- ಜ್ಯೋತಿ ಪ್ರಸಾದ್, ಲೇಖಕಿ
ಕರ್ನಾಟಕದ ಪಶ್ಚಿಮ ಘಟ್ಟಗಳ ಮಡಿಲಲ್ಲಿ ನೆಲೆಸಿರುವ ಕಾಫಿನಾಡು- ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಸ್ವರ್ಗ. ನಿಸರ್ಗಸೊಬಗು, ಸಾಹಸಮಯ ಚಟುವಟಿಕೆಗಳು ಹಾಗೂ ಅಧ್ಯಾತ್ಮಿಕ ಶಾಂತಿಯ ಸಂಗಮವೂ ಆಗಿರುವ ಈ ಗಿರಿಧಾಮವು ಹಚ್ಚ ಹಸಿರಿನ ಕಾಫಿ ತೋಟಗಳು, ಮಂಜು ಮುಸುಕಿದ ಬೆಟ್ಟಗಳು, ಭೋರ್ಗರೆಯುವ ಜಲಪಾತಗಳು ಮತ್ತು ಪ್ರಾಚೀನ ದೇವಾಲಯಗಳು ಇವೇ ಮುಂತಾದ ವೈಶಿಷ್ಟ್ಯಗಳಿಂದ ಕೂಡಿ ಎಲ್ಲ ರೀತಿಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ನಗರದ ಜಂಜಾಟದಿಂದ ದೂರವಾಗಿ, ಪ್ರಕೃತಿಯ ಮೌನದಲ್ಲಿ ಲೀನವಾಗಲು ಬಯಸುವವರಿಗೆ ಚಿಕ್ಕಮಗಳೂರು ಒಂದು ಪರಿಪೂರ್ಣ ತಾಣ.
ಇಲ್ಲಿಗೆ ಸಮೀಪದ ಶೃಂಗೇರಿ ಶಾರದಾಪೀಠ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳಲ್ಲದೇ ಹತ್ತಿರದ ಬೆಳವಾಡಿಯ ಹೊಯ್ಸಳ ವಾಸ್ತುಶಿಲ್ಪದ ‘ತ್ರಿಕೂಟಾಚಲ’ (ವೀರನಾರಾಯಣ, ವೇಣುಗೋಪಾಲ ಮತ್ತು ಯೋಗ-ನರಸಿಂಹ) ಮಾದರಿಯ ಬೃಹತ್ ದೇವಸ್ಥಾನವೂ ಬಹಳ ಹೆಸರುವಾಸಿಯಾಗಿದೆ. ಈಗ ಈ ಬೆಳವಾಡಿ ಕ್ಷೇತ್ರದಲ್ಲಿ ಹೊಸದಾಗಿ, ವಿಶಿಷ್ಟವಾದ ಒಂದು ಸೂರ್ಯ ಮಂದಿರ ನಿರ್ಮಾಣವಾಗಿದ್ದು, ಆಸ್ತಿಕರಾಗಲೀ ನಾಸ್ತಿಕರಾಗಲೀ ನೋಡಲೇಬೇಕಾದ ಒಂದು ರಮಣೀಯ ತಾಣ ಇದಾಗಿದೆ.
ಸಾಮಾನ್ಯವಾಗಿ ಸೂರ್ಯನ ದೇವಾಲಯಗಳು ಅತ್ಯಂತ ಅಪರೂಪ. ಬೆಳವಾಡಿಯ ಈ ಸೂರ್ಯ ಮಂದಿರದ ವೈಶಿಷ್ಟ್ಯವೆಂದರೆ ಇದನ್ನು ಕೊನಾರ್ಕಿನ ರಥದ ಮಾದರಿಯಲ್ಲಿ ರಚಿಸಲಾಗಿದೆ. ಉತ್ತರ ದಿಕ್ಕಿನಲ್ಲಿ ಎರಡು ಹಾಗೂ ದಕ್ಷಿಣ ದಿಕ್ಕಿನಲ್ಲಿ ಎರಡರಂತೆ ಇರುವ ರಥದ ನಾಲ್ಕು ಚಕ್ರಗಳು, ನಾಲ್ಕು ಯುಗಗಳನ್ನು ಪ್ರತಿನಿಧಿಸುತ್ತವೆ. ಗೋಪುರಗಳನ್ನು ದ್ರಾವಿಡ ಮತ್ತು ಕಳಿಂಗ ಶೈಲಿಯ ವಾಸ್ತುಶಿಲ್ಪದಂತೆ ರಚಿಸಲಾಗಿದೆ. ಮುಖ್ಯ ದ್ವಾರದಲ್ಲಿರುವ ಎರಡು ಸ್ತಂಭಗಳು ಉತ್ತರಾಯಣ-ದಕ್ಷಿಣಾಯನಗಳನ್ನೂ, ಗರ್ಭಗುಡಿಯ ಮೇಲಿರುವ ಮೂರು ಗೋಪುರಗಳು ಸೂರ್ಯನ ಮೂವರು ಪತ್ನಿಯರಾದ ಉಷಾ, ಸಂಧ್ಯಾ ಮತ್ತು ಛಾಯಾರನ್ನೂ ಪ್ರತಿನಿಧಿಸುತ್ತವೆ.
ದೇವಾಲಯದ ಮುಂಭಾಗದಲ್ಲಿರುವ ಸೂರ್ಯನ ರಥವನ್ನು ಎಳೆಯುವ ಏಳು ಕುದುರೆಗಳು ಮಾನವನ ದೇಹದ ಏಳು ಚಕ್ರಗಳನ್ನೂ, ಆ ಕುದುರೆಗಳನ್ನು ನಿಯಂತ್ರಿಸುತ್ತಿರುವ ಹಾವಿನಾಕಾರದ ಏಳು ಹಗ್ಗಗಳು ಏಳು ಪ್ರಮುಖ ನಾಡಿಗಳನ್ನೂ ಪ್ರತಿನಿಧಿಸುತ್ತವೆ. ಈ ಕುದುರೆಗಳು ಎಂಟು ಅಡಿ ಎತ್ತರದ್ದಾಗಿವೆ. ರಥದ ಸಾರಥಿ ಅರುಣದೇವನ ವಿಗ್ರಹವನ್ನೂ ನೀವಿಲ್ಲಿ ಕಾಣಬಹುದಾಗಿದೆ. ಇಡೀ ದೇವಾಲಯವು ಬ್ರಹ್ಮಾಂಡವನ್ನು ಪ್ರತಿನಿಧಿಸುವ, ಐದು ಅಡಿ ಎತ್ತರದ ಪೀಠದ ಮೇಲೆ ನಿಂತಿದೆ. ಪೀಠದ ಮೇಲೆ ಗುಡಿಯ ಸುತ್ತಲೂ ದ್ವಾದಶ ಭಾಸ್ಕರರ ಪ್ರತೀಕವಾಗಿ ನಿಂತಿರುವ ಹನ್ನೆರಡು ಕಂಬಗಳಿವೆ. ದೇವಾಲಯದ ಸುತ್ತ ಗೋಡೆ, ಗೋಪುರಗಳಲ್ಲಿ ನವಗ್ರಹಗಳು ಮತ್ತು ದ್ವಾದಶ ಭಾಸ್ಕರರ ವಿಗ್ರಹಗಳನ್ನೂ, ಹಾಗೂ ಸೂರ್ಯನ ಮೂವರು ಪತ್ನಿಯರ ವಿಗ್ರಹಗಳನ್ನೂ ನಿರ್ಮಿಸಲಾಗಿದೆ.
ಸೂರ್ಯಲೋಕವನ್ನು ಪ್ರತಿನಿಧಿಸುವ ಗರ್ಭಗುಡಿಯಲ್ಲಿ ಸೂರ್ಯದೇವರ ಮೂರ್ತಿಯಿದೆ. ಈ ಮೂರ್ತಿಯನ್ನು ಅಯೋಧ್ಯಾಪ್ರಭು ಶ್ರೀ ರಾಮಲಲಾನ ವಿಗ್ರಹವನ್ನು ಕೆತ್ತಿರುವ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಅವರು ಕೆತ್ತಿರುವುದು ಇನ್ನೊಂದು ವಿಶೇಷ. ಸೂರ್ಯಮೂರ್ತಿಯ ವಿಗ್ರಹವು ಪೂರ್ವಾಭಿಮುಖವಾಗಿ ನಿಂತಿದ್ದು, ಪ್ರತಿದಿನ ಬೆಳಗಿನ ಏಳು ಗಂಟೆಯಿಂದ ಎಂಟು ಗಂಟೆಯವರೆಗೆ ಸೂರ್ಯನ ರಶ್ಮಿ ಈ ವಿಗ್ರಹದ ಮೇಲೆ ಬೆಳಕನ್ನು ಚೆಲ್ಲುವ ಅದ್ಭುತ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಬಹುದು. ದೇವಾಲಯದ ಗೋಪುರದ ಮೇಲ್ಭಾಗದಲ್ಲಿರುವ ಸೂರ್ಯ ಧ್ವಜವನ್ನು ಪ್ರತಿ ತಿಂಗಳ ಸಂಕ್ರಮಣದಂದು ಬದಲಿಸುವ ಆಚರಣೆಯಿದೆ.
ನಿಸರ್ಗದ ಮಡಿಲಿನಲ್ಲಿರುವ ವಿಶಾಲವಾದ ಮೂರು ಎಕರೆಯ ಈ ಪ್ರದೇಶದಲ್ಲಿ ಸೂರ್ಯನ ದೇವಾಲಯದ ಜೊತೆಗೆ, ದೊಡ್ಡದಾದ “ಯೋಗಕ್ಷೇಮ ಯೋಗ ಸಾಧನಾ ಧಾಮ” ಎಂಬ ವಸತಿ ಸೌಕರ್ಯವಿರುವ ಆಶ್ರಮವೂ ಇದೆ. ಈ ಧಾಮವು ಯೋಗ, ಧ್ಯಾನ ಮತ್ತು ಇನ್ನಿತರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಪ್ರಶಾಂತ ಮತ್ತು ಪವಿತ್ರ ತಾಣವಾಗಿದೆ. ಹಾಗೆಯೇ ಇಲ್ಲಿ ಸುಸಜ್ಜಿತ ಅತಿಥಿಗೃಹ, ಗ್ರಂಥಾಲಯ, ಯಜ್ಞಮಂಟಪ, ಕಲ್ಯಾಣಿ ಮತ್ತು ಸೂರ್ಯಕುಂಡ, ಅದ್ಭುತ ಹನುಮಾನ್ ಧ್ಯಾನ ಮಂದಿರ ಮತ್ತು ಸುಂದರ ಗೋಶಾಲೆಯನ್ನೂ ನಿರ್ಮಿಸಲಾಗುತ್ತಿದೆ. ಎಲ್ಲ ಕಟ್ಟಡಗಳೂ ವಿಶೇಷವಾದ, ದೀರ್ಘಕಾಲ ಬಾಳುವ ಕೆಂಪು ಇಟ್ಟಿಗೆ ಕಲ್ಲುಗಳಿಂದ ಕಟ್ಟಲ್ಪಟ್ಟಿವೆ. ಎಲ್ಲ ಹವಾಮಾನಗಳಲ್ಲಿಯೂ ತಾಪಮಾನವನ್ನು ಸಮತೋಲನದಲ್ಲಿಡುವ, ಖನಿಜಾಂಶಭರಿತವಾದ ಈ ಇಟ್ಟಿಗೆಗಳು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿರುತ್ತವೆ. ಈ ದೇವಾಲಯ ನಿರ್ಮಾಣದ ಕನಸನ್ನು ಕಂಡು ಅದನ್ನು ಕಾರ್ಯರೂಪಕ್ಕೆ ತರಲು ಯೋಗಗುರು ವಿರೂಪಾಕ್ಷ ಬೆಳವಾಡಿಯವರ ನೇತೃತ್ವದ ತಂಡ ಹಗಲಿರುಳೂ ಶ್ರಮಿಸುತ್ತಿದೆ. ಸೂರ್ಯದೇವನನ್ನು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವನೆಂದೂ, ಆರೋಗ್ಯದಾಯಕನೆಂದೂ ನಂಬುವವರು ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವವನ್ನು ಕಾಣಬಹುದು.
