್ತಿ ತೋರಿಸಿದರು. ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸುವ ಮತ್ತು ನಿರ್ಣಾಯಕ ರಕ್ಷಣಾ ಅಗತ್ಯಗಳಿಗಾಗಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಭಾರತದ ಪ್ರಯತ್ನಗಳನ್ನು ಈ ಪ್ರಗತಿಯು ಬಿಂಬಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು, ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ರಫ್ತುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಮೂಲಕ ಸ್ವದೇಶಿ ರಕ್ಷಣಾ ಉತ್ಪಾದನೆಯನ್ನು ಸತತವಾಗಿ ಉತ್ತೇಜಿಸುತ್ತಿದೆ.
ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸುಮಾರು ಏಳು ಪಟ್ಟು ವಿಸ್ತರಣೆ:
ಪ್ರಧಾನಮಂತ್ರಿಯವರು ಎತ್ತಿ ತೋರಿಸಿದ ಮತ್ತೊಂದು ಕ್ಷೇತ್ರವೆಂದರೆ ಎಲೆಕ್ಟ್ರಾನಿಕ್ಸ್ ಉತ್ಪಾದನೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು ಏಳು ಪಟ್ಟು ವಿಸ್ತರಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು, ಇದು ದೇಶೀಯ ಉತ್ಪಾದನೆಯ ಬೆಳವಣಿಗೆಯನ್ನು ಮತ್ತು ಜಾಗತಿಕ ತಂತ್ರಜ್ಞಾನ ಪೂರೈಕೆ ಸರಪಳಿಯಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ಸೂಚಿಸುತ್ತದೆ.
ಮೊಬೈಲ್ ಫೋನ್ಗಳು, ಬಿಡಿಭಾಗಗಳು ಮತ್ತು ಇತರ ತಂತ್ರಜ್ಞಾನ ಉತ್ಪನ್ನಗಳ ಉತ್ಪಾದನೆಯನ್ನು ವಿಸ್ತರಿಸಲು ಭಾರತವು ಶ್ರಮಿಸುತ್ತಿರುವುದರಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರವು ಸರ್ಕಾರದ ಪ್ರಮುಖ ಗಮನದ ಕ್ಷೇತ್ರವಾಗಿ ಹೊರಹೊಮ್ಮಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ 33 ಪಟ್ಟು ಹೆಚ್ಚಳವಾಗಿರುವುದನ್ನೂ ಪ್ರಧಾನಿ ಉಲ್ಲೇಖಿಸಿದರು.
ಆಧುನಿಕ ರೈಲು ಕೋಚ್ಗಳು, ಇಂಟರ್ನೆಟ್ ಬಳಕೆದಾರರು ಮತ್ತು ಪೇಟೆಂಟ್ಗಳು:
ಹಲವು ತಂತ್ರಜ್ಞಾನ ಮತ್ತು ನಾವೀನ್ಯತೆ (ಇನ್ನೋವೇಶನ್) ಸೂಚಕಗಳ ಬೆಳವಣಿಗೆಯನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. ಆಧುನಿಕ ರೈಲು ಕೋಚ್ಗಳ ಉತ್ಪಾದನೆಯು 21 ಪಟ್ಟು ಹೆಚ್ಚಾಗಿದ್ದರೆ, ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಪೇಟೆಂಟ್ ಮಂಜೂರಾತಿಗಳು ನಾಲ್ಕು ಪಟ್ಟು ಹೆಚ್ಚಾಗಿವೆ ಎಂದು ಪ್ರಧಾನಿ ತಿಳಿಸಿದರು, ಇದು ಭಾರತದ ನಾವೀನ್ಯತೆ ವಾತಾವರಣದಲ್ಲಿ (ಇಕೋಸಿಸ್ಟಮ್) ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ. ಡಿಜಿಟಲ್ ಪಾವತಿಗಳು ಮತ್ತು ತಂತ್ರಜ್ಞಾನ ಆಧಾರಿತ ಹಣಕಾಸು ಸೇವೆಗಳ ತ್ವರಿತ ಬೆಳವಣಿಗೆಯನ್ನು ಬಿಂಬಿಸುವಂತೆ ಡಿಜಿಟಲ್ ವಹಿವಾಟುಗಳು ನೂರು ಪಟ್ಟು ಹೆಚ್ಚಾಗಿವೆ.
ಮೂಲಭೂತ ಸೌಕರ್ಯಗಳ ತ್ವರಿತ ವಿಸ್ತರಣೆ:
ಕಳೆದ ದಶಕದಲ್ಲಿ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಿದ ವೇಗವನ್ನು ಪ್ರಧಾನಿ ಎತ್ತಿ ತೋರಿಸಿದರು.
ನೆಲದ ನೀರು/ ನಲ್ಲಿ ನೀರು ಸಂಪರ್ಕಗಳು: ಮುಂಚಿಗಿಂತ 15 ಪಟ್ಟು ವೇಗವಾಗಿ ಒದಗಿಸಲಾಗುತ್ತಿದೆ.
ಗ್ಯಾಸ್ ಸಂಪರ್ಕಗಳು: ಮುಂಚಿನ ವಾರ್ಷಿಕ ವೇಗಕ್ಕಿಂತ 6 ಪಟ್ಟು ವೇಗವಾಗಿ ನೀಡಲಾಗುತ್ತಿದೆ.
ಶೌಚಾಲಯಗಳ ನಿರ್ಮಾಣ: ಬಡವರಿಗಾಗಿ ಶೌಚಾಲಯಗಳನ್ನು 4 ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ.
ಬಡ ಕುಟುಂಬಗಳಿಗೆ ವಸತಿ: ಮುಂಚಿನ ವೇಗಕ್ಕಿಂತ 3 ಪಟ್ಟು ವೇಗವಾಗಿ ಒದಗಿಸಲಾಗುತ್ತಿದೆ.
ಆಡಳಿತ ಸುಧಾರಣೆಗಳು ಮತ್ತು ಕಾನೂನು ಸಂಕೀರ್ಣತೆಗಳ ಕಡಿತ:
ಆಡಳಿತ ಮತ್ತು ಕಾನೂನು ಚೌಕಟ್ಟಿನಲ್ಲಿ ಆಗಿರುವ ಬದಲಾವಣೆಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದರು. “ಕಳೆದ ಶತಮಾನದ ಕಾನೂನುಗಳನ್ನು ನೆಚ್ಚಿಕೊಂಡು 21 ನೇ ಶತಮಾನದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ,” ಎಂದು ಹೇಳಿದ ಅವರು, ಭಾರತದ ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಮೆಟ್ರೋ ಜಾಲಗಳ ವಿಸ್ತರಣೆ ಮತ್ತು ಸಾರ್ವಜನಿಕ ಸಾರಿಗೆಯ ಸುಧಾರಣೆಯನ್ನು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಪ್ರಯತ್ನಗಳಿಗೆ ಉದಾಹರಣೆಯಾಗಿ ಅವರು ಬೆಟ್ಟು ಮಾಡಿದರು. ನಿಯಮಗಳ ಪಾಲನೆಯ ಸಾವಿರಾರು ಅನಗತ್ಯ ಕಟ್ಟುಪಾಡುಗಳನ್ನು ತೆಗೆದುಹಾಕಲಾಗಿದೆ ಮತ್ತು ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ನಾಗರಿಕರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ:
ಭಾರತದ ಅಭಿವೃದ್ಧಿಗೆ ಸಮಾಜದ ವಿವಿಧ ವರ್ಗಗಳ ನಾಗರಿಕರು ನೀಡಿದ ಕೊಡುಗೆಯನ್ನು ಪ್ರಧಾನಿಯವರು ತಮ್ಮ ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿ ಸ್ಮರಿಸಿದರು.
“ಕಳೆದ 12 ವರ್ಷಗಳಲ್ಲಿ, ದಲಿತರು, ಶೋಷಿತರು, ವಂಚಿತರು ಅಥವಾ ಬುಡಕಟ್ಟು ಜನಾಂಗದವರಾಗಲಿ; ಗ್ರಾಮೀಣ ಅಥವಾ ನಗರ ನಿವಾಸಿಗಳಾಗಲಿ; ಬಡವರಾಗಲಿ ಅಥವಾ ಮಧ್ಯಮ ವರ್ಗದವರಾಗಲಿ; ಯುವಕರಾಗಲಿ ಅಥವಾ ಹಿರಿಯರಾಗಲಿ; ಮಹಿಳೆಯರಾಗಲಿ ಅಥವಾ ಪುರುಷರಾಗಲಿ; ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮ ಭಾಗದವರಾಗಲಿ – ಅಸಂಖ್ಯಾತ ನಾಗರಿಕರು ನಿರಂತರ ಸಂಕಲ್ಪ ಮತ್ತು ಸಮರ್ಪಣಾ ಭಾವದಿಂದ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಿದ್ದಾರೆ. ಈ ಎಲ್ಲಾ ಪ್ರಯತ್ನಗಳನ್ನು ನಾನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ,” ಎಂದು ಪ್ರಧಾನಿ ಮೋದಿ ಹೇಳಿದರು.
21 ಗನ್ ಸೆಲ್ಯೂಟ್ಗೆ ಬಳಕೆಯಾದ ಸ್ವದೇಶಿ ಫಿರಂಗಿಗಳು:
ಆರಂಭದಲ್ಲಿ, ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತದ 80ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ಚಾಲನೆ ನೀಡಿದರು. ಧ್ವಜಾರೋಹಣ ಸಮಾರಂಭದ ವೇಳೆ ಸ್ವದೇಶಿ ನಿರ್ಮಿತ 105 mm ಲೈಟ್ ಫೀಲ್ಡ್ ಗನ್ಗಳನ್ನು ಬಳಸಿಕೊಂಡು 1721 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್) ವತಿಯಿಂದ 21 ಗನ್ ಸೆಲ್ಯೂಟ್ (ಕುಶಾಲತೋಪುಗಳ ಗೌರವ) ನೀಡಲಾಯಿತು.
