ಮಳೆಗಾಗಿ ಸಾಮೂಹಿಕ ಪ್ರಾರ್ಥನೆ; ಜಪದ ವೇಳೆ ಮಳೆಹನಿಗಳ ಸಿಂಚನ

ಮಂಗಳೂರು: ನಾಡಿನಾದ್ಯಂತ ಸಮೃದ್ಧ ಮಳೆಯಾಗಿ ಜನಜೀವನ ಸುಭಿಕ್ಷವಾಗಲಿ ಎಂಬ ಸಂಕಲ್ಪದೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಕೆರೆಯ ಪ್ರಾಂಗಣದಲ್ಲಿ ಗುರುವಾರ ಬೆಳಗ್ಗೆ ‘ಪರ್ಜನ್ಯ ಜಪ’ ಹಾಗೂ ವೇದ ಪಾರಾಯಣ ನೆರವೇರಿತು.
ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ಮತ್ತು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಕಲ್ಕೂರ ಪ್ರತಿಷ್ಠಾನವು ಲೋಕಕಲ್ಯಾಣಾರ್ಥವಾಗಿ ಕಾರ್ಯಕ್ರಮ ಆಯೋಜಿಸಿತ್ತು. ಬೆಳಗ್ಗೆ 6ರಿಂದ 7ರವರೆಗೆ ನಡೆದ ಪಾರಾಯಣದಲ್ಲಿ ಹೆಚ್ಚಿನ ಸಂಖ್ಯೆಯ ವಿಪ್ರ ಬಂಧುಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು.
ಜ್ಯೋತಿಷಿ ವಿದ್ವಾನ್ ರವಿ ಅಡಿಗ, ವೇದಮೂರ್ತಿ ಅರುಣ್ ಅಡಿಗ ಹಾಗೂ ರಾಘವೇಂದ್ರ ಅಡಿಗ ಅವರು ದೀಪ ಬೆಳಗಿಸಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಪಾರಂಗತರಾದ ಶ್ರೀಕರ ಭಟ್ ಮತ್ತು ಶ್ರೀ ಪಯ ಶ್ರೀಕೃಷ್ಣ ಭಟ್ ಅವರ ನೇತೃತ್ವದಲ್ಲಿ ಗುರು ವಂದನೆ, ಗಣಪತಿ ಪ್ರಾರ್ಥನೆ, ಸರಸ್ವತಿ ಪ್ರಾರ್ಥನೆ, ಅಥರ್ವಶೀರ್ಷ, ಪರ್ಜನ್ಯ ಜಪ, ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಹಾಗೂ ಐಕ್ಯಮಂತ್ರಗಳ ಪಠಣ ನಡೆಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ, “ನಾಡಿನ ಹಲವೆಡೆ ಮಳೆಯ ಕೊರತೆ ಉಂಟಾಗಿದ್ದು, ಬರಗಾಲದ ಆತಂಕ ಎದುರಾಗಿದೆ. ವರುಣ ದೇವರ ಕೃಪೆಯಿಂದ ಸಮೃದ್ಧ ಮಳೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಎಲ್ಲರೂ ಸಾಮೂಹಿಕವಾಗಿ ಪ್ರಾರ್ಥಿಸೋಣ” ಎಂದರು.
ಕುಡುಪು ದೇವಸ್ಥಾನದ ಶ್ರೀಶ ಸಾಮಗ ಅವರು ಕೆರೆಯ ನೀರಿನಲ್ಲಿ ಕುಳಿತು ವಿಶೇಷ ಪಾರಾಯಣ ನೆರವೇರಿಸಿದರು. ಪರ್ಜನ್ಯ ಜಪ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮಳೆಹನಿಗಳು ಸಿಂಚನಗೊಂಡದ್ದು ನೆರೆದ ಭಕ್ತರಲ್ಲಿ ಭಕ್ತಿ ಮತ್ತು ಸಂಭ್ರಮ ಮೂಡಿಸಿತು.
ರಘುರಾಮ ರಾವ್ ಲ್ಯಾಂಡ್ ಲಿಂಕ್ಸ್, ರಾಮಚಂದ್ರ ಭಟ್ ಎಲ್ಲೂರು, ಸುಧಾಕರ ರಾವ್ ಪೇಜಾವರ, ಶ್ರೀಧರ ಹೊಳ್ಳ, ಕದ್ರಿ ಕೃಷ್ಣ ಭಟ್, ಡಾ. ರಾಜೇಂದ್ರ ಪ್ರಸಾದ್, ಉದಯ ಕುಮಾರ್, ಗಣೇಶ ಹೆಬ್ಬಾರ್, ರಾಮಕೃಷ್ಣ ರಾವ್ ಕದ್ರಿ, ಮಂಗಳೂರು ಗುಜರಾತಿ ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ತರುಣ್ ಠಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
