ಅಂಕಣ – ಸಂಚಾರ
- ವೃಷಾಂಕ ಭಟ್ ನಿವಣೆ, ಸಂಪಾದಕರು, ಸಂವಾದ
ದೇವರು ಎಂದರೆ ಹೇಗಿದ್ದಾನೆ, ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬ ಪ್ರಶ್ನೆಗೆ “ಗೊತ್ತಿಲ್ಲ” ಎಂಬುದು ಬಹಳಷ್ಟು ಜನರು ನೀಡಬಹುದಾದ ಉತ್ತರ. ಚಿತ್ರ, ವಿಗ್ರಹ, ಪುಸ್ತಕಗಳಲ್ಲಿ ಬರುವ ದೇವರು ನಿಜಕ್ಕೂ ಹಾಗೆಯೇ ಇದ್ದಾನೆಯೇ ಎಂದು ಬಹಳಷ್ಟು ಜನರಿಗೆ ಅನಿಸಿರಲಿಕ್ಕೂ ಸಾಕು. ದೇವರು ಎಂಬುದು ತಿಳಿಯದ ವಿಷಯವಾದರೂ ಆ ದೇವರನ್ನು ನೋಡಬೇಕು ಎಂಬುದು ಎಲ್ಲರಲ್ಲಿರುವ ಆಸೆಯೇ ಹೌದು. ಆದರೆ ಹೇಗಿದ್ದಾನೆ ಎಂದು ತಿಳಿಯದವನನ್ನು ನೋಡುವುದು ಹೇಗೆ? ಮೊಬೈಲ್ ಕಳೆದುಹೋದರೆ ಹುಡುಕುವುದು ಸುಲಭ. ಏಕೆಂದರೆ ಅದು ಹೇಗಿದೆಯೆಂದು ಕಳೆದುಕೊಂಡವನಿಗೆ ಗೊತ್ತು. ಆದರೆ ದೇವರು ಹೇಗಿದ್ದಾನೆ ಎಂದು ತಿಳಿಯದೇ ಅವನನ್ನು ಹುಡುಕುವುದು ಹೇಗೆ? ಇಂದೊಂದು ಗಂಭೀರ ಸವಾಲು. ಹಾಗಾದರೆ ದೇವರನ್ನು ನೋಡಲು ಸಾಧ್ಯವಿಲ್ಲವೇ? ಗೊತ್ತಿಲ್ಲ. ಆದರೂ ಒಂದು ಪ್ರಯತ್ನ ಮಾಡಬಹುದು. ಮನಸ್ಸು ಗಟ್ಟಿಯಿರಬೇಕು.
ಸತ್ಯವನ್ನು ದೇವರು ಎಂದಿಟ್ಟುಕೊಳ್ಳಿ. ಏಕೆಂದರೆ ಸತ್ಯ ಎಂಬುದು ಒಂದೇ ಆಗಿದ್ದರೂ ಅದನ್ನು ಅವರವರು ಅವರವರ ಗ್ರಹಿಕಾ ಸಾಮರ್ಥ್ಯಕ್ಕನುಗುಣವಾಗಿ ಕಾಣುತ್ತಾರೆ. ಉದಾಹರಣೆಗೆ ಚಲಿಸುವ ಕಾರಿಗೆ ನಾಯಿ ತಾಗಿ ಸಾಯುತ್ತದೆ. ಅಚಾನಕ್ಕಾಗಿ ನಾಯಿ ಎದುರಿಗೆ ಬಂದಿದ್ದರಿಂದ ಚಾಲಕನಿಗೂ ಆ ಅಪಘಾತವನ್ನು ತಪ್ಪಿಸುವ ಅವಕಾಶವಿರಲಿಲ್ಲ. ಮರುದಿನ ಆ ನಾಯಿಯ ದೇಹವನ್ನು ಕಂಡವರು ಚಾಲಕನಿಗೆ ಬೈಯಬಹುದು, ಬಸ್ಸು ಗುದ್ದಿದೆ ಎಂದುಕೊಳ್ಳಬಹುದು, ಮಲಗಿದ್ದ ನಾಯಿಯ ಮೇಲೆ ಹರಿಸಿದರು ಎನ್ನಬಹುದು… ಹೀಗೆ ಏನುಬೇಕಾದರೂ. ಆದರೆ ವಾಸ್ತವದಲ್ಲಿ ಏನಾಗಿತ್ತು ಎಂಬ ಸತ್ಯ ಮರುದಿನ ನಾಯಿಯ ದೇಹ ನೋಡಿದವರಿಗೆ ತಿಳಿಯುವುದಿಲ್ಲ. ಅವರವರ ಕಲ್ಪನೆಯನ್ನು ಸತ್ಯ ಎಂದುಕೊಳ್ಳುತ್ತಾರೆ. ನೂರು ಜನ ನೂರು ರೀತಿ ಗ್ರಹಿಸಿದರೂ ಸತ್ಯ ಹಾಗೆಯೇ ಉಳಿಯುತ್ತದೆ. ಈ ಕ್ಷಣಕ್ಕೆ ದೇವರು ಎಂಬುದನ್ನೂ ಆ ರೀತಿಯ ಸತ್ಯ ಎಂದುಕೊಳ್ಳೋಣ. ಎಂದೂ ಬದಲಾಗದ, ಸದಾಕಾಲ ಹಾಗೆಯೇ ಇರುವ ಸತ್ಯ. ಆದರೆ ಸತ್ಯವನ್ನು ತಿಳಿಯಲು ನಾವು ಅರ್ಹರಾಗಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು.
ಹೋಮದ ಉದಾಹರಣೆಯನ್ನು ತೆಗೆದುಕೊಳ್ಳಿ. ಊಟದ ತುಪ್ಪ, ಹೋಮದ ತುಪ್ಪ ಎಂಬ ಎರಡು ಗುಣಮಟ್ಟದ ತುಪ್ಪ ಮಾರುಕಟ್ಟೆಯಲ್ಲಿ ಇದೆ. ಹೋಮಕ್ಕೆ ಕಳಪೆ ಗುಣಮಟ್ಟದ/ಕೆಮಿಕಲ್ ಮಿಶ್ರಣದ ತುಪ್ಪ ಹಾಕಿ ಹೊಟ್ಟೆಗೆ ಉತ್ತಮ ಗುಣಮಟ್ಟದ ತುಪ್ಪ ಸುರಿದುಕೊಳ್ಳುವವರಿಗೆ ಆ ಹೋಮದ ಸತ್ಯ ಕಾಣುವುದೇ? ತಾನು ಮಾಡುವ ಕರ್ಮದಲ್ಲೇ ಸತ್ಯವಂತನಾಗಲು ಸಾಧ್ಯವಾಗದವನು ದೇವರು ಎಂಬ ಸತ್ಯವನ್ನು ಕಾಣಬಲ್ಲನೇ?.
ಮಕ್ಕಳಿಗೆ ಊಟ ಮಾಡಿಸುವಾಗ ಬೇಡವೆಂದು ಹಠ ಮಾಡಿದರೆ “ಊಟ ಮಾಡದಿದ್ದರೆ ಗುಮ್ಮ ಬರುತ್ತಾನೆ, ಪೊಲೀಸರು ಬಂದು ಕರೆದುಕೊಂಡು ಹೋಗ್ತಾರೆ” ಎಂದು ಏನೇನೋ ಹೇಳಿ ಊಟ ಮಾಡಿಸುತ್ತೇವೆ. ಆದರೆ ಅದು ಸತ್ಯವೇ? ಆ ಸಮಯಕ್ಕೆ ಅದನ್ನು ಹೇಳದಿದ್ದರೆ ಮಕ್ಕಳು ಊಟ ಮಾಡುವುದಿಲ್ಲವೆಂದು ನೀವು ಹೇಳಬಹುದು. ಆದರೆ ಹಾಗೆ ಹೇಳಿದ್ದರಲ್ಲಿ ಸತ್ಯವಿದೆಯೇ? ಜನಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸುವಾಗ ‘ಪಕ್ಷಪಾತ’ ಮಾಡುವುದಿಲ್ಲ ಎನ್ನುತ್ತಾರೆ. “ನನ್ನ ಪಕ್ಷದವರ ಪರವಾಗಿ ಹೆಚ್ಚು ಕೆಲಸ ಮಾಡುತ್ತೇನೆ” ಎಂಬುದು ಆ ಜನಪ್ರತಿನಿಧಿಗೆ ಪ್ರಮಾಣವಚನ ಸ್ವೀಕರಿಸುವಾಗಲೇ ತಿಳಿದಿರುತ್ತದೆ. ಆದರೂ ಆತ ಸುಳ್ಳಾಡುತ್ತಾನೆ. ನಾನು ಚೆನ್ನಾಗಿ ಬಟ್ಟೆತೊಟ್ಟು ಮೇಕಪ್ ಮಾಡಿಕೊಳ್ಳುವುದು ನನಗಾಗಿಯೇ ಹೊರತು ಬೇರೆಯವರಿಗಾಗಿ ಅಲ್ಲ ಎನ್ನುವವರನ್ನು “ನೀವು ರಾತ್ರಿ ಮಲಗುವಾಗಲೂ ಇಂತಹದೇ ಬಟ್ಟೆ ತೊಟ್ಟು ಮೇಕಪ್ ಮಾಡಿಕೊಳ್ಳುತ್ತೀರ” ಎಂದು ಕೇಳಿದರೆ ನಿರುತ್ತರರಾಗುತ್ತಾರೆ. ಇನ್ನು ಮನಸ್ಸಿನ ವಿಷಯಕ್ಕೆ ಬರೋಣ. ಮಾತು, ಕ್ರಿಯೆಯಿಂದ ಹಿಂಸಿಸಿ ಸುಖ ಪಡುವವರು ಇರುತ್ತಾರೆ. ಹಿಂಸೆಯು ಅಹಂಕಾರ ಮತ್ತು ಭಯದ ಕಾರಣಕ್ಕೆ ವ್ಯಕ್ತವಾಗುತ್ತದೆ. ಅಹಂಕಾರ ಮತ್ತು ಭಯ ಇರುವಲ್ಲಿ ಸತ್ಯ ಎಂಬುದು ಇರಲು ಸಾಧ್ಯವಿಲ್ಲ. ದ್ವಂದ್ವವಿರುವಲ್ಲಿ ಸತ್ಯ ಕಾಣುವುದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಯೊಂದರಲ್ಲಿ “ದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರ” ಎಂಬ ಸಾಲಿದೆ. ವ್ಯಕ್ತಿಯಲ್ಲಿರುವ ಈ ದ್ವಂದ್ವ ಹೋದರೆ ಸತ್ಯ ದರ್ಶನವಾಗಬಹುದು. ಅದೇ ದೇವರಾಗಿರಬಹುದು. ಬಣ್ಣಬಣ್ಣದ ಕನ್ನಡಕ ತೆಗೆಯದ ಹೊರತು ಇದ್ದದ್ದು ಇದ್ದಹಾಗೆ ಕಾಣುವುದು ಹೇಗೆ?.
