ನವದೆಹಲಿ: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಸೋನಮ್ ವಾಂಗ್ಚುಕ್ ಪ್ರತಿಭಟನೆ ನಡೆಸುತ್ತಿರುವಾಗ, ಭಾರತದ ಸಾಮಾಜಿಕ-ರಾಜಕೀಯ ಬೆಳವಣಿಗೆಗಳ ಕುರಿತು ಪಾಶ್ಚಿಮಾತ್ಯ ಮಾಧ್ಯಮಗಳ ವರದಿಗಾರಿಕೆಯು ಅವರ ಪೂರ್ವಗ್ರಹಪೀಡಿತ ನಿರ್ಲಕ್ಷ್ಯ ಹಾಗೂ ದೇಶದ ಸಾರ್ವಭೌಮತ್ವ, ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಚೌಕಟ್ಟನ್ನು ಕೆಡಿಸಲು ನಡೆಸುತ್ತಿರುವ ನಕಲಿ ನಿರೂಪಣಾ ಜಾಲದ ಸ್ಪಷ್ಟ ಪ್ರತಿಫಲನವಾಗಿದೆ. ಸುಳ್ಳು ವರದಿಗಳನ್ನು ಸೃಷ್ಟಿಸುವ ಮೂಲಕ ಭಾರತೀಯ ಸಮಾಜದಲ್ಲಿ ಬಿರುಕುಗಳನ್ನು ಹೆಚ್ಚಿಸುವುದು ಮತ್ತು ತನ್ನ ಗುಪ್ತ ಕಾರ್ಯಸೂಚಿಯನ್ನು ಮರೆಮಾಚುವುದು ಪಾಶ್ಚಿಮಾತ್ಯ ಮಾಧ್ಯಮಗಳ ಯತ್ನವಾಗಿದೆ.
ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಸೋನಮ್ ವಾಂಗ್ಚುಕ್ ಅವರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪಾಶ್ಚಿಮಾತ್ಯ ಮಾಧ್ಯಮಗಳು ನಡೆಯುತ್ತಿರುವ ಘಟನೆಗಳನ್ನು ಅತ್ಯಂತ ಕುತೂಹಲ ಮತ್ತು ಆಕ್ರಮಣಕಾರಿಯಾಗಿ ವರದಿ ಮಾಡಿದವು. ಅನೇಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಪತ್ರಕರ್ತರು ಬೀದಿಗಿಳಿದು ವರದಿ ಮಾಡಿದರು, ಮತ್ತು ತಮ್ಮನ್ನು ಭಾರತೀಯ ಯುವಕರ ಧ್ವನಿ ಎಂದು ಬಿಂಬಿಸಿಕೊಂಡರು.
ಆದಾಗ್ಯೂ, ಅವರು ಮಾಡಿದ್ದೆಲ್ಲವೂ ಪೂರ್ವಗ್ರಹ[ಪೀಡಿತ, ಅಜ್ಞಾನದ ವರದಿಗಾರಿಕೆ ಮತ್ತು ಭಾರತವನ್ನು ನಿಂದಿಸುವ ಸುಸಂಘಟಿತ ಕಾರ್ಯಸೂಚಿಯಾಗಿತ್ತು. ಪಾರದರ್ಶಕ ವರದಿಗಾರಿಕೆಯ ಮುಖವಾಡದ ಹಿಂದೆ ಇದ್ದ ಗುಪ್ತ ಉದ್ದೇಶವೆಂದರೆ, ಭಾರತೀಯ ಸಮಾಜದಲ್ಲಿ ಬಿರುಕುಗಳನ್ನು ಹೆಚ್ಚಿಸುವುದು ಮತ್ತು ದೇಶದ ಪ್ರಜಾಪ್ರಭುತ್ವ, ಸಾರ್ವಭೌಮತ್ವ, ಸಾಂವಿಧಾನಿಕ ಚೌಕಟ್ಟು ಹಾಗೂ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಹಂತ-ಹಂತವಾಗಿ ಬೆದರಿಕೆ ಒಡ್ಡುವುದಾಗಿತ್ತು.
ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ಪ್ರತಿಭಟನೆಯ ಕುರಿತು ವಿವಿಧ ಪಾಶ್ಚಿಮಾತ್ಯ ಮಾಧ್ಯಮಗಳ ವರದಿಗಳನ್ನು ವಿಶ್ಲೇಷಿಸಿದಾಗ, ಸೆಲೆಕ್ಟಿವ್ ವರದಿಗಾರಿಕೆ ಮತ್ತು ನಕಲಿ ನಿರೂಪಣೆಗಳನ್ನು ಹರಡುವ ಜಾಲದ ಪ್ರಮಾಣ ಬಯಲಾಗುತ್ತದೆ.
ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದ ರಾಯಿಟರ್ಸ್ ಮತ್ತು ಬಿಬಿಸಿ:
ಜಾಗತಿಕ ಸುದ್ದಿ ಸಂಸ್ಥೆಯಾದ ರಾಯಿಟರ್ಸ್ ಸೋನಮ್ ವಾಂಗ್ಚುಕ್ ಅವರನ್ನು ಪರಿಸರವಾದಿ ಹಾಗೂ ಶಿಕ್ಷಣ ಸುಧಾರಕ ಎಂದು ಶ್ಲಾಘಿಸುತ್ತದೆ. ಪ್ರಧಾನ ಮಂತ್ರಿಯ ರಾಜೀನಾಮೆಗೆ ಆಗ್ರಹಿಸುತ್ತಿರುವ ‘ಜೆನ್ ಜೀ’ (Gen Z) ಚಳವಳಿಯ ಮುಖ ಎಂದು ಅವರನ್ನು ಕರೆಯುತ್ತದೆ. ಮೂರು ವಾರಗಳ ಉಪವಾಸ ಸತ್ಯಾಗ್ರಹದ ನಂತರ ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರಾಯಿಟರ್ಸ್ ಮತ್ತು ಬಿಬಿಸಿ ವರದಿಗಳು ಹೇಳುತ್ತವೆ. ಇಂತಹ “ಬಲವಂತದ ಆಸ್ಪತ್ರೆ ದಾಖಲಾತಿ”ಯ ನಿರೂಪಣೆಯ ಮೂಲಕ ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳು ಕ್ಷೀಣಿಸುತ್ತಿವೆ ಎಂದು ಪ್ರಚಾರ ಮಾಡುವುದು ಪಾಶ್ಚಿಮಾತ್ಯ ಮಾಧ್ಯಮಗಳ ಉದ್ದೇಶವಾಗಿದೆ.
ಆದರೆ, ವಾಸ್ತವದಲ್ಲಿ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ ದೆಹಲಿ ಹೈಕೋರ್ಟ್ ಆದೇಶದಂತೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದು ಪ್ರತಿಭಟನಾಕಾರರ ಆರೋಗ್ಯ ಮತ್ತು ಕ್ಷೇಮವನ್ನು ರಕ್ಷಿಸುವ ಕ್ರಮವಾಗಿತ್ತು. ಉಪವಾಸ ಸತ್ಯಾಗ್ರಹವು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದರಿಂದ ಅವರ ಪ್ರಾಣ ಉಳಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು. ಈ ಮಧ್ಯೆ, ಇತ್ತೀಚೆಗೆ ದೆಹಲಿ ಹೈಕೋರ್ಟ್ ಸೋನಮ್ ವಾಂಗ್ಚುಕ್ ಅವರನ್ನು ಸರ್ಕಾರಿ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರ್ಗಾಂವ್ನ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶಿಸಿದೆ. ಈ ಮೇದಾಂತ ಆಸ್ಪತ್ರೆಯನ್ನು ಸ್ವತಃ ಸೋನಮ್ ವಾಂಗ್ಚುಕ್ ಮತ್ತು ಅವರ ಸಹಚರರೇ ಚಿಕಿತ್ಸೆಗಾಗಿ ಆಯ್ಕೆ ಮಾಡಿಕೊಂಡಿದ್ದರು.
ಪಾಶ್ಚಿಮಾತ್ಯ ಮಾಧ್ಯಮಗಳು ಆರೋಗ್ಯಕ್ಕೆ ಸಂಬಂಧಿಸಿದ ಈ ನೈಜ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರತಿಪಾದಿಸುವ ಮೂಲಕ ನೇರವಾಗಿ ನಕಲಿ ನಿರೂಪಣೆಗಳನ್ನು ಹೆಣೆಯುತ್ತವೆ.

ಸೋನಮ್ ವಾಂಗ್ಚುಕ್ ಅವರನ್ನು ಬಾಲಿವುಡ್ ಬ್ಲಾಕ್ಬಸ್ಟರ್ಗೆ ಜೋಡಿಸುವುದು:
ರಾಯಿಟರ್ಸ್ ವರದಿಗಳು ಸೋನಮ್ ವಾಂಗ್ಚುಕ್ ಅವರನ್ನು ಬಾಲಿವುಡ್ ಸಿನಿಮಾ ‘3 ಈಡಿಯಟ್ಸ್’ಗೆ ಜೋಡಿಸಿ ಹೇಳುತ್ತವೆ. ಸಿನಿಮಾದ ಮುಖ್ಯ ಪಾತ್ರವು ಸೋನಮ್ ವಾಂಗ್ಚುಕ್ ಅವರ ಕೆಲಸದಿಂದ ಪ್ರೇರಿತವಾಗಿದೆ ಎಂದು ಈ ವರದಿ ಪುನರುಚ್ಚರಿಸುತ್ತದೆ. ಆದರೆ, ಈ ಸಿನಿಮಾ ಮಾಡುವಾಗ ತಮಗೆ ಸೋನಮ್ ವಾಂಗ್ಚುಕ್ ಯಾರೆಂದೇ ತಿಳಿದಿರಲಿಲ್ಲ ಎಂದು ನಟ ಆಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರವು ಸೋನಮ್ ವಾಂಗ್ಚುಕ್ ಅವರಿಂದ ಪ್ರೇರಿತವಾಗಿದೆ ಎಂಬ ವಾದವನ್ನು ನಟ ತಿರಸ್ಕರಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ಮತ್ತು ಸುಳ್ಳು ಸಂಖ್ಯೆಗಳ ಪ್ರದರ್ಶನ:
ಪಾಶ್ಚಿಮಾತ್ಯ ಮಾಧ್ಯಮಗಳು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹಿಂಸಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದೂ ವರದಿ ಮಾಡುತ್ತವೆ. ಉದಾಹರಣೆಗೆ, ಬಿಬಿಸಿ ವರದಿ ಪ್ರಕಾರ, “ಸಾಮಾಜಿಕ ಕಾರ್ಯಕರ್ತ ಮಲಗಿದ್ದ ವೇದಿಕೆಯತ್ತ ಹತ್ತಾರು ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ಒಮ್ಮೆಗೆ ದಾಳಿ ಮಾಡಿದರು. ಅವರನ್ನು ತಡೆಯಲು ಯತ್ನಿಸಿದ ಪ್ರತಿಭಟನಾಕಾರರನ್ನು ದೂರ ತಳ್ಳಲಾಯಿತು. ಅವರನ್ನು ವೇದಿಕೆಯಿಂದ ತೆರವುಗೊಳಿಸುವ ಮುನ್ನ ಬೆಡ್ಶೀಟ್ಗಳ ಪರದೆಗಳಿಂದ ಮುಚ್ಚಲಾಯಿತು. ಕೆಲವು ನಿಮಿಷಗಳ ನಂತರ, ಆಂಬ್ಯುಲೆನ್ಸ್ ವೇಗವಾಗಿ ಚಲಿಸುತ್ತಿರುವುದು ಕಂಡುಬಂತು.”
ಭಾರತದಲ್ಲಿ ಪೊಲೀಸರು ಹೇಗೆ ನಡೆದುಕೊಂಡರು ಮತ್ತು ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದರು ಎಂಬುದನ್ನು ವೈಭವೀಕರಿಸಲು ಬಿಬಿಸಿ ಇಂತಹ ತೀವ್ರ ಹಾಗೂ ಆಕ್ರೋಶಕಾರಿ ಭಾಷೆಯನ್ನು ಬಳಸುತ್ತದೆ. ಆದರೆ ನ್ಯಾಯಾಲಯದ ಆದೇಶ ಮತ್ತು ಹೆಚ್ಚುತ್ತಿರುವ ಆರೋಗ್ಯ ಕಳವಳಗಳ ನಡುವೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬುದನ್ನು ಅದು ಎತ್ತಿ ತೋರಿಸುವುದಿಲ್ಲ.
ಅದೇ ರೀತಿ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿಗಳನ್ನು ಬಳಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ, ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದು ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದನ್ನು ಇದೇ ಪಾಶ್ಚಿಮಾತ್ಯ ಮಾಧ್ಯಮ ಸಂಸ್ಥೆ ಎತ್ತಿ ತೋರಿಸುವುದಿಲ್ಲ. ನ್ಯೂಯಾರ್ಕ್ ಟೈಮ್ಸ್ ಸುಳ್ಳು ಸಂಖ್ಯೆಗಳನ್ನು ನೀಡಿ, ಪೊಲೀಸರ ಕ್ರಮದಿಂದಾಗಿ ತೀವ್ರ ಗಾಯಗೊಂಡು 60 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಮತ್ತು 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿಕೊಂಡಿದೆ.
ಲಡಾಖ್ ಅನ್ನು ವಿವಾದಿತ ಭಾರತ ಆಡಳಿತದ ಪ್ರದೇಶ ಎಂದು ಕರೆದ ಬಿಬಿಸಿ:
ಸೋನಮ್ ವಾಂಗ್ಚುಕ್ ಅವರ ಮೂಲವನ್ನು ವಿವರಿಸುವಾಗ, ಬಿಬಿಸಿ ಲಡಾಖ್ ಅನ್ನು “ವಿವಾದಿತ ಭಾರತ ಆಡಳಿತದ ಪ್ರದೇಶ” (disputed Indian administered territory) ಎಂದು ಕರೆದಿದೆ. ಲಡಾಖ್ ಅನ್ನು ವಿವಾದಿತ ಪ್ರದೇಶ ಎಂದು ಪ್ರತಿಪಾದಿಸುವುದು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಲಡಾಖ್ ಚೀನಾದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ ಮತ್ತು ಭಾರತದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಪ್ರದೇಶದ ಕುರಿತಾದ ಯಾವುದೇ ಹಾನಿಕಾರಕ ಹೇಳಿಕೆಯು ಭಾರತದ ಪ್ರಾದೇಶಿಕ ಸಮಗ್ರತೆಗೆ ನೇರ ಸವಾಲಾಗಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು ಭಾರತದ ಅವಿಭಾಜ್ಯ ಅಂಗವಾಗಿದೆ, ಹೊರತು ವಿವಾದಿತ ಪ್ರದೇಶವಲ್ಲ. ಇಂತಹ ಹಸಿಸುಳ್ಳಿನ ವರದಿಗಳು ಭಾರತ ಮತ್ತು ಚೀನಾ ನಡುವಿನ ಭೂರಾಜಕೀಯ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ.
ಯುವಕರನ್ನು ಪ್ರಚೋದಿಸಲು ಮತ್ತು ತಪ್ಪು ದಾರಿಗೆಳೆಯಲು ಆಯ್ದ ವರದಿಗಾರಿಕೆ:
ಈ ರೀತಿಯಾಗಿ, ಅಸೋಸಿಯೇಟೆಡ್ ಪ್ರೆಸ್ (AP), ರಾಯಿಟರ್ಸ್, ದಿ ಗಾರ್ಡಿಯನ್, ಡಾಯ್ಚ ವೆಲೆ (DW), ದಿ ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಟೈಮ್ಸ್ನಂತಹ ಪ್ರಮುಖ ಯುಎಸ್ ಮತ್ತು ಯುರೋಪಿಯನ್ ಸುದ್ದಿವಾಹಿನಿಗಳು ಸರಣಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿವೆ. ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯು ಶಿಕ್ಷಣ, ನಿರುದ್ಯೋಗ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ಆಳವಾದ ರಚನಾತ್ಮಕ ಸಮಸ್ಯೆ ಎಂದು ವಾದಿಸಿವೆ. ಈ ವರದಿಗಳು ಯುವಕರನ್ನು ತಪ್ಪು ದಾರಿಗೆಳೆಯಲು ಮತ್ತು ಪ್ರಚೋದಿಸಲು ಕಾರಣವಾಗಬಹುದು.
ಅಂತರರಾಷ್ಟ್ರೀಯ ಪತ್ರಿಕಾ ವರದಿಗಳು ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ಪ್ರತಿಭಟನೆಯನ್ನು ಸಾಂಸ್ಥಿಕ ವೈಫಲ್ಯಗಳ ನಡುವಿನ ಬೃಹತ್ ಸರ್ಕಾರಿ ವಿರೋಧಿ ಚಳವಳಿ ಎಂದು ಬಿಂಬಿಸಲು ಯತ್ನಿಸುತ್ತಿವೆ. ಆದರೆ ಪ್ರತಿಭಟನಾಕಾರರ ವಿದೇಶಿ ಸಂಪರ್ಕ, ಡಿಪ್ ಸ್ಟೇಟ್ ಟೂಲ್ಸ್ ಎಂದು ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿರುವ ಫೋರ್ಡ್ ಮತ್ತು ಸೊರೊಸ್ ಫೌಂಡೇಶನ್ನಂತಹ ಸಂಸ್ಥೆಗಳಿಂದ ಹಣಕಾಸು ನೆರವು ಪಡೆದಿರುವ ಆರೋಪಗಳಂತಹ ಕಥೆಯ ಇನ್ನೊಂದು ಮಜಲನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ.
ದೇಶದ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿಗೆ ಬೆದರಿಕೆ ಒಡ್ಡುವ ಭೀಕರ ಚಟುವಟಿಕೆಗಳಿಗೆ ಹರಿಯುವ ಹಣದ ಮಾರ್ಗಗಳನ್ನು ಬಂದ್ ಮಾಡಲು ಮತ್ತು ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳಲು ‘ಎಫ್ಸಿಆರ್ಎ’ (FCRA) ತಿದ್ದುಪಡಿ ಏಕೆ ನಿರ್ಣಾಯಕವಾಗಿದೆ ಎಂಬುದನ್ನು ವರದಿ ಮಾಡಲು ಪಾಶ್ಚಿಮಾತ್ಯ ಮಾಧ್ಯಮಗಳು ಆಯ್ದ ನಿರ್ಲಕ್ಷ್ಯ ವಹಿಸಿವೆ. ಎಫ್ಸಿಆರ್ಎ ಭಾರತದಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ವಿದೇಶಿ ಧನಸಹಾಯವನ್ನು ತಡೆಯುವುದಿಲ್ಲ. ಈ ಕಾಯಿದೆಯು ಧಾರ್ಮಿಕ ಮತಾಂತರ ಮತ್ತು ಇತರ ಅಕ್ರಮ ಚಟುವಟಿಕೆಗಳ ವಿರುದ್ಧ ನಾಗರಿಕ ಮೌಲ್ಯಗಳನ್ನು ರಕ್ಷಿಸಲು ಹಾಗೂ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಧನಸಹಾಯದ ಮಾರ್ಗಗಳು ಮತ್ತು ಅವುಗಳ ಉದ್ದೇಶಿತ ಬಳಕೆಯನ್ನು ಪರಿಶೀಲಿಸಲು ಮುಂದಾಗುತ್ತದೆ.
ಪಾಶ್ಚಿಮಾತ್ಯ ಮಾಧ್ಯಮ ಸಂಸ್ಥೆಗಳ ವರದಿಗಳು “ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026” ಅನ್ನು “ಸಂಸತ್ತಿನ ಸಮಯದ ಹಾಸ್ಯಾಸ್ಪದ ಪೋಲು, ಆದರೆ ಜಾರಿಗೆ ಬಂದರೆ ಪೊಲೀಸರಿಗೆ ಪ್ರಬಲ ಅಸ್ತ್ರವಾಗಬಹುದು” ಎಂದು ಪ್ರತಿಪಾದಿಸುತ್ತವೆ. ಆದರೆ ವಾಸ್ತವದಲ್ಲಿ, ಈ ಕಾನೂನು ಧ್ವಜ, ಲಾಂಛನಗಳು, ಸಂವಿಧಾನ, ರಾಷ್ಟ್ರಗೀತೆ ಮುಂತಾದ ರಾಷ್ಟ್ರೀಯ ಸಂಕೇತಗಳಿಗೆ ಮಾಡುವ ಉದ್ದೇಶಪೂರ್ವಕ ಅಸಡ್ಡೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ. ಇದುವರೆಗೆ ಮೂಲಭೂತ ಕರ್ತವ್ಯವಾಗಿ ಅಳವಡಿಸಿಕೊಂಡಿರುವುದನ್ನೇ ಇದು ಪ್ರತಿಪಾದಿಸುತ್ತದೆ.
ಭಾರತ ಮತ್ತು ಸರ್ಕಾರದ ವರ್ಚಸ್ಸನ್ನು ಕೆಡಿಸುವುದು, ದೇಶದಲ್ಲಿ ಬಿರುಕು ಮತ್ತು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವುದು ಹಾಗೂ ಸ್ಥಿರ ಪ್ರಜಾಸತ್ತಾತ್ಮಕ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಉದಯೋನ್ಮುಖ ಶಕ್ತಿಯಾಗಿ ಭಾರತದ ಜಾಗತಿಕ ಸಿಂಧುತ್ವವನ್ನು ಕುಗ್ಗಿಸುವುದೇ ಪಾಶ್ಚಿಮಾತ್ಯ ಮಾಧ್ಯಮಗಳ ಅಂತಿಮ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಅಂತರರಾಷ್ಟ್ರೀಯ ಮಾಧ್ಯಮಗಳು ನಿರಂತರವಾಗಿ ನಕಲಿ ನಿರೂಪಣೆಗಳನ್ನು ಸೃಷ್ಟಿಸುವುದು, ಉದ್ದೇಶಪೂರ್ವಕ ಅಜ್ಞಾನ ಮತ್ತು ಸುಳ್ಳು ವರದಿಗಳನ್ನು ಪ್ರಸಾರ ಮಾಡುವಲ್ಲಿ ತೊಡಗಿವೆ.
