ಭೋಗೇನಾಗರಕೊಪ್ಪ ಗ್ರಾಮಕ್ಕೆ ಲೋಕಮಾನ್ಯ ತಿಲಕರ ನಂಟು
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕೆಲವು ಕಡೆ ಗಣೇಶ ಪ್ರತಿಷ್ಟಾಪನೆಯು ವಿಶೇಷತೆಯಿಂದ ಕೂಡಿದೆ. ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಅವರ ವಾಡೆದಲ್ಲಿ ಪ್ರತಿಷ್ಟಾಪನೆಗೊಳ್ಳುವ ಗಣಪತಿಗೆ ಹಲವು ವೈಶಿಷ್ಟ್ಯಗಳು ಇವೆ. ಎಲ್ಲ ಕಡೆ ಮೂರು, ಐದು, ಏಳು, ಒಂಭತ್ತು ಹೀಗೆ ಬೆಸ ದಿನಗಳಲ್ಲಿ ಗಣಪತಿಯನ್ನು ಕೂರಿಸಿದರೆ ಇಲ್ಲಿನ ದೇಸಾಯಿ ಮನೆತನದವರು ಕೇವಲ ಅರ್ಧ ದಿನ ಮಾತ್ರ ಗಣಪತಿಯನ್ನು ಕೂರಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಪ್ರತಿಷ್ಟಾಪನೆಗೊಳ್ಳುವ ಗಣಪ ಮಧ್ಯಾಹ್ನದ ವೇಳೆಗೆ ವಿಸರ್ಜನೆಗೊಳ್ಳುತ್ತಾನೆ. ಇದಕ್ಕೆ ಐತಿಹಾಸಿಕ ಕಾರಣವೂ ಇದೆ.
ಐತಿಹ್ಯ: ಅದು ಸ್ವಾತಂತ್ರ್ಯ ಪೂರ್ವಕಾಲ, ಕಲಘಟಗಿ ತಾಲೂಕಿನಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ತೀವ್ರ ಬರಗಾಲ ಆವರಿಸಿತ್ತು. ಅಂತಹ ನಾಡು ಬರ ಕಂಡಿರಲಿಲ್ಲ. ಉಪ್ಪಿಗೂ ಬ್ರಿಟಿಷರು ತೆರಿಗೆ ವಿಧಿಸಿದ್ದರು. ದೇಸಾಯಿಯ ಆಡಳಿತದ ಐದು ಹಳ್ಳಿಗಳು ಮತ್ತು ಸುತ್ತಲಿನ ಪ್ರದೇಶದ ಯಾರು ಕಂದಾಯ ಕಟ್ಟಿರಲಿಲ್ಲ. ಈ ವಿಷಯದಲ್ಲಿ ಬ್ರಿಟಿಷರಿಗೂ ದೇಸಾಯಿಯವರಿಗೂ ವಾಗ್ವಾದವಾಗಿತ್ತು. ಕಂದಾಯ ಅಧಿಕಾರಿಯು ಅಗ ದಾಸ್ತಿಕೊಪ್ಪದ ಬ್ರಿಟಿಷ್ ಬಂಗಲೆಯಲ್ಲಿ ಇರುತ್ತಿದ್ದ.
ದೇಸಾಯಿಯವರ ಅಡಳಿತದಲ್ಲಿದ್ದ ಗ್ರಾಮದ ಮರಾಠಿ ಓಣಿಯ ಹಿತ್ತಲನ್ನು ವಿಭಾಗಿಸಿ ಅದನ್ನು ಗಂಜೀಗಟ್ಟಿ ಸರಹದ್ದಿನಲ್ಲಿಟ್ಟು ನಕಾಶೆಯನ್ನು ತಯಾರಿಸಿದ. ದೇಸಾಯಿಯವರು ಇರುವ ಗ್ರಾಮದ ವಿಸ್ತೀರ್ಣ ಕಡಿತಗೊಳಿಸಿ ಸೇಡು ತೀರಿಸಿಕೊಂಡ. ಛತ್ರಪತಿ ಶಿವಾಜಿ ಮಹಾರಾಜರಿಂದ ಐದು ಹಳ್ಳಿಗಳನ್ನು ವಿದ್ವತ್ ಪ್ರದರ್ಶಿಸಿ ಇನಾಮು ಪಡೆದ ದೇಸಾಯರು ಅವುಗಳ ಅಧಿಪತಿಯಾದರು. ಬ್ರಿಟಿಷ್ ಗವರ್ನರ್ ಅಗಿದ್ದ ಲಾರ್ಡ್ ಡಾಲ್ ಹೌಸಿಯು ತನ್ನ ಆಡಳಿತಾವಧಿಯಲ್ಲಿ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ಕಾಯಿದೆ ಜಾರಿಗೆ ತಂದ. ತಮ್ಮ ಸಂಸ್ಥಾನವನ್ನು ಈ ಕಾಯ್ದೆಗೆ ಅಳವಡಿಸಲು ಮುಂದಾದಾಗ ಆಕ್ರೋಶಗೊಂಡ ವಿರುಪಾಕ್ಷ ಅನಂತರಾವ್ ದೇಸಾಯಿ ಅವರು ಚಳುವಳಿ ಆರಂಭಿಸಿದರು. ಮುಂದೆ ಇವರು ಗೋವಾ ವಿಮೋಚನಾ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಇವರಿಗೆ ಸ್ವತಂತ್ರ ಯೋಧರ ಪಿಂಚಣಿ ಸಹ ಬರುತ್ತಿತ್ತು.
ಇವರ ಜೊತೆಗೆ ದೇಸಾಯಿ. ದತ್ತಮೂರ್ತಿಯವರು ಭೂಗತರಾಗಿದ್ದುಕೊಂಡು ಪತ್ರಿಕೆಗಳಿಗೆ ದೇಶಪ್ರೇಮಿ ಲೇಖನಗಳನ್ನು ಬರೆಯುತ್ತಿದ್ದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ ಲೋಕಮಾನ್ಯ ತಿಲಕರು ಹುಬ್ಬಳ್ಳಿಗೆ ಬಂದಾಗ ಅವರು ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ವಿವರಿಸಿದ್ದರು. ಸಾರ್ವಜನಿಕವಾಗಿ ಗಣಪತಿ ಕೂಡ್ರಿಸಿ ಜನರು ಹೇಗೆ ಬ್ರಿಟಿಷರ ವಿರುದ್ಧ ಒಂದಾಗಬಹುದೆಂದು ವಿವರಿಸಿದಾಗ ಇದರಿಂದ ಪ್ರೇರಿತರಾದ ದೇಸಾಯರು ಸಾರ್ವಜನಿಕವಾಗಿ ತಮ್ಮ ವಾಡೇದಲ್ಲಿ ವಿಜೃಂಭಣೆಯಿAದ ಐದು ದಿನಗಳ ಕಾರ್ಯಕ್ರಮ ನಡೆಯಿತು. ಬರಗಾಲದ ವರ್ಷ ಗಣೇಶೋತ್ಸವದ ಸಂಭ್ರಮದ ತಯರಿ ನಡೆಸಿ ಬೆಳಿಗ್ಗೆ ಚೌತಿ ದಿನ ಗಣಪತಿಯನ್ನು ಪ್ರತಿಷ್ಟಾಪಿಸಿ ಪೂಜೆ ಮಾಡಿದ್ದರು. ಗ್ರಾಮಸ್ಥರಿಗೆ ತೀರ್ಥ-ಪ್ರಸಾದ ವಿತರಿಸಲಾಗಿತ್ತು.
ದೇಸಾಯಿವರು ಬ್ರಿಟಿಷ್ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆಂದು ಪಿತೂರಿಯಿಂದ ವಾಡೆಗೆ ಬ್ರಿಟಿಷ ಸೈನ್ಯ ದಾಳಿ ಮಾಡಿತು. ಆಗ ಗಣೇಶೋತ್ಸವವು ಬ್ರಿಟಿಷ ವಿರೋಧಿಯಾಗಿತ್ತು. ದಾಳಿ ಮಾಡಿದ್ದು ಮಧ್ಯಾಹ್ನ ಸಮಯ! ದೇಸಾಯರು ಪ್ರಸಾದ ವಿತರಿಸಿ ಊಟಕ್ಕೆ ಕೂಡ್ರುವ ತಯಾರಿಯಲ್ಲಿದ್ದಾಗ ದಾಳಿ ಮನೆಬಾಗಿಲಿಗೆ ಬಂದಿದೆ, ಬ್ರಿಟಿಷರೂ ಒಳಬಂದು ಗಣಪತಿಗೆ ಧಕ್ಕೆ ಮಾಡಬಹುದೆಂದು ಅಂದಾಜಿಸಿ ವಾಡೆದಲ್ಲಿರುವ ಹುಡೇದ ಬಾವಿಯಲ್ಲಿ ವಿಸರ್ಜಿಸಿ ಪಶ್ಚಿಮದ್ವಾರದ ಮುಖಾಂತರ ಭೂಗತರಾದರು. ಬ್ರಿಟಿಷರಿಗೆ ತಾವು ಬರುವ ಮುಂಚೆ ಏನು ನಡೆದಿದೆ ಎಂದು ಸುಳಿವು ದೊರಕಲಿಲ್ಲ. ಬ್ರಿಟಿಷ್ ಸೈನ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು.
ಭೋಗೇನಾಗರಕೊಪ್ಪ ಕೋಟೆಯ ಮೇಲೆ ನಡೆದ ದಾಳಿಯ ಇತಿಹಾಸ ಮರೆಯದ ದೇಶಕುಲಕರ್ಣಿ (ದೇಸಾಯಿ) ಅವರು ಇಂದಿಗೂ ಅರ್ಧದಿನ ಗಣಪನನ್ನು ಕೂರಿಸುವ ಪರಿಪಾಠ ಮುಂದುವರೆಸಿಕೊAಡು ಬಂದಿದ್ದಾರೆ. ಬೆಳಿಗ್ಗೆ ಗಣಪತಿಯನ್ನು ಕೂರಿಸಿ ಪೂಜೆ, ಮಹಾ ನೈವೇದ್ಯ, ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ವಿಸರ್ಜಿಸಲಾಗುತ್ತಿದೆ ಎಂದು ಮನೆತನದ ಹಿರಿಯರಾದ ಮಧುಸೂದನ ದೇಶಕುಲಕರ್ಣಿ ಇತಿಹಾಸ ನೆನಪಿಸಿಕೊಳ್ಳುತ್ತಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬವೊಂದು ಪರಂಪರಾಗತವಾಗಿ ಬಂದ ಭಕ್ತಿಗೂ ಧಕ್ಕೆ ಆಗದಂತೆ, ಬ್ರಿಟಿಷರಿಗೂ ಮಣಿಯದಂತೆ ದೇಶಭಕ್ತಿ ಮೆರೆದ ಪರಿ ಇದು.
-ಗುರುರಾಜ ಮ.ದೇಶಕುಲಕರ್ಣಿ. ಸಾ. ಭೋಗೇನಾಗರಕೊಪ್ಪ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
