ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ’ ಕೇವಲ ಒಂದು ಸಾಂವಿಧಾನಿಕ ಆಚರಣೆಯಲ್ಲ; ಅದು ಈ ದೇಶದ ಜೀವಾಳ. ಆದರೆ, ಸುದೀರ್ಘ ಇತಿಹಾಸವಿರುವ ನಮ್ಮ ಚುನಾವಣಾ ವ್ಯವಸ್ಥೆಗೆ ದಶಕಗಳಿಂದಲೂ ದೋಷಪೂರಿತ ಮತದಾರರ ಪಟ್ಟಿ, ನಕಲಿ ಮತದಾರರ ಸೇರ್ಪಡೆ ಮತ್ತು ರಾಜಕೀಯ ಪ್ರೇರಿತ ಅಕ್ರಮ ವಲಸಿಗರ ನುಸುಳುವಿಕೆ ಒಂದು ದೊಡ್ಡ ಕಂಟಕವಾಗಿ ಕಾಡುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಐತಿಹಾಸಿಕ ತೀರ್ಪು ಮತ್ತು ದೇಶಾದ್ಯಂತ ಆರಂಭವಾಗಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಭಾರತೀಯ ಪ್ರಜಾಪ್ರಭುತ್ವವನ್ನು ಜಡತ್ವದಿಂದ ಮುಕ್ತಗೊಳಿಸಿ, ಕಲ್ಮಶಗಳನ್ನು ತೊಳೆಯುವ ಸಂಜೀವಿನಿಯಾಗಿ ಮೂಡಿಬಂದಿದೆ.
ಸಾರ್ವಜನಿಕ ವಲಯದಲ್ಲಿ ಮತದಾನ ಮಾಡುವುದು ಒಂದು ‘ಮೂಲಭೂತ ಹಕ್ಕು’ ಎಂಬ ತಪ್ಪು ಕಲ್ಪನೆಯಿದೆ. ಆದರೆ ಸಾಂವಿಧಾನಿಕವಾಗಿ ಸಂವಿಧಾನದ ವಿಧಿ 326 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ ಇದು ನಿಯಂತ್ರಿತ ‘ಶಾಸನಬದ್ಧ ಅಥವಾ ಕಾನೂನಾತ್ಮಕ ಹಕ್ಕು’ ಮಾತ್ರ. ಸಂವಿಧಾನ ರಚನಾ ಸಭೆಯಲ್ಲೇ ಸರ್ದಾರ್ ಪಟೇಲ್, ಪಂಡಿತ್ ಪಂತ್ ಅವರಂತಹ ಮುತ್ಸದ್ದಿಗಳು ಈ ಹಕ್ಕನ್ನು ನ್ಯಾಯಾಲಯಗಳಲ್ಲಿ ಸಾರ್ವಕಾಲಿಕವಾಗಿ ಪ್ರಶ್ನಿಸದಂತೆ ನಿಯಂತ್ರಣಕ್ಕೆ ಒಳಪಡಿಸಿದ್ದರು. ಈ ನಿಯಂತ್ರಣದ ಮೂಲ ಆಶಯವೇ ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದಾಗಿತ್ತು. ದೇಶಾದ್ಯಂತ ನಡೆಯುತ್ತಿರುವ SIR ಕಸರತ್ತು ಈ ಆಶಯಕ್ಕೆ ಸಾಂವಿಧಾನಿಕ ಜೀವ ತುಂಬುತ್ತಿದೆ.
ಇತ್ತೀಚೆಗೆ (ಮೇ 27, 2026) ರಿಟ್ ಅರ್ಜಿ ಸಂಖ್ಯೆ 640/2025ರ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಇಡೀ ದೇಶಾದ್ಯಂತ ಸಮಗ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಸ್ವಾಯತ್ತ ಅಧಿಕಾರವನ್ನು ಎತ್ತಿಹಿಡಿದಿರುವುದು ಶ್ಲಾಘನೀಯ. ಮತದಾರರ ಪಟ್ಟಿಯು ಜಡ ದಾಖಲೆಯಲ್ಲ, ಅದು ನಿರಂತರ ಬದಲಾವಣೆಗೆ ಒಳಪಡಬೇಕು ಮತ್ತು ಆರಂಭಿಕ ಹಂತದಲ್ಲೇ ಅರ್ಹತೆಯ ಪೂರ್ವ ಷರತ್ತುಗಳನ್ನು ಪರಿಶೀಲಿಸುವುದು ಆಯೋಗದ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗಡಿಯಾಚೆಗಿನ ಅಕ್ರಮ ವಲಸೆಯಿಂದ ಅಸ್ವಾಭಾವಿಕ ಜನಸಂಖ್ಯಾ ಸ್ಫೋಟ ಎದುರಿಸುತ್ತಿರುವ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ SIR ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಉಳಿದಿಲ್ಲ; ಅದು ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಕಾಯುವ ಅಸ್ತ್ರವಾಗಿದೆ. ಬಿಹಾರ ಮತ್ತು ಕೇರಳದ ಅನುಭವಗಳು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದರೂ, ಅಂತಿಮವಾಗಿ ನಕಲಿ ಮುಖವಾಡಗಳನ್ನು ಕಳಚಿ ಶುದ್ಧ ಮತದಾರರ ಪಟ್ಟಿಯನ್ನು ರೂಪಿಸುವಲ್ಲಿ ಯಶಸ್ವಿಯಾಗಿವೆ. ಇತ್ತೀಚಿನ ತಮಿಳುನಾಡು ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 81.15ಕ್ಕೆ ಏರಿಕೆಯಾಗಲು ದ್ವಿ ನಮೂದಿತ ಹೆಸರುಗಳ ಅಳಿಸುವಿಕೆಯೇ ಕಾರಣ ಎಂಬುದು ಇದಕ್ಕೆ ಜ್ವಲಂತ ಸಾಕ್ಷಿ.
ಪ್ರಸ್ತುತ ಕರ್ನಾಟಕದಲ್ಲೂ 5.52 ಕೋಟಿ ಮತದಾರರನ್ನು ಒಳಗೊಂಡ ಬೃಹತ್ SIR ಯಜ್ಞ ಆರಂಭವಾಗಿದೆ. ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ರಾಜಕಾರಣದ ಲೆಕ್ಕಾಚಾರದಲ್ಲಿ ಇದರ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿರಬಹುದು. ಆದರೆ, ಪ್ರಜಾಪ್ರಭುತ್ವದ ಬುನಾದಿಯಾದ ಮತದಾರರ ಪಟ್ಟಿಯೇ ಅಶುದ್ಧವಾಗಿದ್ದರೆ, ಅದರ ಮೇಲೆ ನಡೆಯುವ ಚುನಾವಣೆ ಮತ್ತು ಆ ಮೂಲಕ ಅಧಿಕಾರಕ್ಕೆ ಬರುವ ಸರ್ಕಾರ ಎಂದಿಗೂ ನೈಜ ಜನಾದೇಶವನ್ನು ಹೊಂದಿರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಪಕ್ಷಗಳು ಅರಿಯಬೇಕಿದೆ. ರಾಜಕೀಯ ಎನ್ನುವುದು ಕೇವಲ ಅಧಿಕಾರ ಹಿಡಿಯುವ ಹಪಾಹಪಿಯಾಗದೆ, ಪಂಡಿತ್ ದೀನದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದಂತೆ ‘ರಾಷ್ಟ್ರ ಸೇವಾ ಕೈಂಕರ್ಯ’ ಆಗಬೇಕಾದರೆ ಇಂತಹ ಕಠಿಣ ಶುದ್ಧೀಕರಣ ಪ್ರಕ್ರಿಯೆಗಳು ಅತ್ಯಗತ್ಯ.
ಆದರೆ, ಈ ಇಡೀ ಪ್ರಕ್ರಿಯೆಯ ಯಶಸ್ಸು ಇರುವುದು ಅದರ ಅನುಷ್ಠಾನದ ದಕ್ಷತೆಯಲ್ಲಿ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಆನ್ಲೈನ್ ಆಪ್ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಭಾರತದ ಗ್ರಾಮೀಣ ಭಾಗದ ಅನಕ್ಷರಸ್ಥರು, ಹಿಂದುಳಿದ ವರ್ಗಗಳು ಮತ್ತು ಹಿರಿಯ ನಾಗರಿಕರು ಸಂಪೂರ್ಣ ಡಿಜಿಟಲ್ ಸ್ನೇಹಿಯಾಗಿರುವುದಿಲ್ಲ ಎನ್ನುವ ವಾಸ್ತವವನ್ನು ಚುನಾವಣಾ ಆಯೋಗ ಮರೆಯಬಾರದು. ತಂತ್ರಜ್ಞಾನದ ಅರಿವಿಲ್ಲ ಎಂಬ ಒಂದೇ ಕಾರಣಕ್ಕೆ ಯಾವುದೇ ಒಬ್ಬ ನೈಜ ಹಾಗೂ ಅರ್ಹ ಪ್ರಜೆ ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಸಹಾಯಕ ಕೇಂದ್ರಗಳು ತಳಮಟ್ಟದಲ್ಲಿ ಜನರಿಗೆ ತಾಳ್ಮೆಯಿಂದ ಸ್ಪಂದಿಸಿ, ನಮೂನೆಗಳನ್ನು ಭರ್ತಿ ಮಾಡಲು ನೆರವಾಗಬೇಕು.
