ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-51
ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 31, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
ಜ್ಯೋತಿಷ ಶಾಸ್ತ್ರದ ವರ್ಗದಂತೆ ಹಸ್ತ ಸಾಮುದ್ರಿಕ ಶಾಸ್ತ್ರದ ವರ್ಗಕ್ಕೆ ಪುತ್ತೂರಿನ ಎಡ್ವಕೇಟ್ ಬಿ. ಪುರಂದರ ಭಟ್ಟರು ಗುರು. ಸುಮಾರು 22 ವಿದ್ಯಾರ್ಥಿಗಳು 3 ತಿಂಗಳ ಕಾಲ ಈ ಶಾಸ್ತ್ರ ಕಲಿತರು. ಪ್ರತಿದಿನ ಬೆಳಿಗ್ಗೆ 10-30ರಿಂದ 11-30ರವರೆಗೆ ನಡೆಯುವ ಈ ವರ್ಗಕ್ಕೆ ಬೇಕಾಗುವ ಪಟಗಳನ್ನು ಹೊನ್ನಾವರದ ನಾಗೇಶ ಕಾಮತರು ತಯಾರಿಸಿಕೊಡುತ್ತಿದ್ದರು.
ಶೀಘ್ರಲಿಪಿ
ಮಂಗಳೂರಿನ ಕರ್ಣಾಟಕ ಬ್ಯಾಂಕ್ ಅಧಿಕಾರಿ ಅಚ್ಯುತ ನಲ್ಲೂರಾಯರು ಶೀಘ್ರಲಿಪಿ ತಿಳಿದವರು. ಈ ವರ್ಗವು ಪ್ರತಿದಿನ ಮಧ್ಯಾಹ್ನ 2ರಿಂದ 3ರವರೆಗೆ ಸುಮಾರು 4 ತಿಂಗಳು ನಡೆಯಿತು. 15 ಜನ ವಿದ್ಯಾರ್ಥಿಗಳಿದ್ದರು. ಶಿಕ್ಷಣಕ್ಕೆ ಬೇಕಾಗುವ ಪುಸ್ತಕಗಳನ್ನು ಪೆನ್ಸಿಲುಗಳನ್ನು ಹೊರಗಿನಿಂದ ತರಿಸಲಾಯಿತು. ಬ್ಯಾಂಕ್ ನೌಕರರೂ, ಬೇರೆ ಬೇರೆ ನೌಕರಿ ಮಾಡುವವರೂ, ವಿದ್ಯಾರ್ಥಿಗಳು. ವರ್ಗಕ್ಕಿಂತ ಅದರ ಅಭ್ಯಾಸ ಜಾಸ್ತಿ. ಈ ವರ್ಗದವರಿಗೆ ಮಿಕ್ಕ ವಿಷಯಗಳಿಗೆ ಸಮಯವೇ ಸಿಗುತ್ತಿರಲಿಲ್ಲ. ಶಿಕ್ಷಣ ಒಂದು ಹಂತಕ್ಕೆ ಬರುವಷ್ಟರಲ್ಲಿ 1977 ಜನವರಿ ಬಂದಿತು. ಆಗಲೇ ಅದರ ಮುಕ್ತಾಯ ಸಮಾರಂಭ. ಮರುದಿನವೇ ಅನಿರೀಕ್ಷಿತವಾಗಿ ನಲ್ಲೂರಾಯರ ಬಿಡುಗಡೆಯಾಯಿತು!. ಸಂಸ್ಕೃತ, ಹಿಂದಿ, ಕನ್ನಡ, ಉರ್ದು ವರ್ಗಗಳಲ್ಲಿ 5-6 ಜನ ವಿದ್ಯಾರ್ಥಿಗಳು. ಸಂಸ್ಕೃತ ಮತ್ತು ಹಿಂದಿಯಲ್ಲಿ ವಿ.ಎನ್. ಶಾನಭಾಗರು ಕಲಿಸುತ್ತಿದ್ದರು. ಕನ್ನಡ ಪ್ರಭಾಕರ ಘಾಟಿಯವರು, ಉರ್ದು ಬೆಂಗಳೂರಿನ ಹುದಾ ಅವರು ಕಲಿಸುತ್ತಿದ್ದರು.
ಗೀತಾ ಪಾಠ
ಬೆಳಗಾವಿಯ ಬಂಡೋಪಂತ ಜೋಶಿಯವರು 1975ರ ಡಿಸೆಂಬರ್ನಿಂದಲೇ ಆರಂಭಿಸಿದ್ದ ‘ಜ್ಞಾನೇಶ್ವರಿ’ಯನ್ನು ಓದುವ, ಅರ್ಥ ಹೇಳುವ ವರ್ಗ ಬೆಳಿಗ್ಗೆ 11ರಿಂದ 12 ಘಂಟೆಯವರೆಗೆ ನಡೆಯುತ್ತಿತ್ತು. ‘ಜ್ಞಾನೇಶ್ವರಿ’ಯ ಪಾಠ ಮುಗಿದ ನಂತರ ‘ಏಕನಾಥ ಭಾಗವತ’, ಅದಾದ ಮೇಲೆ ‘ರಾಮಾಯಣ’ ಪಾಠಗಳನ್ನೂ ಬಂಡೋಪಂತರು ನಡೆಸಿದರು. ಈ ವರ್ಗಕ್ಕೆ ಸುಮಾರು 8 ಜನರು ಬರುತ್ತಿದ್ದರು. ಪಂ|| ಸಾತವಳೇಕರರ ‘ಪುರುಷಾರ್ಥಬೋಧಿನೀ’ (ಭಗವದ್ಗೀತೆ) ವರ್ಗವೂ ಮಧ್ಯಾಹ್ನ 12ರಿಂದ ನಡೆಯುತ್ತಿತ್ತು. ಹನ್ನೊಂದನೇ ಅಧ್ಯಾಯ (ವಿಶ್ವರೂಪ ದರ್ಶನ)ವಾಗುವ ಹೊತ್ತಿಗೆ ಬಿಡುಗಡೆಯ ಪತ್ರ ಪ್ರಾರಂಭವಾಯಿತು. ಜನತಾ ಜನಾರ್ದನನು ವಿಶ್ವರೂಪ ತಾಳಿ ಚುನಾವಣೆಯ ಕಣಕ್ಕೆ ಇಳಿದನೋ ಏನೋ ಎಂಬಂತೆ ಈ ಪಠಣವನ್ನು ನಾರಾಯಣರಾಯರೂ ಸ್ವತಃ ಲೇಖಕರೂ ಮಾಡುತ್ತಿದ್ದರು. ಪ್ರತಿನಿತ್ಯ ಮಲಗುವ ಮುನ್ನ ಬೇರೆ ಬೇರೆ ಬ್ಯಾರಕ್ಗಳಲ್ಲಿ ಗೀತೆಯ 12, 15, 16 ಮೊದಲಾದ ಒಂದೊಂದೇ ಅಧ್ಯಾಯದ ಪಠಣ ನಡೆಯುತ್ತಿತ್ತು. ಬೆಳಗ್ಗಿನ ಸಾಮೂಹಿಕ ಕಾರ್ಯಕ್ರಮವಾದ ಬಳಿಕ ಪ್ರಕಾಶ ಶಾನಭಾಗರ ನೇತೃತ್ವದಲ್ಲಿ ಭಗವದ್ಗೀತಾ ಪಠಣ, ವೆಂಕಟೇಶ ಸುಪ್ರಭಾತ ಮತ್ತು ಬೇರೆ ಬೇರೆ ಸ್ತೋತ್ರಗಳ ಪಠಣ ಸುಮಾರು ಒಂದು ತಾಸು ನಡೆಯುತ್ತಿತ್ತು. ಆಷಾಢ ಏಕಾದಶಿ, ಕಾರ್ತಿಕ ಏಕಾದಶಿ ಮತ್ತು ಗೀತಾ ಜಯಂತಿಯಂದು ಸಂಪೂರ್ಣ ಗೀತಾಪಠಣವೂ ನಡೆಯಿತು.
ಕುರಾನ್
ಜಮಾತ್-ಇ-ಇಸ್ಲಾಮಿಯ ಕಾರ್ಯಕರ್ತ ಮಜೀದರು ಕುರಾನ್ ಪಾಠ ಹೇಳಿಕೊಡುತ್ತಿದ್ದರು. ಅವರು ಬೆಂಗಳೂರು ಜೈಲಿಗೆ ವರ್ಗವಾದ ಬಳಿಕ ಹುದಾ ಅದನ್ನು ಮುಂದುವರಿಸಿದರು. ಈ ವರ್ಗ ಬೆಳಿಗ್ಗೆ 10ರಿಂದ 11ರವರೆಗೆ ನಡೆಯುತ್ತಿತ್ತು. 9 ಜನ ಭಾಗವಹಿಸುತ್ತಿದ್ದರು.
ಯೋಗಾಸನ
ಬೆಂಗಳೂರಿನ ನಾಗಭೂಷಣರು ಬೆಳಿಗ್ಗೆ ಒಂದು ಘಂಟೆ ಯೋಗಾಸನಗಳನ್ನು ಮಾಡುತ್ತಿದ್ದರು. ಅವರ ಜೊತೆಗೆ ಮತ್ತೆ ಕೆಲವರು ಆಸನಗಳನ್ನು ಕಲಿತರು. ಬೆಳಗ್ಗಿನ ಸಾಮೂಹಿಕ ಪ್ರಾತಃಸ್ಮರಣೆ, ಗೀತಾಪಾಠ, ವಂದೇ ಮಾತರಂ ಕಾರ್ಯಕ್ರಮವಾದ ನಂತರ ಛತ್ರಪತಿ ಶಿವಾಜಿ ಬ್ಯಾರಕ್ನಲ್ಲಿ ಬಂಡೋಪಂತ ಜೋಶಿ, ಮಾಧವ ಕವೀಶ್ವರರು ಯೋಗಾಭ್ಯಾಸದ ವರ್ಗ ನಡೆಸುತ್ತಿದ್ದರು. 10 ಜನರು ಭಾಗವಹಿಸುತ್ತಿದ್ದರು. ಶಿವಮೊಗ್ಗೆಯ ಮಲ್ಲಿಕಾರ್ಜುನ ಮತ್ತು ಚಿಕ್ಕಮಗಳೂರಿನ ಲಕ್ಷ್ಮಣ ಮಲ್ಯರವರು ದಂಡ ಪ್ರಯೋಗ, ನಿಯುದ್ಧ ಕಲೆಗಳನ್ನು ಬೆಳಿಗ್ಗೆ 7ರಿಂದ 7-30ರವರೆಗೆ ಕಲಿಸುತ್ತಿದ್ದರು. ಮೈಸೂರಿನ ಪೈಲ್ವಾನರೊಬ್ಬರು ಕುಸ್ತಿಯ ಕಣ ತಯಾರಿಸಿದ್ದರು. ಅಲ್ಲಿ ಸುಮಾರು 6 ಜನರು ಕುಸ್ತಿಯ ಅಭ್ಯಾಸ ಮಾಡುತ್ತಿದ್ದರು. ಸಂಜೆ ಸಂಚಲನದ ಅಭ್ಯಾಸ, ವಾಲಿಬಾಲ್, ಬ್ಯಾಡ್ಮಿಂಟನ್, ರಿಂಗ್-ಟೆನ್ನಿಸ್, ಆಟಗಳು ನಡೆಯುತ್ತಿದ್ದವು. ಟೇಬಲ್-ಟೆನ್ನಿಸ್, ಕೇರಮ್, ಚೆಸ್ ಆಟಗಳೂ ಕೋಣೆಗಳೊಳಗೆ ಆಗಾಗ್ಗೆ ನಡೆಯುತ್ತಿದ್ದವು. 1976ರ ಸೆಪ್ಟೆಂಬರ್ನಲ್ಲಿ ದಸರಾ ಪಂದ್ಯಾಟಗಳು ನಡೆದವು. ಮೊದಲನೇ – ಎರಡನೇ ಸ್ಥಾನ ಪಡೆದವರಿಗೆ ಬೆಳಗಾವಿಯ ಗಣಪತರಾವ್ ಕುಲಕರ್ಣಿಯವರು ಬಹುಮಾನಗಳನ್ನು ಕೊಟ್ಟರು.
ಚಿತ್ರಕಲೆ
ಚಿತ್ರಕಲಾ ನಿಪುಣರಾದ ಗೋವಿಂದ ಮಹಾಲೆಯವರು ರಾಮನವಮಿಯ ಉತ್ಸವದಂದು ಶ್ರೀ ರಾಮಚಂದ್ರನ ಆಕರ್ಷಕ ಚಿತ್ರ ತೆಗೆದರು. ಅದೇ ರೀತಿ ಹಿಂದೂ ಸಾಮ್ರಾಜ್ಯ ದಿನೋತ್ಸವದಂದು ಛತ್ರಪತಿ ಶಿವಾಜಿ, ಗೋಕುಲಾಷ್ಟಮಿ, ಆಷಾಢ ಏಕಾದಶಿ, ಗಣೇಶ ಚೌತಿ ಮೊದಲಾದ ಹಬ್ಬ-ಉತ್ಸವಗಳಿಗೆ ತಕ್ಕಂತಹ ಅನೇಕ ಚಿತ್ರಗಳನ್ನು ಬರೆದರು. ಇವರು ಚಿತ್ರಗಳನ್ನು ತೆಗೆಯುವಾಗ ಹೊನ್ನಾವರದ ನಾಗೇಶ ಕಾಮತರು ಆಕರ್ಷಕವಾದ, ಸಂದರ್ಭಕ್ಕೆ ತಕ್ಕ ಚಿತ್ರಗಳನ್ನು ಬರೆದುಕೊಡತೊಡಗಿದರು. ಸುಮಾರು 15 ದಿನಗಳವರೆಗೆ ನಡೆದ ‘ಭಾರತದ ದೇವಾಲಯಗಳು’ ಎಂಬ ನರಸಿಂಹಮೂರ್ತಿ ಅಯ್ಯಂಗಾರರ ವ್ಯಾಖ್ಯಾನಮಾಲೆಗೆ ಬೇಕಾದಂತಹ ಬಣ್ಣ ಬಣ್ಣಗಳ ಅನೇಕ ಆಕರ್ಷಕ ಚಿತ್ರಗಳನ್ನು ನಾಗೇಶ ಕಾಮತರು ಬರೆದು ಮೆಚ್ಚುಗೆ ಗಳಿಸಿದರು.
ಕಾನೂನು, ವೈದ್ಯಕೀಯ
1976ರ ಏಪ್ರಿಲ್ನಲ್ಲಿ ಜರುಗುವ ಕಾನೂನು ಪದವಿ ಪರೀಕ್ಷೆಗಳಿಗೆ ಕುಳಿತುಕೊಳ್ಳಲಿದ್ದ ಕೆಲವು ವಿದ್ಯಾರ್ಥಿಗಳನ್ನು ಹಠಾತ್ತನೆ ಮೀಸಾದನ್ವಯ ಬಂಧಿಸಿದ್ದರು. ಇವರಿಗೆ ಪರೀಕ್ಷೆಗೆ ಸಿದ್ಧಪಡಿಸಲು ಯಲ್ಲಾಪುರದ ಕಣ್ಣಿ ವಕೀಲರು ಮಾರ್ಗದರ್ಶನ ಮಾಡುತ್ತಿದ್ದರು. (ಆದರೆ ಪರಿಕ್ಷೆಗೆ ಕುಳಿತುಕೊಳ್ಳಲು ಪರವಾನಿಗೆ ಬೇಡಿ ಇವರು ಮಾಡಿಕೊಂಡ ಅರ್ಜಿಗಳನ್ನು ಸರ್ಕಾರವು ತಿರಸ್ಕರಿಸಿತು. ಆ ಮಾತು ಬೇರೆ) ಆ ಬಳಿಕ ಕೆ.ಪಿ. ರತ್ನಾಕರ ಪ್ರಭು ಮತ್ತು ಶ್ರೀರಾಮಭಾವು ಅಪ್ಟೆ. ಇವರು ಈ 3 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಡಾ. ಪ್ರಭಾಕರ ಭಟ್ಟರು ಮತ್ತು ಡಾ|| ಸಿಂಗಟಾಲೂರರು ವೈದ್ಯಕೀಯದ ಬಗ್ಗೆ ಕೆಲವು ಸಾಮಾನ್ಯ ಮಾಹಿತಿ ನೀಡಿ ಕೆಲವು ರೋಗಗಳ ಪರಿಹಾರಗಳನ್ನೂ ತಿಳಿಸುತ್ತಿದ್ದರು. ಸಾಮಾನ್ಯ ಜನರು ದೈನಂದಿನ ವ್ಯವಹಾರಗಳಲ್ಲಿ ತಿಳಿದುಕೊಳ್ಳಬೇಕಾದ ವೈದ್ಯಕೀಯ ವಿಷಯಗಳವು.
ಮೇಲೆ ಹೇಳಿದ ಶ್ರೀ ಮದ್ಭಗವದ್ಗೀತೆ, ಜ್ಞಾನೇಶ್ವರಿ ವಗೈರೆ ಗ್ರಂಥಗಳಲ್ಲದೇ ‘Roses in December’, ‘R-document’, ಪುರಂದರೆಯವರ ‘ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ’, ‘ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳು’, ‘ಶ್ರೀ ರಾಮಕೃಷ್ಣ ವಚನವೇದ’ ಮೊದಲಾದ ಪುಸ್ತಕಗಳ ಸಮೂಹ ವಾಚನಗಳು ದಿನದ ನಿಶ್ಚಿತ ಕಾಲದಲ್ಲಿ ನಡೆಯುತ್ತಿದ್ದವು. ಪ್ರಕಾಶ ಶಾನಭಾಗ್, ಭುಜಂಗ ಪೂಜಾರಿ, ಎಂ.ಎ. ವೆಂಕಟೇಶ, ಸದಾಶಿವ ಭಟ್ಟ, ರಾಮಚಂದ್ರ ಜೋಶಿ ಇವರು ಈ ವಾಚನಗಳನ್ನು ನಡೆಸುತ್ತಿದ್ದರು.
- ವೆಂಕಟೇಶ ನರಸಿಂಹ ಶಾನಭಾಗ, ವಕೀಲ, ಕುಮಟಾ
ಸೆರೆಮನೆಯೊಳಗೆ ಕೃಷ್ಣನ ನಾಮಕರಣ! ‘ಬೀಡಿ ಕರೆನ್ಸಿ’!
1975, ಅಕ್ಟೋಬರ್ 19 ಭಾನುವಾರ. ಮಹಿಳಾ ಸತ್ಯಾಗ್ರಹಿಗಳ ಮೇಲಿನ ಮೊಕದ್ದಮೆಯ ವಿಚಾರಣೆ ಇತ್ತು. ಕೋರ್ಟ್ ನಲ್ಲಿ ಸತ್ಯಾಗ್ರಹಿ ಶ್ರೀಮತಿ ಗಾಯತ್ರಿದೇವಿ ತಮ್ಮ ಮಗುವಿನ ಜೊತೆಗೆ ಕೋರ್ಟ್ ಗೆ ತರಲ್ಪಟ್ಟಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ಮಗುವಿಗೆ ‘ಕೃಷ್ಣ’ ಎಂದು ನಾಮಕರಣವೂ ಆಯಿತು. ಅದರ ದಾಖಲೆಯೂ ಆಯಿತು. ಕಂಸನ ವಧೆಗೆ ಜೈಲಿನಲ್ಲಿ ಹುಟ್ಟಿದ ಮಗುವಲ್ಲವೇ? ಕೃಷ್ಣನಿಗೆ ಆರು ಬೆರಳು ಇರುವುದನ್ನೂ ನ್ಯಾಯಾಧೀಶರು ದಾಖಲು ಮಾಡಿಕೊಳ್ಳುವಾಗ “ಆರು ಬೆರಳಿರುವುದು ಒಳ್ಳೆಯದೋ, ಕೆಟ್ಟದೋ?” ಎಂದು ಕೇಳಿದರು. ಪೊಲೀಸ್ ಪ್ರೊಸಿಕ್ಯೂಟರರು “ಕೆಟ್ಟದು” ಎಂದರಂತೆ. ಮಹಿಳಾ ಸತ್ಯಾಗ್ರಹಿ ತಂಡದ ನಾಯಕಿ ಶ್ರೀಮತಿ ಪದ್ಮಾ ಜೋಶಿಯವರು, “ಈ ಸರ್ಕಾರಕ್ಕೆ ಮತ್ತು ಅನ್ಯಾಯ ಮಾಡುತ್ತಿರುವ ಅದರ ಪೊಲೀಸರಿಗೆ ಕೆಟ್ಟದು” ಎಂದು ಉತ್ತರಿಸಿದರು. ತನಿಖೆಯಲ್ಲಿ ಒಂದು ಸಾಕ್ಷಿಯ ವಿಚಾರಣೆ ಮುಗಿದು ಮೊಕದ್ದಮೆ ದಿ.23ಕ್ಕೆ ಮುಂದುವರಿಯಿತು.
ದಿ.22ರಂದು ಪ್ರಸಿದ್ಧ ಇತಿಹಾಸಜ್ಞ ಅರ್ನಾಲ್ಡ್ ಟಾಯನ್ ಬೀ (86) ಇಂಗ್ಲೆಂಡಿನಲ್ಲಿ ನಿಧನವಾದ ಸುದ್ದಿ. ಇತಿಹಾಸವನ್ನು ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಟಾಯನ್ ಬೀಯ ವೈಶಿಷ್ಟ್ಯ. ಈಗ ಜೈಲಿನಲ್ಲಿ ‘ಬೀಡಿ’ಯೇ ನಾಣ್ಯವಾಗಿದೆ. ಇಸ್ಪೀಟ್ ಆಡುವಾಗ ‘ಹಣ’ದ ಜಾಗವನ್ನು ಬೀಡಿ ಆಕ್ರಮಿಸಿದೆ. ಚಪ್ಪಲ್ ರಿಪೇರಿ, ಬಟ್ಟೆ ರಿಪೇರಿ, ಬಟ್ಟೆ ಒಗೆಯಲು, ಕೈದಿಗಳಿಗೆ ಬೀಡಿ. ಹಣದ ಕೊಡು ತೆಗೊ ವ್ಯವಹಾರವೂ ಬೀಡಿ ಕಟ್ಟುಗಳ ಮಾಧ್ಯಮದಿಂದಲೇ ನಡೆಯುತ್ತದೆ. ಬಟ್ಟೆ ಇಸ್ತ್ರಿಗೂ ಬೀಡಿ. ಒಳಗೆ ಒಂದು ಕಟ್ಟು 30 ನಂಬರಿನ ಬೀಡಿಯ ಬೆಲೆ 60 ಪೈಸೆ!.
ದಿ.23ರಂದು ಸುದ್ದಿಗಳ ರಸದೌತಣ: ಮೈಸೂರಿನಲ್ಲಿ ಗಂಗಾಧರನ್ ಮತ್ತು ವಿಶ್ವನಾಥರಾಯರು ಮೀಸಾದಲ್ಲಿ ಬಂಧನದಲ್ಲಿದ್ದಾರೆ; ದಿಲ್ಲಿಯ ಬಂಗಲೆಯೊಂದರಲ್ಲಿ ಜೆಪಿ, ಗುರುಗಾಂ ಅತಿಥಿಗೃಹದಲ್ಲಿ ಮೊರಾರ್ಜಿ, ದಿಲ್ಲಿ ಆಸ್ಪತ್ರೆಯಲ್ಲಿ ಅಟಿಲ್ಜಿ ಬಂಧಿತರಾಗಿದ್ದು, ಅಟಲ್ ಜಿಯವರಿಗೆ ಸಂಜೆ ತಿರಗಾಡಲು ಪೊಲೀಸರು ಕರೆದೊಯ್ಯುತ್ತಿದ್ದಾರೆ, ಡಾಕ್ಟರರ ಆದೇಶದಂತೆ; ನವೆಂಬರ್ 15ಕ್ಕೆ ಸತ್ಯಾಗ್ರಹ ಆರಂಭವಾಗುವುದು; ಕಳೆದ ವಾರ ಬೆಂಗಳೂರಿಗೆ ಜಾರ್ಜ್ ಫರ್ನಾಂಡಿಸ್ ಬಂದಿದ್ದರು. ಈ ತಿಂಗಳ ಅಂತ್ಯ ಅಥವಾ ನವೆಂಬರ್ 5ರೊಳಗೆ ಮೀಸಾ ಬಂಧಿತರ ಬಿಡುಗಡೆ ಆಗಲಿದೆ; ಗಾಂಧಿ ಜಯಂತಿಯಂದು ದಿಲ್ಲಿಯಲ್ಲಿ ಆಚಾರ್ಯ ಕೃಪಲಾನಿ, ಎಚ್.ವಿ. ಕಾಮತ್, ರಾಜಮೋಹನ ಗಾಂಧಿ ಇತ್ಯಾದಿ 10 ಜನರನ್ನು ಬಂಧಿಸಿ ಕಾಮತರೊಬ್ಬರನ್ನು ಬಿಟ್ಟು ಉಳಿದವರನ್ನು ನಂತರ ಬಿಡುಗಡೆ ಮಾಡಿದ್ದಾರೆ; ರಾಜಕೋಟೆ ಕಾರ್ಪೊರೇಶನ್ನ ಚುನಾವಣೆಯಲ್ಲಿ ಒಟ್ಟು 51 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಜನತಾರಂಗ ಗಳಿಸಿದೆ; ಡಿಐಆರ್ ಮೊಕದ್ದಮೆಗೊಳಪಟ್ಟವರಿಗೆ ಜಾಮೀನು ನಿರಾಕರಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಕಳ್ಳ ಸಾಗಾಣಿಕೆಗಾರರ ವಿರುದ್ಧ ಕ್ರಮ ಬಿಗಿಗೊಳಿಸಲು ಈ ವ್ಯವಸ್ಥೆ ಎಂದು ಆಕಾಶವಾಣಿ ಇಂದು ಹೇಳಿದೆ.
