- ಅಗ್ನಿಹೋತ್ರಿ ಲೋಕೇಶ್ ಶರ್ಮಾ, ಲೇಖಕ ಹಾಗೂ ಪತ್ರಕರ್ತ
ನಮ್ಮ ಋಷಿಮುನಿಗಳು ಹಾಗೂ ಹಿರಿಯರು ಹಾಕಿಕೊಟ್ಟ ಮಾರ್ಗಗಳು ಯಾವಾಗಲೂ ಮನುಷ್ಯನ ಉದ್ಧಾರಕ್ಕಾಗಿಯೇ ಇವೆ. ಕೆಲವರು ನಮ್ಮ ಆಚರಣೆಗಳನ್ನು ಮೂಢನಂಬಿಕೆ ಹಾಗೂ ಡಂಭಾಚಾರ ಎಂದು ತಿಳಿದಿರುವುದುಂಟು. ಆದರೆ, ಆ ನಂಬಿಕೆಗಳ ಹಿನ್ನೆಲೆಯನ್ನು ಅರ್ಥಮಾಡಿಕೊಂಡು ಆಚರಣೆ ಮಾಡಿದಾಗ ಮಾತ್ರ ಅವುಗಳ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕತೆಯ ಅರಿವಾಗುತ್ತದೆ.
‘ಉಪವಾಸ’ ಎಂಬುದರ ಅರ್ಥ ‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು ಎಂದರ್ಥ. ಅಂದರೆ, ಎಲ್ಲಾ ಲೌಕಿಕ ವಿಷಯಗಳಿಂದ ದೂರವಿದ್ದು ಪರಮಾತ್ಮನ ಸಮೀಪವಿರುವುದು ಎಂದರ್ಥ. ಕೇವಲ ಊಟ ಮಾಡದೆ ಹಸಿದಿರುವುದು ಉಪವಾಸವಲ್ಲ; ಬದಲಾಗಿ ಸದಾ ಭಗವಂತನ ನಾಮಸ್ಮರಣೆಯಲ್ಲಿ ಇಡೀ ದಿನ ಕಳೆಯುವುದು ನಿಜವಾದ ಉಪವಾಸವಾಗುತ್ತದೆ.
ನಮ್ಮ ದೇಹದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು 11ನೆಯದಾಗಿ ‘ಮನಸ್ಸು’ ಇರುತ್ತದೆ. ಈ ಹನ್ನೊಂದು ಇಂದ್ರಿಯಗಳನ್ನು ಹತೋಟಿಗೆ ತರಲು ‘ಏಕಾದಶಿ’ (ಹನ್ನೊಂದನೇ ದಿನ) ಅತ್ಯಂತ ಸೂಕ್ತವಾದುದು ಎಂದು ಶಾಸ್ತ್ರಗಳು ಹೇಳುತ್ತವೆ. ಉಪವಾಸದ ಮೂಲಕ ಜಠರಾಗ್ನಿಯನ್ನು ಶಾಂತಗೊಳಿಸಿ, ಮನಸ್ಸನ್ನು ಚಂಚಲತೆಯಿಂದ ಮುಕ್ತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ನಾವು ಸೇವಿಸುವ ಆಹಾರವು ನಮ್ಮ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ. ಏಕಾದಶಿಯಂದು ಅನ್ನಾಹಾರವನ್ನು ತ್ಯಜಿಸುವುದರಿಂದ ದೇಹದಲ್ಲಿ ‘ತಮೋಗುಣ’ (ಆಲಸ್ಯ) ಮತ್ತು ‘ರಜೋಗುಣ’ (ಚಂಚಲತೆ) ಕಡಿಮೆಯಾಗಿ, ‘ಸತ್ತ್ವಗುಣ’ (ಶಾಂತಿ ಮತ್ತು ಜ್ಞಾನ) ವೃದ್ಧಿಯಾಗುತ್ತದೆ. ಇದು ಧ್ಯಾನ ಮತ್ತು ಜಪಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.
ಪೌರಾಣಿಕ ಹಿನ್ನೆಲೆ
ಪದ್ಮಪುರಾಣದ ಪ್ರಕಾರ, ಕೃತಯುಗದಲ್ಲಿ ‘ಮುರ’ ಎಂಬ ಬಲಿಷ್ಠ ರಾಕ್ಷಸನು ದೇವತೆಗಳಿಗೆ ತೊಂದರೆ ನೀಡುತ್ತಿದ್ದನು. ಅವನೊಂದಿಗೆ ಯುದ್ಧ ಮಾಡುವಾಗ ಭಗವಾನ್ ವಿಷ್ಣುವು ಸ್ವಲ್ಪ ವಿಶ್ರಾಂತಿ ಪಡೆಯಲು ಬದರಿಕಾಶ್ರಮದ ಗುಹೆಯೊಂದರಲ್ಲಿ ಮಲಗುತ್ತಾನೆ. ಆಗ ವಿಷ್ಣುವಿನ ಶರೀರದಿಂದ ಒಬ್ಬ ದಿವ್ಯ ಶಕ್ತಿಯುಳ್ಳ ದೇವತೆ ಉದ್ಭವಿಸಿ, ಮುರಾಸುರನನ್ನು ಸಂಹರಿಸುತ್ತಾಳೆ.
ವಿಷ್ಣುವು ಎಚ್ಚರಗೊಂಡು ಆ ದೇವತೆಯನ್ನು ನೋಡಿ ಸಂತಸಗೊಂಡು, “ನೀನು ನನ್ನ ಶಕ್ತಿಯಿಂದ ಹನ್ನೊಂದನೇ ದಿನ (ಏಕಾದಶಿ) ಉದ್ಭವಿಸಿದ ಕಾರಣ ನಿನ್ನ ಹೆಸರು ‘ಏಕಾದಶಿ’. ಇಂದಿನಿಂದ ನೀನು ನನಗೆ ಅತ್ಯಂತ ಪ್ರಿಯವಾದ ತಿಥಿಯಾಗು” ಎಂದು ವರ ನೀಡುತ್ತಾನೆ. ಅಂದಿನಿಂದ ಏಕಾದಶಿಯು ವಿಷ್ಣುವಿನ ಸ್ವರೂಪವೇ ಎಂದು ನಂಬಲಾಗಿದೆ. ನಮ್ಮ ಒಳಗಿರುವ ಅಸುರೀ ಪ್ರವೃತ್ತಿಗಳನ್ನು (ಕೆಟ್ಟ ಆಲೋಚನೆಗಳನ್ನು) ಸಂಹರಿಸಿ, ದೈವಿಕ ಪ್ರಜ್ಞೆಯನ್ನು ಎಚ್ಚರಿಸುವುದೇ ಈ ವ್ರತದ ಸಂಕೇತವಾಗಿದೆ. ವಿಷ್ಣುವು ‘ಸ್ಥಿತಿ’ಕಾರಕ ಮತ್ತು ಮೋಕ್ಷದಾಯಕ. ಏಕಾದಶಿಯ ದಿನ ಮಾಡುವ ಉಪವಾಸ ಮತ್ತು ಜಾಗರಣೆಯು ಮನುಷ್ಯನ ಪಾಪಗಳನ್ನು ಕ್ಷಯಿಸಿ, ವೈಕುಂಠವನ್ನು ಸೇರಲು ದಾರಿಯಾಗುತ್ತದೆ. ಅದಕ್ಕೇ ಇದನ್ನು ‘ಹರಿದಿನ’ ಎಂದು ಕರೆಯಲಾಗುತ್ತದೆ.
ವೈಜ್ಞಾನಿಕ ಹಿನ್ನೆಲೆ ಮತ್ತು ಚಂದ್ರನ ಪ್ರಭಾವ
ಚಂದ್ರನ ಗುರುತ್ವಾಕರ್ಷಣೆಯು ಭೂಮಿಯ ಮೇಲಿನ ಸಮುದ್ರದ ನೀರಿನ ಮೇಲೆ ಪ್ರಭಾವ ಬೀರಿದಾಗ ಉಬ್ಬರವಿಳಿತಗಳು ಸಂಭವಿಸುತ್ತವೆ. ಭೂಮಿಯ ಮೇಲ್ಮೈಯಲ್ಲಿ ಶೇ.70ಕ್ಕಿಂತ ಹೆಚ್ಚು ನೀರಿರುವಂತೆ, ಮಾನವನ ದೇಹದಲ್ಲೂ ಸುಮಾರು ಶೇ.70ರಿಂದ 80ರಷ್ಟು ನೀರಿನಂಶ ಇರುತ್ತದೆ. ಚಂದ್ರನ ಆಕರ್ಷಣೆ ಹೆಚ್ಚಾದಾಗ (ಹುಣ್ಣಿಮೆ ಮತ್ತು ಅಮಾವಾಸ್ಯೆಯ ಸಮೀಪ), ನಮ್ಮ ದೇಹದಲ್ಲಿನ ದ್ರವ ಪದಾರ್ಥಗಳ ಮೇಲೆಯೂ ಒತ್ತಡ ಹೆಚ್ಚಾಗುತ್ತದೆ.
ಚಂದ್ರನು ಪ್ರತಿ ತಿಂಗಳು ಸಂಚರಿಸುವಾಗ, ಏಕಾದಶಿಯಂದು ಈ ಗುರುತ್ವಾಕರ್ಷಣೆಯ ಒತ್ತಡವು ಒಂದು ನಿರ್ದಿಷ್ಟ ಸ್ಥಿತಿಯಲ್ಲಿರುತ್ತದೆ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ಈ ಒತ್ತಡ ಗರಿಷ್ಠ ಮಟ್ಟದಲ್ಲಿರುತ್ತದೆ. ಅದಕ್ಕಿಂತ ಮೂರು ದಿನಗಳ ಮೊದಲು ಅಂದರೆ ಏಕಾದಶಿಯಂದು ಉಪವಾಸ ಮಾಡುವ ಮೂಲಕ ದೇಹದಲ್ಲಿನ ನೀರಿನಂಶವನ್ನು ಸಮತೋಲನಗೊಳಿಸಿದರೆ, ಹುಣ್ಣಿಮೆ ಅಥವಾ ಅಮಾವಾಸ್ಯೆಯ ಸಮಯದಲ್ಲಿ ಉಂಟಾಗುವ ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ತಡೆಯಬಹುದು.
ಆಯುರ್ವೇದದ ಪ್ರಕಾರ, ‘ಚಂದ್ರಮಾ ಮನಸೋ ಜಾತಃ’ ಅಂದರೆ ಚಂದ್ರನು ಮನಸ್ಸಿಗೆ ಕಾರಕ. ಚಂದ್ರನ ಕಲೆಗಳು ಬದಲಾದಂತೆ ಮನುಷ್ಯನ ಭಾವನೆಗಳಲ್ಲಿ ಏರಿಳಿತಗಳು ಉಂಟಾಗುತ್ತವೆ. ಉಪವಾಸ ಮಾಡುವುದರಿಂದ ದೇಹದ ವಿಷಕಾರಿ ಅಂಶಗಳು ಕಡಿಮೆಯಾಗಿ ಮೆದುಳು ಮತ್ತು ನರಮಂಡಲವು ಶಾಂತವಾಗುತ್ತದೆ.
ದೇಹವೆಂಬ ಯಂತ್ರಕ್ಕೆ ವಿಶ್ರಾಂತಿ
ನಮ್ಮ ಜೀರ್ಣಾಂಗವ್ಯೂಹವು ಒಂದು ಯಂತ್ರದಂತೆ ಕಾರ್ಯನಿರ್ವಹಿಸುತ್ತದೆ. ವಿಶ್ರಾಂತಿ ಇಲ್ಲದ ಯಂತ್ರ ಹೇಗೆ ಕೆಟ್ಟುಹೋಗುತ್ತದೋ, ಹಾಗೆಯೇ ನಮ್ಮ ಜೀರ್ಣಾಂಗ ವ್ಯವಸ್ಥೆಯೂ ನಿರಂತರ ಕೆಲಸದಿಂದ ಅನಾರೋಗ್ಯಕ್ಕೆ ತುತ್ತಾಗಬಹುದು. 24 ಗಂಟೆಗಳ ಕಾಲ ಹೊಟ್ಟೆಯನ್ನು ಖಾಲಿ ಬಿಟ್ಟಾಗ, ಜೀರ್ಣಾಂಗ ವ್ಯವಸ್ಥೆಯು ಪುನಶ್ಚೇತನಗೊಂಡು ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.
ಇದನ್ನೇ ಜಪಾನ್ ದೇಶದ ವಿಜ್ಞಾನಿ ಯೋಶಿನೋರಿ ಓಶುಮಿ (Yoshinori Ohsumi) ಅವರು ಸಂಶೋಧಿಸಿ, 2016ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೋಬೆಲ್ ಪ್ರಶಸ್ತಿ ಪಡೆದರು. ಅವರು ಸಂಶೋಧಿಸಿದ ‘ಆಟೋಫಜಿ’ (Autophagy) ಎಂದರೆ ‘ತನ್ನನ್ನು ತಾನೇ ತಿನ್ನುವುದು’ ಎಂದರ್ಥ. ನಾವು ಉಪವಾಸವಿದ್ದಾಗ ದೇಹಕ್ಕೆ ಹೊರಗಿನಿಂದ ಶಕ್ತಿ ಸಿಗುವುದಿಲ್ಲ. ಆಗ ದೇಹವು ತನ್ನಲ್ಲಿರುವ ಹಳೆಯ, ರೋಗಪೀಡಿತ ಅಥವಾ ಹಾನಿಗೊಳಗಾದ ಜೀವಕೋಶಗಳನ್ನು ಶಕ್ತಿಯಾಗಿ ಮರುಬಳಕೆ ಮಾಡಿಕೊಳ್ಳುತ್ತದೆ. ಇದರಿಂದ ದೇಹದಲ್ಲಿರುವ ಕಸ (Toxic waste) ಹೊರಹೋಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕ್ಯಾನ್ಸರ್ನಂತಹ ರೋಗಗಳನ್ನು ತಡೆಯಲು ಸಹಕಾರಿಯಾಗುತ್ತದೆ. ವಯಸ್ಸಾಗುವ ಸಹ ಪ್ರಕ್ರಿಯೆ (Aging) ನಿಧಾನವಾಗುತ್ತದೆ. ಅತಿ ದೀರ್ಘ ಕಾಲ ಬದುಕುವ ಸಾಧ್ಯತೆ ಇರುತ್ತದೆ. ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ ಈ ಆರೋಗ್ಯದ ರಹಸ್ಯವನ್ನು ಇಂದು ವಿದೇಶಿ ವಿಜ್ಞಾನಿಗಳು ಸಂಶೋಧಿಸಿ ನೋಬೆಲ್ ಪಡೆಯುತ್ತಿದ್ದಾರೆ. ಆದರೆ, ನಮ್ಮಲ್ಲಿ ಎಷ್ಟೋ ಜನರಿಗೆ ಇದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು ವಿಷಾದನೀಯ.
ಉಪವಾಸ: ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ರಾಷ್ಟ್ರಸೇವೆ
ನಮ್ಮ ದೇಶದಲ್ಲಿ ಸುಮಾರು 145 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ ರೋಗಿಗಳು, ವಯೋವೃದ್ಧರು, ಮಕ್ಕಳು ಹಾಗೂ ಇತರರನ್ನು ಶೇ.60ರಷ್ಟು ಹೊರತುಪಡಿಸಿದರೂ, ಉಳಿದ ಶೇ.40ರಷ್ಟು ಅಂದರೆ ಸುಮಾರು 58 ಕೋಟಿ ಜನರು ಒಂದು ದಿನ ಉಪವಾಸ ಮಾಡುತ್ತಾರೆ ಎಂದು ನಾವು ಭಾವಿಸಿದರೆ, ನಮ್ಮ ರಾಷ್ಟ್ರೀಯ ಉಳಿತಾಯದ ಅಂಕಿ-ಅಂಶಗಳು ನಿಜಕ್ಕೂ ಬೆರಗುಗೊಳಿಸುತ್ತವೆ.
ಇದರ ಒಂದು ಅಂದಾಜು ಲೆಕ್ಕಾಚಾರ ಹೀಗಿದೆ:
ಧಾನ್ಯದ ಉಳಿತಾಯ: ಒಬ್ಬ ವ್ಯಕ್ತಿಯು ದಿನಕ್ಕೆ ಸರಾಸರಿ 400ರಿಂದ 500 ಗ್ರಾಂ ಧಾನ್ಯವನ್ನು (ಅಕ್ಕಿ, ಗೋಧಿ, ಬೇಳೆ ಇತ್ಯಾದಿ) ಬಳಸುತ್ತಾನೆ ಎಂದು ಇಟ್ಟುಕೊಳ್ಳೋಣ. ಆಗ, 58 ಕೋಟಿ x 0.5 ಕೆಜಿ = 29 ಕೋಟಿ ಕೆಜಿ (2.9 ಲಕ್ಷ ಟನ್) ಧಾನ್ಯಗಳು ಒಂದು ದಿನದಲ್ಲಿ ಉಳಿತಾಯವಾಗುತ್ತವೆ. ಇದು ಒಂದು ಸಣ್ಣ ರಾಜ್ಯದ ಜನರಿಗೆ ತಿಂಗಳುಗಟ್ಟಲೆ ಆಹಾರ ನೀಡಲು ಸಾಕಾಗುವಷ್ಟು ದೊಡ್ಡ ಪ್ರಮಾಣವಾಗಿದೆ.
ಹಣದ ಉಳಿತಾಯ: ಒಬ್ಬ ವ್ಯಕ್ತಿಯ ಒಂದು ದಿನದ ಕನಿಷ್ಠ ಆಹಾರದ ವೆಚ್ಚವನ್ನು ಸುಮಾರು 50ರಿಂದ 60 ರೂಪಾಯಿ ಎಂದು ಅಂದಾಜಿಸಿದರೆ: 58 ಕೋಟಿ x 50 ರೂ. = 2,900 ಕೋಟಿ ರೂಪಾಯಿಗಳು. ಕೇವಲ ಒಂದು ದಿನದ ಉಪವಾಸದಿಂದ ದೇಶಾದ್ಯಂತ ಸುಮಾರು 2,900 ಕೋಟಿ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಉಳಿತಾಯವಾಗುತ್ತವೆ. ಒಂದು ವರ್ಷಕ್ಕೆ 24 ಏಕಾದಶಿಗಳ ಲೆಕ್ಕ ಹಾಕಿದಾಗ ದೇಶದ ಆರ್ಥಿಕತೆಯ ಮೇಲೆ ಉಂಟಾಗುವ ಧನಾತ್ಮಕ ಪ್ರಭಾವವನ್ನು ಊಹಿಸಬಹುದು!.
ಪರಿಸರದ ದೃಷ್ಟಿಕೋನ: ಒಂದು ಕೆಜಿ ಅಕ್ಕಿ ಬೆಳೆಯಲು ಸುಮಾರು 3,000ದಿಂದ 5,000 ಲೀಟರ್ ನೀರು ಬೇಕಾಗುತ್ತದೆ. ನಾವು ಉಳಿಸಿದ 2.9 ಲಕ್ಷ ಟನ್ ಧಾನ್ಯವನ್ನು ಬೆಳೆಯಲು ಬಳಕೆಯಾಗುವ ಕೋಟ್ಯಂತರ ಲೀಟರ್ ‘ವರ್ಚುವಲ್ ವಾಟರ್’ (Virtual Water) ಇದರಿಂದ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೆ, ಅಡುಗೆ ಅನಿಲ (LPG) ಹಾಗೂ ಸಾರಿಗೆಗೆ ಬಳಕೆಯಾಗುವ ಇಂಧನವೂ ಉಳಿತಾಯವಾಗುವುದರಿಂದ ‘ಕಾರ್ಬನ್ ಫುಟ್ಪ್ರಿಂಟ್’ ಸಹ ಕಡಿಮೆಯಾಗುತ್ತದೆ.
ರೈತರಿಗೆ ಗೌರವ ಮತ್ತು ಹಸಿವಿನ ಮುಕ್ತಿ: ನಮ್ಮ ದೇಶದ ರೈತರು ಬೆಳೆದ ಬೆಳೆ ವ್ಯರ್ಥವಾಗದೆ ಸರಿಯಾದ ರೀತಿಯಲ್ಲಿ ಬಳಕೆಯಾಗುವುದು ನಾವು ಅವರಿಗೆ ನೀಡುವ ದೊಡ್ಡ ಗೌರವವಾಗಿದೆ. ಈ ಉಳಿತಾಯದ ಧಾನ್ಯದಿಂದ ದೇಶದ ಹಸಿದವರ ಹಸಿವನ್ನು ನೀಗಿಸಬಹುದು; ಇದರಿಂದ ದೇಶದ ಜಿಡಿಪಿಯೂ ವೃದ್ಧಿಸುತ್ತದೆ.
ಐತಿಹಾಸಿಕ ಪ್ರೇರಣೆ
1965ರಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿದ್ದಾಗ ದೇಶದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಅಂದು ಅಮೆರಿಕದ ಎದುರು ಮಣಿಯಲು ಇಷ್ಟಪಡದ ಕೆಚ್ಚೆದೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು, “ನಮ್ಮ ದೇಶದ ಸ್ವಾಭಿಮಾನಕ್ಕಾಗಿ ನಾವು ಆಮದಿನ ಮೇಲೆ ಅವಲಂಬಿತರಾಗಬಾರದು” ಎಂದು ನಿರ್ಧರಿಸಿದರು. ಅವರು ದೇಶವಾಸಿಗಳಲ್ಲಿ ಒಂದು ವಿನಂತಿ ಮಾಡಿಕೊಂಡರು: “ದೇಶದ ಜನರೆಲ್ಲರೂ ವಾರದಲ್ಲಿ ಒಂದು ಹೊತ್ತು ಊಟ ಬಿಟ್ಟರೆ, ನಾವು ವಿದೇಶದಿಂದ ಧಾನ್ಯ ಆಮದು ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ”.
ಅವರು ಘೋಷಣೆ ಮಾಡಿದ ದಿನ ಸೋಮವಾರವಾಗಿತ್ತು. ಅಂದಿನಿಂದ ದೇಶದಾದ್ಯಂತ ಹೊಟೇಲ್ಗಳು ಸೋಮವಾರ ಸಂಜೆ ಮುಚ್ಚಲ್ಪಟ್ಟವು ಮತ್ತು ಕೋಟ್ಯಂತರ ಜನರು ‘ಶಾಸ್ತ್ರಿ ಸೋಮವಾರ’ ಎಂದು ಉಪವಾಸ ಮಾಡಲು ಆರಂಭಿಸಿದರು.
ಮಾನವೀಯತೆ ಮತ್ತು ಆಧ್ಯಾತ್ಮಿಕತೆ
ನಾವು ಉಪವಾಸವಿದ್ದಾಗ ಹಸಿದವರ ನೋವು ನಮಗೆ ಅರ್ಥವಾಗುತ್ತದೆ ಮತ್ತು ನಮ್ಮಲ್ಲಿ ಮಾನವೀಯತೆ ಎಚ್ಚರಗೊಳ್ಳುತ್ತದೆ. ಒಟ್ಟಿನಲ್ಲಿ, ‘ಉಪವಾಸ’ ಎಂಬ ಧಾರ್ಮಿಕ ಕ್ರಿಯೆಯು ‘ರಾಷ್ಟ್ರಸೇವೆ’ಯ ಮಟ್ಟಕ್ಕೆ ಏರುತ್ತದೆ. ಏಕಾದಶಿಯಂತಹ ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ಉಳಿತಾಯವಾದರೆ, ಅದು ದೇಶದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತದೆ. ಹೀಗಾಗಿ, ಉಪವಾಸವೆಂದರೆ ಕೇವಲ ಮೂಢನಂಬಿಕೆಯಲ್ಲ; ಅದು ಆಧ್ಯಾತ್ಮಿಕ, ಆರೋಗ್ಯಕರ ಮತ್ತು ರಾಷ್ಟ್ರದ ಆರ್ಥಿಕತೆಯ ಹಿತದೃಷ್ಟಿಯಿಂದ ಕೂಡಿದ ಅದ್ಭುತ ಆಚರಣೆಯಾಗಿದೆ. ನಮ್ಮ ಹಿರಿಯರು ನಮಗೆ ನೀಡಿದ ಇಂತಹ ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಮತ್ತು ರಾಷ್ಟ್ರೀಯ ಕಾಳಜಿಯಿದೆ.
