ಈ ದಶಕದ ಭೌಗೋಳಿಕ ರಾಜಕೀಯ ಘಟನಾವಳಿಗಳು ತೀವ್ರ ಪೈಪೋಟಿ, ವ್ಯಾಪಾರ ಯುದ್ಧಗಳು, ತಾಂತ್ರಿಕ ಸಂಘರ್ಷಗಳು, ಹವಾಮಾನ ದುರಂತಗಳು ಹಾಗೂ ವಿಭಜಿತ ಬಾಂಧವ್ಯಗಳ ಸವಾಲುಗಳಿಗೆ ಸಾಕ್ಷಿಯಾಗುತ್ತಿವೆ. ಇಂತಹ ಸಂಕೀರ್ಣ ಸನ್ನಿವೇಶಗಳನ್ನು ಜಾಣ್ಮೆಯಿಂದ ನಿರ್ವಹಿಸಲು ಮತ್ತು ಜವಾಬ್ದಾರಿಯುತ ರಾಜತಾಂತ್ರಿಕತೆಯ ಅಸ್ತ್ರವಾಗಿ ‘ಬ್ರಿಕ್ಸ್’ ಅನ್ನು ಬಳಸಿಕೊಂಡು, ಚಿದ್ರಗೊಂಡಿರುವ ಜಾಗತಿಕ ರಾಜಕೀಯ ವ್ಯವಸ್ಥೆಯನ್ನು ಮರುಸಂಘಟಿಸಲು ಭಾರತ ಲಕ್ಷ್ಯವಿರಿಸಿದೆ. ಬ್ರಿಕ್ಸ್ ವೇದಿಕೆಯನ್ನು ಉನ್ನತ ಮೌಲ್ಯದ ಸಹಭಾಗಿತ್ವವನ್ನು ಬೆಳೆಸುವ, ವೈವಿಧ್ಯಮಯ ಆಕಾಂಕ್ಷೆಗಳಿಗೆ ಸೇತುವೆಯಾಗುವ ಹಾಗೂ ಮಹಾಶಕ್ತಿಗಳ ಸ್ಪರ್ಧೆ ಮತ್ತು ಆಧಿಪತ್ಯದ ಧೋರಣೆಗಳನ್ನು ಮೀರಿದ ‘ಮಾನವಕೇಂದ್ರಿತ ಜಗತ್ತನ್ನು’ ನಿರ್ಮಿಸುವ ಪ್ರಮುಖ ವೇದಿಕೆಯಾಗಿ ನವದೆಹಲಿ ಕಲ್ಪಿಸಿಕೊಂಡಿದೆ.
ಬ್ರಿಕ್ಸ್ (BRICS)! ವಿಭಿನ್ನ ಆಕಾಂಕ್ಷೆಗಳನ್ನು ಹೊಂದಿರುವ ವೈವಿಧ್ಯಮಯ ಬಹುಪಕ್ಷೀಯ ವೇದಿಕೆ. ಆದರೂ, ಇದು ಒಂದು ಸ್ಪಷ್ಟ ಗುರಿಯೊಂದಿಗೆ ಒಗೂಡುತ್ತದೆ; ಅದೇನೆಂದರೆ ಪಾಶ್ಚಿಮಾತ್ಯ ದೃಷ್ಟಿಕೋನವನ್ನು ಮೀರಿದ ಪರ್ಯಾಯ ಜಾಗತಿಕ ನೋಟವನ್ನು ಜಗತ್ತಿನ ಮುಂದಿಡುವುದು. ಹಾಗಂತ ಈ ವೇದಿಕೆ ಪಾಶ್ಚಿಮಾತ್ಯ ವಿರೋಧಿಯಲ್ಲ. ಬದಲಾಗಿ, ಇದುವರೆಗೆ ಜಿ-7 (G7) ಮತ್ತು ಐತಿಹಾಸಿಕವಾಗಿ ಗಣ್ಯವೆನಿಸಿದ ಆರ್ಥಿಕತೆಗಳ ಪ್ರಾಬಲ್ಯದಲ್ಲಿದ್ದ ಜಾಗತಿಕ ರಾಜಕೀಯ ಕ್ಷೇತ್ರದಲ್ಲಿ, ‘ಗ್ಲೋಬಲ್ ಸೌತ್’ (ಬೆಳೆಯುತ್ತಿರುವ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ) ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಮತ್ತು ಉದಯೋನ್ಮುಖ ಆರ್ಥಿಕತೆಗಳ ಧ್ವನಿಯಾಗುವ ಗುರಿಯನ್ನು ಹೊಂದಿದೆ.
2026ರ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿ ನವದೆಹಲಿಯು ಕಾರ್ಯತಂತ್ರದ ವೈಪರೀತ್ಯಗಳು ಹಾಗೂ ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ಬದಿಗೊತ್ತಿ, ಸ್ಪಷ್ಟ ದೃಷ್ಟಿಕೋನದೊಂದಿಗೆ ಹೆಜ್ಜೆ ಇಡುತ್ತಿದೆ. ಜವಾಬ್ದಾರಿಯುತ ರಾಜತಾಂತ್ರಿಕತೆಯನ್ನು ಮೆರೆಯುವುದು ಮತ್ತು ಭಿನ್ನ ಭಿನ್ನ ದೃಷ್ಟಿಕೋನಗಳನ್ನು ಗ್ಲೋಬಲ್ ಸೌತ್ ಹಾಗೂ ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಮಾನವಕೇಂದ್ರಿತ ಮಾರ್ಗದಲ್ಲಿ ಕೊಂಡೊಯ್ಯುವುದು ಭಾರತದ ಮುಖ್ಯ ಉದ್ದೇಶವಾಗಿದೆ.
21ನೇ ಶತಮಾನದ ಜಾಗತಿಕ ವ್ಯವಸ್ಥೆಯು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬ್ರಿಕ್ಸ್ ಸಂಸ್ಥೆಯ ಸದಸ್ಯತ್ವ ಪಡೆಯಲು ಏಷ್ಯಾ ಮತ್ತು ಆಫ್ರಿಕಾದ ಆರ್ಥಿಕತೆಗಳು ತೋರಿಸುತ್ತಿರುವ ಆಸಕ್ತಿ ಮತ್ತು ಹೆಚ್ಚುತ್ತಿರುವ ಪ್ರಾತಿನಿಧ್ಯವು ಈ ವೇದಿಕೆಯ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಇಂದು ಜಾಗತಿಕ ಜನಸಂಖ್ಯೆಯ ಶೇಕಡಾ 50 ರಷ್ಟು ಭಾಗವನ್ನು ಮತ್ತು ಜಾಗತಿಕ ಜಿಡಿಪಿಯ (GDP) ಶೇಕಡಾ 40 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿರುವ 11 ಉದಯೋನ್ಮುಖ ಆರ್ಥಿಕತೆಗಳು ಹಾಗೂ ಬೆಳೆಯುತ್ತಿರುವ ಮಾರುಕಟ್ಟೆಗಳು ‘ಬ್ರಿಕ್ಸ್’ ಒಕ್ಕೂಟದಲ್ಲಿವೆ. ಹೀಗಾಗಿ ಜಾಗತಿಕ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಸವಾಲುಗಳನ್ನು ಎದುರಿಸಲು ಇದು ಎಂದಿಗಿಂತಲೂ ಹೆಚ್ಚು ಮಹತ್ವದ ವೇದಿಕೆಯಾಗಿದೆ.
ಚಿದ್ರಗೊಂಡ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ಭಾರತದ ಅಧ್ಯಕ್ಷತೆ
ಏಷ್ಯಾದಿಂದ ಯುರೋಪ್ವರೆಗೆ ತೀವ್ರ ಸ್ಪರ್ಧೆ, ವ್ಯಾಪಾರ ಮತ್ತು ಸುಂಕದ ಕಲಹಗಳು, ಹೆಚ್ಚುತ್ತಿರುವ ಸ್ವಾರ್ಥಪರ ವಹಿವಾಟು ಹಾಗೂ ರಕ್ಷಣಾತ್ಮಕ ಧೋರಣೆಗಳ ಮಧ್ಯೆ ಭಾರತವು ಈ ಬಲವಾದ ಬಹುಪಕ್ಷೀಯ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಅಷ್ಟೇ ಅಲ್ಲದೆ, ಸರಕು ಪೂರೈಕೆ ಜಾಲಗಳು, ಸಾಗರ ಮಾರ್ಗಗಳು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು (AI) ತಮ್ಮ ಆಧಿಪತ್ಯ ಸ್ಥಾಪಿಸಲು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿರುವ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ. ಇದರ ಜೊತೆಗೆ ಹೆಚ್ಚುತ್ತಿರುವ ಹವಾಮಾನ ದುರಂತಗಳು, ಆರ್ಕ್ಟಿಕ್ ಮಂಜುಗಡ್ಡೆ ಕರಗುವಿಕೆ ಮತ್ತು ಇಂಧನ ಅಭಾವದಂತಹ ಸಮಸ್ಯೆಗಳು ಈಗಾಗಲೇ ವಿಭಜಿತವಾಗಿರುವ ಜಾಗತಿಕ ವಾತಾವರಣದ ಮೇಲೆ ಇನ್ನಷ್ಟು ಒತ್ತಡ ಹೇರುತ್ತಿದ್ದು, ಮಹಾಶಕ್ತಿಗಳ ನಡುವಿನ ಸ್ಪರ್ಧೆಗೆ ಹೊಸ ರಂಗಗಳನ್ನು ತೆರೆಯುತ್ತಿವೆ.
ಬಿರುಕುಗಳನ್ನು ಬೆಸೆಯುವುದು, ಆಕಾಂಕ್ಷೆಗಳನ್ನು ಪುರಸ್ಕರಿಸುವುದು ಮತ್ತು ಮೌಲ್ಯಯುತ ಸಹಭಾಗಿತ್ವವನ್ನು ವೇಗಗೊಳಿಸುವುದು
ಆದ್ದರಿಂದ, ವೈವಿಧ್ಯತೆಗಳನ್ನು ಜೋಡಿಸುವುದು ಮತ್ತು ಈ ಬಿರುಕುಗಳನ್ನು ಸರಿಪಡಿಸುವುದು ಭಾರತದ ಆಶಯವಾಗಿದೆ. ಗ್ಲೋಬಲ್ ಸೌತ್ ಹಾಗೂ ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಜಾಗತಿಕ ರಾಜಕೀಯ ರಚನೆಯನ್ನು ಮರುಸಂಘಟಿಸುವ ಗುರಿಯನ್ನು ಭಾರತ ಹೊಂದಿದೆ. ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುವ ವೇದಿಕೆಯ ಅಧ್ಯಕ್ಷರಾಗಿ, ಈ ಬಹುಪಕ್ಷೀಯ ವೇದಿಕೆಯನ್ನು ಕೇವಲ ಕ್ಷುಲ್ಲಕ ಆಧಿಪತ್ಯ ಸಾಧಿಸಲು ಬಳಸದೆ, ಜವಾಬ್ದಾರಿಯುತ ರಾಜತಾಂತ್ರಿಕತೆ ಮತ್ತು ಮಾನವ ಕಲ್ಯಾಣದ ಮುಖ್ಯ ಸಾಧನವಾಗಿ ಬಳಸುವುದು ಭಾರತದ ಉದ್ದೇಶವಾಗಿದೆ. ಸದಸ್ಯ ರಾಷ್ಟ್ರಗಳ ವಿಭಿನ್ನ ಅಭಿಪ್ರಾಯಗಳು, ದೃಷ್ಟಿಕೋನಗಳು ಮತ್ತು ನೈಜ ಆಶಯಗಳಿಗೆ ಬೆಲೆ ನೀಡಿ, ಜನರ ಹಿತಕ್ಕಾಗಿ ಮೌಲ್ಯಾಧಾರಿತ ಸಹಭಾಗಿತ್ವವನ್ನು ಕಟ್ಟಲು ಭಾರತ ಶ್ರಮಿಸುತ್ತದೆ.
ವಿಭಿನ್ನ ಗುರಿಗಳನ್ನು ಸಮತೋಲನಗೊಳಿಸಿ, ಒಮ್ಮತದ ಹಾದಿ ಕಂಡುಕೊಳ್ಳುವುದು, ಈ ಸೂಕ್ಷ್ಮ ಜಾಗತಿಕ ವಾತಾವರಣದಲ್ಲಿ ಜಾಗರೂಕತೆಯಿಂದ ಸಾಗುವುದು ಮತ್ತು ರಾಜಕೀಯ ಪಥವನ್ನು ಸ್ಪಷ್ಟ ಕಾರ್ಯತಂತ್ರದೊಂದಿಗೆ ಮುನ್ನಡೆಸುವುದು ಭಾರತದ ಆಶಯವಾಗಿದೆ. ಜಾಗತಿಕ ರಾಜಕೀಯ ಅಂಗಳದ ತೀವ್ರ ಪೈಪೋಟಿಗಳ ನಡುವೆಯೂ, ಗ್ಲೋಬಲ್ ಸೌತ್ ರಾಷ್ಟ್ರಗಳ ಒಳಿತಿಗಾಗಿ ಒಮ್ಮತದ ತಳಹದಿಯನ್ನು ನಿರ್ಮಿಸುವಲ್ಲಿ ಭಾರತವು ಬ್ರಿಕ್ಸ್ನ ನಾಯಕತ್ವ ವಹಿಸಿದೆ.
ಈ ಹಾದಿ ಸವಾಲಿನಿಂದ ಕೂಡಿದೆ ನಿಜ. ಆದರೆ ಭಾರತವು ಅತ್ಯುನ್ನತ ಕಾರ್ಯತಂತ್ರದ ಪರಿಪಕ್ವತೆ, ಜಾಣ್ಮೆ ಮತ್ತು ಮುನ್ನೆಚ್ಚರಿಕೆಯೊಂದಿಗೆ ಇತರ ಸದಸ್ಯ ರಾಷ್ಟ್ರಗಳನ್ನು ಜೊತೆಗೂಡಿಸಿಕೊಂಡು ಮುನ್ನಡೆಯುತ್ತಿದೆ.
‘ಗ್ಲೋಬಲ್ ಸೌತ್’ಗಾಗಿ ಬ್ರಿಕ್ಸ್ ಅನ್ನು ಜನಕೇಂದ್ರೀಯ ವೇದಿಕೆಯಾಗಿಸಿದ ಭಾರತ
2026ರ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡ ಭಾರತವು, ಈ ಬಹುಪಕ್ಷೀಯ ವೇದಿಕೆಗೆ ಹೊಸ ರೂಪ, ಸುಧಾರಣೆ ಮತ್ತು ಅರ್ಥವನ್ನು ನೀಡಲು ಬಯಸಿದೆ. ಪ್ರಸ್ತುತ ಕಾಲಘಟ್ಟದ ತುರ್ತು ಅಗತ್ಯಗಳಿಗೆ ತಕ್ಕಂತೆ ಬ್ರಿಕ್ಸ್ನ ಮೂಲ ತತ್ವಗಳನ್ನು ಭಾರತ ಮರುಬ್ಯಾಖ್ಯಾನಿಸಿದೆ. ತನ್ನ ನಾಯಕತ್ವದಡಿಯಲ್ಲಿ, ಜಾಗತಿಕ ಸವಾಲುಗಳ ಮಧ್ಯೆಯೂ ಬ್ರಿಕ್ಸ್ ಮುನ್ನಡೆಯಲು ಭಾರತ ಹೊಸ ವೇಗವನ್ನು ನೀಡಿದೆ. ನವದೆಹಲಿಯು ಬ್ರಿಕ್ಸ್ ಅನ್ನು ‘ಜನಕೇಂದ್ರೀಯ’ ವೇದಿಕೆಯಾಗಿ ಬಿಂಬಿಸಿದೆ. ಏಕೆಂದರೆ, ಯಾವುದೇ ರಾಜಕೀಯ ಏರಿಳಿತಗಳು ಅಥವಾ ಪೈಪೋಟಿಗಳಿದ್ದರೂ, ಅಂತಿಮವಾಗಿ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಶ್ರಮಿಸುವುದು ತನ್ನ ಜನರ ಒಳಿತಿಗಾಗಿ. ಭಿನ್ನಾಭಿಪ್ರಾಯಗಳ ನಡುವೆಯೂ ಈ ಎಲ್ಲಾ ರಾಷ್ಟ್ರಗಳನ್ನು ಒಂದೇ ವೇದಿಕೆಯಡಿ ತರಲು ಈ ಜಂಟಿ ಆಶಯವೇ ಮುಖ್ಯ ಪ್ರೇರಣೆಯಾಗಿದೆ.
ತನ್ನ ನಾಯಕತ್ವದಲ್ಲಿ ಭಾರತವು ‘BRICS’ ಎಂಬ ಹೆಸರಿಗೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬ ದೇಶಗಳ ಹೆಸರಿನ ಹೊರತಾಗಿ ಒಂದು ಹೊಸ ಅರ್ಥವನ್ನು ನೀಡಿದೆ. ಭಾರತದ ವ್ಯಾಖ್ಯಾನದಂತೆ BRICS ಎಂದರೆ “Building Resilience & Innovation for Cooperation and Sustainability” (ಸಹಕಾರ ಮತ್ತು ಸುಸ್ಥಿರತೆಗಾಗಿ ಚೇತರಿಕೆ ಹಾಗೂ ನಾವೀನ್ಯತೆಯ ನಿರ್ಮಾಣ). ಈ ವ್ಯಾಖ್ಯಾನವು ಭಾರತದ ಅಧ್ಯಕ್ಷತೆಯ ಪೂರ್ಣ ದೃಷ್ಟಿಕೋನವನ್ನು ಸಾರುತ್ತದೆ. “ಮಾನವೀಯತೆಗೆ ಮೊದಲ ಆದ್ಯತೆ” ಎಂಬ ತತ್ವದೊಂದಿಗೆ, ಗ್ಲೋಬಲ್ ಸೌತ್ ರಾಷ್ಟ್ರಗಳ ಅಭಿವೃದ್ಧಿಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಸುಸ್ಥಿರ ಹಾಗೂ ಸಹಕಾರಾತ್ಮಕ ಚೌಕಟ್ಟನ್ನು ನಿರ್ಮಿಸಲು ನವದೆಹಲಿ ಶ್ರಮಿಸುತ್ತಿದೆ.
ಬ್ರಿಕ್ಸ್ ಸಂಸ್ಥೆಗಾಗಿ ಭಾರತದ ನಾಲ್ಕು ಮುಖ್ಯ ಸ್ತಂಭಗಳು
- ಚೇತರಿಕೆಯ ಸಾಮರ್ಥ್ಯವನ್ನು ನಿರ್ಮಿಸುವುದು (Building Resilience)
ಬ್ರಿಕ್ಸ್ ನಾಯಕನಾಗಿ, ಜಾಗತಿಕ ರಾಜಕೀಯ ಏರಿಳಿತಗಳ ನಡುವೆಯೂ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಥಿಕವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಭಾರತದ ಗುರಿಯಾಗಿದೆ. ಸರಕು ಪೂರೈಕೆ ಜಾಲದ ಅಡಚಣೆಗಳು, ವ್ಯಾಪಾರ ಯುದ್ಧಗಳು, ಮಾರುಕಟ್ಟೆಗಳ ದುರ್ಬಳಕೆ ಮುಂತಾದ ಸವಾಲುಗಳನ್ನು ಎದುರಿಸಲು ಬಲವಾದ ಬಹುಪಕ್ಷೀಯ ವ್ಯವಸ್ಥೆಯನ್ನು ಕಟ್ಟಲು ಭಾರತ ಶ್ರಮಿಸುತ್ತಿದೆ. ಹಾಗೆಯೇ ಸಾಂಕ್ರಾಮಿಕ ರೋಗಗಳು ಮತ್ತು ಹವಾಮಾನ ವೈಪರೀತ್ಯದಂತಹ ಆರೋಗ್ಯ ಹಾಗೂ ಪರಿಸರ ಸವಾಲುಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಚೇತರಿಸಿಕೊಳ್ಳುವ ಶಕ್ತಿಯನ್ನು ತುಂಬುವುದು ಭಾರತದ ಉದ್ದೇಶವಾಗಿದೆ. - ನಾವೀನ್ಯತೆಗೆ ಶಕ್ತಿ ತುಂಬುವುದು (Powering Innovation)
ಭಾರತದ ಬ್ರಿಕ್ಸ್ ಕಾರ್ಯತಂತ್ರದ ಮತ್ತೊಂದು ಪ್ರಮುಖ ಸ್ತಂಭವೆಂದರೆ ಸಂಪನ್ಮೂಲಗಳು, ತಾಂತ್ರಿಕ ನೈಪುಣ್ಯ ಮತ್ತು ಮಾನವಶಕ್ತಿಯನ್ನು ಒಗ್ಗೂಡಿಸಿ ಉನ್ನತ ಮೌಲ್ಯದ ಸಹಭಾಗಿತ್ವಗಳ ಮೂಲಕ ನಾವೀನ್ಯತೆಗೆ (Invention) ಉತ್ತೇಜನ ನೀಡುವುದು. ತಂತ್ರಜ್ಞಾನವನ್ನು ಆಧಿಪತ್ಯ ಸ್ಥಾಪನೆಯ ಅಸ್ತ್ರವನ್ನಾಗಿ ಬಳಸುವುದನ್ನು ತಡೆದು, ಮಾನವ ಕಲ್ಯಾಣಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಬಳಕೆಗೆ ತರುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಹೊಸ ಯುಗಕ್ಕೆ ಜಗತ್ತನ್ನು ಸಜ್ಜುಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI), ಫಿನ್ಟೆಕ್ ಮತ್ತು ಮಾನವಕೇಂದ್ರಿತ AI ಬೆಳವಣಿಗೆಯ ಕ್ರಾಂತಿಗೆ ಭಾರತ ನೇತೃತ್ವ ವಹಿಸುತ್ತಿದೆ. ಈ ನಿಟ್ಟಿನಲ್ಲಿ, ಯುಪಿಐ (UPI) ಮತ್ತು ತನ್ನದೇ ಆದ ತಂತ್ರಜ್ಞಾನಗಳನ್ನು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ತಲುಪಿಸುವ ಮೂಲಕ ಭಾರತವು ಅತ್ಯುತ್ತಮ ಮಾದರಿಯನ್ನು ತೋರಿಸಿಕೊಟ್ಟಿದೆ. - ಬಹುಪಕ್ಷೀಯ ಸಹಕಾರವನ್ನು ಆಳವಾಗಿಸುವುದು (Deepening Multilateral Cooperation)
ಬ್ರಿಕ್ಸ್ ಅಧ್ಯಕ್ಷತೆಯ ಮೂಲಕ, ಭಿನ್ನ ದೃಷ್ಟಿಕೋನಗಳನ್ನು ಮೀರಿ ಜಾಗತಿಕ ಕಲ್ಯಾಣಕ್ಕಾಗಿ ಬಹುಪಕ್ಷೀಯ ಸಹಕಾರವನ್ನು ಬಲಪಡಿಸಲು ಭಾರತ ಆಶಿಸುತ್ತದೆ. ಸುಗಮ ವ್ಯಾಪಾರ ಮತ್ತು ಪೂರೈಕೆ ಜಾಲವನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಾನವಕುಲದ ಹಿತಕ್ಕಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯಾಧಾರಿತ ಸಹಭಾಗಿತ್ವವನ್ನು ಬೆಳೆಸಲು ಭಾರತ ಶ್ರಮಿಸುತ್ತಿದೆ. - ಸುಸ್ಥಿರ ಜಗತ್ತನ್ನು ಬಲಪಡಿಸುವುದು (Fortifying a Sustainable World)
ತೀವ್ರ ಹವಾಮಾನ ಬಿಕ್ಕಟ್ಟಿನ ಈ ದಿನಗಳಲ್ಲಿ ಜಗತ್ತು ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದ್ದು, ಭಾರತವು ತನ್ನ ಬ್ರಿಕ್ಸ್ ಕಾರ್ಯತಂತ್ರದಲ್ಲಿ ಸುಸ್ಥಿರತೆಗೆ ಪ್ರಮುಖ ಸ್ಥಾನ ನೀಡಿದೆ. ಜಿ20, ಯುಎನ್ ಮುಂತಾದ ಜಾಗತಿಕ ವೇದಿಕೆಗಳಲ್ಲಿ ತನ್ನ “ಪಂಚಾಮೃತ” ಯೋಜನೆ, ಹಸಿರು ಇಂಧನ, ಸೌರ ಒಕ್ಕೂಟಗಳ ಮೂಲಕ ಭೂಮಿಯನ್ನು ಹವಾಮಾನ ಕಂಟಕದಿಂದ ರಕ್ಷಿಸಲು ಸುಸ್ಥಿರತೆಯ ಮಂತ್ರವನ್ನು ಭಾರತ ಸಾರುತ್ತಲೇ ಬಂದಿದೆ. ಅದೇ ರೀತಿ, ಬ್ರಿಕ್ಸ್ನಲ್ಲೂ ಸಹ ಕ್ಲೀನ್ ಎನರ್ಜಿ (ಸೌರ/ಪರ್ಯಾಯ ಇಂಧನ), ಆರೋಗ್ಯಕರ ಜೀವನಶೈಲಿ ಮತ್ತು ಹವಾಮಾನ ಮುನ್ನೆಚ್ಚರಿಕೆ ಕ್ರಮಗಳಿಗೆ ಭಾರತ ಆದ್ಯತೆ ನೀಡುತ್ತಿದೆ.
ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ದೇಶಗಳನ್ನಷ್ಟೇ ಹೊಂದಿದ್ದ ಈ ಒಕ್ಕೂಟವು, ಜಿ-7 ಬಣವನ್ನು ಹೊರತುಪಡಿಸಿ ಉದಯೋನ್ಮುಖ ಏಷ್ಯನ್ ಆರ್ಥಿಕತೆಗಳ ಜಾಗತಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಗುರಿ ಹೊಂದಿತ್ತು. ನಂತರ 2010 ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಗುವುದರೊಂದಿಗೆ ಇದು ‘BRICS’ ಆಗಿ ಮಾರ್ಪಟ್ಟಿತು. ತದನಂತರ, ವಿಶ್ವದಾದ್ಯಂತದ ರಾಷ್ಟ್ರಗಳು, ಮುಖ್ಯವಾಗಿ ಗ್ಲೋಬಲ್ ಸೌತ್ ಭಾಗದ ದೇಶಗಳು ಈ ಒಕ್ಕೂಟವನ್ನು ಸೇರಲು ತೀವ್ರ ಆಸಕ್ತಿ ತೋರಿಸಿದವು. ಇದರ ಫಲವಾಗಿ 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಯುಎಇ ಮತ್ತು ಇರಾನ್ ಹಾಗೂ 2025 ರಲ್ಲಿ ಇಂಡೋನೇಷ್ಯಾ ದೇಶಗಳು ಬ್ರಿಕ್ಸ್ ಬಳಗವನ್ನು ಸೇರಿದವು.
ಜಾಗತಿಕ ಮಟ್ಟದಲ್ಲಿ ವಿಸ್ತಾರವಾದ ಪ್ರಾತಿನಿಧ್ಯದೊಂದಿಗೆ, ಬ್ರಿಕ್ಸ್ ಮತ್ತು ಏಷ್ಯನ್ ಆರ್ಥಿಕ ಏಕೀಕರಣದ ಅದರ ಮೂಲ ಕಾರ್ಯಸೂಚಿಯು, ಆರ್ಥಿಕ ಒತ್ತಡಗಳಿರುವ ಇಂದಿನ ಜಗತ್ತಿನಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸಿದೆ. ಆದಾಗ್ಯೂ ಸವಾಲುಗಳು ಇದ್ದೇ ಇವೆ. ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯ ದೊಡ್ಡದಾದಷ್ಟೂ ಸವಾಲುಗಳು ಮತ್ತು ಭಿನ್ನ ಆಕಾಂಕ್ಷೆಗಳು ಹೆಚ್ಚಿರುತ್ತವೆ, ಹೀಗಾಗಿ ಎಲ್ಲರನ್ನೂ ಒಪ್ಪಿಸುವ ಸಾಮಾನ್ಯ ನಿರ್ಧಾರಕ್ಕೆ ಬರುವುದು ಕಷ್ಟಕರವಾಗಿರುತ್ತದೆ. ಏನೇ ಆದರೂ, ನವದೆಹಲಿಯು ಜನಕೇಂದ್ರೀಯ ವಿಧಾನದೊಂದಿಗೆ ಬ್ರಿಕ್ಸ್ನ ಮೂಲ ಸಾರವನ್ನು ಮರುಪರಿಭಾವಿಸುತ್ತಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಬ್ರಿಕ್ಸ್ ಅನ್ನು ಒಗ್ಗೂಡಿಸುತ್ತಿದೆ, ಕಟಿಬದ್ಧತೆಯೊಂದಿಗೆ ಆರ್ಥಿಕ ಸ್ಥಿರತೆಯನ್ನು ರೂಪಿಸುತ್ತಿದೆ ಮತ್ತು ಮಹಾಶಕ್ತಿಗಳ ರಾಜಕೀಯ ಆಟಗಳನ್ನು ಮೀರಿ ಸುಸ್ಥಿರ ಹಾಗೂ ಕಾರ್ಯತಂತ್ರದ ಚೌಕಟ್ಟನ್ನು ಗಟ್ಟಿಮಾಡುತ್ತಿದೆ!
- ಪ್ರಗತಿ ಕೌಂಡಿನ್ಯ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
