ಲಂಡನ್ನಲ್ಲಿ ನಡೆದ “ಸೆಲೆಬ್ರೇಟಿಂಗ್ ಒನ್ನೆಸ್” (ಏಕತೆಯ ಆಚರಣೆ) ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸಂಘ ಹಾಗೂ ಹಿಂದೂ ನಾಗರಿಕತೆಗೆ ಸಂಬಂಧಿಸಿದಂತೆ ಅತ್ಯಂತ ಚರ್ಚಿತ ಮತ್ತು ಅವರ ಅಭಿಪ್ರಾಯದಂತೆ ಅತಿ ಕಡಿಮೆ ಅರ್ಥೈಸಿಕೊಳ್ಳಲಾದ ವಿಚಾರಗಳನ್ನು ಸ್ಪಷ್ಟಪಡಿಸಿದರು. ‘ಶುದ್ಧ ಸಾತ್ತ್ವಿಕ ಪ್ರೇಮ’, ವೈವಿಧ್ಯತೆಗೆ ಹಿಂದೂಗಳ ದೃಷ್ಟಿಕೋನ, ಹಾಗೂ ‘ಹಿಂದುತ್ವ’ ಮತ್ತು ‘ರಾಷ್ಟ್ರ’ದ ಆಳವಾದ ಅರ್ಥವನ್ನು ಅವರು ವಿವರವಾಗಿ ಹಂಚಿಕೊಂಡರು.
ಲಂಡನ್ನಲ್ಲಿ ಸೆಪ್ಟೆಂಬರ್ 6, 2026 ರಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವೈಚಾರಿಕ ತತ್ವ ಹಾಗೂ ನಾಗರಿಕತೆಯ ದೃಷ್ಟಿಕೋನವನ್ನು ವಿವರಿಸಿದ ಡಾ. ಮೋಹನ್ ಭಾಗವತ್, ಜಾಗತಿಕ ಏಕತೆ ಮತ್ತು ಪರಸ್ಪರ ಗೌರವವನ್ನು ಆಧರಿಸಿದ ವಿಶಾಲ ಹಾಗೂ ಬಹುತ್ವದ ಚೌಕಟ್ಟನ್ನು ಪ್ರಸ್ತುತಪಡಿಸಿದರು.
ಪ್ರಶ್ನೆ ಮತ್ತು ಉತ್ತರಗಳು:
- ಕಾಲದ ಪರೀಕ್ಷೆಯನ್ನು ಎದುರಿಸಿ ಸದಾ ಉಳಿದುಕೊಂಡಿರುವ ಆರ್ಎಸ್ಎಸ್ನ ಆ ಒಂದು ಪ್ರಮುಖ ಅಂಶ ಯಾವುದು?
ಡಾ. ಮೋಹನ್ ಭಾಗವತ್:
“ಶುದ್ಧ ಸಾತ್ತ್ವಿಕ ಪ್ರೇಮ” – ಇದೇ ಆರ್ಎಸ್ಎಸ್ ಕೆಲಸದ ಮೂಲ ಆಧಾರ. ಅಪನಪನ್ (ಅಂದರೆ ಪ್ರತಿಯೊಬ್ಬರ ಮೇಲಿನ ಶುದ್ಧ ಸಾತ್ತ್ವಿಕ ಪ್ರೀತಿ) ಹಿಂದೂಗಳ ಸಾಂಪ್ರದಾಯಿಕ ಸ್ವಭಾವವಾಗಿದೆ. ಹಿಂದೂಗಳು ಪ್ರಕೃತಿಯನ್ನು ಪೂಜಿಸುವುದು ಮಾತ್ರವಲ್ಲ, ಅದನ್ನು ಪ್ರೀತಿಸುತ್ತಾರೆ. ಇದು ಹಿಂದೂಗಳ ಸಹಜ ಸಾಂಪ್ರದಾಯಿಕ ಗುಣ.
- ಪ್ರಸ್ತುತದ ಕೊಂಚ ಕಷ್ಟಕರ ಹಾಗೂ ಅಶಾಂತಿಯ ವಾತಾವರಣದಲ್ಲಿ ಹಿಂದೂ ನಾಗರಿಕತೆಯು ಜಗತ್ತಿಗೆ ನೀಡುವ ಅಗತ್ಯ ಕೊಡುಗೆ ಏನು?
ಡಾ. ಮೋಹನ್ ಭಾಗವತ್:
ಎಲ್ಲಾ ಹಿಂದೂ ಆಲೋಚನೆಗಳು ಒಂದೇ ತತ್ವದ ಮೇಲೆ ಆಧಾರಿತವಾಗಿವೆ. ಅಸ್ತಿತ್ವ ಎಂಬುದು ಅಪರೂಪಕ್ಕೆ ಒಂದಾಗಿ ಕಾಣಿಸುತ್ತದೆ, ಆದರೆ ಅದು ಬಹುರೂಪದಲ್ಲಿ ವ್ಯಕ್ತವಾಗುತ್ತದೆ. ವೈವಿಧ್ಯತೆಗಳು ನೈಸರ್ಗಿಕ, ಆದ್ದರಿಂದ ನಾವು ಅವುಗಳನ್ನು ಗೌರವಿಸಬೇಕು ಮತ್ತು ಸ್ವೀಕರಿಸಬೇಕು. ಒಂದೇ ಪರಮಸತ್ಯವು ಹಲವು ರೂಪಗಳಾಗಿದೆ, ಹೀಗಾಗಿ ಪ್ರತಿಯೊಂದು ರೂಪವನ್ನು ಗೌರವಿಸಲಾಗುತ್ತದೆ.
- “ಹಿಂದೂ ರಾಷ್ಟ್ರ” ಮತ್ತು “ಹಿಂದುತ್ವ” ಎಂಬ ಪದಗಳು ನಮ್ಮ ದೈನಂದಿನ ಚರ್ಚೆಯಲ್ಲಿ ಹೆಚ್ಚು ಬಳಸಲ್ಪಡುವ, ಆದರೆ ಸರಿಯಾಗಿ ಅರ್ಥವಾಗದ ಪದಗಳಾಗಿವೆ. ನಾವು ಮನೆಗೆ, ನಮ್ಮ ಸಹೋದ್ಯೋಗಿಗಳಿಗೆ, ನೆರೆಹೊರೆಯವರಿಗೆ ಮತ್ತು ಮಕ್ಕಳಿಗೆ ಹೇಳಬಹುದಾದ ಸರಳ ವಿವರಣೆಯನ್ನು ನೀಡುತ್ತೀರಾ?
ಡಾ. ಮೋಹನ್ ಭಾಗವತ್:
“ಬದುಕಿ, ಬದುಕಲು ಬಿಡಿ, ಇತರರನ್ನೂ ಬದುಕುವಂತೆ ಮಾಡಿ.”
‘ಹಿಂದೂ’ ಎಂಬ ಪದವನ್ನು ಕೇವಲ ಧಾರ್ಮಿಕ ಆಚರಣೆಯ ಆಧಾರದ ಮೇಲೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹಿಂದೂ ಎಂಬುದು ಒಂದು ಸ್ವಭಾವ. ಹಿಂದೂ ಧರ್ಮವನ್ನು ಬರೀ ಧರ್ಮ ಅಥವಾ ಒಂದು ಜೀವನ ಶೈಲಿ ಎಂದಷ್ಟೇ ನೋಡಲಾಗದು; ಎಲ್ಲ ವೈವಿಧ್ಯತೆಗಳನ್ನು ಸ್ವೀಕರಿಸಿ, ಗೌರವಿಸಿ, ಅವುಗಳೆಲ್ಲವೂ ಒಂದೇ ದೇವರತ್ತ ಒಯ್ಯುತ್ತವೆ ಎಂದು ನಂಬುವ ದೃಷ್ಟಿಕೋನವದು.
ನಾವು ಹಿಂದೂ ಎಂದರೆ ಬರೀ ಒಂದು ಧರ್ಮವಲ್ಲ ಎಂದಾಗ, ಅದರೊಳಗೆ ಹಲವಾರು ‘ಹಿಂದೂ ಧರ್ಮಗಳು’ ಇರಬಹುದು. ಎಲ್ಲಾ ಧರ್ಮಗಳೂ ಸತ್ಯ ಎಂದು ಹಿಂದೂ ತತ್ವ ಹೇಳುತ್ತದೆ. ನಿರೀಶ್ವರವಾದಿಗಳಿಂದ (ನಾಸ್ತಿಕರು) ಹಿಡಿದು ಬಹುದೇವತಾರಾಧಕರವರೆಗೆ – ಎಲ್ಲಾ ರೀತಿಯ ಆಲೋಚನೆಗಳು ಭಾರತ ವರ್ಷದಿಂದಲೇ ಹೊರಹೊಮ್ಮಿವೆ.
- ‘ನೇಷನ್’ (Nation) ಮತ್ತು ‘ರಾಷ್ಟ್ರ’ ನಡುವಿನ ವ್ಯತ್ಯಾಸವೇನು?
ಡಾ. ಮೋಹನ್ ಭಾಗವತ್:
‘ನೇಷನ್’ ಎಂಬ ಇಂಗ್ಲಿಷ್ ಪದಕ್ಕೆ ‘ರಾಷ್ಟ್ರ’ ಸರಿಯಾದ ಭಾಷಾಂತರವಲ್ಲ. ‘ನೇಷನ್’ ಎಂದರೆ ‘ನೇಷನ್-ಸ್ಟೇಟ್’ (ರಾಷ್ಟ್ರ-ರಾಜ್ಯ). ಭಾಷೆ, ಆಡಳಿತ ಮಾದರಿ ಅಥವಾ ಧರ್ಮದಂತಹ ಕೆಲವು ಸಮಾನತೆಗಳ ಆಧಾರದ ಮೇಲೆ ಜನರು ಒಗ್ಗೂಡುತ್ತಾರೆ. ಒಟ್ಟಿಗೆ ಇರಲು ಅವರು ಕೆಲವು ನಿಯಮಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಸಾಮಾನ್ಯ ಗುರಿಗಳಿಗಾಗಿ ಶ್ರಮಿಸುತ್ತಾರೆ. ಮಾನವ ಒಂಟಿಯಾಗಿ ಬದುಕಲು ಸಾಧ್ಯವಿಲ್ಲವಾದ್ದರಿಂದ ಇದು ಅಗತ್ಯ.
ಆದರೆ ‘ರಾಷ್ಟ್ರ’ ಹಾಗಿಲ್ಲ. ರಾಷ್ಟ್ರಕ್ಕೆ ಮೊದಲನೆಯದಾಗಿ ಒಂದು ಉನ್ನತ ಉದ್ದೇಶವಿರುತ್ತದೆ. ಹಿಂದೂ ರಾಷ್ಟ್ರದ ಉದ್ದೇಶವೇನು? “ವೈವಿಧ್ಯತೆಯು ನೈಸರ್ಗಿಕ ಮತ್ತು ಏಕತೆಯೇ ಸತ್ಯ” ಎಂಬ ಈ ಜಾಗತಿಕ ಸತ್ಯವನ್ನು ಇಡೀ ಜಗತ್ತಿಗೆ ಸಾರುವುದು. ಇದು ಸಂಪೂರ್ಣ ಜಗತ್ತಿಗೇ ಒಳಿತನ್ನು ಮಾಡುತ್ತದೆ.
ಡಾ. ಮೋಹನ್ ಭಾಗವತ್ ಅವರ ಪ್ರಕಾರ, ಬಾಹ್ಯ ವೈವಿಧ್ಯತೆಯನ್ನು ಗುರುತಿಸಿ, ಗೌರವಿಸಿ, ಅದರೊಂದಿಗೆ ಜೀವಿಸುತ್ತಾ ಅದರೊಳಗಿನ ಮೂಲಭೂತ ಏಕತೆಯನ್ನು ಕಾಣುವ ಸಾಮರ್ಥ್ಯವು ಕೇವಲ ಗತಕಾಲದ ವಿಚಾರವಲ್ಲ; ಅದು ಇಂದಿನ ಪ್ರಪಂಚದ ಅಸ್ಥಿರತೆಯನ್ನು ಎದುರಿಸಲು ಪ್ರಸ್ತುತವಾಗಿರುವ ನಾಗರಿಕ ತತ್ವವಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
