ಹೊಸನಗರ/ತೀರ್ಥಹಳ್ಳಿ: ಸಾವಯವ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ನಮ್ಮ ದೇಶದ ಅಮೂಲ್ಯ ಪಾರಂಪರಿಕ ಭತ್ತದ ವಿವಿಧ ತಳಿಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ, ಶ್ರೀ ಸೋದೆ ವಾದಿರಾಜ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ವಿಶೇಷ ಪಾದಯಾತ್ರೆಗಳನ್ನು ನಡೆಸಿದರು.
ಹಾದಿಗಲ್ಲು ಅಭಯ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದ ಜಂಟಿ ಸಂಯೋಜನೆಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಾರಂಪರಿಕ ಕೃಷಿ ಪದ್ಧತಿಯ ಪುನಶ್ಚೇತನಕ್ಕಾಗಿ ಎರಡು ಪ್ರಮುಖ ಹಳ್ಳಿಗಳಲ್ಲಿ ಈ ಅಭಿಯಾನ ನಡೆಯಿತು.
ಕೊಳವಂಕ ಗ್ರಾಮ (ಹೊಸನಗರ ತಾಲೂಕು): 2026ರ ಜುಲೈ 12 ರಂದು ಕೊಳವಂಕ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯ ರೈತರು ಹಾಗೂ ಕೃಷಿ ಆಸಕ್ತರು ಭಾಗವಹಿಸಿ ಜಾಗೃತಿ ಮೂಡಿಸಿದರು.
ಅರಳಸುರುಳಿ ಗ್ರಾಮ (ತೀರ್ಥಹಳ್ಳಿ ತಾಲೂಕು): ಕೃಷಿ ಪ್ರಯೋಗ ಪರಿವಾರದ ಸಂಯೋಜನೆಯಲ್ಲಿ ನಡೆದ ಎರಡನೇ ಪಾದಯಾತ್ರೆ ಇದಾಗಿದ್ದು, ಗ್ರಾಮದ ರೈತರು, ಯುವಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ರಾಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.

ಸೋದೆ ಶ್ರೀಗಳ ಸಂದೇಶ:
ಪಾದಯಾತ್ರೆಯ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಸೋದೆ ಶ್ರೀಗಳು, “ಪಾರಂಪರಿಕ ಭತ್ತದ ತಳಿಗಳು ನಮ್ಮ ಆಹಾರ ಭದ್ರತೆ, ಜೀವವೈವಿಧ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿವೆ. ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ರೈತನ ಆದ್ಯ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಮುಂಬರುವ ಸೋದೆ ಪರ್ಯಾಯದ ಅವಧಿಯಲ್ಲಿ ರೈತರೆಲ್ಲರೂ ಉಡುಪಿಗೆ ಆಗಮಿಸಿ ಕೃಷ್ಣ ಮುಖ್ಯಪ್ರಾಣದೇವರ ಅನುಗ್ರಹ ಪ್ರಸಾದವನ್ನು ಸ್ವೀಕರಿಸಬೇಕೆಂದು ಶ್ರೀಗಳು ಭಕ್ತಾದಿಗಳಿಗೆ ಮತ್ತು ಕೃಷಿಕರಿಗೆ ಮುಕ್ತ ಆಹ್ವಾನ ನೀಡಿದರು.
ಈ ಎರಡೂ ಕಾರ್ಯಕ್ರಮಗಳಲ್ಲಿ ಹಾದಿಗಲ್ಲು ಲಕ್ಷ್ಮೀನಾರಾಯಣ, ಕೃಷಿ ಪ್ರಯೋಗ ಪರಿವಾರದ ಪ್ರಮುಖರಾದ ಶ್ರೀವತ್ಸ, ದಿನೇಶ್ ಸರು, ಅರುಣ, ಆನಂದ ಹಾಗೂ ತಾಲೂಕಿನ ನೂರಾರು ಪ್ರಗತಿಪರ ರೈತರು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಾವಯವ ಕೃಷಿಯ ಜಾಗೃತಿಯನ್ನು ಮತ್ತಷ್ಟು ವಿಸ್ತರಿಸಲು, ಮುಂದಿನ ದಿನಗಳಲ್ಲಿ ಇನ್ನು ಹಲವು ಹಳ್ಳಿಗಳಿಗೂ ಭೇಟಿ ನೀಡಿ ಈ ಪಾದಯಾತ್ರೆ ಅಭಿಯಾನವನ್ನು ಮುಂದುವರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
